ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವುದು ಬಿಜೆಪಿ 2.0 ಅಥವಾ ಆರೆಸ್ಸೆಸ್?

"ಬಿಜೆಪಿ ಪಾಲಿಗೆ ಅತಿ ದೊಡ್ಡ ಶಕ್ತಿ ಅಂದರೆ ಆರೆಸ್ಸೆಸ್ ಕಾರ್ಯಕರ್ತರು. ಆ ಸಂಘಟನೆ ಬಗ್ಗೆ ಸಮಾಜದಲ್ಲಿ ಭಿನ್ನ ರೀತಿಯ ಅಭಿಪ್ರಾಯ ಇರಬಹುದು. ಆದರೆ ಸಂಘಟನೆ ದೃಷ್ಟಿಯಿಂದ ಅಗಾಧವಾದ ಶಕ್ತಿ ಅದು. ಯಾವ ಪ್ರತಿಫಲವನ್ನೇ ನಿರೀಕ್ಷಿಸದೆ ಕೆಲಸ ಮಾಡುವ ಅಪಾರ ಸಂಖ್ಯೆಯ ಕಾರ್ಯಕರ್ತರು ಇರುವುದೇ ಸಂಘದ ಶಕ್ತಿ...."

- ಹೀಗೆ ಹೇಳುತ್ತಾ ಸಾಗಿದ ಬಿಜೆಪಿಯ ಹಿರಿಯ ಕಾರ್ಯಕರ್ತರ ಕಣ್ಣಲ್ಲಿ ಒಂದು ಹೊಳಪಿತ್ತು. ದಶಕಗಳಿಂದ ಪಟ್ಟ ಶ್ರಮಕ್ಕೆ ಈಗ ಫಲ ದೊರೆಯುತ್ತಿದೆ ಎಂಬ ವಿಶ್ವಾಸ ಇತ್ತು. ಹಾಗೇ ಮಾತು ಮುಂದುವರಿಸಿದರು. "ಒಂದು ಕಾಲದಲ್ಲಿ ಮಾಧ್ಯಮಗಳಲ್ಲೂ ಕಾಂಗ್ರೆಸ್ ಹಾಗೂ ಎಡ ಪಕ್ಷಗಳ ಪರ ಒಲವಿರುವ ಪತ್ರಕರ್ತರು ದೊಡ್ಡ ಸಂಖ್ಯೆಯಲ್ಲಿದ್ದರು. ಈಗ ಪರಿಸ್ಥಿತಿ ಏನಾಗಿದೆ ಅಂದರೆ, ಮಾಧ್ಯಮ ಸಂಸ್ಥೆಗಳ ಮಾಲೀಕರೇ ಬಿಜೆಪಿ ಬೆಂಬಲಿಗರಾಗಿದ್ದಾರೆ" ಎಂದು ಹೆಮ್ಮೆಯಿಂದ ಹೇಳಿಕೊಂಡರು.

ಅಸಲಿಗೆ ಅವರೆದುರು ಇಟ್ಟ ಪ್ರಶ್ನೆಯೇ ಬೇರೆ ಇತ್ತು. ಎರಡನೇ ಬಾರಿಗೆ ಪ್ರಧಾನಿ ಹುದ್ದೆಗೆ ಏರಿರುವ ನರೇಂದ್ರ ಮೋದಿ ಅವರು ಮುಂಚಿನಂತೆ ಮಾಧ್ಯಮಗಳಲ್ಲಿ ಸುದ್ದಿ ಆಗುತ್ತಿಲ್ಲ. ದೇಶದ ಆರ್ಥಿಕ ಸ್ಥಿತಿ ತೀರಾ ಸಂಕಷ್ಟದಲ್ಲಿ ಇದ್ದರೂ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ ವಿಶೇಷ ಸ್ಥಾನಮಾನ ರದ್ದು, ತ್ರಿವಳಿ ತಲಾಖ್, ರಾಮಜನ್ಮಭೂಮಿ ವಿವಾದ ಇಂಥ ವಿಚಾರಗಳಿಗೆ ಹೆಚ್ಚು ತಲೆ ಕೆಡಿಸಿಕೊಂಡಿದ್ದಾರಲ್ಲ ಏಕೆ ಎಂಬುದು ನಮ್ಮ ಪ್ರಶ್ನೆಯಾಗಿತ್ತು.

ಸಂಘದ ಅಜೆಂಡಾಗಳು ಜಾರಿಗೆ ಬಾರದಿದ್ದರೆ ಹೇಗೆ?

ಸಂಘದ ಅಜೆಂಡಾಗಳು ಜಾರಿಗೆ ಬಾರದಿದ್ದರೆ ಹೇಗೆ?

ಮೊದಲ ಅವಧಿ ಬಿಜೆಪಿಯದಾಗಿತ್ತು. ಆರೆಸ್ಸೆಸ್ ನಿಂದ ಹೆಚ್ಚು ಒತ್ತಡ ಏನಿರಲಿಲ್ಲ. ಆದರೆ ಮೋದಿ- ಅಮಿತ್ ಶಾ ಅವರ ಜೋಡಿಯಿಂದ ದೊಡ್ಡ ಮಟ್ಟದ ಫಾಯಿದೆ ಏನೂ ಆಗಲಿಲ್ಲ. ಈ ದೇಶಕ್ಕಾಗಿ ವಾಜಪೇಯಿ, ಅಡ್ವಾಣಿ ಹಾಗೂ ನರೇಂದ್ರ ಮೋದಿ ಎಂಬ ವ್ಯಕ್ತಿತ್ವವನ್ನು ರೂಪಿಸುವ ಶಕ್ತಿ ಇರುವುದು ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ (ಆರೆಸ್ಸೆಸ್). ಸಂಘದ ಅಜೆಂಡಾಗಳು ಜಾರಿಗೆ ಬಾರದಿದ್ದರೆ ಬಿಜೆಪಿ ಪರವಾಗಿ ಮತ ಕೇಳುವುದಾದರೂ ಹೇಗೆ? ಏಕರೂಪ ನಾಗರಿಕ ಸಂಹಿತೆ, ಜಮ್ಮು- ಕಾಶ್ಮೀರದ ಸ್ವಾಯತ್ತತೆ ರದ್ದು, ಮತಾಂತರ ನಿಷೇಧ, ಅಯೋಧ್ಯಾದಲ್ಲಿ ರಾಮ ಮಂದಿರ ನಿರ್ಮಾಣ, ಹಿಂದೂ ರಾಷ್ಟ್ರ ಘೋಷಣೆ ಇವೆಲ್ಲ ಆರೆಸ್ಸೆಸ್ ನ ಆಲೋಚನೆಯಲ್ಲಿ ಇರುವಂಥವು. ಅವುಗಳನ್ನು ಎರಡನೇ ಅವಧಿಯ ಆರಂಭದಲ್ಲೇ ಜಾರಿಗೆ ತಂದುಬಿಟ್ಟರೆ, ಕೊನೆಯ ಸಮಯದಲ್ಲಿ ಆರ್ಥಿಕತೆ ಮತ್ತಿತರ ವಿಚಾರಗಳ ಬಗ್ಗೆ ಗಮನಹರಿಸಬಹುದು ಎಂಬುದು ಲೆಕ್ಕಾಚಾರ ಎಂದು ಅವರು ವಿವರಿಸುತ್ತಾರೆ.

ನಿರುದ್ಯೋಗ ಸಮಸ್ಯೆ, ಆರ್ಥಿಕ ಕುಸಿತ ಮರೆಮಾಚಲು ಆಗಿಲ್ಲ

ನಿರುದ್ಯೋಗ ಸಮಸ್ಯೆ, ಆರ್ಥಿಕ ಕುಸಿತ ಮರೆಮಾಚಲು ಆಗಿಲ್ಲ

ನರೇಂದ್ರ ಮೋದಿ- ಅಮಿತ್ ಶಾ ಇಬ್ಬರೂ ಆರೆಸ್ಸೆಸ್ ಹತೋಟಿಯಲ್ಲಿ ಇಲ್ಲ. ಸ್ವತಂತ್ರವಾಗಿ ಅಭಿವೃದ್ಧಿ ಚಿಂತನೆಯೊಂದಿಗೆ ಸರಕಾರ ನಡೆಸುತ್ತಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಗಳಾದವು. ಇಂಥ ವರದಿಗಳೇ ಆರೆಸ್ಸೆಸ್ ಗೂ ಬಿಜೆಪಿಗೂ ಬೇಕು. ಇದರಿಂದ ವಿದೇಶಿ ಬಂಡವಾಳ ಸೆಳೆಯಲು ಅನುಕೂಲ ಆಗುತ್ತದೆ. ಆದರೆ ವಾಸ್ತವದಲ್ಲಿ ಅದು ಅಸಾಧ್ಯ. ಮೊದಲೇ ಹೇಳಿದ ಹಾಗೆ ಕಣ್ಣೆದುರು ಕಾಣುವ ತೇರು ಬಿಜೆಪಿಯಾದರೆ, ಅದಕ್ಕೆ ಹಗ್ಗ ಕಟ್ಟಿ ಎಳೆಯುತ್ತಿರುವುದು ಆರೆಸ್ಸೆಸ್. ಆದರೆ ಮುಂದಿನ ಚುನಾವಣೆಗೆ ನರೇಂದ್ರ ಮೋದಿ ಅವರನ್ನೇ ತಮ್ಮ ನಾಯಕರನ್ನಾಗಿ ಬಿಜೆಪಿಯಿಂದ ಬಿಂಬಿಸಲಾಗುತ್ತದೆಯೇ ಎಂಬ ಪ್ರಶ್ನೆಗೆ, ಆರೆಸ್ಸೆಸ್ ಮೂಲಗಳಿಂದ, 'ಅನುಮಾನ' ಎಂಬ ಉತ್ತರ ದೊರೆಯುತ್ತದೆ. ಏಕೆಂದರೆ, ಮೊದಲ ಅವಧಿಗೆ ಏನೇ ಸರಕಾರದ ಪರ ಬ್ಯಾಟ್ ಮಾಡಿದರೂ ನಿರುದ್ಯೋಗ ಸಮಸ್ಯೆ, ಆರ್ಥಿಕ ಕುಸಿತ ಇತ್ಯಾದಿಗಳನ್ನು ಮರೆಮಾಚಲು ಆಗಲಿಲ್ಲ. ಆದರೆ ಇಡೀ ದೇಶದಲ್ಲಿ ಹಂಚಿಕೆ ಆಗಿರುವ ಸ್ಥಾನಗಳನ್ನು ಗಮನಿಸುವುದಾದರೆ ಬಿಜೆಪಿಯೇತರ ಪಕ್ಷಗಳ ಬಗ್ಗೆ ನಂಬಿಕೆ ಮೂಡದ ಕಾರಣಕ್ಕೆ ಬಿಜೆಪಿಗೆ ಪ್ಲಸ್ ಆಯಿತೇ ವಿನಾ ಕಾರ್ಯಕ್ರಮಗಳು, ಯೋಜನೆಗಳು ಕೈ ಹಿಡಿದಿವೆ ಎಂಬುದಕ್ಕೆ ಸಾಕ್ಷಿಗಳು ಸಿಗುವುದಿಲ್ಲ.

ಮೋದಿ ವರ್ಚಸ್ಸು ಉಳಿಸಲು ಮಾತ್ರ ಸಾಧ್ಯವಾಯಿತು

ಮೋದಿ ವರ್ಚಸ್ಸು ಉಳಿಸಲು ಮಾತ್ರ ಸಾಧ್ಯವಾಯಿತು

ಒಂದು ಅವಧಿಯಲ್ಲಿ ನರೇಂದ್ರ ಮೋದಿ- ಬಿಜೆಪಿಯ ವರ್ಚಸ್ಸು ಎರಡನ್ನೂ ಬೆಳೆಸುವುದಕ್ಕೆ ಶತಾಯಗತಾಯ ಯತ್ನಿಸಲಾಯಿತು. ಆದರೆ ನರೇಂದ್ರ ಮೋದಿ ವರ್ಚಸ್ಸು ಉಳಿಸಿಕೊಳ್ಳಲು ಸಾಧ್ಯವಾಯಿತು. ಆದರೆ ಪಕ್ಷಕ್ಕೆ ದೊಡ್ಡ ಮಟ್ಟದ ಅನುಕೂಲ ಆಗಲಿಲ್ಲ. ಅದರಲ್ಲೂ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ಯಾವ ಯೋಜನೆಗಳನ್ನು ವಿರೋಧಿಸಲಾಯಿತೋ ಕೊನೆಗೆ ಅವುಗಳನ್ನು ಮತ್ತಷ್ಟು ಪರಿಣಾಮಕಾರಿ ಮಾಡುವುದಕ್ಕೆ ಶ್ರಮಿಸಲಾಯಿತು. ಉದಾಹರಣೆಗೆ ಆಧಾರ್, ಜಿಎಸ್ ಟಿ ಜಾರಿ, ಸಬ್ಸಿಡಿ ಬದಲಿಗೆ ನೇರ ನಗದು ವರ್ಗಾವಣೆ ಇತ್ಯಾದಿ. ಇದರ ಜತೆಗೆ ನೋಟು ನಿಷೇಧ ಹಾಗೂ ಜಿಎಸ್ ಟಿ ಜಾರಿಯ ಬಿಸಿ ತಟ್ಟಿತಲ್ಲಾ, ಅದು ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಎಚ್ಚರಿಕೆ ಗಂಟೆ ಆಯಿತು. ನಿಜವಾದ ಹೊಡೆತ ಕೊಟ್ಟಿದ್ದು ಪಂಚರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ. ಅಲ್ಲಿಂದ ಆಚೆಗೆ ಆಡಳಿತದಲ್ಲಿ, ಸಂಘಟನೆಯಲ್ಲಿ ಬದಲಾವಣೆ ತರುವ ಸಲುವಾಗಿ ಭಾರೀ ಪ್ರಯತ್ನವನ್ನೇ ಮಾಡಲಾಗಿದೆ.

ಬಿಜೆಪಿ 2.0 ಇದೆಯೋ ಅಥವಾ ಆರೆಸ್ಸೆಸ್ 2.0 ಆಡಳಿತವೋ

ಬಿಜೆಪಿ 2.0 ಇದೆಯೋ ಅಥವಾ ಆರೆಸ್ಸೆಸ್ 2.0 ಆಡಳಿತವೋ

ಆದರೆ, ಈಗಿನ ಸ್ಥಿತಿ ಬೇರೆ ಇದೆ. ಜಿಡಿಪಿ ಐದು ಪರ್ಸೆಂಟ್ ಗೆ ಕುಸಿದಿದೆ. ಅದು ಮತ್ತೂ ಕಡಿಮೆ ಆಗಿರಬಹುದು. ಏಕೆಂದರೆ, ಇತರ ದೇಶಗಳ ಆರ್ಥಿಕ ತಜ್ಞರಿರಲಿ, ದೇಶದೊಳಗೇ ಅಂಥದ್ದೊಂದು ಅನುಮಾನ ವ್ಯಕ್ತವಾಗುತ್ತಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ಪಡೆದುಕೊಂಡ ಒಂದೂಕಾಲು ಲಕ್ಷ ಕೋಟಿ ಹೆಚ್ಚುವರಿ ಮೀಸಲು ಹಣ, ಒಎನ್ ಜಿಸಿ, ಎಚ್ ಎಎಲ್ ನಿಂದ ತೆಗೆದುಕೊಂಡ ಮೀಸಲು ಹಣ... ಬಿಎಸ್ ಎನ್ ಎಲ್ ನ ಆರ್ಥಿಕ ಸಂಕಷ್ಟ, ದೇಶದಲ್ಲಿನ ಆರ್ಥಿಕ ಹಿಂಜರಿತ ಇತ್ಯಾದಿ ವಿಚಾರಗಳು ಎದುರಿಗೆ ಇರುವಾಗ ಯಾವ ವಿಚಾರದ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಜನರ ಮುಂದೆ ಬರಲು ಸಾಧ್ಯ? ಕಾಶ್ಮೀರ ವಿಚಾರವಾಗಿ ದೇಶದ ಜನರ ಎದುರು ಬಂದು ಅವರು ಮಾತನಾಡಿದರೂ ಷೇರು ಮಾರುಕಟ್ಟೆಯೇನೂ ಚೇತರಿಸಿಕೊಳ್ಳಲಿಲ್ಲ. ಬ್ಯಾಂಕ್ ಗಳ ವಿಲೀನ ಪ್ರಕ್ರಿಯೆ ಬಗ್ಗೆ ಕೂಡ ಷೇರು ಮಾರುಕಟ್ಟೆ ನಕಾರಾತ್ಮಕವಾಗಿ ಪ್ರತಿಕ್ರಿಯಿಸಿದೆ. ಎಫ್ ಡಿಐಗೆ ಸಂಬಂಧಿಸಿದಂತೆ ಕೆಲವು ಆರ್ಥಿಕ ಉತ್ತೇಜನೆ ಘೋಷಣೆ ಮಾಡಿದರೂ ಪ್ರಯೋಜನವಾಗಿಲ್ಲ. ಇಂಥ ಸನ್ನಿವೇಶ ಇದೆ. ಇನ್ನೇನು ಬರಲಿರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಬಿಜೆಪಿ ಹಾಗೂ ಅದರ ಮಿತ್ರ ಪಕ್ಷಗಳ ಪಾಲಿಗೆ ದಿಕ್ಸೂಚಿಯಂತೆ ಇದೆ. ಕೇಂದ್ರದಲ್ಲಿ ಬಿಜೆಪಿ 2.0 ಇದೆಯೋ ಅಥವಾ ಆರೆಸ್ಸೆಸ್ ಆಡಳಿತವೋ ಸ್ಪಷ್ಟವಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+