ಸ್ಫೂರ್ತಿಯ ಕಥೆ: ಬೆಂಗಳೂರು ಮೂಲದ ಮಹಿಳೆ ಕೊರೊನಾದಿಂದ ಪಾರು
ಬೆಂಗಳೂರು, ಏಪ್ರಿಲ್.05: ಕೊರೊನಾ ವೈರಸ್.. ಈ ಹೆಸರನ್ನು ಕೇಳಿದರೆ ಕನಸಿನಲ್ಲೂ ಜನರು ಬೆಚ್ಚಿ ಬೀಳುತ್ತಾರೆ. ವಿಶ್ವವನ್ನು ಬೆಚ್ಚಿ ಬೀಳಿಸಿರುವ ಮಾರಕ ಸೋಂಕಿಗೆ ಸಿಲುಕಿದವರ ಕಥೆ ಅಷ್ಟೇ. ಸಾವಿನ ಮನೆಗೂ ಕೊರೊನಾ ವೈರಸ್ ಗೂ ಅಂತರ ಹೆಚ್ಚೇನೂ ಇಲ್ಲ. ಕೊರೊನಾ ಬಗ್ಗೆ ಜನರು ಅಂದುಕೊಂಡಿರುವುದೇ ಹೀಗೆ.
ಚೀನಾದಲ್ಲಿ ಮೊದಲು ಕಾಣಿಸಿಕೊಂಡ ಕೊರೊನಾ ವೈರಸ್ ದಿನ ಕಳೆದಂತೆ ಭಾರತ, ಕರ್ನಾಟಕ, ಬೆಂಗಳೂರು ಅಲ್ಲದೇ ರಾಜ್ಯದ ಗ್ರಾಮಗಳಲ್ಲೂ ಲಗ್ಗೆ ಇಟ್ಟಿದೆ. ಜನರಲ್ಲಿ ಕೊರೊನಾ ವೈರಸ್ ಬಗ್ಗೆ ಇರುವ ಭಯವನ್ನು ಹೋಗಲಾಡಿಸಲು, ಮಾರಕ ಸೋಂಕಿತ ಕುರಿತು ಜಾಗೃತಿ ಮೂಡಿಸುವುದು ಎಲ್ಲರ ಜವಾಬ್ದಾರಿ ಆಗಿದೆ.
ಕೊರೊನಾ ವೈರಸ್ ಕುರಿತು ಸುದ್ದಿ ಎಂದರೆ ಸಾವು, ಸೋಂಕಿತರು, ಐಸೋಲೇಟೆಡ್ ವಾರ್ಡ್, ಮಾಸ್ಕ್, ಕಿಟ್ ಕುರಿತು ಮಾಹಿತಿ ನೀಡುವುದಷ್ಟೇ ಅಲ್ಲ. ಡೆಡ್ಲಿ ವೈರಸ್ ಬಗ್ಗೆ ಭೀತಿಯಲ್ಲಿ ಇರುವ ಜನರಿಗೆ ಸ್ಪೂರ್ತಿ ತುಂಬುವಂತಾ ಘಟನೆಗಳೂ ಕೂಡಾ ನಡೆದಿವೆ. ನಮ್ಮ ನಡುವೆಯೇ ಸಾವಿನ ಮನೆಯಿಂದ ಬಚಾವ್ ಆಗಿ ಬಂದವರೂ ಇದ್ದಾರೆ. ಅಂಥವರ ಬದುಕು ಉಳಿದವರಿಗೆ ಸ್ಪೂರ್ತಿ ಆಗಬೇಕಿದೆ. ಎಂಥವರಿಗೂ ಧೈರ್ಯ ತುಂಬುವಂತಾ ಕಥೆಯೊಂದನ್ನು ಕೊರೊನಾ ಸೋಂಕಿನಿಂದ ಪಾರಾದ ದಿಯಾ ನಾಯ್ಡು ಅವರು ರೇಡಿಯೋ ಮಿರ್ಚಿ ಕಾರ್ಯಕ್ರಮದಲ್ಲಿ ಆರ್ ಜೆ ಜಿಮ್ಮಿ ಅವರ ಜೊತೆಯಲ್ಲಿ ತಮ್ಮ ಅನುಭವದ ಕುರಿತು ವಿವರಿಸಿದ್ದಾರೆ.

ಕೊರೊನಾ ಸೋಂಕಿತಳು ಅನುಭವಿಸಿದ ಯಾತನೆ ಅಷ್ಟಿಷ್ಟಲ್ಲ
ದೇಶದಲ್ಲಿ ಮರಣ ಮೃದಂಗ ಬಾರಿಸುತ್ತಿರುವ ಕೊರೊನಾ ವೈರಸ್ ಹಾಗೂ ಈ ಸೋಂಕು ತಗಲಿರುವ ವ್ಯಕ್ತಿಗಳಲ್ಲಿ ಕಾಣಿಸಿಕೊಳ್ಳುವ ಲಕ್ಷಣಗಳ ಬಗ್ಗೆ ಈಗಾಗಲೇ ಸರ್ಕಾರವು ಸ್ಪಷ್ಟ ಮಾಹಿತಿ ನೀಡಿದೆ. ಜನರಲ್ಲಿ ಜಾಗೃತಿ ಮೂಡಿಸಿದೆ. ಆದರೆ ಒಬ್ಬ ಸೋಂಕಿತೆಯಾಗಿ ನಾನು ಅನುಭವಿಸಿದ ನೋವು ಮತ್ತು ಯಾತನೆ ನನಗೆ ಮಾತ್ರ ಗೊತ್ತು ಎಂದು ಸೋಂಕಿನಿಂದ ಗುಣಮುಖರಾಗಿರುವ ದಿಯಾ ನಾಯ್ಡು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

ರುಚಿ ಮತ್ತು ವಾಸನೆ ಕಂಡು ಹಿಡಿಯಲು ಆಗೋದಿಲ್ಲ
ನಾನು ಕೊರೊನಾ ವೈರಸ್ ಸೋಂಕಿಗೆ ಒಳಗಾಗಿ ಕೆಲವೇ ದಿನಗಳಲ್ಲಿ ವಾಸನೆ ಹಾಗೂ ಆಹಾರ ರುಚಿಯನ್ನು ಕಂಡು ಹಿಡಿಯುವ ಶಕ್ತಿಯನ್ನೇ ಕಳೆದುಕೊಂಡೆ. ನಿತ್ಯ ಸೇವಿಸುವ ಆಹಾರದಲ್ಲಿ ನನಗೆ ರುಚಿಯ ಅನುಭವವೇ ಆಗುತ್ತಿರಲಿಲ್ಲ. ಅಂದು ವೈದ್ಯರು ಇದು ಕೊರೊನಾ ವೈರಸ್ ಸೋಂಕಿನ ಲಕ್ಷಣವಲ್ಲ ಎಂದು ಹೇಳಿದರು. ನಂತರ ನನ್ನಲ್ಲಿ ಒತ್ತಡದ ಮನೋಭಾವ ಹೆಚ್ಚಾಯಿತು. ಗಂಟಲು ನೋವು, ಕೆಮ್ಮು ಆರಂಭವಾಯಿತು.

ಸೋಂಕಿನಿಂದ ಪಾರಾದ ಮಹಿಳೆಗೂ ಕಾಡಿತ್ತು ಗೊಂದಲ
ಇನ್ನು, ಆರಂಭದಲ್ಲಿ ನನಗೆ ಸಾಕಷ್ಟು ಗೊಂದಲಗಳು ಕಾಡಿದವು. ನನಗೆ ಏನಾಯಿತು, ವೈದ್ಯರೇಕೆ ನನ್ನ ಪ್ರತ್ಯೇಕವಾಗಿ ಇರಿಸಿದ್ದಾರೆ, ಐಸೋಲೇಷನ್ ನಲ್ಲಿ ಇರಿಸುವಂತಾ ಅಪಾಯವಾದರೂ ಏನು, ಹೀಗೆ ಸಾಕಷ್ಟು ಗೊಂದಲಗಳು ನನ್ನನ್ನು ಕಾಡಿದವು. ಆದರೆ ವೈದ್ಯಕೀಯ ಸಿಬ್ಬಂದಿ ನೀಡಿದ ಮಾಹಿತಿ ಹಾಗೂ ಚಿಕಿತ್ಸೆ ನನ್ನಲ್ಲಿದ್ದ ಗೊಂದಲಗಳನ್ನೆಲ್ಲ ನಿವಾರಣೆ ಮಾಡಿತು. ನನ್ನಲ್ಲಿ ಹೊಸ ಧೈರ್ಯವನ್ನು ತುಂಬಿತು.

ಆರೋಗ್ಯಾಧಿಕಾರಿ ಮತ್ತು ಬಿಬಿಎಂಪಿ ಅಧಿಕಾರಿಗಳಿಗೆ ಮಾಹಿತಿ
ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ಮತ್ತು ನಮ್ಮ ಏರಿಯಾದ ಆರೋಗ್ಯ ಅಧಿಕಾರಿಗಳು ನಾನು ಪ್ರಾಥಮಿಕ ಸಂಪರ್ಕ ಹೊಂದಿರುವ ಜನರ ಬಗ್ಗೆ ಮಾಹಿತಿ ಕೇಳಿದರು. ನಿಜ ಹೇಳಬೇಕೆಂದರೆ ಎಲ್ಲವನ್ನೂ ನನ್ನಿಂದ ಜ್ಞಾಪಿಸಿಕೊಳ್ಳಲು ಆಗಲಿಲ್ಲ. ನನಗೆ ತಿಳಿದಷ್ಟು ಮಾಹಿತಿಯನ್ನು ನಾನು ಆರೋಗ್ಯಾಧಿಕಾರಿಗಳು, ಪೊಲೀಸರು ಹಾಗೂ ಬಿಬಿಎಂಪಿ ಅಧಿಕಾರಿಗಳಿಗೆ ನೀಡಿದೆ.

ಸೋಂಕಿತೆಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಔಷಧಿ
ಮೊದಲ ಹಂತದಲ್ಲಿ ಕೊರೊನಾ ವೈರಸ್ ಸೋಂಕಿತೆಯಲ್ಲಿ ಕಾಣಿಸಿಕೊಂಡ ಜ್ವರ, ಕೆಮ್ಮು ಮತ್ತು ಶೀತ ನಿವಾರಣೆಗೆ ವೈದ್ಯರು ಚಿಕಿತ್ಸೆ ನೀಡಿದರು. ಎರಡನೇ ಹಂತದಲ್ಲಿ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುವ ಔಷಧಿ ನೀಡುತ್ತಿದ್ದರು. ಇದರಿಂದ ಕೊರೊನಾ ಸೋಂಕಿನಿಂದ ಗುಣಮುಖವಾಗಲು ಸಾಧ್ಯವಾಯಿತು ಎಂದು ಮಹಿಳೆ ತಿಳಿಸಿದ್ದಾರೆ.

ನಿರಂತರ ಚಿಕಿತ್ಸೆ ಬಳಿಕ ಮಹಿಳೆಯಲ್ಲಿ ಕೊರೊನಾ ನೆಗೆಟಿವ್
ಕೊರೊನಾ ವೈರಸ್ ಸೋಂಕಿಗೆ ಸಿಲುಕಿದ್ದ ದಿಯಾ ಅವರಿಗೆ ವೈದ್ಯರು ನೀಡಿದ ಚಿಕಿತ್ಸೆಯು ಫಲಿಸಿದೆ. ಹಲವು ವಾರಗಳ ಕಾಲ ಐಸೋಲೇಷನ್ ನಲ್ಲಿ ಪಡೆದ ಚಿಕಿತ್ಸೆಯಿಂದ ಸೋಂಕಿನಿಂದ ಪಾರಾಗಾದ್ದು ತುಂಬಾ ಸಂತೋಷವಾಗುತ್ತಿದೆ. ಆದರೆ ಇಂದಿಗೂ ನಾನು ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳುತ್ತೇನೆ. ವೈದ್ಯರು ನೀಡಿರುವ ಸಲಹೆ ಸೂಚನೆಗಳನ್ನು ಪಾಲಿಸುತ್ತೇನೆ ಎನ್ನುತ್ತಾರೆ.

ಸೋಂಕಿನಿಂದ ಪಾರಾದರೂ ದಿಗ್ಬಂಧನದಲ್ಲಿ ಇದ್ದೇನೆ
ಕೊರೊನಾ ವೈರಸ್ ಸೋಂಕಿತನಿಂದ ಪಾರಾದರೂ ಕೂಡಾ ನಾನು ವೈದ್ಯರ ಸೂಚನೆ ಮೇರೆಗೆ ಗೃಹ ದಿಗ್ಬಂಧನದಲ್ಲಿ ಇದ್ದೇನೆ. ವೈದ್ಯರು ತಿಳಿಸುವವರೂ ನಿಯಮಗಳನ್ನು ಪಾಲನೆ ಮಾಡುತ್ತೇನೆ. ಏಕೆಂದರೆ ನನ್ನಿಂದ ಮತ್ತೊಬ್ಬರಿಗೆ ತೊಂದರೆ ಆಗಬಾರದು ಎನ್ನುವುದು ಮಹಿಳೆಯ ಮಾತು.

ಸ್ವಿಡ್ಜರ್ ಲೆಂಡ್ ನಿಂದ ಆಗಮಿಸಿದ ದಿಯಾ ನಾಯ್ಡು
ಕಳೆದ ಮಾರ್ಚ್.09ರಂದು ಸ್ವಿಡ್ಜರ್ ಲೆಂಡ್ ನಿಂದ ಬೆಂಗಳೂರಿಗೆ ಆಗಮಿಸಿದ ದಿಯಾ ನಾಯ್ಡುರನ್ನು ವಿಮಾನ ನಿಲ್ದಾಣದಲ್ಲಿ ತಪಾಸಣೆಗೆ ಒಳಪಡಿಸಲಾಯಿತು. ಅಂದು ಅವರಲ್ಲಿ ಯಾವುದೇ ಸೋಂಕಿತ ಲಕ್ಷಣ ಕಾಣಿಸಿಕೊಂಡಿರಲಿಲ್ಲ. ಗೃಹ ದಿಗ್ಬಂಧನದಲ್ಲೇ ಇರುವಂತೆ ಅಧಿಕಾರಿಗಳು ಸೂಚಿಸಿದ್ದು, ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದಲ್ಲಿ ತಕ್ಷಣ ಮಾಹಿತಿ ನೀಡುವಂತೆ ತಿಳಿಸಿದ್ದರು. ಅದಾಗಿ ಐದು ದಿನಗಳಲ್ಲಿ ನಾನು ಸೇವಿಸುವ ಆಹಾರ ನನಗೆ ರುಚಿಸುತ್ತಿರಲಿಲ್ಲ. ಇದು ಸೋಂಕಿನ ಆರಂಭಿಕ ಲಕ್ಷಣ ಎಂದು ಗುರುತಿಸಲು ಆಗಲಿಲ್ಲ.

ಸ್ವಿಡ್ಜರ್ ಲೆಂಡ್ ಸಹ ಸೋಂಕಿತ ರಾಷ್ಟ್ರಗಳ ಪಟ್ಟಿಗೆ ಸೇರ್ಪಡೆ
ಕೊರೊನಾ ವೈರಸ್ ಕಾಣಿಸಿಕೊಂಡ ರಾಷ್ಟ್ರಗಳಲ್ಲಿ ಸ್ವಿಡ್ಜರ್ ಲೆಂಡ್ ಇರಲಿಲ್ಲ. ನಂತರದ ದಿನಗಳಲ್ಲಿ ಆ ರಾಷ್ಟ್ರಗಳ ಪಟ್ಟಿಗೆ ಸೇರ್ಪಡೆಯಾಗುತ್ತಿದ್ದಂತೆ ಅಧಿಕಾರಿಗಳು ನನಗೆ ಕರೆ ಮಾಡಿ ವೈದ್ಯಕೀಯ ಪರೀಕ್ಷೆ ಮಾಡಿಸಿಕೊಳ್ಳುವಂತೆ ಸಲಹೆ ನೀಡಿದರು. ಅದರಂತೆ ನಾನು ಆಸ್ಪತ್ರೆಗೆ ತೆರಳಿ ವೈದ್ಯಕೀಯ ತಪಾಸಣೆ ಮಾಡಿಸಿಕೊಂಡೆನು.

ಐಸೋಲೇಷನ್ ನಲ್ಲಿ ಇರುವಾಗ ಯಾರ ಭೇಟಿಗೂ ಅವಕಾಶವಿಲ್ಲ
ಕೊರೊನಾ ವೈರಸ್ ಸೋಂಕಿತರನ್ನು ಐಸೋಲೇಷನ್ ವಾರ್ಡ್ ನಲ್ಲಿ ಇರಿಸಿದ ಸಂದರ್ಭದಲ್ಲಿ ಯಾರ ಭೇಟಿಗೂ ಅವಕಾಶ ಇರುವುದಿಲ್ಲ. ಒಬ್ಬ ನರ್ಸ್ ಕೂಡ ಸೋಂಕಿತರ ಜೊತೆ ಇರುವುದಿಲ್ಲ. ಸೋಂಕು ಅತಿಬೇಗನೇ ಹರಡುವ ಅಪಾಯ ಇರುವುದರಿಂದ ಸೋಂಕಿತರು ಎಲ್ಲರಿಂದಲೂ ಅಂತರ ಕಾಯ್ದುಕೊಳ್ಳಬೇಕಾಗಿರುತ್ತದೆ.

ಸೋಂಕಿತರಿಗೆ ಚಿಕಿತ್ಸೆ ನೀಡಲು ವೈದ್ಯರಿಗೆ ಸುರಕ್ಷಾ ಕವಚ
ಐಸೋಲೇಷನ್ ನಲ್ಲಿ ಇರುವ ಸೋಂಕಿತರಿಗೆ ಚಿಕಿತ್ಸೆ ನೀಡಲು ವೈದ್ಯರು, ನರ್ಸ್ ಗಳು, ವಾರ್ಡ್ ಬಾಯ್ ಗಳು ಆಗಮಿಸುವಾಗ ಕೈಗಳಿಗೆ ಗ್ಲೌಸ್, ಮುಖಕ್ಕೆ ಮಾಸ್ಕ್, ಕಣ್ಣಿಗೆ ಗ್ಲಾಸ್, ಕಾಲಿಗೆ ಶೂಸ್ ಹಾಗೂ ಸಂಪೂರ್ಣ ದೇಹಕ್ಕೆ ಸುರಕ್ಷಾ ಕವಚವನ್ನು ತೊಟ್ಟುಕೊಂಡು ಬರುತ್ತಾರೆ.

ಬಿಬಿಎಂಪಿ ಸೋಂಕಿತೆಯನ್ನು ಪತ್ತೆ ಮಾಡಿದ್ದು ಹೇಗೆ?
ಕೊರೊನಾ ಸೋಂಕಿತರನ್ನು ಪತ್ತೆ ಮಾಡಲು ಸರ್ಕಾರ, ಬಿಬಿಎಂಪಿ ಅಧಿಕಾರಿಗಳು, ಪೊಲೀಸರು ಬಹಳಷ್ಟು ಶ್ರಮಿಸಿದ್ದಾರೆ. ಸರ್ಕಾರವು ಸೋಂಕಿತರನ್ನು ಪತ್ತೆ ಮಾಡಲು ಅನುಸರಿಸಿದ ಕ್ರಮ ನಿಜಕ್ಕೂ ನಂಬಲು ಅಸಾಧ್ಯವಾಗಿದೆ. ನಾನು ಕ್ಯಾಬ್ ಹತ್ತಿದ್ದು ಎಲ್ಲಿ, ನಾನು ಯಾರನ್ನು ಸಂಪರ್ಕಿಸಿದೆ. ನಾನು ಎಲ್ಲೆಲ್ಲಿ ಸಂಚರಿಸಿದ್ದೆ, ಹೀಗೆ ಪ್ರತಿಯೊಂದು ವಿಚಾರವನ್ನು ಪಿನ್ ಟು ಪಿನ್ ಸಂಗ್ರಹಿಸಿದರು. ಎಲ್ಲವನ್ನು ಪತ್ತೆ ಮಾಡಿ ಅದನ್ನು ಪಟ್ಟಿ ಮಾಡಿದರು.

ಮಹಿಳೆ ಜೊತೆ ಸಂಪರ್ಕ ಹೊಂದಿರುವವರ ಕೈಗೆ ಸೀಲ್
ನನ್ನ ಜೊತೆಗೆ ಪ್ರಾಥಮಿಕ ಸಂಪರ್ಕ ಮತ್ತು ದ್ವಿತೀಯ ಸಂಪರ್ಕ ಹೊಂದಿರುವ ಜನರನ್ನು ಪಟ್ಟಿಯನ್ನು ಅಧಿಕಾರಿಗಳೇ ಸಿದ್ಧಪಡಿಸಿದ್ದರು. ಪ್ರಾಥಮಿಕ ಸಂಪರ್ಕದಲ್ಲಿದ್ದ ಜನರ ಕೈಗೆ ಸೀಲ್ ಹಾಕಿ ಗೃಹ ದಿಗ್ಬಂಧನದಲ್ಲಿ ಇರಿಸಲಾಯಿತು. 14 ದಿನಗಳ ಕಾಲ ಮನೆಯಲ್ಲಿಯೇ ಇರುವಂತೆ ಅವರಿಗೆಲ್ಲ ಸೂಚನೆ ನೀಡಲಾಯಿತು.

ಮಹಿಳೆ ಮಾಸ್ಕ್ ಧರಿಸಿದ್ದರೂ ಸಿಸಿ ಕ್ಯಾಮರಾ ಆಧರಿಸಿ ಪತ್ತೆ
ನಾನು ಓಡಾಡಿದ ಸ್ಥಳ, ಭೇಟಿ ನೀಡಿದ ಮನೆ ಮತ್ತು ಅಂಗಡಿಗಳಲ್ಲಿ ಸಿಸಿ ಕ್ಯಾಮರಾಗಳನ್ನು ಪರಿಶೀಲನೆ ನಡೆಸಿದರು. ಆ ಅಂಗಡಿಗಳನ್ನು 14 ದಿನಗಳ ಕಾಲ ಬಂದ್ ಮಾಡಿಸಿದ್ದು, ಮನೆಯಗಳ ಎದುರು ದಿಗ್ಬಂಧನದ ನೋಟಿಸ್ ಹಚ್ಚಿದ್ದಾರೆ. ಆ ಮೂಲಕ ಮುನ್ನೆಚ್ಚರಿಕೆ ಕ್ರಮವನ್ನು ತೆಗೆದುಕೊಳ್ಳಲಾಗಿದೆ.

ಮನೆಯಲ್ಲೇ ಇದ್ದರೆ ಕೊರೊನಾದಿಂದ ಪಾರು
ಕೊರೊನಾ ವೈರಸ್ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ 21 ದಿನಗಳ ಲಾಕ್ ಡೌನ್ ನಿರ್ಧಾರವನ್ನು ಮಾಡಲಾಗಿದೆ. ಇದರಿಂದ ರಾಷ್ಟ್ರ ಮತ್ತು ರಾಜ್ಯದ ಆರ್ಥಿಕ ಪರಿಸ್ಥಿತಿಗೆ ತೊಂದರೆ ಆಗುತ್ತದೆ. ಆದರೆ ಇದಕ್ಕೂ ಹೆಚ್ಚಾಗಿ ಜನರು ಮನೆಯಲ್ಲಿ ಉಳಿದರೆ ಸೋಂಕು ಹರಡುವುದಕ್ಕೆ ಕಡಿವಾಣ ಹಾಕಬಹುದು. ಸೋಂಕಿನಿಂದ ಪಾರಾಗಬಹುದು ಎಂದು ದಿಯಾ ನಾಯ್ಡು ಮನವಿ ಮಾಡಿಕೊಂಡಿದ್ದಾರೆ.

ವೈದ್ಯರಿಗೆ ಧನ್ಯವಾದ ಅರ್ಪಿಸಿದ ದಿಯಾ ನಾಯ್ಡು
ಕೊರೊನಾ ವೈರಸ್ ಮಹಾಮಾರಿ ವಿರುದ್ಧ ಸೆಣಸಾಡುತ್ತಿರುವ ವೈದ್ಯಕೀಯ ಸಿಬ್ಬಂದಿಗೆ ಪ್ರತಿಯೊಬ್ಬರು ಸಹಕಾರ ನೀಡಬೇಕು. ವೈದ್ಯರು, ನರ್ಸ್ ಗಳು, ವಾರ್ಡ್ ಬಾಯ್ ಗಳು ಹೀಗೆ ಎಲ್ಲರಿಗೂ ನಾನು ಧನ್ಯವಾದ ಅರ್ಪಿಸುತ್ತೇನೆ. ಸೋಂಕನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಇವರ ಸೇವೆ ಅಗಾಢವಾಗಿದೆ ಅಂತಾರೆ ದಿಯಾ ನಾಯ್ಡು.

ಒಗ್ಗಟ್ಟಿನಿಂದ ಸಾಂಕ್ರಾಮಿಕ ಪಿಡುಗು ಹೋಗಲಾಡಿಸಲು ಮನವಿ
ಕೊರೊನಾ ವೈರಸ್ ಒಂದು ಸಾಂಕ್ರಾಮಿಕ ಪಿಡುಗು ಎಂದು ಅಂತಾರಾಷ್ಟ್ರೀಯ ಆರೋಗ್ಯ ಸಂಸ್ಥೆಯೇ ಘೋಷಿಸಿದೆ. ಇಂಥ ಸಂದರ್ಭದಲ್ಲಿ ಮಹಾಮಾರಿಯಿಂದ ದೇಶವನ್ನು ರಕ್ಷಿಸಲು ಜಾತಿ-ಧರ್ಮ, ಮೇಲು-ಕೀಳು, ಉಳ್ಳವರು-ಇಲ್ಲದವರು, ರಾಜಕಾರಣ ಹೀಗೆ ಎಲ್ಲವನ್ನೂ ಬಡಿಗೊತ್ತಿ ಭಾರತೀಯರೆಲ್ಲ ಕೈ ಜೋಡಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
-
Gold Rate: ಆಭರಣ ಪ್ರಿಯರ ಗಮನಕ್ಕೆ; ಮಾರುಕಟ್ಟೆಯಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ ಗೊತ್ತಾ? ಇಲ್ಲಿದೆ ಮಾಹಿತಿ -
ಮಕ್ಕಳನ್ನ ಫ್ಯಾಕ್ಟರಿಯಂತೆ ಹೆರುತ್ತಾರೆ, ಪೋಷಿಸುವ ತಾಕತ್ತಿದ್ರೆ ಮಾತ್ರ ಮಕ್ಕಳು ಮಾಡ್ಕೊಳ್ಳಿ: ನಟಿ ವರಲಕ್ಷ್ಮಿ ಶರತ್ಕುಮಾರ್ -
Viral Video: ಶಾಲಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರ ಟವಲ್ ಡ್ಯಾನ್ಸ್: ಚರ್ಚೆ ಹುಟ್ಟುಹಾಕಿದ ವೈರಲ್ ವಿಡಿಯೋ -
Viral Video: ಪೋಷಕರಿಗೆ ಹೊಸ ಕಾರು ಗಿಫ್ಟ್ ಮಾಡಿದ ಹೆಣ್ಣುಮಕ್ಕಳು, ನೆಟ್ಟಿಗರ ಹೃದಯ ಗೆದ್ದ ಈ ವಿಡಿಯೋ -
Anushka Shetty Marriage: ಬೆಂಗಳೂರಿನ ಖ್ಯಾತ ಉದ್ಯಮಿ ಜೊತೆ ನಟಿ ಅನುಷ್ಕಾ ಶೆಟ್ಟಿ ಮದುವೆ, ಈ ವರ್ಷದಲ್ಲೇ ಮುಹೂರ್ತ: ವರದಿ -
1 ರೂಪಾಯಿಗೆ 1 ಲೀಟರ್ ಹಾಲು: ಫ್ಲಿಪ್ಕಾರ್ಟ್ ವಿರುದ್ಧ ಸಿಡಿದೆದ್ದ ಡಿ.ಕೆ. ಸುರೇಶ್; ಪ್ರಧಾನಿ ಮೋದಿಗೆ ದೂರು -
ಬಿಜೆಪಿಯಿಂದ ನಟ ವಿಜಯ್ಗೆ ಡಿಸಿಎಂ ಹುದ್ದೆ, 80 ಸೀಟುಗಳ ಆಫರ್; ತಮಿಳುನಾಡು ಚುನಾವಣೆಗೆ ಹೊಸ ಮೈತ್ರಿ ಲೆಕ್ಕಾಚಾರ -
Karnataka Weather: ಸಿಲಿಕಾನ್ ಸಿಟಿಯಲ್ಲಿ ಹೆಚ್ಚಿದ ತಾಪಮಾನ; ಕರಾವಳಿ, ಮಲೆನಾಡಿನಲ್ಲಿ ಇಂದು ಮಳೆಯಾಗುವ ಸಾಧ್ಯತೆ -
LPG New Rule: ಎಲ್ಪಿಜಿ ಹೊಸ ನಿಯಮ: ಪಿಎನ್ಜಿ ಸಂಪರ್ಕ ಇದ್ದರೆ ಇನ್ನು ಮುಂದೆ ಸಿಲಿಂಡರ್ ಸಿಗಲ್ಲ -
Government Employees: ಪಶ್ಚಿಮ ಬಂಗಾಳ ಸರ್ಕಾರಿ ನೌಕರರಿಗೆ ಸಿಎಂ ಮಮತಾ ಬ್ಯಾನರ್ಜಿ ಬಂಪರ್ ಕೊಡುಗೆ -
ರಾಜ್ಯದಲ್ಲಿ ಕಮರ್ಷಿಯಲ್ ಉದ್ದೇಶಕ್ಕೆ ಗೃಹಬಳಕೆ LPG ಸಿಲಿಂಡರ್ ಬಳಸಿದವರ ಮೇಲೆ ಅಧಿಕಾರಿಗಳ ಖಡಕ್ ದಾಳಿ -
ಬೆಂಗಳೂರು 2ನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ vs ಹೊಸೂರು ಏರ್ಪೋರ್ಟ್: ಯೋಜನೆ ಯಾವ ಹಂತದಲ್ಲಿದೆ












Click it and Unblock the Notifications