'ವ್ಯಾಪಾರಿ ಕೇಂದ್ರವಾಗಿದ್ದ ಬೆಂಗಳೂರು, ಅಸಾಧ್ಯ ಬುದ್ಧಿವಂತ ಕೆಂಪೇಗೌಡ'

"ಅದು ಎಳಜೀಯನಹ ಹಳ್ಳಿ. ಈಗಿನ ಯಲಚೇನಹಳ್ಳಿಯಲ್ಲಿ ಸಿಕ್ಕ ಆ ಶಿಲಾ ಶಾಸನವು ವಿಜಯನಗರ ಅರಸರ ಕಾಲದ್ದು. ಆಗ ಕಟ್ಟಿಸಿದ ಕೆರೆಯೊಂದರ ಉಲ್ಲೇಖ ಇದೆ. ಜತೆಗೆ ಅಲ್ಲಿನ ಸೀಮೆಯ ಕಂದಾಯ ವ್ಯಾಪ್ತಿಯನ್ನೂ ತಿಳಿಸಲಾಗಿದೆ. ಆದ್ದರಿಂದ ಆ ಶಾಸನದ ಮಹತ್ವ ಬಹಳ ಇದೆ. ಈ ಶಾಸನ ಬೆಳಕು ಕಾಣಲು ರಿವೈವಲ್ ಹಬ್ ನ ರಾಜೀವ್ ನೃಪತುಂಗ ರ ಶ್ರಮ ಇದೆ" ಎಂದು ಇತಿಹಾಸಕಾರ ಪಿ.ವಿ.ಕೃಷ್ಣಮೂರ್ತಿ ಹೇಳಿದರು.

ಈಚೆಗೆ ಯಲಚೇನಹಳ್ಳಿಯಲ್ಲಿ ಸಿಕ್ಕ ಶಿಲಾ ಶಾಸನದ ಬಗ್ಗೆ ಕುತೂಹಲ ಮೂಡಿತ್ತು. ಏಕೆಂದರೆ ಆ ಶಾಸನವು 1402ನೇ ಇಸವಿ ಮೇ 26ರಂದು ಸ್ಥಾಪಿಸಿರುವುದು ಅಂತ ಖಾತ್ರಿ ಆಗಿದೆ. ಕೆಂಪೇಗೌಡ ಬೆಂಗಳೂರಿನ ಅಭಿವೃದ್ಧಿಗೆ ಕೈಗೊಂಡ ಎಷ್ಟೋ ಕೆಲಸಗಳಿಗೆ ಸಾಕ್ಷ್ಯ ಲಭ್ಯವಾಗಿಲ್ಲ. ಅಂದರೆ ಶಾಸನಗಳು ಅಂತ ಸಿಕ್ಕಿಲ್ಲ. ಆದರೆ ಈ ಶಾಸನದಲ್ಲಿ ಬಹಳ ವಿಚಾರಗಳ ಉಲ್ಲೇಖ ಸ್ಪಷ್ಟವಾಗಿದೆ ಎನ್ನುತ್ತಾರೆ ಕೃಷ್ಣಮೂರ್ತಿ.

ಮಾತು ಕೆಂಪೇಗೌಡನ ಬಗ್ಗೆ ಹೋಗಿದ್ದರಿಂದ ಬೆಂಗಳೂರನ್ನು ಆತ ಕಟ್ಟಿದ ಇಸವಿ ಬಗ್ಗೆ ಏನಾದರೂ ಮಾಹಿತಿ ಇದೆಯಾ ಅಂತ ಕೇಳಿದರೆ, ಅರೆ ಕ್ಷಣ ಕೃಷ್ಣಮೂರ್ತಿ ಅವರು ಮೌನವಾದರು. ಬೆಂಗಳೂರು ಎಂಬುದು ಕ್ರಿಸ್ತಶಕ ಆರಂಭದಿಂದಲೂ ಇದೆ. ಇದೊಂದು ವ್ಯಾಪಾರ ಕೇಂದ್ರವಾಗಿತ್ತು. ಇಲ್ಲಿ ಮೂಲ ಸೌಕರ್ಯ ಒದಗಿಸಿ, ಅದರಿಂದ ಆದಾಯ ಬರುವಂತೆ ಮಾಡಿದ ದೂರದೃಷ್ಟಿ ಉಳ್ಳ ಆಡಳಿತಗಾರ ಕೆಂಪೇಗೌಡ ಅಂದರು.

ಈ ಬಗ್ಗೆ ಸವಿಸ್ತಾರವಾಗಿ ಹೇಳಬಹುದಾ ಎಂದು ಒನ್ಇಂಡಿಯಾ ಕನ್ನಡ ಕೇಳಿದಾಗ, ಅವರು ನೀಡಿದ್ದರ ಮಾಹಿತಿಯ ವಿವರ ಇಲ್ಲಿದೆ.

ಕೆಂಪೇಗೌಡನಿಗೂ ಮುಂಚಿನಿಂದಲೂ ಅಸ್ತಿತ್ವದಲ್ಲಿತ್ತು ಬೆಂಗಳೂರು

ಕೆಂಪೇಗೌಡನಿಗೂ ಮುಂಚಿನಿಂದಲೂ ಅಸ್ತಿತ್ವದಲ್ಲಿತ್ತು ಬೆಂಗಳೂರು

ಬೆಂಗಳೂರು ಎಂಬುದು ಬಹಳ ಹಿಂದಿನಿಂದಲೇ ಅಸ್ತಿತ್ವದಲ್ಲಿ ಇತ್ತು. ಅಂದರೆ ಕೆಂಪೇಗೌಡ ಹುಟ್ಟುವ ಮುಂಚಿನಿಂದಲೂ ಅಸ್ತಿತ್ವದಲ್ಲಿ ಇತ್ತು. ಆದರೆ ಒಬ್ಬ ಕೆಂಪೇಗೌಡ ಈ ಬೆಂಗಳೂರಿಗೆ ಮೂಲಸೌಕರ್ಯ ಒದಗಿಸಿ ಅಭಿವೃದ್ಧಿ ಪಡಿಸಿದ. ಏಕೆ ಒಬ್ಬ ಕೆಂಪೇಗೌಡ ಅಂತೀನಿ ಅಂದರೆ, ಇತಿಹಾಸದಲ್ಲಿ ಬಹಳ ಮಂದಿ ಕೆಂಪೇಗೌಡ ಬರುತ್ತಾರೆ. ಇಮ್ಮಡಿ ಕೆಂಪೇಗೌಡ, ಮುಮ್ಮಡಿ ಕೆಂಪೇಗೌಡ, ಕೆಂಪನಾಚೇಗೌಡ, ಹಿರಿ ಕೆಂಪೇಗೌಡ ಹೀಗೆ ಹಲವರ ಹೆಸರು ಬರುತ್ತದೆ. ಅದು ಹೇಗೆಂದರೆ, ತಾತನ ಹೆಸರನ್ನೇ ಮೊಮ್ಮಗನಿಗೆ ಇಡುವ ಪರಿಪಾಠ ನಮ್ಮಲ್ಲಿ ಮುಂಚಿನಿಂದಲೂ ನಡೆದುಬಂದಿದೆ. ಹಾಗೆ ಇಮ್ಮಡಿ ಕೆಂಪೇಗೌಡ ಎಂಬುವವನು ಬೆಂಗಳೂರು ವ್ಯಾಪಾರಿ ಕೇಂದ್ರ ಅನ್ನೋದನ್ನು ಗುರುತಿಸುತ್ತಾನೆ. ಅದಕ್ಕೆ ಬೇಕಾದ ಮೂಲಸೌಕರ್ಯ ಒದಗಿಸಿದರೆ, ಆದಾಯ ಹುಟ್ಟುವುದನ್ನು ಮನಗಂಡ ಆತ ಇಲ್ಲಿ ಕೆರೆಗಳನ್ನು ನಿರ್ಮಿಸಿದ, ನಾನಾ ಸಮುದಾಯಗಳಿಗೆ ಪೇಟೆಗಳನ್ನು ನಿರ್ಮಿಸಿದ. ಗಾಣಿಗರ ಪೇಟೆ, ಬಳೆ ಪೇಟೆ, ಅಕ್ಕಿ ಪೇಟೆ ಇವೆಲ್ಲ ಆಗಿದ್ದೇ ಹಾಗೆ.

ಬೇಗೂರಿನ ಶಾಸನದಲ್ಲಿ ಪ್ರಸ್ತಾವ

ಬೇಗೂರಿನ ಶಾಸನದಲ್ಲಿ ಪ್ರಸ್ತಾವ

ಆದರೆ, ಬೆಂಗುಳೂರು ಅನ್ನೋದು ಇತ್ತು ಎಂಬ ಬಗ್ಗೆ ಬೇಗೂರಿನಲ್ಲಿ ಸಿಕ್ಕ ಶಾಸನವೊಂದು ಸಾಕ್ಷಿ ಎಂಬಂತಿದೆ. ಯಾವಾಗ ಬೆಂಗಳೂರು ಆರ್ಥಿಕವಾಗಿ ಸದೃಢವಾಯಿತೋ ಆಗ ಇದನ್ನು ವಶಪಡಿಸಿಕೊಳ್ಳುವ ಸಲುವಾಗಿ ಬಿಜಾಪುರದ ಅರಸರ ಪರವಾಗಿ ರಣದುಲ್ಲಾ ಖಾನ್ ಇಲ್ಲಿಗೆ ಬಂದ. ಆತನ ಜತೆಗೆ ಬಂದವನು ಷಹಜೀ. ಹಾಗೆ ನೋಡಿದರೆ ಷಹಜೀ ಪರಾಕ್ರಮಿ ಏನಲ್ಲ. ಆದರೆ ರಣದುಲ್ಲಾ ಖಾನ್ ಗೆ ಇಲ್ಲಿ ಬೆಂಗಳೂರನ್ನು ನೋಡಿಕೊಳ್ಳಲು ಒಬ್ಬ ವ್ಯಕ್ತಿ ಬೇಕಿತ್ತು. ಹಾಗೆ ಇಲ್ಲಿ ನೇಮಿಸಿ ಹೋಗಿದ್ದು ಷಹಜೀಯನ್ನು. ಆತನ ಮಕ್ಕಳೇ ಏಕೋಜಿ ಹಾಗೂ ಶಿವಾಜಿ. ಅವರಿಬ್ಬರ ಮದುವೆ ಆಗಿದ್ದು ಇದೇ ಬೆಂಗಳೂರಿನಲ್ಲಿ. ಮುಂದೆ ಬೆಂಗಳೂರು ಸುತ್ತಮುತ್ತಲ ಪ್ರದೇಶವನ್ನು ನೋಡಿಕೊಳ್ಳಲು ಕೆಲವರನ್ನು ನೇಮಿಸಿದ ಏಕೋಜಿ ತಂಜಾವೂರಿಗೆ ಹೋದರೆ, ತನ್ನ ತಾಯಿ ಜೀಜಾಬಾಯಿ ಜತೆಗೆ ಶಿವಾಜಿ ಮಹಾರಾಷ್ಟ್ರಕ್ಕೆ ಹೋಗುತ್ತಾನೆ.

ವಿಜಯನಗರ ಅರಸರಿಗೆ ಆಪ್ತನಾಗಿದ್ದ

ವಿಜಯನಗರ ಅರಸರಿಗೆ ಆಪ್ತನಾಗಿದ್ದ

ನಮಗೆ ಇತಿಹಾಸದಿಂದ ಗೊತ್ತಾಗಬೇಕಾದ್ದು ಏನೆಂದರೆ, ಕೆಂಪೇಗೌಡ ವಿಜಯನಗರ ಅರಸರಿಗೆ ಬಹಳ ಆಪ್ತನಾಗಿದ್ದ. ಅವರಿಗೆ ಅಗತ್ಯ ಬಿದ್ದಾಗ ತನ್ನ ಸೈನ್ಯವನ್ನು ಕಳುಹಿಸುತ್ತಿದ್ದ. ಹಣಕಾಸು ವ್ಯವಹಾರವೂ ಇದ್ದಿರಬಹುದು. ಮೇಲ್ನೋಟಕ್ಕೇ ಗೊತ್ತಾಗುವುದೇನೆಂದರೆ, ವಿಜಯ ನಗರ ಅರಸರ ಪಾಲಿಗೆ ಕೆಂಪೇಗೌಡ ನಂಬಿಕಸ್ಥ ಬಂಟನಾಗಿದ್ದ. ಜತೆಗೆ ಸಮರ್ಥ ಆಡಳಿತಗಾರ ಆಗಿದ್ದರಿಂದ ಅವನ ಕಾಲದಲ್ಲಿ ಸುತ್ತಮುತ್ತಲಿದ್ದ ಪಾಳೇಗಾರರು ಮಾತಿಗೆ ಬೆಲೆ ಹಾಗೂ ಗೌರವ ನೀಡುತ್ತಿದ್ದರು. ಬೆಂಗಳೂರು ಬಹಳ ಎತ್ತರದ ಪ್ರದೇಶ. ಇಲ್ಲಿ ನೀರು ಸಿಗುವುದು ಹಾಗೂ ಜೀವನಕ್ಕೆ ಬೇಕಾದ ವಸತಿ ಮತ್ತಿತರ ಅನುಕೂಲ ಕಲ್ಪಿಸುವುದು ಸಲೀಸಲ್ಲ. ಆದರೆ ಆ ಸಾಹಸಕ್ಕೆ ಇಳಿದ ಆತ ಯಶಸ್ವಿಯಾದ.

ಬೆಂಗಳೂರನ್ನು ಹಣ ನೀಡಿ ಖರೀದಿಸಿದವರು ಮೈಸೂರು ಅರಸರು

ಬೆಂಗಳೂರನ್ನು ಹಣ ನೀಡಿ ಖರೀದಿಸಿದವರು ಮೈಸೂರು ಅರಸರು

ಬೆಂಗಳೂರನ್ನು ಹಣ ಕೊಟ್ಟು ಖರೀದಿಸಿದವರು ಮೈಸೂರು ಅರಸರು. ಹೋಲಿಕೆ ಮಾಡಿ ಹೇಳುವುದಾದರೆ ಮೈಸೂರಿನ ಅರಸರಿಗಿಂತ ಕೆಂಪೇಗೌಡ ಬಹಳ ಪ್ರಭಾವಶಾಲಿ ಆಗಿದ್ದ. ಆದರೆ ಬೆಂಗಳೂರು ಕಟ್ಟಿದವನು ಕೆಂಪೇಗೌಡ ಎಂಬ ಉಲ್ಲೇಖ ತಪ್ಪಾಗುತ್ತದೆ. ಏಕೆಂದರೆ, ಬೆಂಗಳೂರಿನ ಇತಿಹಾಸ ಕೆಂಪೇಗೌಡ ಹುಟ್ಟುವುದಕ್ಕೂ ಹಿಂದಿನದು. ಆತ ಬೆಂಗಳೂರನ್ನು ಅಭಿವೃದ್ಧಿ ಪಡಿಸಿದ ಅನ್ನೋದರಲ್ಲಿ ಎರಡು ಮಾತಿಲ್ಲ. ಹಾಗೇ ಕೆಂಪೇಗೌಡನ ಇತಿಹಾಸದ ಬಗ್ಗೆ ಇನ್ನೂ ಅಧ್ಯಯನ ಆಗಬೇಕಿದೆ. ನಾಲ್ಕು ಗೋಡೆಯ ಮಧ್ಯೆ ಕೂತು ತಮ್ಮ ಮೂಗಿನ ನೇರಕ್ಕೆ ಇರುವ ವಿಷಯಗಳ ಆಧಾರದಲ್ಲಿ ಇತಿಹಾಸ ಹೀಗೆ ಎಂದು ಹೇಳುವುದು ಸರಿಯಲ್ಲ ಎನ್ನುತ್ತಾರೆ ಪಿ.ವಿ.ಕೃಷ್ಣಮೂರ್ತಿ.

ಮೂರು ದಶಕಕ್ಕೂ ಹೆಚ್ಚಿನ ಅನುಭವ

ಮೂರು ದಶಕಕ್ಕೂ ಹೆಚ್ಚಿನ ಅನುಭವ

ಡಾ.ಪಿ.ವಿ.ಕೃಷ್ಣಮೂರ್ತಿ ಅವರು ಮೂರು ದಶಕಕ್ಕೂ ಹೆಚ್ಚು ಕಾಲದಿಂದ ಶಾಸನಶಾಸ್ತ್ರಗಳ ಅಧ್ಯಯನ ಮಾಡುತ್ತಿದ್ದಾರೆ. ಶಾಸನದಲ್ಲಿ ಬಳಸಿದ ಕನ್ನಡ ಪದಗಳು, ಬರವಣಿಗೆ ಶೈಲಿ, ಯಾವ ರಾಜನ ಕಾಲ ಇತ್ಯಾದಿ ಮಾಹಿತಿಯಿಂದ ಕೆಲಸ ಸಲೀಸಾಗುತ್ತದೆ ಎನ್ನುವ ಅವರು, ಇತ್ತೀಚೆಗೆ ಬದಲಾಗುತ್ತಿರುವ ಧೋರಣೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಾರೆ. ಕನ್ನಡ ಸಾಹಿತ್ಯ ಪರಿಷತ್ ನಲ್ಲಿ ಶಾಸನ ಶಾಸ್ತ್ರ ಹೇಳಿಕೊಡುವ ತರಗತಿಗಳು ನಡೆಯುತ್ತವೆ. ಅದಕ್ಕೆ ಪರೀಕ್ಷೆ ಸಹ ಇದೆ. ಆದರೆ ಈ ಬಗ್ಗೆ ಇನ್ನೂ ಹೆಚ್ಚಿನ ಕಾಳಜಿ ಆಡಳಿತ ನಡೆಸುವವರಿಗೂ ಹಾಗೂ ತಿಳಿಯಬೇಕು ಎಂಬ ಆಸಕ್ತಿ ಜನರಿಗೂ ಬರಬೇಕು ಎಂದು ಅಭಿಪ್ರಾಯ ಪಡುತ್ತಾರೆ. ಅವರೊಂದಿಗೆ ಮಾತನಾಡಲು ಆರಂಭಿಸಿದರೆ ಬೆಂಗಳೂರು ಸುತ್ತಮುತ್ತಲ ಇತಿಹಾಸವನ್ನು ಕಣ್ಣೆದುರು ನಡೆದಿದೆಯೇನೋ ಎಂಬಂತೆ ಹೇಳುತ್ತಾರೆ. ಕೃಷ್ಣಮೂರ್ತಿ ಅವರು ಬರೆದ ಲೇಖನ ತುಮಕೂರು ವಿಶ್ವವಿದ್ಯಾಲಯಲ್ಲಿ ಪುಸ್ತಕಗಳಾಗಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+