ಕರ್ನಾಟಕದಲ್ಲಿ 20ಕ್ಕೂ ಹೆಚ್ಚು ಸ್ಥಾನ ಗೆಲ್ಲಲು ಬಿಜೆಪಿ ತಂತ್ರವೇನು?
ಮುಂಬರುವ ಪಾರ್ಲಿಮೆಂಟ್ ಚುನಾವಣೆಯಲ್ಲಿ ಕರ್ನಾಟಕದಿಂದ ಇಪ್ಪತ್ತರಷ್ಟು ಕ್ಷೇತ್ರಗಳನ್ನು ಗೆಲ್ಲಬೇಕೆಂದರೆ ಮೊದಲು ಆಪರೇಷನ್ ಸಿದ್ದರಾಮಯ್ಯ ಕಾರ್ಯಾಚರಣೆಗೆ ನುಗ್ಗುವುದು ಅನಿವಾರ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾಗೆ ಕರ್ನಾಟಕದ ಹಿರಿಯ ನಾಯಕರೊಬ್ಬರು ಎಚ್ಚರಿಕೆ ನೀಡಿದ್ದಾರೆ.
ಈ ನಾಯಕರು ಯಾರು? ಅನ್ನುವುದನ್ನು ದಿಲ್ಲಿಯ ಬಿಜೆಪಿ ನಾಯಕರು ಬಹಿರಂಗಪಡಿಸುತ್ತಿಲ್ಲ. ಆದರೆ ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರ ಬಳಿ ಕೊಟ್ಟ ಪ್ರಪೋಸಲ್ಲಿನ ವಿವರಗಳ ಕುರಿತು ಬಹಿರಂಗಪಡಿಸುತ್ತಿರುವ ಮಾಹಿತಿಗಳು ಇಂಟರೆಸ್ಟಿಂಗ್ ಆಗಿವೆ.
ಅಂದ ಹಾಗೆ ಮುಂದಿನ ಪಾರ್ಲಿಮೆಂಟ್ ಚುನಾವಣೆಯಲ್ಲಿ ದೇಶದ ಉತ್ತರ ಭಾಗದಲ್ಲಿ ಬಿಜೆಪಿ ಗೆಲ್ಲುವ ಸೀಟುಗಳ ಸಂಖ್ಯೆ ಕಡಿಮೆಯಾಗಲಿದೆ ಎಂಬ ಕುರಿತು ಮೋದಿ, ಅಮಿತ್ ಶಾ ಅವರಿಗೆ ಮುಂಚಿನಿಂದಲೇ ಅನುಮಾನವಿದೆ.
ಇದೇ ಕಾರಣಕ್ಕಾಗಿ ಉತ್ತರ ಭಾರತದ ರಾಜ್ಯಗಳಲ್ಲಾಗುತ್ತಿರುವ ಕೊರತೆಯನ್ನು ದಕ್ಷಿಣ ಭಾರತದ ರಾಜ್ಯಗಳ ಮೂಲಕ ನೀಗಿಸಿಕೊಳ್ಳಬೇಕು ಎಂಬ ಲೆಕ್ಕಾಚಾರ ಅವರಿಗೆ ಮುಂಚಿನಿಂದಲೂ ಇದೆ. ಈ ಹಿನ್ನೆಲೆಯಲ್ಲಿ ಮೋದಿ ಹಾಗೂ ಅಮಿತ್ ಶಾ ಮುಂಚಿನಿಂದಲೇ ಒಂದು ಗಮನವಿಟ್ಟಿದ್ದಾರಾದರೂ ಈಗ ತಮ್ಮ ಕಿವಿಗೆ ತಲುಪಿರುವ ಒಂದು ಮಾಹಿತಿಯಿಂದ ಅವರು ಮತ್ತಷ್ಟು ಎಚ್ಚರಗೊಂಡಿದ್ದಾರೆ.

ಬಿಜೆಪಿ ಅಶ್ವಮೇಧಕ್ಕೆ ಸಿದ್ದರಾಮಯ್ಯ ಲಗಾಮು
ದಕ್ಷಿಣ ಭಾರತದ ರಾಜ್ಯಗಳ ಪೈಕಿ ಬಿಜೆಪಿ ಹೆಚ್ಚಿನ ಸೀಟುಗಳನ್ನು ನಿರೀಕ್ಷೆ ಮಾಡುವುದಿದ್ದರೆ ಅದು ಕರ್ನಾಟಕ ಮಾತ್ರ. ಕೇರಳ, ಸೀಮಾಂಧ್ರ, ತಮಿಳ್ನಾಡು, ತೆಲಂಗಾಣಗಳನ್ನು ಸೇರಿಸಿದರೆ ಪರಿಸ್ಥಿತಿ ಮುಂಚಿಗಿಂತ ಇಂಪ್ರೂವ್ ಆಗಬಹುದಾದರೂ ಫೈನಲಿ, ಬಿಜೆಪಿಗೆ ದೊಡ್ಡ ಮಟ್ಟದ ಶಕ್ತಿ ಒದಗಿಸಲು ಸಾಧ್ಯವಿರುವುದು ಕರ್ನಾಟಕಕ್ಕೆ ಮಾತ್ರ.
ಆದರೆ ಹೀಗೆ ಕರ್ನಾಟಕದಲ್ಲಿ ಹೆಚ್ಚು ಸಂಖ್ಯೆಯ ಸೀಟುಗಳನ್ನು ಗೆಲ್ಲಲು ಪೂರಕ ವಾತಾವರಣ ಇದೆಯಾದರೂ ಬಿಜೆಪಿಯ ಅಶ್ವಮೇಧ ಯಾಗದ ಕುದುರೆಯನ್ನು ಕಾಂಗ್ರೆಸ್ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಕಟ್ಟಿ ಹಾಕಬಲ್ಲರು ಎಂಬುದೇ ಈ ಮಾಹಿತಿ.

ಸಿದ್ದುವಿಗೆ ಸಖತ್ ಕೈಕೊಟ್ಟ ಸೇನಾಪತಿಗಳು
ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಮರಳಿ ಕರ್ನಾಟಕದ ಗದ್ದುಗೆಯನ್ನೇರಲು ಸಿದ್ದರಾಮಯ್ಯ ಒಂದು ಪ್ಲಾನ್ ರೂಪಿಸಿಕೊಂಡಿದ್ದರು. ಈ ಪ್ಲಾನ್ ಗೆ ಪೂರಕವಾಗಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪಕ್ಷದಿಂದ ಸ್ಪರ್ಧಿಸಿದವರಿಗೆ ಅತ್ಯಾಧುನಿಕ ಶಸ್ತ್ರಾಸ್ತ್ರ ಖರೀದಿಸಲು ನೆರವಾಗುವಂತೆ ಹಲವು ಸೇನಾಧಿಪತಿಗಳನ್ನು ನೇಮಕ ಮಾಡಿದ್ದರು.
ಒಬ್ಬ ಸೇನಾಧಿಪತಿಗೆ ಇಂತಿಷ್ಟು ಜಿಲ್ಲೆಗಳ ಜವಾಬ್ದಾರಿ ಎಂಬುದನ್ನು ಸಿದ್ದರಾಮಯ್ಯ ನಿಗದಿಪಡಿಸಿದ್ದರಾದರೂ ಆ ಸೇನಾಧಿಪತಿಗಳ ಪೈಕಿ ಬಹುತೇಕರು ಟೈಮು ನೋಡಿ ಕೈ ಎತ್ತಿಬಿಟ್ಟರು. ಈ ಪೈಕಿ ಒಬ್ಬರು ಯುದ್ಧ ಕಾಲ ಹತ್ತಿರವಾಗುತ್ತಿದ್ದಂತೆಯೇ, ತಮ್ಮ ವಿರುದ್ಧ ಕೇಂದ್ರದ ತನಿಖಾ ಸಂಸ್ಥೆಯೊಂದು ದಾಳಿ ನಡೆಸಿತು. ಹೀಗಾಗಿ ನಮ್ಮ ಯೋಧರಿಗೆ (ಎಮ್ಮೆಲ್ಲೆ ಕ್ಯಾಂಡಿಡೇಟುಗಳು) ಸರಬರಾಜಾಗುತ್ತಿದ್ದ ಟ್ರಕ್ ಅನ್ನೇ ವಶಪಡಿಸಿಕೊಳ್ಳಲಾಯಿತು ಎಂದು ಕೈ ಎತ್ತಿ ಬಿಟ್ಟರು.
ಅಂದ ಹಾಗೆ ಅವರು ಕೈ ಎತ್ತಿದರಾದರೂ ಅದನ್ನು ಸಿದ್ದರಾಮಯ್ಯ ನಂಬುವಂತೆ ನೋಡಿಕೊಂಡರು. ಅಧಿಕಾರದಲ್ಲಿದ್ದ ಕಾಲದಲ್ಲಿ ತಾವು ಹೇಳಿದ ಎಲ್ಲ ಕೆಲಸಗಳನ್ನು ನಿಷ್ಠೆಯಿಂದ ಮಾಡಿದ್ದ ಅವರ ಈ ಮಾತುಗಳನ್ನು ನಂಬುವುದಿಲ್ಲ ಎಂದು ಹೇಳುವ ಸ್ಥಿತಿಯಲ್ಲಿ ಸಿದ್ದರಾಮಯ್ಯ ಇರಲಿಲ್ಲ.

ರಾಹುಲ್ ವಿರುದ್ಧವೇ ಉಕ ನಾಯಕರ ಗುಟುರು
ಅದೇ ರೀತಿ ಉತ್ತರ ಕರ್ನಾಟಕ ಭಾಗದ ವೀರಸೇನಾನಿಯೊಬ್ಬರು ಗಣನೀಯ ಪ್ರಮಾಣದಲ್ಲಿ ಶಸ್ತ್ರಾಸ್ತ್ರ ಸರಬರಾಜು ಮಾಡಿದರಾದರೂ, ಸಮ್ಮಿಶ್ರ ಸರ್ಕಾರ ರಚನೆಯಾದ ಶುರುವಿನಲ್ಲಿ ತಮಗೆ ಮಂತ್ರಿ ಸ್ಥಾನ ಸಿಗದೆ ಹೋದಾಗ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ವಿರುದ್ಧವೇ ಗುಟುರು ಹಾಕಿದರು.
ಯುದ್ದ ಕಾಲದಲ್ಲಿ ಟೈಮು ಟೈಮಿಗೆ ವೆಪನ್ಸ್ ಸಪ್ಲೈ ಮಾಡಿದರೂ ನನಗೆ ಅವಕಾಶ ಸಿಕ್ಕಿಲ್ಲ ಎಂದರೆ ನಾನು ಸುಮ್ಮನಿರುತ್ತೇನಾ? ಅದೇ ರಾಹುಲ್ ಗಾಂಧಿ ಅವರು ನನ್ನ ಮನೆ ಬಾಗಿಲಿಗೆ ಬರುವಂತೆ ಮಾಡುತ್ತೇನೆ. ಮಂತ್ರಿಗಿರಿ ತೆಗೆದುಕೊಳ್ಳುತ್ತೇನೆ ಎಂದು ಆಪ್ತರೆದುರು ಕೂಗಾಡಿದರು.

ರಾಹುಲ್ ಕಿವಿ ತಲುಪಿದ ಖಡಕ್ ನಾಯಕರ ಗುಟುರು
ವಾಸ್ತವವಾಗಿ ಅವರನ್ನು ಮಂತ್ರಿ ಮಂಡಲಕ್ಕೆ ತೆಗೆದುಕೊಳ್ಳಬಾರದು ಎಂದು ರಾಹುಲ್ ಗಾಂಧಿ ಅವರೇನೂ ಹೇಳಿರಲಿಲ್ಲ. ಅಥವಾ ಸಿದ್ದರಾಮಯ್ಯ ಕೂಡಾ ಅವರಿಗೆ ಮಂತ್ರಿಗಿರಿ ಕೊಡಬೇಡಿ ಎಂದು ಪಟ್ಟು ಹಿಡಿದಿರಲಿಲ್ಲ. ಆದರೆ ಯಾವಾಗ ಈ ನಾಯಕರು ಅಂತಹ ಮಾತುಗಳನ್ನಾಡಿದರೋ? ಆಗ ಸುದ್ದಿ ದೆಹಲಿಗೆ ತಲುಪಿತು.
ಆಗ ಎತ್ತಿದ ಮಾತಿಗೇ ರಾಹುಲ್ ಗಾಂಧಿ, ಹೌದಾ? ನಮ್ಮ ಯೋಧರಿಗೆ ಅವರು ಶಸ್ತ್ರಾಸ್ತ್ರಗಳನ್ನೆಲ್ಲ ತಮ್ಮ ಮನೆಯಿಂದ ತಂದುಕೊಟ್ಟರಾ? ಎಂದು ಪ್ರಶ್ನಿಸಿದರು. ಅಲ್ಲಿಗೆ ಕಳೆದ ವಿಧಾನಸಭೆ ಚುನಾವಣೆಯ ಟೈಮಿನಲ್ಲಿ ತಮಗೆ ವಹಿಸಿದ ಜವಾಬ್ದಾರಿಯನ್ನು ನಿರ್ವಹಿಸಿದರೂ ಈ ನಾಯಕ ಸೈಡ್ ಲೈನಿಗೆ ಸರಿಯುವ ಸ್ಥಿತಿ ಬಂತು.
ಆದರೆ ತಾವಾಡಿದ ಮಾತು ರಾಹುಲ್ ಗಾಂಧಿ ಅವರಿಗೆ ತಲುಪಿದೆ ಎಂದು ಗೊತ್ತಾಗಿದ್ದೇ ತಡ, ಈ ನಾಯಕ ಅಹ್ಮದ್ ಪಟೇಲರಿಂದ ಹಿಡಿದು ಸಿದ್ದರಾಮಯ್ಯ ತನಕ ಎಲ್ಲರ ಬಳಿ ಗೋಗರೆದು, ತಾವು ಆವೇಶದಲ್ಲಿ ಮಾತನಾಡಿದ್ದು ನಿಜ. ಆದರೆ ಅದನ್ನು ಆವೇಶದ ಮಾತುಗಳು ಎಂದು ಮಾತ್ರ ಪರಿಗಣಿಸಿ ಎಂದರು. ಫೈನಲಿ, ಅವರು ತೋರಿಸಿದ ವಿನಯ ಇತ್ತೀಚೆಗೆ ನಡೆದ ಮಂತ್ರಿ ಮಂಡಲ ಪುನರ್ರಚನೆಯ ಸಂದರ್ಭದಲ್ಲಿ ನೆರವಿಗೆ ಬಂತು. ಅವರು ಮಂತ್ರಿಯೂ ಆದರು. ಅವರಾರೆಂದು ವಿವರಿಸಿ ಹೇಳಬೇಕಾಗಿಲ್ಲ, ತಾನೆ?

ಸಿದ್ದು ಕಾಂಗ್ರೆಸ್ ನಲ್ಲೀಗ ಪವರ್ ಫುಲ್
ಆದರೆ ಸಿದ್ದರಾಮಯ್ಯ ಹಿಂದೆ ಯುದ್ದ ಕಾಲದಲ್ಲಿ ನೇಮಕ ಮಾಡಿದ ಬಹುತೇಕರು ಟೈಮಿಗೆ ಕೈ ಕೊಟ್ಟರು. ಹೀಗಾಗಿ ಸ್ವಯಂಬಲದ ಮೇಲೆ ಗೆಲ್ಲುವ ಸಿದ್ದರಾಮಯ್ಯ ಟೆಕ್ನಿಕ್ಕು ಫೇಲ್ ಆಯಿತು. ಆದರೆ ಅಂತಹ ಸಿದ್ದರಾಮಯ್ಯ ಅವರು ರಾಜ್ಯ ಕಾಂಗ್ರೆಸ್ ನಲ್ಲೀಗ ಪವರ್ ಫುಲ್ ಆಗಿದ್ದಾರೆ.
ಮಂತ್ರಿ ಮಂಡಲ ಪುನರ್ರಚನೆಯ ಸಂದರ್ಭದಲ್ಲಿ ಅವರ ಮಾತು ನಡೆದ ರೀತಿಯೇ ಅದಕ್ಕೆ ಸಾಕ್ಷಿ. ಸಿದ್ದರಾಮಯ್ಯ ಅವರನ್ನು ನಿರ್ಲಕ್ಷಿಸಿದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಸೈನ್ಯ ಸೊರಗುತ್ತದೆ ಎಂಬುದು ಮನವರಿಕೆಯಾದ ಮೇಲೆ ಕೈ ಪಾಳೆಯ ಅವರಿಗೆ ಮತ್ತಷ್ಟು ಶಕ್ತಿ ತುಂಬಲು ನಿರ್ಧರಿಸಿತು. ಸಂಪುಟ ಪುನರ್ರಚನೆಯ ಸ್ವರೂಪ ಬದಲಾಗಿದ್ದು ಹೀಗೆ.

ಹೊಸ ಟೀಮ್ ಕಟ್ಟಿಕೊಂಡಿರುವ ಸಿದ್ದು
ಅರ್ಥಾತ್, ಲೋಕಸಭೆ ಚುನಾವಣೆ ಎಂಬ ಯುದ್ಧದಲ್ಲಿ ಗೆಲ್ಲಲು ಸಿದ್ದರಾಮಯ್ಯ ಇದೀಗ ತಮ್ಮ ಸುತ್ತಲಿನ ಸೇನಾಧಿಪತಿಗಳ ಪೈಕಿ ಬಹುತೇಕರಿಗೆ ಕೊಕ್ ಕೊಡಿಸಿ, ಹೊಸ ಟೀಮ್ ಅನ್ನು ರಚಿಸಿಕೊಂಡಿದ್ದಾರೆ. ಈ ಟೀಮಿನಲ್ಲಿ ಕೆಲ ಮಂದಿ ಹಳಬರಿದ್ದಾರಾದರೂ, ಅದಕ್ಕೆ ಅವರ ಸೇವಾದಕ್ಷತೆ ಕಾರಣವೇ ಹೊರತು ಇನ್ಯಾವ ಮಾನದಂಡಗಳೂ ಇಲ್ಲ.
ಹೇಗಾದರೂ ಮಾಡಿ ಕರ್ನಾಟಕದಿಂದ ಹದಿನೈದರಷ್ಟು ಮಂದಿಯನ್ನು ಗೆಲ್ಲಿಸಿ ಪಾರ್ಲಿಮೆಂಟಿಗೆ ಕಳಿಸುವುದು ಸಿದ್ದರಾಮಯ್ಯ ಅವರ ಗುರಿ. ಹೀಗಾಗಿ ಅವರು ಬಿಜೆಪಿಯ ವೋಟ್ ಬ್ಯಾಂಕ್ ಅನ್ನು ಚದುರಿಸಿ, ಗಣನೀಯ ಸೀಟುಗಳು ಕೈ ಪಾಳೆಯಕ್ಕೆ ದಕ್ಕುವಂತೆ ಮಾಡಲು ತಂತ್ರ ಹೆಣೆಯುತ್ತಲೇ ಇದ್ದಾರೆ.

ಮುಂ ಮತ್ತು ಹೈ ಕರ್ನಾಟಕದ ಮೇಲೆ ಬಿಜೆಪಿ ಕಣ್ಣು
ಹಳೆ ಮೈಸೂರು ಭಾಗದ ಹಲ ಕ್ಷೇತ್ರಗಳಲ್ಲಿ ಜೆಡಿಎಸ್, ಕೆಲ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಬಲಿಷ್ಠವಾಗಿರುವುದರಿಂದ ತಮಗೆ ಕಷ್ಟಕರ ಪರಿಸ್ಥಿತಿ ಇದೆ. ಆದರೆ ಮುಂಬೈ ಕರ್ನಾಟಕ ಹಾಗೂ ಹೈದ್ರಾಬಾದ್-ಕರ್ನಾಟಕ ಭಾಗದಲ್ಲಿ ಹೆಚ್ಚು ಸಂಖ್ಯೆಯ ಸೀಟುಗಳನ್ನು ಗೆಲ್ಲುವ ಅವಕಾಶವಿದೆ ಎಂಬುದು ಭಾರತೀಯ ಜನತಾ ಪಕ್ಷದ ಲೆಕ್ಕಾಚಾರ.
ಆದರೆ ಈ ಅವಕಾಶಕ್ಕೆ ಅಡ್ಡಗಾಲು ಹಾಕುವ ಶಕ್ತಿ ಇರುವುದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾತ್ರ. ಹೀಗಾಗಿ ಚುನಾವಣೆಗೂ ಮುಂಚೆ ಅವರನ್ನು ದುರ್ಬಲಗೊಳಿಸಬೇಕು ಎಂಬುದು ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರಿಗೆ ತಲುಪಿರುವ ಸಂದೇಶ.
ಯಾವುದೇ ಕಳಂಕ ಅಂಟಿಸಿಕೊಂಡಿರದ ಸಿದ್ದರಾಮಯ್ಯ ಅವರನ್ನು ದುರ್ಬಲಗೊಳಿಸುವುದು ಅಷ್ಟು ಸುಲಭವೇನಲ್ಲ. ಹೀಗಾಗಿ ಬಿಜೆಪಿ ವರಿಷ್ಠರು ಸಾಕಷ್ಟು ತಲೆಕೆಡಿಸಿಕೊಂಡಿದ್ದಾರೆ. ಆದರೆ, ಆಡಳಿತಾವಧಿಯ ಕೊನೆಯಲ್ಲಿ ಮಾಡಿರುವ ಭಾನಗಡಿಗಳಿಂದಾಗಿ ಬಿಜೆಪಿಗೆ ಒಂದು ಅಸ್ತ್ರ ಸಿಕ್ಕಂತಾಗಿದೆ.

ಸಿದ್ದುವನ್ನು ದುರ್ಬಲ ಮಾಡುವುದು ಹೇಗೆ?
ಅಂದ ಹಾಗೆ ಸಿದ್ದರಾಮಯ್ಯ ಅವರನ್ನು ತಡೆಯುವುದು ಹೇಗೆ? ವಾಗ್ಧಾಳಿಗಳಿಂದ ಇಂತಹ ಕೆಲಸ ಮಾಡಲು ಸಾಧ್ಯವಿಲ್ಲ. ಆದರೆ ಸಿದ್ದರಾಮಯ್ಯ ಕಾಲದ ಕೆಲ ನಿರ್ಣಯಗಳ ಬಗ್ಗೆ ತಕರಾರು ಏಳುವಂತೆ ಮಾಡಬೇಕು. ಆ ಮೂಲಕ ಅವರು ದುರ್ಬಲವಾಗುವಂತೆ ಮಾಡಬೇಕು ಎಂಬುದು ಮೋದಿ, ಶಾ ಜೋಡಿಗೆ ತಲುಪಿರುವ ಸಂದೇಶ.
ಅವರು ನೀಡಿರುವ ಮಾಹಿತಿಯ ಪ್ರಕಾರ, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಕೊನೆಯ ದಿನಗಳಲ್ಲಿ ಒಂದು ಲಕ್ಷ, ಹದಿಮೂರು ಸಾವಿರ ಕೋಟಿ ರೂಗಳಷ್ಟು ಯೋಜನೆಗೆ ಒಪ್ಪಿಗೆ ನೀಡಿದ್ದಾರೆ, ಹಾಗೆಯೇ ಹದಿನೆಂಟು ಸಾವಿರ ಕೋಟಿ ರೂ ಮೊತ್ತದ ವಸತಿ ಯೋಜನೆಗಳನ್ನು ಕ್ಲಿಯರ್ ಮಾಡಿ ಹೋಗಿದ್ದಾರೆ.
ಹೀಗೆ ಕ್ಲಿಯರ್ ಮಾಡುವ ಮೂಲಕ ಅವರು ಜನರ ಮೇಲೆ ಪ್ರಭಾವ ಬೀರಿದ್ದಷ್ಟೇ ಅಲ್ಲ, ತಮ್ಮ ಸೇನಾಧಿಪತಿಗಳ ಶಕ್ತಿಯನ್ನೂ ಹೆಚ್ಚಿಸಿದ್ದರು. ಸೇನಾಧಿಪತಿಗಳ ಪೈಕಿ ಹಲವರು ಕೈಕೊಟ್ಟಿದ್ದೇನೋ ನಿಜ. ಆದರೆ ಸಿದ್ದರಾಮಯ್ಯ ತಮ್ಮ ಆಡಳಿತಾವಧಿಯ ಕೊನೆಯ ದಿನಗಳಲ್ಲಿ ಕೈಗೊಂಡ ನಿರ್ಧಾರಗಳ ಬಗ್ಗೆ ತಕರಾರು ಎಬ್ಬಿಸುವುದು ಅಸಾಧ್ಯವೇನಲ್ಲ. ಇಂತಹ ನಿರ್ಧಾರಗಳನ್ನು ಅವರು ತರಾತುರಿಯಲ್ಲಿ ಯಾಕೆ ಕೈಗೊಂಡರು ಅಂತ ತಕರಾರು ಎಬ್ಬಿಸಿದರೆ, ಮತ್ತು ಯಾವುದಾದರೊಂದು ತನಿಖೆಗೆ ಅವರು ಗುರಿಯಾಗುವಂತೆ ಮಾಡಿದರೆ ಸಹಜವಾಗಿ ಅವರ ಶಕ್ತಿ ಕುಗ್ಗುತ್ತದೆ.

ಎಚ್ಡಿಕೆಯನ್ನು ಇಕ್ಕಟ್ಟಿಗೆ ಸಿಲುಕಿಸಿದ ಸಿದ್ದು ಯೋಜನೆ
ಗಮನಿಸಬೇಕಾದ ಅಂಶವೆಂದರೆ ಇವತ್ತು ಕುಮಾರಸ್ವಾಮಿ ನೇತೃತ್ವದ ಸರ್ಕಾರ ಅಸ್ತಿತ್ವದಲ್ಲಿದೆಯಾದರೂ ಅದರ ಕೈಲಿ ಹಣವಿಲ್ಲ. ಹೀಗಾಗಿ ಮೊನ್ನೆ ಮೊನ್ನೆ ರಿಸರ್ವ್ ಬ್ಯಾಂಕ್ ನ ಅನುಮತಿ ಪಡೆದು ಒಂದೂವರೆ ಸಾವಿರ ಕೋಟಿ ರೂ ಮೊತ್ತದ ಬಾಂಡುಗಳನ್ನು ರಿಲೀಸು ಮಾಡಿಸುವ ಮೂಲಕ ಸಾಲ ಎತ್ತಿಕೊಂಡಿದೆ.
ಸದ್ಯದ ಸ್ಥಿತಿಯಲ್ಲಿ ಅದು ಸರ್ಕಾರಿ ನೌಕರರಿಗೆ ನೀಡುತ್ತಿರುವ ಸಂಬಳ, ಪಿಂಚಣಿಯ ರೂಪದಲ್ಲಿ ನೀಡುತ್ತಿರುವ ಹಣದ ಪ್ರಮಾಣವೇ ಹತ್ತತ್ತಿರ ನಲವತ್ತು ಸಾವಿರ ಕೋಟಿ ರೂಗಳಷ್ಟಿದೆ. ಹಾಗೆಯೇ ಅಭಿವೃದ್ಧಿಯ ಹೆಸರಿನಲ್ಲಿ ರಾಜ್ಯ ಮಾಡಿರುವ ಸಾಲ ಎರಡು ಲಕ್ಷ ಕೋಟಿ ರೂಗಳಿಗೂ ಹೆಚ್ಚಿದೆ.
ಈ ಸಾಲದ ಮೇಲಿನ ಅಸಲು, ಬಡ್ಡಿಗೆಂದೇ ಇಪ್ಪತ್ನಾಲ್ಕು ಸಾವಿರ ಕೋಟಿ ರೂಗಳಷ್ಟು ಹಣವನ್ನು ಪಾವತಿಸಬೇಕಾಗಿದೆ. ಹೀಗಾಗಿ ಲೆಕ್ಕ ಹಾಕಿದರೆ ರಾಜ್ಯ ಸರ್ಕಾರ ತನ್ನ ಆದಾಯದ ಒಂದು ರೂಪಾಯಿಯ ಪೈಕಿ ಎಂಭತ್ತೆರಡು ಪೈಸೆಯಷ್ಟು ಹಣವನ್ನು ಯೋಜನೇತರ ವೆಚ್ಚಗಳಿಗೆ ಖರ್ಚು ಮಾಡಬೇಕಿದೆ. ಕೇವಲ ಹದಿನೆಂಟು ಪೈಸೆಯಷ್ಟು ಹಣ ಮಾತ್ರ ಯೋಜನಾ ವೆಚ್ಚಕ್ಕೆ ಹೋಗುತ್ತಿದೆ.

ಇಲ್ಲದಿದ್ದರೆ 20 ಸೀಟುಗಳ ಕನಸು ಕೈಬಿಡಿ
ಈ ಎಲ್ಲ ಅಂಶಗಳ ಬಗ್ಗೆ ಸರ್ಕಾರ ನಡೆಸುತ್ತಿರುವ ಜೆಡಿಎಸ್ ಗೂ ಅಸಮಾಧಾನವಿದೆ. ಸಾಲದೆಂಬಂತೆ ಸಿದ್ದರಾಮಯ್ಯ ಅವರ ಬಗ್ಗೆ ಆಕ್ರೋಶವೂ ಇದೆ. ಹೀಗಾಗಿ ಆಪರೇಷನ್ ಸಿದ್ದರಾಮಯ್ಯ ಕಾರ್ಯಾಚರಣೆ ನಡೆದರೆ ಜೆಡಿಎಸ್ ದೊಡ್ಡ ಮಟ್ಟದಲ್ಲಿ ವಿರೋಧಿಸುವುದಿಲ್ಲ.
ಪರಿಣಾಮವಾಗಿ ಮುಂದಿನ ಪಾರ್ಲಿಮೆಂಟ್ ಚುನಾವಣೆಯ ವೇಳೆಗೆ ಸಿದ್ದರಾಮಯ್ಯ ಅವರ ಶಕ್ತಿ ಕುಸಿಯುವಂತೆ ಮಾಡಿ, ಇಲ್ಲದಿದ್ದರೆ ಇಪ್ಪತ್ತು ಸೀಟುಗಳನ್ನು ಕರ್ನಾಟಕದಿಂದ ಗೆಲ್ಲುವ ಆಸೆ ಕೈ ಬಿಡಿ ಎಂದು ಮಾಹಿತಿ ನೀಡಿದ ನಾಯಕರು, ಮೋದಿ ಹಾಗೂ ಅಮಿತ್ ಶಾ ಅವರಿಗೆ ವಿವರಿಸಿದ್ದಾರೆ.
ಮುಂದೇನಾಗುತ್ತದೋ? ಅದು ಬೇರೆ ವಿಷಯ. ಆದರೆ ಕರ್ನಾಟಕದ ಈ ನಾಯಕ ಬಿಜೆಪಿಯ ವರಿಷ್ಠರಿಗೆ ನೀಡಿರುವ ಈ ವಿವರಗಳು ಮಾತ್ರ ಇಂಟರೆಸ್ಟಿಂಗ್ ಆಗಿವೆ. ಇಂಥ ವಿಷಯಗಳನ್ನು ಮೋದಿ ಮತ್ತು ಅಮಿತ್ ಶಾ ಅವರಿಗೆ ಮುಟ್ಟಿಸಿರುವ ಕರ್ನಾಟಕದ ಬಿಜೆಪಿ ನಾಯಕ ಯಾರು? ಗೊತ್ತಾ?
-
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
LPG Gas: ದೇಶದಲ್ಲಿ'ಅಡುಗೆ ಅನಿಲ ತುರ್ತು ಪರಿಸ್ಥಿತಿ' ಭೀತಿ; ಡಿಜಿಟಲ್ ಬುಕಿಂಗ್ ಸರ್ವರ್ ಡೌನ್; ಏಜೆನ್ಸಿಗಳ ಮುಂದೆ ಜನರ ಕ್ಯೂ -
ಮಾರ್ಚ್ 10ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಅಕ್ಷಯ ತೃತೀಯ 2026: ಏಪ್ರಿಲ್ 19ಕ್ಕೆ ಚಿನ್ನದಂತಹ ಹಬ್ಬ; ಶುಭ ಮುಹೂರ್ತ, ಪೂಜಾ ವಿಧಿವಿಧಾನ, ವಿವರ -
ಪ್ರವಾಸೋದ್ಯಮ ಇಲಾಖೆಯಿಂದ ಎಸ್ಸಿ,ಎಸ್ಟಿ ಅಭ್ಯರ್ಥಿಗಳಿಗೆ ಆತಿಥ್ಯ ಕ್ಷೇತ್ರದಲ್ಲಿ ಉಚಿತ ಕೌಶಲ್ಯಾಭಿವೃದ್ಧಿ ತರಬೇತಿ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
ಎಲ್ಪಿಜಿ ಸಿಲಿಂಡರ್ ಪೂರೈಕೆ ಸ್ಥಗಿತ: ನಾಳೆಯಿಂದ ಬೆಂಗಳೂರಿನಾದ್ಯಂತ ಹೋಟೆಲ್ಗಳು ಬಂದ್ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಈ ಪ್ರದೇಶ ಬೆಸ್ಟ್: ಉದ್ಯಮಿ ಕಿರಣ್ ಮಜುಂದಾರ್ ಶಾ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ












Click it and Unblock the Notifications