ವಾಜಪೇಯಿ ಭವಿಷ್ಯದ ಪ್ರಧಾನಿ ಎಂದಿದ್ದರು ಸ್ವತಃ ನೆಹರು!
"ಈ ಯುವಕ ಒಂದು ದಿನ ಭಾರತದ ಪ್ರಧಾನಿಯಾಗುವುದು ಖಂಡಿತ" ಎಂದು ಸ್ವತಃ ಮಾಜಿ ಪ್ರಧಾನಿ ಜವಹರಲಾಲ್ ನೆಹರು ಹೇಳಿದ್ದು, ಅಟಲ್ ಬಿಹಾರಿ ವಾಜಪೇಯಿ ಅವರಿಗೆ!
ಅಟಲ್ ಬಿಹಾರಿ ವಾಜಪೇಯಿ ಅವರು ಸಂಸದರಾಗಿ ಲೋಕಸಭೆಗೆ ಪ್ರವೇಶಿಸುತ್ತಿದ್ದ ಹೊಸತರಲ್ಲಿ ಪ್ರತಿದಿನವೂ ಆಡಳಿತಪಕ್ಷದ ವೈಫಲ್ಯಗಳನ್ನು, ಹುಳುಕುಳನ್ನು ಸಮರ್ಥವಾಗಿ ಬಿಚ್ಚಿಡುತ್ತಿದ್ದರು. ಅವರ ಮಾತಿನಲ್ಲಿರುತ್ತಿದ್ದ ಆತ್ಮವಿಶ್ವಾಸ, ಅಧ್ಯಯನಗಳನ್ನು ಕಂಡ ನೆಹರು ಅವರು ವಾಜಪೇಯಿ ಅವರನ್ನು ವಿರೋಧಿ ಎಂದು ನೋಡಿದ್ದಕ್ಕಿಂತ ಹೆಚ್ಚಾಗಿ ಒಬ್ಬ ಆಪ್ತ ಸಹೋದ್ಯೋಗಿಯಂತೆ ಕಂಡರು.
ನೆಹರು ಬಗೆಗೆ ವಾಜಪೇಯಿ ಮಾಡಿದ್ದ ಭಾಷಣವನ್ನು ಬಿಜೆಪಿಗರು ಕೇಳಲೇಬೇಕು
ಸೈದ್ಧಾಂತಿಕ ಭಿನ್ನಾಭಿಪ್ರಾಯ, ರಾಜಕೀಯ ವಿರೋಧದ ಹೊರತಾಗಿಯೂ ಈ ಇಬ್ಬರು ನಾಯಕರೂ ಆತ್ಮೀಯ ಬಾಂಧವ್ಯವನ್ನು ಉಳಿಸಿಕೊಂಡಿದ್ದರು. ನೆಹರು ಅವರೆಂದರೆ ವಾಜಪೇಯಿ ಅವರಿಗೆ ಎಲ್ಲಿಲ್ಲದ ಗೌರವ, ನೆಹರು ಅವರಿಗೆ ವಾಜಪೇಯಿ ಎಂದರೆ ಎಲ್ಲಿಲ್ಲದ ಅಕ್ಕರೆ, ಪ್ರೀತಿ. ಇಂಥ ಮಹಾನ್ ನಾಯಕರ ಚರ್ಚೆ, ಭಾಷಣಗಳಿಂದಾಗಿ ಲೋಕಸಭೆ, ರಾಜ್ಯಸಭೆಯ ಕಲಾಪಗಳು 'ಚಿಂತಕರ ಛಾವಡಿ, ಜಾಣರ ಜಗುಲಿ' ಎನ್ನಿಸುತ್ತಿದ್ದವು.
ಭವಿಷ್ಯದ ಪ್ರಧಾನಿ ಎಂದಿದ್ದ ನೆಹರು
ಭಾರತಕ್ಕೆ ಭೇಟಿ ನೀಡಿದ್ದ ಬ್ರಿಟಿಷ್ ಪ್ರಧಾನಿಯೊಬ್ಬರಿಗೆ ವಾಜಪೇಯಿ ಅವರನ್ನು ಪರಿಚಯಿಸುತ್ತಿದ್ದ ನೆಹರು ಅವರು, 'ಇವರು(ಅಟಲ್ ಜೀ) ವಿರೋಧಪಕ್ಷದ ಯುವ ನಾಯಕ. ಯಾವತ್ತಿಗೂ ನನ್ನನ್ನು ಟೀಕಿಸುವುದರಲ್ಲಿ ಇವರು ನಿಸ್ಸೀಮ! ಆದರೆ ನನಗಂತೂ ಇವರಲ್ಲಿ ಭಾರತದ ಭವುಷ್ಯದ ಪ್ರಧಾನಿ ಕಾಣುತ್ತಿದ್ದಾನೆ' ಎಂದಿದ್ದರು. ಇನ್ನೊಬ್ಬ ವಿದೇಶಿ ರಾಯಭಾರಿಯೊಂದಿಗೆ ಮಾತನಾಡುವಾಗಲೂ, ವಾಜಪೇಯಿ ಅವರನ್ನು ತೋರಿಸಿ, 'ಭಾರತದ ಯುವ ಪ್ರತಿಭಾನ್ವಿತ ಸಂಸದೀಯಪಟು' ಎಂದು ಪರಿಚಯಿಸಿದ್ದರಂತೆ!
ನೆಹರೂ ಭಾವಚಿತ್ರವೆಲ್ಲಿ?
1977 ರಲ್ಲಿ ಕಾಂಗ್ರೆಸ್ಸೇತರ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ತಮ್ಮ ಆಫೀಸಿಗೆ ಬಂದ ವಾಜಪೇಯಿ ಅವರಿಗೆ ಆಶ್ಚರ್ಯ ಕಾದಿತ್ತು. ಅವರ ಕಚೇರಿಯಲ್ಲಿದ್ದ ನೆಹರು ಅವರ ಭಾವಚಿತ್ರ ಮರೆಯಾಗಿತ್ತು. ಈ ಕುರಿತು ಸಿಬ್ಬಂದಿಯೊಬ್ಬರನ್ನು ಪ್ರಶ್ನಿಸಿದ್ದ ಅವರಿಗೆ, 'ಕಾಂಗ್ರೆಸ್ ಸರ್ಕಾರ ಇಲ್ಲವಲ್ಲ, ಅದಿಕ್ಕೇ ಅವರ ಚಿತ್ರ ತೆಗೆದೆವು' ಎಂಬ ಉತ್ತರ ಬಂತು. 'ಅದನ್ನು ಎಲ್ಲಿಟ್ಟಿದ್ದೀರಿ. ನನಗದು ವಾಪಸ್ ಬೇಕು. ಅದು ಎಲ್ಲಿತ್ತೋ ಅಲ್ಲಿಯೇ ಇಡಿ' ಎಂದು ಮತ್ತೆ ನೆಹರು ಅವರನ್ನು ಅದೇ ಜಾಗದಲ್ಲಿ ಪ್ರತಿಷ್ಠಾಪಿಸಿದ್ದರು ವಾಜಪೇಯಿ! ಅದು ಅವರಿಗೆ ನೆಹರು ಅವರ ಮೇಲಿದ್ದ ಅಭಿಮಾನ!
ರಾಜೀವ್ ಗಾಂಧಿ ಹತ್ಯೆಯ ವೇಳೆ ಭಾರೀ ಸಂಚಲನ ಮೂಡಿಸಿದ್ದ ಅಟಲ್ ಬಿಹಾರಿ ವಾಜಪೇಯಿ ಹೇಳಿಕೆ
ಸರಿಯಾದ ವ್ಯಕ್ತಿ ತಪ್ಪು ಪಕ್ಷದಲ್ಲಿ!
ವಾಜಪೇಯಿ ಬಗ್ಗೆ ಮಾತನಾಡುವಾಗೆಲ್ಲ ನೆಹರು ಹೇಳುತ್ತಿದ್ದ ಮಾತು, 'ರೈಟ್ ಪರ್ಸನ್ ಇನ್ ದಿ ರಾಂಗ್ ಪಾರ್ಟಿ!'ನೆಹರು ಅವರ ಬಗ್ಗೆ ವಾಜಪೇಯಿ ಹೇಳುತ್ತಿದ್ದುದು, 'ನನಗೆ ಅವರ ಚಿಂತನೆಗಳ ಬಗ್ಗೆ, ದೇಶದ ಕುರಿತು ಇರುವ ಅಭಿಮಾನದ ಬಗ್ಗೆ ಬಹಳ ಗೌರವವಿದೆ. ಅವರು ಚಿಂತನೆಗಳು ನನಗೆ ಆದರ್ಶ.'
ಇಂದಿರಾಗಿತ್ತೆ ನೆಹರೂ ಸೆಕ್ರೆಟರಿ ಜೊತೆ ಸೀಕ್ರೆಟ್ ಸಂಬಂಧ?
ಅಸ್ಖಲಿತ ಮಾತುಗಾರ ವಾಜಪೇಯಿ
ಅಸ್ಖಲಿತ ಮಾತುಗಾರರಾಗಿದ್ದ ವಾಜಪೇಯಿ ಅವರು ತಮ್ಮ ಕವಿಹೃದಯದ ಮಾತುಗಳಿಂದ, ಭಾಷಣದ ನಡುವಲ್ಲಿ ಇಣುಕುತ್ತಿದ್ದ ಕವನದ ಸಾಲುಗಳಿಂದ ಶ್ರೋತ್ರುಗಳನ್ನು ತನ್ಮಯವಾಗಿಸುವ ಶಕ್ತಿ ಪಡೆದವರಾಗಿದ್ದರು. ಅವರು ಆಡಳಿತ ಪಕ್ಷದ ತಪ್ಪುಗಳನ್ನು, ವೈಫಲ್ಯಗಳನ್ನು ಹೇಗೆ ಎತ್ತಿ ತೋರಿಸುತ್ತಿದ್ದರೋ, ಉತ್ತಮ ಯೋಜನೆಗಳನ್ನು ಅಷ್ಟೇ ಉದಾರ ಮನಸ್ಸಿನಿಂದ ಸ್ವಾಗತಿಸುತ್ತಿದ್ದರು. ನೆಹರು ಮತ್ತು ವಾಜಪೇಯ ಅವರ ಚರ್ಚೆಗಳನ್ನು ನೋಡುವುದೆಂದರೆ ಅದರು ಚಿಂತಕರಿಗೆ, ರಾಜಕೀಯ ತಜ್ಞರಿಗೆ ಒಂಡು ಹಬ್ಬ ಎಂಬಂತಿತ್ತು. ಎಲ್ಲಾ ಭಿನ್ನಾಭಿಪ್ರಾಯಗಳ ನಡುವಲ್ಲೂ ಆತ್ಮೀಯತೆಯನ್ನು ಸಿದ್ಧಿಸುವುದು ಹೇಗೆ, ಭಿನ್ನಾಭಿಪ್ರಾಯಗಳನ್ನು ಗೌರವಿಸಿ, ವ್ಯಕ್ತಿಯೊಂದಿಗೆ ಆಪ್ತತೆಯನ್ನು ಬೆಳೆಸುವುದು ಹೇಗೆ ಎಂಬುದಕ್ಕೆ ಈ ಜೋಡಿ ಅತ್ಯುತ್ತಮ ಉದಾಹರಣೆ.