Get Updates
Get notified of breaking news, exclusive insights, and must-see stories!

"ಈಗಲ್ಲದಿದ್ದರೆ ಇನ್ಯಾವಾಗ ಹೇಳಿ?": ದಿನದ ಕೂಲಿ ನಂಬಿ ಬದುಕುವರ ಪ್ರಶ್ನೆ

ಕೊರೊನಾ ಲಾಕ್ ಡೌನ್ ನಿಂದ ನಿಮಗೇನಾದರೂ ಸಮಸ್ಯೆಯಾಗಿದೆಯಾ? - ಈ ಪ್ರಶ್ನೆಯನ್ನು ಪೂರ್ತಿ ಕೇಳುವಷ್ಟರಲ್ಲಿ ಜೀವ ಇಷ್ಟಾಗಿತ್ತು. ಏಕೆಂದರೆ, ಇದು ಮಾತುಕತೆಯ ಆರಂಭಕ್ಕೆ ಮುನ್ನುಡಿಯಂತೆಯೇ ಹೊರತು ಏನನ್ನೋ ಚುಚ್ಚಿ ಕೇಳುವ ಉದ್ದೇಶ ನಮ್ಮದಾಗಿರಲಿಲ್ಲ.

ಆದರೆ, "ಈಗಲ್ಲದಿದ್ದರೆ ಇನ್ಯಾವಾಗ ಹೇಳಿ?" ಎಂಬ ಎದುರಿನವರ ಆ ಮರು ಪ್ರಶ್ನೆ ಮತ್ತೆ ಮತ್ತೆ ಕಾಡುತ್ತಲೇ ಇದೆ.

ಭಾರತದಲ್ಲಿನ ಮದುವೆ ಕಾರ್ಯಕ್ರಮಗಳ ಬಗ್ಗೆ ಬರೆದರೆ ಅದೆಷ್ಟಾದರೂ ಕಡಿಮೆಯೇ. ಅದು ನಮ್ಮ ಸಂಸ್ಕೃತಿ. ಎಲ್ಲೆಲ್ಲಿಂದಲೋ ಬಂದು ಇಲ್ಲಿ ಮದುವೆ ಆಗುವವರಿದ್ದಾರೆ. ಮಾರ್ಚ್, ಏಪ್ರಿಲ್, ಮೇ... ಈ ಮೂರು ತಿಂಗಳಲ್ಲಿ ಉಳಿದ ಒಂಬತ್ತು ತಿಂಗಳಲ್ಲಿ ಕಾಣಲಾರದಂಥ ಬಿರುಸಿನ ಚಟುವಟಿಕೆ ಇರುತ್ತದೆ.

Recommended Video

      Nirmala Sitharaman:FM extends Income Tax, GST return deadlines; waives off late fee, penalty

      ಗಿಜಿಗಿಡುವ ಸೀರೆ ಅಂಗಡಿ, ಆಭರಣ ಮಳಿಗೆಗಳು, ಬುಕ್ ಆದ ಛತ್ರಗಳು, ಅಡುಗೆಯವರು ಡಿಮ್ಯಾಂಡಪ್ಪೋ ಡಿಮ್ಯಾಂಡು, ನಾದಸ್ವರದವರು, ಐಸ್ ಕ್ರೀಂ ಮಾರಾಟ ಮಾಡುವವರು, ಬೀಡಾ ಅಂಗಡಿಯವರು, ಶಾಮಿಯಾನ- ಪಾತ್ರೆಗಳನ್ನು ಬಾಡಿಗೆಗೆ ನೀಡುವವರು, ಜನರೇಟರ್ ಗಳನ್ನು ಬಾಡಿಗೆಗೆ ನೀಡುವವರು, ಫ್ಲವರ್ ಡೆಕೊರೇಷನ್ ಮಾಡುವವರು, ಫೋಟೋಗ್ರಾಫರ್ ಗಳು, ಬ್ಯೂಟಿ ಪಾರ್ಲರ್ ನವರು, ಮೆಹೆಂದಿ ಹಾಕುವವರು...

      ಮದುವೆಗೆ ಬಂದವರಿಗಾಗಿ ಹೋಟೆಲ್ ಗಳ ಬುಕ್ಕಿಂಗ್, ಪಾರ್ಟಿ ನೆಪದಲ್ಲಿ ಮದ್ಯ ಮಾರಾಟ, ಇನ್ನು ಮದುವೆ ನಂತರದ ಹನಿಮೂನ್ ಪ್ಯಾಕೇಜ್... ಎಲ್ಲ ಎಲ್ಲವೂ ಸ್ತಬ್ಧ. ಈ ಮೇಲ್ಕಂಡ ಕೆಲಸದವರ ಪೈಕಿ ಬಹುತೇಕರಿಗೆ ತಿಂಗಳ ಸಂಬಳ ಅಂತ ಇರುವುದಿಲ್ಲ. ಸೀಸನ್ ನಲ್ಲಿ ಏನು ದುಡಿದುಕೊಂಡಿರುತ್ತಾರೋ ಅದರಲ್ಲೇ ವರ್ಷದ ಉಳಿದ ಅವಧಿಯಲ್ಲಿ ಜೀವನ ನಡೆಸುವುದಕ್ಕೆ ಧೈರ್ಯ.

      ಈ ಬಗ್ಗೆ ಬೆಂಗಳೂರಿನಲ್ಲಿ ಇರುವ ಅಡುಗೆ ಕಾಂಟ್ರಾಕ್ಟರ್ ಅನಿಲ್ ಅವರನ್ನು ಒನ್ ಇಂಡಿಯಾ ಕನ್ನಡದಿಂದ ಮಾತನಾಡಿಸಲಾಗಿದೆ. ಏನು ಪರಿಸ್ಥಿತಿ ಎಂಬುದನ್ನು ಅವರ ಮಾತಿನಲ್ಲೇ ಕೇಳಿ.

       ಮಾರ್ಚ್- ಏಪ್ರಿಲ್- ಮೇ ಬಿಡುವಿಲ್ಲದ ದುಡಿಮೆ

      ಮಾರ್ಚ್- ಏಪ್ರಿಲ್- ಮೇ ಬಿಡುವಿಲ್ಲದ ದುಡಿಮೆ

      ನಮಗೆ ಮಾರ್ಚ್ ನಿಂದ ಸೀಸನ್ ಆರಂಭವಾಗುತ್ತದೆ. ಮಾರ್ಚ್- ಏಪ್ರಿಲ್- ಮೇ ಈ ಮೂರು ತಿಂಗಳು ಬಿಡುವಿಲ್ಲದೆ ದುಡಿತೀವಿ. ಆ ನಂತರದ ತಿಂಗಳಲ್ಲಿ ಕೆಲಸ ಅಂತ ಬಂದರೂ ದೊಡ್ಡ ಮಟ್ಟದ ದುಡಿಮೆ ಸಾಧ್ಯವಾಗಲ್ಲ. ಈ ವರ್ಷ ಮಾರ್ಚ್ ಶುರುವಿನಿಂದಲೇ ಕೊರೊನಾದ ಹೊಡೆತ ಕಾಣಲು ಆರಂಭ ಆಯಿತು. ಮಾರ್ಚ್ 15ನೇ ತಾರೀಕಿನಿಂದ ಶುರುವಾಗಿ ಮೇ ತಿಂಗಳ ಕೊನೆ ತನಕ ಬಹುತೇಕ ಎಲ್ಲ ದಿನಗಳಲ್ಲಿ ಕೆಲಸ ಬಂದಿತ್ತು. ನಾನು ತೆಗೆದುಕೊಳ್ಳುವುದು ಕಾಂಟ್ರ್ಯಾಕ್ಟ್. ಅಂದರೆ ಪೂರ್ತಿ ಜವಾಬ್ದಾರಿ ವಹಿಸಿಕೊಳ್ತೇನೆ. ಒಂದು ಸಾಧಾರಣ ಮಟ್ಟದ ಒಂದೂವರೆ ದಿನದ ಮದುವೆಯಿಂದ ಪೂರ್ತಿ ಮೂರು ದಿನದ ಕಾರ್ಯಕ್ರಮದ ತನಕ ವಹಿಸಿಕೊಳ್ಳುತ್ತೇನೆ. ಈಗೆಲ್ಲ ಎರಡು- ಎರಡೂವರೆ ಲಕ್ಷದ ಕಡಿಮೆ ಒಂದು ಕಾಂಟ್ರ್ಯಾಕ್ಟ್ ವಹಿಸಿಕೊಳ್ಳುವುದಕ್ಕೆ ಆಗಲ್ಲ. ಅಂದರೆ ಅಡುಗೆಯವರ ಕೂಲಿ, ಆಹಾರ ಪದಾರ್ಥಗಳ ಬೆಲೆ ಇತ್ಯಾದಿಗಳೆಲ್ಲ ದುಬಾರಿಯಾಗಿವೆ. ಹದಿನೈದು ಕೆಲಸ ನಿಂತಿದೆ ಅಂತಾದರೆ ಎಷ್ಟು ಮೊತ್ತದ ಕಾಂಟ್ರ್ಯಾಕ್ಟ್ ನೀವೇ ಅಂದಾಜು ಮಾಡಿ.

       ನಾನಾ ಮುಹೂರ್ತ ಇದ್ದವು

      ನಾನಾ ಮುಹೂರ್ತ ಇದ್ದವು

      ಇದರಲ್ಲಿ ಮದುವೆ, ಉಪನಯನ, ಬೀಗರ ಔತಣ, ನಿಶ್ಚಿತಾರ್ಥ, ನಾಮಕರಣ ಹೀಗೆ ನಾನಾ ಮುಹೂರ್ತ ಇದ್ದವು. ಇನ್ನು ಅಡುಗೆ ಜತೆಗೆ ಬಂದವರಿಗೆ ಕೊಡುವುದಕ್ಕೆ, ಅಲಂಕಾರಕ್ಕೆ ಇಡುವುದಕ್ಕೆ ಉಂಡೆ- ಚಕ್ಕುಲಿ ಮತ್ತಿತರ ತಿಂಡಿಗಳನ್ನು ಮಾಡುವವರ ಬೇರೆ ಇರುತ್ತಾರೆ. ಅವರಿಗೆ ಕನಿಷ್ಠ ಹತ್ತು ಸಾವಿರ ರುಪಾಯಿಯಿಂದ ವ್ಯವಹಾರ ಶುರುವಾಗುತ್ತದೆ. ಪಾತ್ರೆ ತೊಳೆಯುವವರಿಗೆ ಹಾಗೂ ಊಟದ ನಂತರ ಸ್ಥಳ ಸ್ವಚ್ಛ ಮಾಡುವವರಿಗೆ ಬಹಳ ಡಿಮ್ಯಾಂಡ್ ಇದೆ. ಅವರಿಗೆ ದಿನದ ಲೆಕ್ಕದಲ್ಲೇ ಕೂಲಿ ಕೊಡ್ತೀವಿ. ಹೆಣ್ಣುಮಕ್ಕಳೇ ಈ ಕೆಲಸಕ್ಕೆ ಬರುತ್ತಾರೆ. ಮನೆಗಳಲ್ಲಿ ಅವರ ದುಡಿಮೆಯನ್ನು ನಂಬಿಕೊಂಡು ಮೂರರಿಂದ ಐದು ಮಂದಿ ಇರುತ್ತಾರೆ. ಆವರಿಗೆ ಈ ಕೆಲಸ ಮಾಡುವುದರ ಮತ್ತೊಂದು ಅನುಕೂಲ ಏನೆಂದರೆ, ಕೂಲಿ ಜತೆಗೆ ಊಟ- ತಿಂಡಿ, ಕಾಫಿ ಕಳೆಯುತ್ತದೆ. ಮನೆಗೂ ತೆಗೆದುಕೊಂಡು ಹೋಗಬಹುದು. ಹಾಗಂತ ಎಲ್ಲರಿಗೂ ಆ ಅವಕಾಶ ಇರುತ್ತದೆ ಅಂತಲ್ಲ. ಆದರೆ ಬಹುತೇಕರಿಗೆ ಅದು ಸಾಧ್ಯ ಇದೆ. ಈಗಿನ ಸನ್ನಿವೇಶದಲ್ಲಿ, ಅದರಲ್ಲೂ ಸೀಸನ್ ನಲ್ಲಿ ಏನು ಮಾಡ್ತಾರೋ?

       ನಮಗೂ ಕಮಿಟ್ ಮೆಂಟ್ ಇರುತ್ತದಲ್ವಾ?

      ನಮಗೂ ಕಮಿಟ್ ಮೆಂಟ್ ಇರುತ್ತದಲ್ವಾ?

      ಹೌಸಿಂಗ್ ಲೋನ್, ಕಾರು ಲೋನ್ ಹಾಗೂ ಪರ್ಸನಲ್ ಲೋನ್, ಚೀಟಿ ಕಟ್ಟೋದು... ಹೀಗೆ ಪ್ರತಿ ತಿಂಗಳು ಹಣ ಹೊಂದಿಸಲೇ ಬೇಕು. ಇನ್ನೊಂದು ವಿಷಯ ಗೊತ್ತಾ? ನಮ್ಮದು ನೆಗೆಟಿವ್ ಪ್ರೊಫೈಲ್. ಅಂದರೆ ಹಲವು ಬ್ಯಾಂಕ್ ಗಳಲ್ಲಿ ಅಡುಗೆ ಕೆಲಸ ಮಾಡುವವರಿಗೆ ಸಾಲ ನೀಡಲ್ಲ. ಹೆಚ್ಚಿನ ಬಡ್ಡಿಗೆ ಸಾಲ ತರೋದು ನಮಗೆ ಅನಿವಾರ್ಯ. ನಮ್ಮಲ್ಲೇ ಕೆಲವರಂತೂ ತಿಂಗಳಿಗೆ ಐದು ಪರ್ಸೆಂಟ್ ಬಡ್ಡಿಗೆ ಸಾಲ ಪಡೆದವರಿದ್ದಾರೆ. ಏನು ಧೈರ್ಯ ಅಂದರೆ, ಮೂರು ತಿಂಗಳು ಕೆಲಸ ಇರುತ್ತದೆ. ದುಡಿದು, ತೀರಿಸಬಹುದು. ಅಡುಗೆ ಕೆಲಸಕ್ಕೆ ಜನರೇ ಸಿಗುವುದು ಕಷ್ಟವಾಗಿರುವಾಗ ನಮಗೆ ಕೆಲಸಕ್ಕೆ ಕರೆಯದೇ ಇರುವುದಕ್ಕೆ ಸಾಧ್ಯವಾ ಅಂತೊಂದು ಧೈರ್ಯ. ಇನ್ನು ಯಾವುದೇ ಕಾರ್ಯಕ್ರಮ ಇದ್ದರೂ ನಾಲ್ಕು ಜನರನ್ನು ಊಟಕ್ಕೆ ಹಾಕುವ ಪದ್ಧತಿ ನಮ್ಮಲ್ಲಿ ಇರುವಾಗ ಸಮಸ್ಯೆ ಇಲ್ಲ ಅಂತಲೂ ಧೈರ್ಯ.

       ಆಡೋ ಕೋಳಿಯ ಕಾಲು ಮುರಿದರಂತೆ

      ಆಡೋ ಕೋಳಿಯ ಕಾಲು ಮುರಿದರಂತೆ

      ಹಾಗಂತ ಈಗಿನ ಸನ್ನಿವೇಶವನ್ನು, ಸರ್ಕಾರ ಮಾಡುವ ನಿಯಮವನ್ನು ನಾವು ದೂರಲ್ಲ. ಅಡುಗೆಯವರ ಪೈಕಿ ಬಹುತೇಕರು ಯಾವುದೇ ಇನ್ಷೂರೆನ್ಸ್ ಮಾಡಿಸಿಲ್ಲ. ಇನ್ನು ನೂರಾರು- ಸಾವಿರಾರು ಮಂದಿ ಸೇರುವ ಜಾಗದಲ್ಲಿ ಇದ್ದು, ಕಾಯಿಲೆ ಹರಡಿದರೆ ಅದರ ಪರಿಣಾಮ ಭೀಕರವಾಗುತ್ತದೆ. "ಆಡೋ ಕೋಳಿಯ ಕಾಲು ಮುರಿದರಂತೆ" ಅಂತಾಗುತ್ತದೆ ನಮ್ಮ ಸ್ಥಿತಿ. ಸರ್ಕಾರದಿಂದ ಏನೇನೋ ಘೋಷಣೆಗಳನ್ನು ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಮೂರು ತಿಂಗಳು ಬ್ಯಾಂಕ್ ಗಳಲ್ಲಿನ ಸಾಲದ ಮೇಲಿನ ಬಡ್ಡಿಯನ್ನು ಮನ್ನಾ ಮಾಡಿಸಿದರೆ ಹಾಗೂ ಈ ಅವಧಿಯಲ್ಲಿ ಸಾಲ ಮರುಪಾವತಿ ಮಾಡುವುದರಿಂದ ವಿನಾಯಿತಿ ಕೊಡಿಸಿದರೆ ಅನುಕೂಲ ಆಗುತ್ತದೆ. ಸಾಲ ಪೂರ್ತಿ ಮನ್ನಾ ಮಾಡಿ ಅಂತ ನಾವೂ ಕೇಳಲ್ಲ. ಆದರೆ ಆದಾಯವೇ ಇಲ್ಲದ ಸಂದರ್ಭದಲ್ಲಿ ಎಲ್ಲಿಂದ ದುಡ್ಡು ತರೋದು? ಮನೆ ಕೂಡ ನಡೆಸಬೇಕು. ಇನ್ನು ನಾವು ಕೂಡ, ತಕ್ಷಣವೇ ಈ ಲಾಕ್ ಡೌನ್ ತೆಗೆಯಬೇಕು ಅಂತ ಹೇಳಲ್ಲ. ಏಕೆಂದರೆ, ಇಟಲಿ, ಇರಾನ್, ದಕ್ಷಿಣ ಕೊರಿಯಾದಲ್ಲೆಲ್ಲ ಏನಾಗಿದೆ ಅಂತ ನೋಡ್ತಿದ್ದೀವಿ. ವಿಶ್ವದ ಬೇರೆಲ್ಲೂ ಹಾಗಾಗಬಾರದು. "ಸರ್ಕಾರದ ಮಾತನ್ನು ನಾವು ಈಗಲ್ಲದಿದ್ದರೆ ಇನ್ಯಾವಾಗ, ಇನ್ನೆಂಥ ಸಂದರ್ಭದಲ್ಲಿ ಕೇಳಬೇಕು?"

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+