ದೇವೇಗೌಡರಿಗೆ ಸಾಲು ಸಾಲು ಸೋಲು ನೀಡಿದ 2019: ಏನಿದರ ರಹಸ್ಯ?

"ಲೋಕಸಭೆ ಚುನಾವಣೆಯಲ್ಲಿ ತುಮಕೂರಲ್ಲಿ ದೇವೇಗೌಡರು ಸೋತರು. ಮಂಡ್ಯದಿಂದ ಅವರ ಮೊಮ್ಮಗ ನಿಖಿಲ್ ಸೋತರು. ವಿಶ್ವಾಸ ಮತ ಸಾಬೀತು ಮಾಡಲಾಗದೆ ಎಚ್. ಡಿ. ಕುಮಾರಸ್ವಾಮಿ ರಾಜೀನಾಮೆ ಸಲ್ಲಿಸಿದ್ದಾರೆ. ಅದೊಂದು ಬೆಳ್ಳಿ ಚುಕ್ಕಿ ಎಂಬಂತೆ ಹಾಸನದಿಂದ ಲೋಕಸಭೆಗೆ ಸ್ಪರ್ಧಿಸಿದ್ದ ಪ್ರಜ್ವಲ್ ರೇವಣ್ಣ ಗೆದ್ದಿದ್ದಾರೆ. ಆದರೆ ಆ ಗೆಲುವಿನ ವಿರುದ್ಧ ಪ್ರತಿಸ್ಪರ್ಧಿಯಾಗಿದ್ದ ಬಿಜೆಪಿಯ ಎ. ಮಂಜು ಕೋರ್ಟ್ ಮೆಟ್ಟಿಲೇರಿದ್ದಾರೆ".

- 2019ನೇ ಇಸವಿ ಎಂಬುದು ಜೆಡಿಎಸ್ ಗೆ ಹಾಗೂ ಆ ಪಕ್ಷಕ್ಕೆ ಎಲ್ಲವೂ ಆಗಿರುವ ದೇವೇಗೌಡರು ಮತ್ತು ಕುಟುಂಬಕ್ಕೆ ಭಾರೀ ಹಿನ್ನಡೆ ತಂದಿದೆ. "ದೇವೇಗೌಡರ ಜೀವನದಲ್ಲೇ ಇಂಥ ಕಷ್ಟದ ದಿನಗಳನ್ನು ಎದುರಿಸಿಲ್ಲ" ಅಂತ ಯಾರಾದರೂ ಭಾವಿಸುವುದಾದರೆ ಅದಕ್ಕೆ ಉತ್ತರ ಇಲ್ಲಿದೆ. ಈಗಿನ ಸ್ಥಿತಿಗಿಂತ ತೀರಾ ಕಷ್ಟದ ಸನ್ನಿವೇಶವನ್ನು ದೇವೇಗೌಡರು ಎದುರಿಸಿದ್ದಾರೆ. ಆಗೇನೂ ಅವರ ಕುಟುಂಬದವರು ಯಾರೂ ರಾಜಕಾರಣದಲ್ಲಿ ಇರಲಿಲ್ಲ ಎನ್ನುತ್ತಾರೆ ಜೆಡಿಎಸ್ ನ ನಾಯಕ ವೈ. ಎಸ್. ವಿ. ದತ್ತಾ.

"1989ನೇ ಇಸವಿಯಲ್ಲಿ ರಾಮಕೃಷ್ಣ ಹೆಗಡೆ ಅವರ ಸರಕಾರದಲ್ಲಿ ಲೋಕೋಪಯೋಗಿ ಹಾಗೂ ನೀರಾವರಿ ಖಾತೆ ಎರಡಕ್ಕೂ ದೇವೇಗೌಡರು ರಾಜೀನಾಮೆ ನೀಡಿ, ಹೊರಬಂದರು. ಸಮಾಜವಾದಿ ಜನತಾ ಪಾರ್ಟಿ ಎಂಬುದನ್ನು ಕಟ್ಟಿ ಎರಡು ಕಡೆ ಸ್ಪರ್ಧೆ ಮಾಡಿದ್ದರು. ಆದರೆ ಎರಡೂ ಕಡೆ ಸೋಲನುಭವಿಸಿದರು.

ನೆಲ ಕಚ್ಚಿದ್ದ ದೇವೇಗೌಡರು ಏಳು ವರ್ಷದಲ್ಲಿ ಪ್ರಧಾನಿ ಹುದ್ದೆಗೆ

ನೆಲ ಕಚ್ಚಿದ್ದ ದೇವೇಗೌಡರು ಏಳು ವರ್ಷದಲ್ಲಿ ಪ್ರಧಾನಿ ಹುದ್ದೆಗೆ

"ಹೊಳೆನರಸೀಪುರದಲ್ಲಿ ಪುಟ್ಟೇಗೌಡರಿಂದ ಕನಕಪುರದಲ್ಲಿ ಪಿಜಿಆರ್ ಸಿಂಧ್ಯಾ ಅವರಿಂದ ಸೋಲ ಬೇಕಾಯಿತು. ಇನ್ನೂರಾ ಇಪ್ಪತ್ನಾಲ್ಕು ಕ್ಷೇತ್ರದಲ್ಲಿ ಸ್ಪರ್ಧಿಸಿದ್ದಕ್ಕೆ ಎರಡು ಸ್ಥಾನದಲ್ಲಿ ಮಾತ್ರ ಗೆದ್ದಿದ್ದರು. ನೆನಪಿಟ್ಟುಕೊಳ್ಳಬೇಕು; ಅದಾಗಿ ಎರಡೆ ವರ್ಷಕ್ಕೆ ಹಾಸನ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ, ದೇವೇಗೌಡರು ಗೆದ್ದರು, ರಾಜಕೀಯ ಪುನರ್ಜನ್ಮ ದೊರೆಯಿತು. ಅದಾಗಿ ಮೂರು ವರ್ಷಕ್ಕೆ, 1994ರಲ್ಲಿ ಮುಖ್ಯಮಂತ್ರಿ ಆದರು. ಅದಾಗಿ ಎರಡು ವರ್ಷಕ್ಕೆ, ಅಂದರೆ 1996ರಲ್ಲಿ ಪ್ರಧಾನಿಯಾದರು. ಪೂರ್ತಿ ನೆಲ ಕಚ್ಚಿದ್ದ ದೇವೇಗೌಡರು ಏಳು ವರ್ಷದಲ್ಲಿ ಪ್ರಧಾನಿ ಹುದ್ದೆಗೆ ಏರಿದರು. ಅದು ಅವರ ಛಲ. ಆದರೆ ಅಷ್ಟೇ ಸಾಲಲ್ಲ. ಕಾರ್ಯಕರ್ತರ ನಿಷ್ಠೆ, ಬದ್ಧತೆ ಕೂಡ ಮುಖ್ಯ.

ದುಡ್ಡು- ಕಾಸು ಇರುವ ಗಿರಾಕಿಗಳನ್ನು ಅಟ್ಟದ ಮೇಲೆ ಕೂರಿಸಿದರೆ ಹೇಗೆ?

ದುಡ್ಡು- ಕಾಸು ಇರುವ ಗಿರಾಕಿಗಳನ್ನು ಅಟ್ಟದ ಮೇಲೆ ಕೂರಿಸಿದರೆ ಹೇಗೆ?

"ಆದರೆ ಪಕ್ಷದೊಳಗೆ ಎಂಥವರು ಬರುತ್ತಿದ್ದಾರೆ, ಯಾರು ಸ್ಪರ್ಧೆ ಮಾಡುತ್ತಿದ್ದಾರೆ, ಅವರ ಸೈದ್ಧಾಂತಿಕ ಹಿನ್ನೆಲೆ ಏನು ಎಂಬ ಬಗ್ಗೆ ಕೂಡ ಯೋಚನೆ ಮಾಡಲೇಬೇಕು. ಹಾಗೆ ಶ್ರಮ ಪಟ್ಟು ಮತ್ತೆ ಪ್ರಯತ್ನಿಸಿದರೆ ಇನ್ನು ಎರಡು ವರ್ಷದಲ್ಲೇ ಪಕ್ಷ ಕಟ್ಟಬಹುದು. ಪಕ್ಷದೊಳಗೆ ಬದಲಾವಣೆ ಆಗಬೇಕು. ದುಡ್ಡು- ಕಾಸು ಇರುವ ಗಿರಾಕಿಗಳನ್ನು ಕರೆದುಕೊಂಡು ಬಂದು ಅಟ್ಟದ ಮೇಲೆ ಕೂರಿಸಿದರೆ, ಅವುಗಳ ಬುದ್ಧಿ ಬಿಡಲ್ಲ. ಅಲ್ಲಿ ಒಕ್ಕಲಿಗರು ಜಾಸ್ತಿ ಇದ್ದಾರೆ ಅವರಿಗೆ ಟಿಕೆಟ್ ಕೊಡೋಣ, ಇಲ್ಲಿ ಲಿಂಗಾಯತರು ಜಾಸ್ತಿ ಅವರಿಗೆ ಟಿಕೆಟ್ ಕೊಡೋಣ ಎಂಬ ಆಲೋಚನೆಯನ್ನು ಬಿಡಬೇಕು. ದೇವೇಗೌಡರಿಗೆ ವಯಸ್ಸಾಗಿರಬಹುದು. ಆದರೆ ಉತ್ಸಾಹ ಕುಂದಿಲ್ಲ. ನಮ್ಮಿಂದ ತಪ್ಪಾಗಿದೆ ಎಂದು ಮತ್ತೆ ಜನರ ಮುಂದೆ ಹೋಗಬೇಕಿದೆ. ಬಿದ್ದ ಮನೆಯನ್ನು ಕಟ್ಟು ಮಂಕುತಿಮ್ಮ ಎಂದು ಡಿ. ವಿ. ಜಿ ಹೇಳುತ್ತಾರೆ.

ವಿಚಾರ- ವಿಶ್ವಾಸ- ವಿಕಾಸ ತತ್ವದೊಂದಿಗೆ ಕರ್ನಾಟಕ ಪಾದಯಾತ್ರೆ

ವಿಚಾರ- ವಿಶ್ವಾಸ- ವಿಕಾಸ ತತ್ವದೊಂದಿಗೆ ಕರ್ನಾಟಕ ಪಾದಯಾತ್ರೆ

"ದೇವೇಗೌಡರು 1989ರಲ್ಲಿ ಬೆಂಗಳೂರಿನಿಂದ ಕುಣಿಗಲ್ ತನಕ ಪಾದಯಾತ್ರೆ ಮಾಡಿದ್ದರು. 2004ರಲ್ಲಿ ಚೆನ್ನಪಟ್ಟಣದಿಂದ ಬೆಂಗಳೂರಿನ ತನಕ ಪಾದಯಾತ್ರೆ ಮಾಡಿದ್ದರು. ರಿಯಲ್ ಎಸ್ಟೇಟ್ ವ್ಯವಹಾರ ಮಾಡುವವರು, ನಾರಾಯಣ ಗೌಡರು ಥರ ಮುಂಬೈನಲ್ಲಿ ಹೋಟೆಲ್ ಇಟ್ಟುಕೊಂಡಿರುವವರನ್ನು ಪಕ್ಷಕ್ಕೆ ಕರೆದುಕೊಂಡು ಬಂದು ಕೂರಿಸಿಕೊಂಡರೆ ಹೀಗೇ ಆಗುತ್ತದೆ. ಜಾತಿ, ಹಣ ಬಿಟ್ಟು ಒಳ್ಳೆ ಗುಣ ಇರುವವರನ್ನು ಚುನಾವಣೆಗೆ ನಿಲ್ಲಿಸಬೇಕು. ಪ್ರಾದೇಶಿಕ ಪಕ್ಷವೊಂದರ ಅಗತ್ಯದ ಬಗ್ಗೆ ಜನರಿಗೆ ಹೇಳಬೇಕು. ನಮ್ಮ ನಕಾರಾತ್ಮಕ ಅಂಶಗಳಿಂದ ಪಾಠ ಕಲಿಯಬೇಕು. ಇಡೀ ಕರ್ನಾಟಕ ಪಾದಯಾತ್ರೆ ಮಾಡುವ ಬಗ್ಗೆ ನಮ್ಮ ವರಿಷ್ಠರಿಗೆ ಸಲಹೆ ನೀಡಿದ್ದೇನೆ. ವಿಚಾರ- ವಿಶ್ವಾಸ- ವಿಕಾಸ ಎಂಬುದನ್ನು ಮುಂದಿಟ್ಟುಕೊಂಡು ಜನರ ಮುಂದೆ ಹೋಗೋಣ ಎಂದಿದ್ದೇನೆ.

ವಿಶ್ವಾಸವನ್ನು ಮತ್ತೆ ಪಡೆಯಲು ಪ್ರಯತ್ನ

ವಿಶ್ವಾಸವನ್ನು ಮತ್ತೆ ಪಡೆಯಲು ಪ್ರಯತ್ನ

"ಕರ್ನಾಟಕ ರಾಜ್ಯದ ಬಗ್ಗೆ ನಮ್ಮ ವಿಚಾರ, ಜನರಲ್ಲಿ ಮತ್ತೆ ನಮ್ಮ ಬಗ್ಗೆ ವಿಶ್ವಾಸ ಪಡೆಯುವ ಪ್ರಯತ್ನ ಹಾಗೂ ಇಡೀ ರಾಜ್ಯದ ವಿಕಾಸದ ಪರಿಕಲ್ಪನೆಯನ್ನು ಇಟ್ಟುಕೊಂಡು ಜನರ ಮುಂದೆ ಹೋಗುವ ಬಗ್ಗೆ ಹೇಳಿದ್ದೇನೆ. ಅರಮನೆ ಮೈದಾನದಲ್ಲಿ ಸಮಾವೇಶ ಮಾಡಿ, ಲಕ್ಷ ಜನರನ್ನು ಸೇರಿಸಿದೆ ಅಂದರೆ ಉಪಯೋಗವಿಲ್ಲ" ಎನ್ನುತ್ತಾರೆ ವೈಎಸ್ ವಿ ದತ್ತ. ಜೆಡಿಎಸ್ ಜಾತಿ ರಾಜಕಾರಣ ಮಾಡುತ್ತದೆ, ಶ್ರೀಮಂತರಿಗೆ ಮಣೆ ಹಾಕುತ್ತದೆ, ಉತ್ತರ ಕರ್ನಾಟಕವನ್ನು ನಿರ್ಲಕ್ಷ್ಯ ಮಾಡುತ್ತಿದೆ ಇತ್ಯಾದಿ ಭಾವನೆಗಳು ಜನರ ಮನಸ್ಸಿನಲ್ಲಿದೆ. ಈಗಿನ ಪರಿಸ್ಥಿತಿ ಜೆಡಿಎಸ್ ಪಾಲಿಗೆ ತೀರಾ ಕೆಟ್ಟದಾಗಿ ಅಂತಿಲ್ಲ. ಆದರೆ ವಿಶ್ವಾಸವನ್ನು ಮತ್ತೆ ಪಡೆಯಲು ಪ್ರಯತ್ನ ಮಾಡಬೇಕಿದೆ.

ಜ್ಯೋತಿಷಿಗಳು ಏನಂತಾರೆ?

ಜ್ಯೋತಿಷಿಗಳು ಏನಂತಾರೆ?

ಆದರೆ, ಕೆಲ ಜ್ಯೋತಿಷಿಗಳ ಪ್ರಕಾರ ಕುಟುಂಬದ ಹಲವರು ರಾಜಕಾರಣಕ್ಕೆ ಬಂದಿದ್ದು, ಮೂವರಿಗೆ ಜನನ ಕಾಲದಲ್ಲಿ ಒಂದೇ ಸ್ಥಾನದಲ್ಲಿ ಇರುವ ಗ್ರಹವು ಇಂಥ ಸಮಸ್ಯೆ ತಂದೊಡ್ಡುತ್ತಿದೆ. ಇನ್ನು ಕುಮಾರಸ್ವಾಮಿ ಆವರ ಜಾತಕ ರೀತಿಯಾಗಿ ನವೆಂಬರ್ ನಂತರ ಸಕಾರಾತ್ಮಕ ಬದಲಾವಣೆ ಕಾಣಿಸಿಕೊಳ್ಳಬಹುದು. ಆದರೆ ಜನವರಿಯಲ್ಲಿ ಎಂಟನೇ ಮನೆಗೆ ಪ್ರವೇಶಿಸುವ ಶನಿಯಿಂದ ಸಾಕಷ್ಟು ಸಮಸ್ಯೆಗಳಾಗುತ್ತವೆ. ವೃಶ್ಚಿಕ ರಾಶಿಯವರಾದ ನಿಖಿಲ್ ಕುಮಾರಸ್ವಾಮಿ ಹಾಗೂ ಮೀನ ರಾಶಿಯವರಾದ ದೇವೇಗೌಡರಿಗೆ ಜನವರಿ ನಂತರ ಚೆನ್ನಾಗಿದೆ ಎನ್ನುತ್ತಾರೆ. ಇನ್ನು ಮಾಜಿ ಸಚಿವ - ಹಾಸನದ ಬಿಜೆಪಿ ಮುಖಂಡ ಎ. ಮಂಜು ಪ್ರಕಾರ, 9 ರಿಂದ ಕೊನೆ ಆಗುವ ಇಸವಿಗಳು ಮಾರಕವಾಗಿವೆ. ಅದಕ್ಕೆ ಅವರು ನೀಡುವ ಉದಾಹರಣೆ: 1989, 1999, 2009 ಹಾಗೂ 2019. ಆದರೆ ಸಂಖ್ಯಾಶಾಸ್ತ್ರಜ್ಞರು, ಇದು ಕಾಕತಾಳೀಯ ಅಷ್ಟೇ ಎನ್ನುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+