ಬಿಹಾರಕ್ಕೆ ಹೊಸ ಡಿಸಿಎಂ?: ಯಾರಿದು ಕಾಮೇಶ್ವರ ಚೌಪಾಲ್?
ಪಟ್ನಾ, ನವೆಂಬರ್ 14: ಬಿಹಾರದಲ್ಲಿ ಮತ್ತೊಮ್ಮೆ ಸರ್ಕಾರ ರಚಿಸಲು ಬಿಜೆಪಿ-ಜೆಡಿಯು ನೇತೃತ್ವದ ಎನ್ಡಿಎ ಸಿದ್ಧತೆ ನಡೆಸಿದೆ. ಭಾನುವಾರ ಮಧ್ಯಾಹ್ನ ನಡೆಯುವ ಎನ್ಡಿಎ ಸಭೆಯಲ್ಲಿ ಮುಖ್ಯಮಂತ್ರಿ ಆಯ್ಕೆ ನಡೆಯಲಿದೆ ಎಂದು ಹೇಳಲಾಗಿದೆ. ನಿತೀಶ್ ಕುಮಾರ್ ಅವರೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿಕೊಂಡು ಬಂದಿದ್ದ ಬಿಜೆಪಿ, ತನ್ನ ನಿಲುವನ್ನು ಬದಲಿಸುವ ಸಾಧ್ಯತೆ ಕಡಿಮೆ. ಈ ನಡುವೆ ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಅಚ್ಚರಿಯ ಹೆಸರೊಂದು ಕೇಳಿಬಂದಿದೆ.
ಕಳೆದ ಎನ್ಡಿಎ ಸರ್ಕಾರದಲ್ಲಿ ಜೆಡಿಯುದ ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗಿದ್ದರೆ, ಬಿಜೆಪಿ ಮುಖಂಡ ಸುಶೀಲ್ ಕುಮಾರ್ ಮೋದಿ ಉಪ ಮುಖ್ಯಮಂತ್ರಿಯಾಗಿದ್ದರು. ಈ ಬಾರಿಯೂ ಇದೇ ಜೋಡಿ ಇರುವುದು ಅನುಮಾನ ಎನ್ನಲಾಗುತ್ತಿದೆ. ಸರ್ಕಾರದ ಸಾರಥಿಯಾಗುವ ನಿತೀಶ್ ಅವರಿಗೆ ಹೆಗಲಾಗಿ ಸುಶೀಲ್ ಬದಲು ಬೇರೊಬ್ಬ ನಾಯಕನನ್ನು ಆಯ್ಕೆ ಮಾಡಲಾಗುತ್ತಿದೆ ಎಂದು ವರದಿಯಾಗಿದೆ.
ಎನ್ಡಿಎ ಸಭೆಗೂ ಮುನ್ನ ಸಂದಿಗ್ಧತೆಯಲ್ಲಿ ನಿತೀಶ್ ಕುಮಾರ್
1989ರಲ್ಲಿ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮ ಮಂದಿರ ಶಿಲಾನ್ಯಾಸ ಸ್ಥಳದಲ್ಲಿ ಶಂಕುಸ್ಥಾಪನೆ ನೆರವೇರಿಸಿದ್ದ ಕಾಮೇಶ್ವರ್ ಚೌಪಾಲ್ ಅವರನ್ನು ಬಿಹಾರದ ಉಪ ಮುಖ್ಯಮಂತ್ರಿಯನ್ನಾಗಿ ನೇಮಿಸಲು ಎನ್ಡಿಎ ಸರ್ಕಾರದ ಹೊಸ ಉಪ ಮುಖ್ಯಮಂತ್ರಿಯನ್ನಾಗಿ ನೇಮಿಸಲಾಗುತ್ತದೆ ಎಂದು ನಿರೀಕ್ಷಿಸಲಾಗಿದೆ.
ಬಿಜೆಪಿಯ ದಲಿತ ನಾಯಕರಾಗಿರುವ ಚೌಪಾಲ್ ಅವರನ್ನು ಸುಶೀಲ್ ಕುಮಾರ್ ಮೋದಿ ಅವರ ಜಾಗದಲ್ಲಿ ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಕೂರಿಸುವ ಸಾಧ್ಯತೆ ಇದೆ ಎಂಬದ ಸುದ್ದಿ ಬಿಜೆಪಿ ವಲಯದಲ್ಲಿ ಹರಿದಾಡುತ್ತಿದೆ. ಮುಂದೆ ಓದಿ.
ಆರೆಸ್ಸೆಸ್ ಸ್ವಯಂ ಸೇವಕ
ನವದೆಹಲಿಯಿಂದ ಪಟ್ನಾಕ್ಕೆ ಶನಿವಾರ ಬೆಳಿಗ್ಗೆ ಮರಳಿದ ಬಿಜೆಪಿಯ ಎಂಎಲ್ಸಿ ಕಾಮೇಶ್ವರ್ ಚೌಪಾಲ್, ಪಕ್ಷದ ಯಾವುದೇ ಮಟ್ಟದ ಮೂಲದಿಂದ ತಮಗೆ ಡಿಸಿಎಂ ಹುದ್ದೆಯ ಕುರಿತು ಮಾಹಿತಿ ಬಂದಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಆರೆಸ್ಸೆಸ್ ಸ್ವಯಂ ಸೇವಕರಾದ ಕಾಮೇಶ್ವರ್ ಚೌಪಾಲ್ ಅವರು ಪ್ರಸ್ತುತ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಸದಸ್ಯರಾಗಿದ್ದಾರೆ.
ಜವಾಬ್ದಾರಿಯಿಂದ ನಿಭಾಯಿಸುತ್ತೇನೆ
'ನಾನು ಬಿಜೆಪಿಯ ನಿಷ್ಠಾವಂತ ಸದಸ್ಯ. ನನಗೆ ನನ್ನ ನಾಯಕರು ಮತ್ತು ನಾಯಕತ್ವದ ಮೇಲೆ ಸಂಪೂರ್ಣ ನಂಬಿಕೆಯಿದೆ. ನನಗೆ ನೀಡುವ ಯಾವುದೇ ಜವಾಬ್ದಾರಿಯನ್ನೂ ಸಂಪೂರ್ಣ ಪ್ರಾಮಾಣಿಕತೆ ಮತ್ತು ಸಮಗ್ರತೆಯೊಂದಿಗೆ ಮಾಡಲು ಯಾವಾಗಲೂ ಪ್ರಯತ್ನಿಸುತ್ತಿದ್ದೆ. ಭವಿಷ್ಯದಲ್ಲಿಯೂ ಪಕ್ಷವು ತಮಗೆ ನೀಡುವ ಪ್ರತಿ ಜವಾಬ್ದಾರಿಯನ್ನೂ ನಿಭಾಯಿಸುತ್ತೇನೆ' ಎಂದು ತಿಳಿಸಿದ್ದಾರೆ.
ಕಳಪೆ ಪ್ರದರ್ಶನದ ಸತ್ಯವನ್ನು ಕಾಂಗ್ರೆಸ್ ಒಪ್ಪಿಕೊಳ್ಳಲೇಬೇಕು: ತಾರೀಖ್ ಅನ್ವರ್
ಚುನಾವಣೆಯಲ್ಲಿ ಗೆದ್ದೇ ಇಲ್ಲ
ಆಸಕ್ತಿಕರ ಸಂಗತಿಯೆಂದರೆ ಚೌಪಾಲ್ ಅವರು ಇದುವರೆಗೂ ಯಾವುದೇ ಚುನಾವಣಾ ಸ್ಪರ್ಧೆಗಳಲ್ಲಿ ಜಯಗಳಿಸಿಲ್ಲ. 1991ರಲ್ಲಿ ರೊಸೆರಾ ಲೋಕಸಭೆ ಕ್ಷೇತ್ರಕ್ಕೆ ಅವರು ಲೋಕ ಜನಶಕ್ತಿ ಪಕ್ಷದ (ಎಲ್ಜೆಪಿ) ಸಂಸ್ಥಾಪಕ ರಾಮ್ ವಿಲಾಸ್ ಪಾಸ್ವಾನ್ ವಿರುದ್ಧ ಸ್ಪರ್ಧಿಸಿದ್ದರು. ಆದರೆ ಅದರಲ್ಲಿ ಸೋಲು ಕಂಡರು.
ವಿಧಾನಸಭೆಯಲ್ಲೂ ಸೋಲು
1995ರಲ್ಲಿ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಬೇಗುಸರೈನ ಬಖಾರಿ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆದರೆ ಅದರಲ್ಲಿಯೂ ಸೋಲಿನ ಕಹಿ ಕಂಡರು. 2014ರ ಚುನಾವಣೆಯಲ್ಲಿ ಪಪ್ಪು ಯಾದವ್ ಪತ್ನಿ ರಂಜೀತ್ ರಂಜನ್ ಎದುರು ಸುಪೌಲ್ ಕ್ಷೇತ್ರದಲ್ಲಿ ಸ್ಪರ್ಧಿಸಿದಾಗಲೂ ಗೆಲುವು ಸಿಕ್ಕಿರಲಿಲ್ಲ.