"ಕನಕನ ಬಂಡೆ"; ಕನಕನ ಕಥೆ ಹೇಳುವ ಮಹದೇವಪುರದ ದೇಗುಲ
ಭಕ್ತಿಯಿಂದ ಕೃಷ್ಣನನ್ನೇ ಒಲಿಸಿಕೊಂಡ ಕನಕನಿಗೊಂದು ಗುಡಿಕಟ್ಟಿ ನಿತ್ಯ ಪೂಜೆ ಸಲ್ಲಿಸುವ ಕೈಂಕರ್ಯವನ್ನು ಮೈಸೂರಿನ ಮಹದೇವಪುರದಲ್ಲಿ ಬಹು ವರ್ಷಗಳಿಂದಲೂ ಮಾಡಿಕೊಂಡು ಬರಲಾಗುತ್ತಿದೆ.
ತನ್ನ ಕೀರ್ತನೆ, ಪವಾಡಗಳ ಮೂಲಕ ಇಡೀ ಮಾನವರು ಒಂದೇ ಎಂದು ಸಾರಿದ ಕನಕದಾಸರು ಸಮಾಜದಲ್ಲಿ ಅಂಟಿಕೊಂಡಿದ್ದ ಮೇಲು ಕೀಳೆಂಬ ಜಾತಿಯ ಕಂದಕವನ್ನು ತೊಡೆದು ಹಾಕಲು ಜೀವನ ಪರ್ಯಂತ ಶ್ರಮಿಸಿದವರು.
ಇಷ್ಟಕ್ಕೂ ಮಹದೇವಪುರಲ್ಲಿ ಕನಕದೇಗುಲ ನಿರ್ಮಾಣ ಮಾಡಿದ್ದಾದರೂ ಏಕೆ ಎನ್ನುವುದನ್ನು ನೋಡಿದರೆ, ಕನಕದಾಸರ ಪವಾಡವೊಂದು ಇಲ್ಲಿ ಬಿಚ್ಚಿಕೊಳ್ಳುತ್ತದೆ. ಕನಕದಾಸರು ದೇಶ ಪರ್ಯಟನೆ ಹೊರಟು ತಮ್ಮ ಗುರುಗಳಾದ ಸೋಸಲೆ ವ್ಯಾಸರಾಜರ ಮೂಲಸ್ಥಳ ಸೋಸಲೆಗೆ ಹೊರಟಾಗ ಮಾರ್ಗ ಮಧ್ಯದಲ್ಲಿ ಶ್ರೀರಂಗಪಟ್ಟಣದ ಶ್ರೀ ರಂಗನಾಥನ ದರುಶನ ಮಾಡಲು ಮಹದೇವಪುರದ ಕಾವೇರಿ ನದಿ ದಾಟ ಬೇಕಾಗುತ್ತದೆ.

ಈ ವೇಳೆ ಅಲ್ಲಿ ತೆಪ್ಪ ನಡೆಸುವವರೊಂದಿಗೆ ಆಚೆ ದಡಕ್ಕೆ ಕರೆದುಕೊಂಡು ಹೋಗುವಂತೆ ಹೇಳುತ್ತಾರೆ. ಆದರೆ ಕನಕದಾಸರನ್ನು ನೋಡಿದ ಅಂಬಿಗ, ಕೀಳು ಜಾತಿಯವನೆಂದು ನಕಾರ ಮಾಡುತ್ತಾರೆ. ಈ ಸಂದರ್ಭ ಕನಕದಾಸರು ಪಕ್ಕದಲ್ಲಿರುವ ಬಾಳೆತೋಟದಿಂದ ಎಲೆಯನ್ನು ಕೇಳಿ ಅದರ ಮೇಲೆ ಮಂಡಿಯೂರಿ ಕುಳಿತು ಭಕ್ತಿಯಿಂದ ದೇವರನ್ನು ಸ್ಮರಣೆ ಮಾಡುತ್ತಾ ಆಚೆ ದಡ ಸೇರುತ್ತಾರೆ. ಅದನ್ನು ನೋಡಿದ ಜನಕ್ಕೆ ಅವರೊಬ್ಬ ದೇವಸ್ವರೂಪಿ ಮನುಷ್ಯ ಎಂಬುದು ಗೊತ್ತಾಗುತ್ತದೆ. ಅಲ್ಲದೆ, ತಾವು ಮಾಡಿದ ಪ್ರಮಾದಕ್ಕೆ ತಪ್ಪಾಯಿತೆಂದು ಕ್ಷಮೆ ಕೇಳುತ್ತಾರೆ. ಅತ್ತ ನದಿ ದಾಟಿದ ಕನಕದಾಸರು ಬಂಡೆ ಮೇಲೆ ಹತ್ತಿ ಮಂಡಿಯೂರಿ ಕುಳಿತುಕೊಂಡು ಧ್ಯಾನ ಮಾಡುತ್ತಾರೆ. ಆ ನಂತರ ತಮ್ಮ ಪಾಡಿಗೆ ಹೊರಟು ಹೋಗುತ್ತಾರೆ.
ಕನಕದಾಸರ ಪವಾಡವನ್ನು ಹತ್ತಿರದಿಂದ ನೋಡಿದ ಅಲ್ಲಿನ ಗಂಗಮತಸ್ಥರು ಅಂದಿನಿಂದಲೂ ಕನಕದಾಸರನ್ನು ಪೂಜಿಸುತ್ತಾ ಬಂದಿದ್ದಾರಂತೆ. ಇವತ್ತಿಗೂ ಕನಕದಾಸರು ಕುಳಿತಿದ್ದ ಬಂಡೆಯನ್ನು ಕನಕನ ಬಂಡೆಯೆಂದೇ ಕರೆಯಲಾಗುತ್ತಿದೆ. ಮೊದಲು ಈ ಬಂಡೆಗೆ ಪೂಜೆ ಮಾಡಲಾಗುತ್ತಿತ್ತಾದರೂ ಸುಮಾರು ಒಂದೂವರೆ ದಶಕದಿಂದ ಪುಟ್ಟದಾದ ಗುಡಿ ನಿರ್ಮಿಸಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜೆ ಮಾಡಿಕೊಂಡು ಬರಲಾಗುತ್ತಿದೆ.












Click it and Unblock the Notifications