ಜಿನ್ನಾ ಕನಸಿನ ಪಾಕಿಸ್ತಾನ ಕಟ್ಟುವ ಮಾತನಾಡಿದ ಇಮ್ರಾನ್, ಹಾಗಿದ್ರೆ ಅದೇನು?
"ಪಾಕಿಸ್ತಾನದ ಬಗ್ಗೆ ಮಹಮ್ಮದ್ ಅಲಿ ಜಿನ್ನಾ ಅವರು ಕಂಡಿದ್ದ ಕನಸನ್ನು ನನಸು ಮಾಡಬೇಕು ಅನ್ನೋದು ನನ್ನಾಸೆ" ಎಂದು ಇಮ್ರಾನ್ ಖಾನ್ ಹೇಳಿದ್ದಾರೆ. ಬಹುತೇಕ ಅವರೇ ಆ ದೇಶದ ಮುಂದಿನ ಪ್ರಧಾನಿ ಎಂಬುದು ಖಾತ್ರಿಯಾಗಿದೆ. ಗುರುವಾರದಂದು ಇಮ್ರಾನ್ ಖಾನ್ ತಮ್ಮ ಮನದ ಮಾತನ್ನು ಹೇಳಿದ್ದಾರೆ.
ಜುಲೈ ಇಪ್ಪತ್ತೈದನೇ ತಾರೀಕು ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆ ಆಯಿತು. ಆ ನಂತರ ಬಹಳ ನಿಧಾನವಾಗಿ ಮತ ಎಣಿಕೆ ನಡೆದು, ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ್ ತೆಹ್ರೀಕ್ ಇ ಇನ್ಸಾಫ್ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿ, ವಿರೋಧ ಪಕ್ಷಗಳು ಈ ಫಲಿತಾಂಶದ ವಿರುದ್ಧ ನಾನಾ ಆರೋಪಗಳನ್ನು ಮಾಡಿದವು.
ಪಾಕ್ ನಲ್ಲಿ ಇಮ್ರಾನ್ ಖಾನ್ ಜಯ: ಕಿಚಡಿ ಸರ್ಕಾರ ಅನಿವಾರ್ಯ!
ಅದೆಲ್ಲ ಇರಲಿ, ಇದೀಗ ಇಮ್ರಾನ್ ಖಾನ್ ಮಾತನಾಡುತ್ತಿರುವ ಜಿನ್ನಾ ಕಂಡಿದ್ದ ಪಾಕಿಸ್ತಾನ ದೇಶ ಯಾವುದು? ಆ ದೇಶ ಹೇಗಿರಬೇಕು ಎಂದು ಪಾಕಿಸ್ತಾನದ ಸ್ಥಾಪಕ ಬಯಸಿದ್ದರು? ಆ ಕನಸು ಈಡೇರುವುದೋ ಬಿಡುವುದೋ ಗೊತ್ತಿಲ್ಲ. ಆದರೆ ಆ ಕನಸು ಎಂಬುದನ್ನು ಹೇಳುವ ವರದಿಯಿದು.
ನಿಮ್ಮ ನಂಬಿಕೆ- ಆಚರಣೆಗೆ ಸ್ವತಂತ್ರರು
ಜನಜನಿತವಾದ ದೃಷ್ಟಿಕೋನದ ಪ್ರಕಾರ, ಪಾಕಿಸ್ತಾನವು ಮುಸ್ಲಿಂ ದೇಶವಾಗಿ, ಇಸ್ಲಾಂ ಮೇಲಿನ ನಂಬಿಕೆ ಮೇಲೆ ನಡೆಯಬೇಕು ಅನ್ನೋದು ಜಿನ್ನಾ ಉದ್ದೇಶವಾಗಿತ್ತು. ಆದರೆ ಆಗಸ್ಟ್ 11, 1947ರಲ್ಲಿ ಜಿನ್ನಾ ಹೇಳಿದ್ದು ಹೀಗಿತ್ತು: ನೀವು ದೇವಸ್ಥಾನಗಳಿಗೆ ಹೋಗಬೇಕೆಂದರೂ ಸ್ವತಂತ್ರರು. ಮಸೀದಿಗೆ ಅಥವಾ ಪಾಕಿಸ್ತಾನದಲ್ಲಿ ಇನ್ಯಾವುದೇ ಶ್ರದ್ಧಾ ಕೇಂದ್ರಗಳಿಗೆ ಹೋಗಬಹುದು. ನೀವು ಯಾವುದೇ ಧರ್ಮ, ಜಾತಿ ಅಥವಾ ಮತಕ್ಕೆ ಸೇರಿದವರಾಗಿರಬಹುದು. ಅದು ಸರಕಾರಕ್ಕೆ ಸಂಬಂಧಿಸಿದ ವಿಷಯವಲ್ಲ ಎಂದಿದ್ದರು.
ಅಡ್ವಾಣಿ ಅವರು ಪ್ರಸ್ತಾಪಿಸಿದ್ದ ಜಿನ್ನಾ ವಿಶೇಷತೆ
2005ರಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ ಮಾಜಿ ಉಪಪ್ರಧಾನಿ ಎಲ್.ಕೆ.ಅಡ್ವಾಣಿ ಅವರು ಸಂದರ್ಶಕರ ಪುಸ್ತಕದಲ್ಲಿ ಬರೆದಿದ್ದು ಈ ಅಂಶವನ್ನು ದೃಷ್ಟಿಯಲ್ಲಿಟ್ಟುಕೊಂಡೇ ಇರಬೇಕು. ಅಂದು ಅಡ್ವಾಣಿ ಏನು ಬರೆದಿದ್ದರು ಅಂದರೆ, ಕೆಲವು ವ್ಯಕ್ತಿಗಳು ಇತಿಹಾಸದಲ್ಲಿ ಅಳಿಸಲಾಗದ ಮೊಹರು ಉಳಿಸಿ ಹೋಗುತ್ತಾರೆ. ಆದರೆ ಕೆಲವರು ಇತಿಹಾಸವನ್ನೇ ಸೃಷ್ಟಿಸುತ್ತಾರೆ. ಮಹ್ಮದ್ ಅಲಿ ಜಿನ್ನಾ ಅವರು ಇತಿಹಾಸ ಸೃಷ್ಟಿಸಿದ ಅಪರೂಪದ ವ್ಯಕ್ತಿತ್ವದವರು ಎಂದಿದ್ದರು.
ನಾವು ಅವರನ್ನು ತಪ್ಪಾಗಿ ಅರ್ಥೈಸಿದ್ದೆವು
ಇನ್ನು ಜಿನ್ನಾ ಬಗ್ಗೆ ತಮ್ಮ ಅಭಿಪ್ರಾಯ ದಾಖಲಿಸಿದ ಬಿಜೆಪಿಯ ಮತ್ತೊಬ್ಬ ಪ್ರಮುಖ ನಾಯಕರಾದ ಜಸ್ವಂತ್ ಸಿಂಗ್, ಪಾಕಿಸ್ತಾನದ ಸ್ಥಾಪಕ ಜಿನ್ನಾ ಅವರನ್ನು ನಾವು ತಪ್ಪಾಗಿ ಅರ್ಥೈಸಿದೆವು ಎಂದು ಟಿವಿ ಚಾನೆಲ್ ವೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ತಿಳಿಸಿದ್ದರು. ಅಲ್ಲಿಗೆ ಬಿಜೆಪಿಯ ಇಬ್ಬರು ಪ್ರಮುಖ ನಾಯಕರು ಹತ್ತಿರಹತ್ತಿರ ಒಂದೇ ರೀತಿಯ ಅಭಿಪ್ರಾಯವನ್ನು ತಿಳಿಸಿದಂತಾಗಿತ್ತು.
ಧರ್ಮ ನಿಂದೆ ಕಾನೂನಿನ ಬೆಂಬಲಕ್ಕೆ ಇಮ್ರಾನ್ ಖಾನ್
ಈಗ ಇಮ್ರಾನ್ ಖಾನ್ ಹೇಳುತ್ತಿರುವುದೇನು ಗೊತ್ತೆ? ನಾನು ಪಾಕಿಸ್ತಾನದಲ್ಲಿ ಸದ್ಯಕ್ಕೆ ಇರುವ ಧರ್ಮನಿಂದೆಯ ಕಾನೂನು ಸಂಪೂರ್ಣ ಬೆಂಬಲಿಸುತ್ತೇನೆ ಎಂದಿದ್ದಾರೆ. ಪಾಕಿಸ್ತಾನದಲ್ಲಿ ಧರ್ಮ ನಿಂದೆ ಅಪರಾಧಕ್ಕೆ ಒಂದು ಕಾನೂನಿದೆ. ಆದರ ಅನ್ವಯವಾಗಿ ಗರಿಷ್ಠ ಪ್ರಮಾಣ ಅಂದರೆ ಗಲ್ಲು ಶಿಕ್ಷೆ ವಿಧಿಸಬಹುದು. ಅಂಥ ವಿವಾದಿತ ಕಾನೂನು ಬೆಂಬಲಕ್ಕೆ ಇಮ್ರಾನ್ ನಿಂತಿದ್ದಾರೆ. ಇನ್ನು ಅಲ್ಲಿನ ಸೈನ್ಯದ ಬಗ್ಗೆ, ಪ್ರಜಾತಾಂತ್ರಿಕ ಸರಕಾರ ನೈತಿಕ ಅಧಿಕಾರದಿಂದ ಆಡಳಿತ ನಡೆಸುತ್ತದೆ. ಮತ್ತು ನಿಮಗೆ ನೈತಿಕ ಅಧಿಕಾರ ಇಲ್ಲ ಅಂದರೆ, ಆಗ ತೋಳ್ಬಲ ಇರುವವರು ತಮ್ಮ ಪ್ರವೇಶ ಮಾಡುತ್ತಾರೆ ಎಂದಿದ್ದಾರೆ.
ಪಾಕಿಸ್ತಾನ ಯಾವ ರೀತಿಯಲ್ಲೂ ಬದಲಾಗಲ್ಲ
ಇಮ್ರಾನ್ ಖಾನ್ ಕೈಗೆ ಅಧಿಕಾರ ಸಿಕ್ಕ ತಕ್ಷಣ ಭಾರತ ಹಾಗೂ ಪಾಕಿಸ್ತಾನದ ಮಧ್ಯದ ಸಂಬಂಧ ಸುಧಾರಿಸಬಹುದು ಎಂಬ ನಿರೀಕ್ಷೆ ಏನೂ ಕಾಣುತ್ತಿಲ್ಲ. ಈ ಬಗ್ಗೆ ಭಾರತದ ಕೇಂದ್ರ ಸಚಿವ ಆರ್.ಕೆ.ಸಿಂಗ್ ಮಾತನಾಡಿ, ಭಾರತದ ಕಡೆಯಿಂದ ನೋಡಿದರೆ ಯಾವುದೇ ದೊಡ್ಡ ವ್ಯತ್ಯಾಸ ಕಾಣುವುದಿಲ್ಲ. ಭಯೋತ್ಪಾದನೆಯನ್ನು ದೇಶದ ಒಳಗೆ ಕಳಿಸುವಂಥ ಅವರ ಆಲೋಚನೆಗಳಲ್ಲಿ ಯಾವುದೇ ಬದಲಾವಣೆ ಆಗಲ್ಲ. ಈ ನೀತಿಗಳನ್ನು ಅಲ್ಲಿನ ಸೈನ್ಯ ನಿರ್ಧರಿಸುತ್ತದೆ ಮತ್ತು ಅವರು ಅದನ್ನೇ ಈಗಲೂ ಮಾಡ್ತಾರೆ.