ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವ್ಯಕ್ತಿ ಪ್ರತಿಷ್ಠೆಗೆ ಬಲಿಯಾಯಿತೇ ಲಿಂಗಾಯತ ಚಳುವಳಿ?

By ಡಾ. ಶಶಿಕಾಂತ ಪಟ್ಟಣ, ಪುಣೆ
|
Google Oneindia Kannada News

ಲಿಂಗಾಯತ ಒಂದು ಸ್ವತಂತ್ರ ಧರ್ಮ. ಅಪ್ಪ ಬಸವಣ್ಣನವರು ಸ್ಥಾಪಿಸಿದ ಸಾರ್ವಕಾಲಿಕ ಸಮತೆ ಸಾರುವ ವೈಚಾರಿಕ ಸೈದ್ಧಾಂತಿಕವುಳ್ಳ ಅನುಭಾವಿಕ ಧರ್ಮವಾಗಿದೆ.

ಯಾವುದೇ ಪುರಾವೆ ಇತಿಹಾಸ ದಾಖಲೆಗಳಿಲ್ಲದ ಕಟ್ಟು ಕಥೆ ಪುರಾಣವನ್ನಾಧರಿಸಿದ ವೀರಶೈವವು ಹನ್ನೆರಡನೆಯ ಶರ್ತಮಾನದಲ್ಲಿ ಕರ್ನಾಟಕಕ್ಕೇ ಕಾಲಿಟ್ಟ ಒಂದು ವ್ರತ.

ಲಿಂಗಾಯತ ಪ್ರತ್ಯೇಕ ಧರ್ಮ : ಯಡಿಯೂರಪ್ಪ ಹೇಳಿದ್ದೇನು?ಲಿಂಗಾಯತ ಪ್ರತ್ಯೇಕ ಧರ್ಮ : ಯಡಿಯೂರಪ್ಪ ಹೇಳಿದ್ದೇನು?

ಬ್ರಾಹ್ಮಣ್ಯೀಕರಣದ ವಿರುದ್ಧ ಸೆಟೆದು ನಿಂತ ಅಭೂತಪೂರ್ವ ಲಿಂಗಾಯತ ಧರ್ಮವು ಈಗ ಶೈವರ ಅದರಲ್ಲೂ ವೀರಶೈವರ ಕಪಿಮುಷ್ಟಿಗೆ ಸಿಲುಕಿ ತನ್ನ ಸ್ವರೂಪವನ್ನೇ ಕಳೆದುಕೊಂಡಿತು. ವೀರಶೈವವು ಕಳೆದ ಆರು ಶತಮಾನದಿಂದ ಲಿಂಗಾಯತ ತತ್ವದ ಮೇಲೆ ಸವಾರಿ ಮಾಡುತ್ತಾ ಮಠ ಆಶ್ರಮ ಲಾಂಛನಗಳನ್ನು ಗಟ್ಟಿಗೊಳಿಸಿ ಸನಾತನಗಳ ಸಂಕೇತಗಳಿಗೆ ಆದ್ಯತೆ ನೀಡಿ ಆಚರಣೆಗೆ ತಂದಿದೆ. ಯಾವುದನ್ನು ಬಸವಣ್ಣ ವಿರೋಧ ಮಾಡಿದನೋ ಅದನ್ನೇ ವೀರಶೈವ ಲಿಂಗಾಯತರು ಆಚರಣೆಗೆ ತಂದರು.

Lingayat movement losing track due to lackluster people

ದಲಿತರು ಲಿಂಗಾಯತರಲ್ಲವೇ?

ಕೇವಲ ಒಂದು ಉನ್ನತ ವರ್ಗದ ಶ್ರೀಮಂತ ರಾಜಕೀಯ ನಾಯಕರು ಮತ್ತು ಮಠಾಧೀಶರು ಇತ್ತೀಚೆಗೆ ಲಿಂಗಾಯತ ಚಳುವಳಿಯ ನೇತೃತ್ವ ವಹಿಸಿ ಸಮಾವೇಶಗಳಲ್ಲಿ ಬಸವಣ್ಣನವರ ತತ್ವ ಸಿದ್ಧಾಂತಗಳಿಗೆ ತಿಲಾಂಜಲಿ ನೀಡಿ ತಮ್ಮ ತಮ್ಮ ವ್ಯಕ್ತಿ ಪ್ರತಿಷ್ಠೆ ಸ್ವಾಭಿಮಾನಕ್ಕೆ ಚಳವಳಿಯನ್ನು ದಾಳವನ್ನಾಗಿ ಬಳಸುತ್ತಿರುವುದು ಶೋಚನೀಯ ಸಂಗತಿಯಾಗಿದೆ.

ಅಸ್ಪೃಶ್ಯರಿಗಾಗಿ, ದಲಿತರಿಗಾಗಿ ಹುಟ್ಟಿದ ಈ ಧರ್ಮದಲ್ಲಿ, ದಲಿತರು, ಅಸ್ಪೃಶ್ಯರು, ಬಡವರಿಗೆ ಇಂತಹ ಧಾರ್ಮಿಕ ಸಮಾವೇಶಗಳಲ್ಲಿ ಅವಕಾಶವಿಲ್ಲ. ಅಷ್ಟೇ ಅಲ್ಲ ನಾಡಿನ ದಲಿತ ಮುಖಂಡರು, ಸಚಿವರು ಪಕ್ಷಾತೀತ ಶಾಸಕರು ನಾಯಕರಿಗೆ ಲಿಂಗಾಯತ ಸಮಾವೇಶಕ್ಕೆ ಏಕೆ ಆಮಂತ್ರಣ ನೀಡಿಲ್ಲ? ರಾಜಕೀಯ ಲೆಕ್ಕಾಚಾರಕ್ಕೆ ಲಿಂಗಾಯತ ಚಳವಳಿಯನ್ನು ಬಳಸುತ್ತಿರುವುದು ಖಂಡನೀಯವಾಗಿದೆ.

ಗದಗದಲ್ಲಿ ವೀರಶೈವ-ಲಿಂಗಾಯತ ಸಮಾವೇಶ, 8 ನಿರ್ಣಯಗದಗದಲ್ಲಿ ವೀರಶೈವ-ಲಿಂಗಾಯತ ಸಮಾವೇಶ, 8 ನಿರ್ಣಯ

ಬಾಯಿಗೆ ಬಂದಂತೆ ಮಾತನಾಡುವ ನಾಯಕರು, ನಾಲಿಗೆ ಹರಿ ಬಿಡುವ ಕೆಲ ಸ್ವಾಮಿಗಳು ಮಾತನಾಡುತ್ತಿರುವುದನ್ನು ನೋಡಿದರೆ, ಲಿಂಗಾಯತ ತತ್ವ ಸಿದ್ಧಾಂತಕ್ಕೆ
ದ್ರೋಹ ಬಗೆದಂತಾಗುತ್ತದೆ. ದಲಿತರೇ ಲಿಂಗಾಯತ ಧರ್ಮದ ವಾರಸುದಾರರು. ಅವರನ್ನು ಹೊರತು ಪಡಿಸಿ ಹೊರಡುವುದು ಸ್ವಾರ್ಥ ರಾಜಕಾರಣ, ಜಾತಿ ಪಕ್ಷಪಾತಗಳ ಲಕ್ಷಣಗಳು.

Lingayat movement losing track due to lackluster people

ರಾಷ್ಟ್ರೀಯ ಬಸವ ಸೇನೆ ಏನಾಯಿತು?

ರಜನಿಕಾಂತ್ ಪಕ್ಷ ಸ್ಥಾಪಿಸಿದ ಬೆನ್ನಲ್ಲೇ ಸಂಜೆ ಇಪ್ಪತ್ತು ಲಕ್ಷ ಜನರು ಸದಸ್ಯರಾಗಿ ನೋಂದಣಿ ಮಾಡಿದರು. ಈಗ ಐದು ತಿಂಗಳು ಕಳೆದಿವೆ ರಾಷ್ಟ್ರೀಯ ಬಸವ ಸೇನೆ ಸಂಖ್ಯೆ ಎಷ್ಟಿದೆ?

ವ್ಯಕ್ತಿ ಪ್ರತಿಷ್ಠೆಗೋಸ್ಕರ ಚುನಾವಣಾ ತಂತ್ರಗಾರಿಕೆಗಾಗಿ ಬಸವಣ್ಣನವರನ್ನು ಬಳಸುವುದು ಸರಿಯಲ್ಲ. ನಾನು ಒಬ್ಬ ಅಪ್ಪಟ ಬಸವ ಭಕ್ತ ಲಿಂಗಾಯತ ಪರವಾದ ವಾದವನ್ನು ಮಂಡಿಸುವವನು. ನನಗೆ ಲಿಂಗಾಯತ ಧರ್ಮ ಬೇಡಿಕೆ ಹೋರಾಟವು ಪಕ್ಷಾತೀತವಾದ ಚಳವಳಿಯಾಗಬೇಕು. ಕಾಂಗ್ರೆಸ್ ಮಿತ್ರರು, ಬಿಜೆಪಿ ಶತ್ರುಗಳು ಎಂಬ ಸಣ್ಣತನವನ್ನು ಬಿಡಬೇಕು.

ಲಿಂಗಾಯತ ಧರ್ಮ ಮಾನ್ಯತೆ ಚಳವಳಿ ಜನಪರ ಮೂಲ ಕ್ರಾಂತಿಯ ಆಶಯದಲ್ಲಿ ನಡೆಯಲಿ. ರಾಜಕೀಯವಾಗಿ ಇದನ್ನು ದಾಳವಾಗಿ ಬಳಸದಿರಲಿ. ಲಿಂಗಾಯತರ ವಿಷಯ ಬೇಡಿಕೆ ಪ್ರತಿಪಾದನೆ ಮೌಲಿಕವಾದ ತತ್ವಗಳ ಮೇಲೆ ರೂಪಗೊಳ್ಳಲಿ. ಅದನ್ನು ಬಿಟ್ಟು ದ್ವೇಷ, ಪ್ರತಿಕಾರ, ಪ್ರತಿಷ್ಠೆಯಿಂದ ಹೋರಾಡಿದರೆ ಪ್ರತಿ ಪಕ್ಷದವರಿಗೆ ಲಾಭವಾಗುತ್ತದೆ.

ಚಳವಳಿ ಕಾನೂನು ಮತ್ತು ನ್ಯಾಯ ಸಮ್ಮತವಾಗಿರಬೇಕು. ಅರಿವು ಜಾಗೃತಿ ಸಾಕಷ್ಟು ಪ್ರಮಾಣದಲ್ಲಿ ನಡೆದು ಹೋಗಿದೆ. ಆದರೆ ಲಿಂಗಾಯತ ಧಾರ್ಮಿಕ ಮಾನ್ಯತೆ ಮತ್ತು ಅಲ್ಪಸಂಖ್ಯಾತ ಸ್ಥಾನಮಾನಗಳು ಕೇವಲ ಭಾವಾವೇಶದ ಸಮಾವೇಶಗಳಿಂದಲ್ಲ. ಕಾನೂನು ಚೌಕಿಟ್ಟಿನಲ್ಲಿ ಪ್ರಜಾಸತ್ತಾತ್ಮಕವಾಗಿ ಹೋರಾಡಬೇಕು.

Lingayat movement losing track due to lackluster people

ತಜ್ಞರ ಸಮಿತಿ ಹಾಗೂ ವಿರೋಧ

ನ್ಯಾಯಮೂರ್ತಿ ನಾಗಮೋಹನ ದಾಸ ಅವರ ಅಧ್ಯಕ್ಷತೆಯಲ್ಲಿ ಏಳು ಜನ ಸಾಹಿತಿ ತಜ್ಞರನ್ನು ಸರಕಾರ ನಿಯಮಿಸಿತು. ಇದಕ್ಕೆ ವೀರಶೈವರು ಸಾರ್ವಜನಿಕರ ಹಿತಾಸಕ್ತಿ ಅರ್ಜಿ ಸಲ್ಲಿಸಿ ಅಡ್ಡಗಾಲು ಹಾಕಿದರು. ಈ ಮಧ್ಯೆ ಪಂಪಿ ಕೃಪಾಪೋಷಿತ ದಿಂಗಾಲೇಶ್ವರ ಸ್ವಾಮಿಗಳು ಹೊರಟ್ಟಿ ಅವರಿಗೆ ಸವಾಲು ಹಾಕಿದರು.

ಹುಬ್ಬಳ್ಳಿಯ ಬಸವ ಭಕ್ತರ ಮಠದಲ್ಲಿ ಪಂಪಿಗಳ ಅಟ್ಟಹಾಸಕ್ಕೆ ಪೊಲೀಸರು ಬ್ರೇಕ್ ಹಾಕಿದರು. ಈಗ ಬೆಳಗಾವಿಯಲ್ಲಿ ಇನ್ನೊಂದು ಮೀಟಿಂಗ್. ಹಿರಿಯ ನಿವೃತ್ತ ಐಎಎಸ್ ಅಧಿಕಾರಿಗಳು ಹೀಗೆ ಸಮಯ ವ್ಯರ್ಥ ಮಾಡುತ್ತಿರುವುದು ದುರಂತ ಸಂಗತಿಯಾಗಿದೆ. ಲಿಂಗಾಯತ ಚಳವಳಿಯ ಸದ್ದು ಅಡಗಿಸಲು ಪಂಪಿಗಳು, ನಮ್ಮ ಅನೇಕ ವಿರಕ್ತ ಮಠಾಧೀಶರು, ಮಹೇಶ್ವರ ವರ್ಗದವರು ಶಪಥ ಮಾಡಿದ್ದಾರೆ.

ಸರಕಾರಿ ಕಡತಗಳಿಂದ ಮಾಯವಾದ ಲಿಂಗಾಯತರ ಪರ ಅರ್ಜಿಗಳು.

ವಿಶ್ವ ಲಿಂಗಾಯತ ಸಮಿತಿ ಹಾಗು ಡಾ ಎಸ್ ಎಂ ಜಮಾದಾರ ಮತ್ತು ಇನ್ನು ಅನೇಕ ಲಿಂಗಾಯತರ ಪರವಾಗಿ ಸಲ್ಲಿಸಿದ ಅರ್ಜಿಗಳು ಕಡತದಿಂದ ಮಾಯವಾಗಿವೆ. ಅಬ್ಬರದ ಸಮಾವೇಶಗಳಲ್ಲಿ ಸಲ್ಲಿಸಿದ ಒಂದು ಮನವಿ ಅರ್ಜಿಯೂ ಸರಕಾರದ ಬಳಿಯಿಲ್ಲ. ಬೆಳಗಾವಿ, ಕೊಪ್ಪಳ, ಧಾರವಾಡ, ಸಿಂಧನೂರು ಮುಂತಾದ ಕಡೆಗಳಲ್ಲಿ ಮುಖ್ಯ ಮಂತ್ರಿಯವರಿಗೆ ಸಲ್ಲಿಸಿದ ಅರ್ಜಿಗಳು ಮಂಗ ಮಾಯವಾಗಿವೆ. ಇಲ್ಲಿಯೂ ಪಂಪಿ ಶೈವರ ಕೈವಾಡ ಎದ್ದು ಕಾಣುತ್ತದೆ. ಪಂಪಿದ ಪರವಾಗಿ ಸದ್ದಿಲ್ಲದೇ ಹದಿನೆಂಟು ಅರ್ಜಿಗಳು ಬಂದಿವೆ ಎಂದು ವಿಶ್ವಸನೀಯ ಮೂಲಗಳಿಂದ ತಿಳಿದು ಬಂದಿದೆ.

ನಾವು ಕೋಟೆ ಕಟ್ಟುತ್ತೇವೆ ಕೆಲ ಹೆಗ್ಗಣಗಳು ಅವುಗಳನ್ನು ದುಸ್ತರಗೊಳಿಸುತ್ತವೆ. ಜಗತ್ತು ನರಳುವುದು ದುಷ್ಟರ ಕ್ರೂರತನದಿಂದಲ್ಲ, ಆದರೆ ಶಿಷ್ಟರ ಮೌನದಿಂದ. ಕೇವಲ ಭಾವನಾತ್ಮಕವಾಗಿ ಉದ್ವೇಗ ಉನ್ಮಾದ ಉತ್ಸಾಹಗಳಲ್ಲಿ ಸಭೆ ಸಮಾರಂಭ ಮಾಡಿ ಸಮಾವೇಶಗಳಲ್ಲಿ ಶಕ್ತಿ ಪ್ರದರ್ಶನ ಮಾಡಿದ ಲಿಂಗಾಯತರು ಪಟ್ಟಭದ್ರ ಹಿತಾಸಕ್ತಿಗಳು ಯಾವ ಕುತಂತ್ರ ಮಾಡುತ್ತಿದ್ದಾರೆ ಎನ್ನುವ ಬಗ್ಗೆ ಕಾಳಜಿ ವಹಿಸಲು ಆಗಲಿಲ್ಲ.

ರಾಜಕೀಯ ನಾಯಕರು ಇನ್ನು ತಮ್ಮ ತಮ್ಮ ಚುನಾವಣೆಗಳಲ್ಲಿ ಬ್ಯುಸಿಯಾಗುತ್ತಾರೆ. ಸ್ವಾಮಿ ಅಕ್ಕ ಅಣ್ಣನವರು ಮಠಗಳ ಜಾತ್ರೆ ಉತ್ಸವದಲ್ಲಿ ತೊಡಗುತ್ತಾರೆ. ಬಸವ ಭಕ್ತರು ಮತ್ತೆ ನಿಟ್ಟುಸಿರು ಬಿಡುವ ಪ್ರಸಂಗ ಬಂದಿದೆ. ಮುಖ್ಯಮಂತ್ರಿಯವರಿಗೆ ಹಳೆ ಮೈಸೂರಿನ ಮತಗಳು ಬೇಕು, ಅಲ್ಲಿರುವ ದೊಡ್ಡ ದೊಡ್ಡ ಮಠಾಧೀಶರು ಲಿಂಗಾಯತರ ಪರವಾಗಿಲ್ಲ. ಸಿದ್ಧಗಂಗಾ ಶ್ರೀಗಳು ಮೌನವಾಗಿದ್ದಾರೆ. ಅಖಿಲ ಭಾರತ ವೀರಶೈವ ಮಹಾಸಭೆ ತಿಪ್ಪಣ್ಣನಂತಹ ವಾಗೀಶ ವ್ಯಕ್ತಿಗಳನ್ನು ತಂಟೆಗೆ ಇಟ್ಟಿದ್ದಾರೆ.

ಧರ್ಮವು ಒಡೆಯುವದಿಲ್ಲ. ಆದರೆ ಕಾಂಗ್ರೆಸ್ ಪಕ್ಷ ಒಡೆಯುತ್ತದೆ ಎನ್ನುವ ಭೀತಿ ರಾಜಕಾರಣಿಗಳಿಗೆ. ತಾತ್ವಿಕವಾಗಿ ಲಿಂಗಾಯತ ಧರ್ಮಕ್ಕೆ ಸಾವಿರಾರು ಪುರಾವೆಗಳಿದ್ದರೂ ಅವು ಕೇವಲ ವೇದಿಕೆಯ ಅಬ್ಬರಕ್ಕೆ ಸೀಮಿತವಾದವು. ಅತಂತ್ರ ಸ್ಥಿತಿಯಲ್ಲಿ ಇಂದು ಲಿಂಗಾಯತ ಚಳವಳಿಯಾಗಿದೆ ಡಾ ಎಂ ಬಿ ಪಾಟೀಲರು ಅತ್ಯಂತ ಉತ್ಸಾಹದಿಂದ ಇದನ್ನು ಕೈಗೊಂಡಿದ್ದರೂ ಸದ್ಯ ಕೇವಲ ಹೊರಟ್ಟಿಯವರು ಮಾತ್ರ ಕಣದಲ್ಲಿದ್ದಾರೆ ಎನಿಸುತ್ತದೆ.

ಆದರೆ ಆ ಯುದ್ಧವು ಕೂಡ ಅರ್ಹ ಯೋಧರ ಜೊತೆಗಲ್ಲ. ವೀರಶೈವರ ಜೊತೆ ಸಮಲೋಚನೆ ಸಂಧಾನ ಚರ್ಚೆ ಅನಗತ್ಯ. ಈ ಕೂಡಲೇ ರಾಜಕೀಯ ನಾಯಕರು ನಿವೃತ್ತ ಅಧಿಕಾರಿಗಳು ಕಾನೂನಾತ್ಮಕ ಹೋರಾಟವನ್ನು ಆದಷ್ಟು ತೀವ್ರಗೊಳಿಸಬೇಕು. ಸಾರ್ವಜನಿಕ ಹಿತಾಸಕ್ತಿ ಹೆಸರಿನಲ್ಲಿ ಲಿಂಗಾಯತ ಚಳವಳಿಯನ್ನು ಒಂದು ವರ್ಗವು ಹತ್ತಿಕ್ಕುತ್ತಿದೆ.

ಕರಾವಳಿಯಲ್ಲಿ ಹತ್ಯೆಗಳಾದಾಗ ದೃಶ್ಯ ಮಾಧ್ಯಮಗಳು ಲಿಂಗಾಯತ ಚಳವಳಿಯನ್ನು ಅತ್ಯಂತ ವಿರೂಪವಾಗಿ ಚಿತ್ರಿಸಿದ್ದಾರೆ. ಬಸವ ಭಕ್ತರ ಭಾವನೆಗಳ ಜೊತೆ ಯಾವುದೇ ರಾಜಕೀಯ ಪಕ್ಷದವರು ಚೆಲ್ಲಾಟವಾಡಿದರೆ ಅದರ ಪರಿಣಾಮ ನೆಟ್ಟಗಿರುವದಿಲ್ಲ.

ಲಿಂಗಾಯತ ಚಳವಳಿಯ ರಾಜಕೀಯ ಮುಖಂಡರು, ತಮ್ಮ ಸಮಿತಿಯಲ್ಲಿ ತಜ್ಞರನ್ನು, ಸಾಹಿತಿಗಳನ್ನು, ಕಾನೂನು ತಜ್ಞರನ್ನು, ವಕೀಲರನ್ನು ಕೂಡಿಸಿ ತ್ವರಿತವಾಗಿ ಮುಂದಿನ ಹೋರಾಟದ ರೂಪರೇಷೆಯ ಬಗ್ಗೆ ಚಿಂತಿಸದೆ ಹೋದರೆ ಜನರು ರೊಚ್ಚಿಗೇಳುವುದು ಶತಸಿದ್ಧ.

English summary
Lingayat movement should have got big momentum had some leaders had not utilized for their political gain. Now, it is losing track due to lackluster people. Dr Shashikant Pattan from Pune writes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X