ಸಂಪುಟ ನೋಡಿದ್ರೆ ಖಾತ್ರಿ, ಕಾಂಗ್ರೆಸ್ ರಿಮೋಟೂ ದೇವೇಗೌಡರ ಕಿಸೆಯಲ್ಲಿ!
ಮಹಾಭಾರತದ ಯುದ್ಧ ಮುಗಿದ ನಂತರ ಧೃತರಾಷ್ಟ್ರನನ್ನು ನೋಡಲು ಪಾಂಡವರು ಬರುತ್ತಾರೆ. ಜತೆಗೆ ಕೃಷ್ಣನೂ ಇರುತ್ತಾನೆ. ಧೃತರಾಷ್ಟ್ರನು ಬಹಳ ಪ್ರೀತಿ ತೋರ್ಪಡಿಸಿ, ಒಮ್ಮೆ ಭೀಮನನ್ನು ಆಲಂಗಿಸಿಕೊಳ್ಳುವ ಇಚ್ಛೆ ವ್ಯಕ್ತಪಡಿಸುತ್ತಾನೆ. ಆಗ ಕೃಷ್ಣ ಲೋಹದ ವಿಗ್ರಹವೊಂದನ್ನು ಅವನ ಮುಂದೆ ನಿಲ್ಲಿಸಿ, ಭೀಮ ನಿನ್ನೆದುರು ಇದ್ದಾನೆ ಎನ್ನುತ್ತಾನೆ.
ಆಗ ಲೋಹದ ವಿಗ್ರಹವನ್ನು ಧೃತರಾಷ್ಟ್ರ ಆಲಂಗಿಸಿಕೊಳ್ಳುತ್ತಾನೆ. ಅದು ಪುಡಿ ಪುಡಿ ಆಗಿಬಿಡುತ್ತದೆ. ಅಂದರೆ ತನ್ನ ಮಕ್ಕಳನ್ನೆಲ್ಲ ಕೊಂದ ಭೀಮನ ಬಗ್ಗೆ ಆತನಿಗೆ ಅಂಥ ಸಿಟ್ಟಿರುತ್ತದೆ. ಅದನ್ನು ಮುಂಚೆಯೇ ನಿರೀಕ್ಷಿಸಿದ್ದ ಕೃಷ್ಣನು ಲೋಹದ ವಿಗ್ರಹದ ವ್ಯವಸ್ಥೆ ಮಾಡಿರುತ್ತಾನೆ. ಇಂಥ ನಡವಳಿಕೆಯು 'ಧೃತರಾಷ್ಟ್ರ ಆಲಿಂಗನ' ಅಂತಲೇ ಜಾಹೀರು. ಮೇಲ್ನೋಟಕ್ಕೆ ಪ್ರೀತಿ ತೋರ್ಪಡಿಸಿ, ಆಲಿಂಗನ ಮಾಡಿಕೊಂಡು ಎದುರಾಳಿಯನ್ನು ಇಲ್ಲವಾಗಿಸುವ ತಂತ್ರವಿದು.
ಕರ್ನಾಟಕದಲ್ಲಿ ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರಕಾರದಲ್ಲಿ ಈಗ ನಡೆಯುತ್ತಿರುವ ಸಂಪುಟ ವಿಸ್ತರಣೆ ಕೂಡ 'ಧೃತರಾಷ್ಟ್ರ ಆಲಿಂಗನ'ವೇ ಎಂದು ಚರ್ಚೆ ನಡೆಯುತ್ತಿದೆ. ರಾಜಕಾರಣದ ಜಟ್ಟಿ ದೇವೇಗೌಡರ ಆಲಿಂಗನಕ್ಕೆ ಸಿಲುಕಿದ ಕಾಂಗ್ರೆಸ್ ವಿಲವಿಲ ಅನ್ನೋದನ್ನು ನೋಡುವ ಕಾಲ ಕಣ್ಣೆದುರಿಗಿದೆ ಎಂದು ರಾಜಕೀಯ ಪಂಡಿತರು ವಿಶ್ಲೇಷಣೆ ಮಾಡುತ್ತಾರೆ.
ಹಾಗೆ ವಿಶ್ಲೇಷಣೆ ಮಾಡುವಾಗ ನೀಡುತ್ತಿರುವ ಕಾರಣಗಳು ಇಂತಿವೆ.

ದುರ್ಬಲಗೊಳ್ಳಲಿದೆ ಕೆಪಿಸಿಸಿ ನಾಯಕತ್ವ
ಲೋಕಸಭೆ ಚುನಾವಣೆ ಕಣ್ಣೆದುರು ಇಟ್ಟುಕೊಂಡು, ಪ್ರಬಲ ಸಮುದಾಯದ ಹಾಗೂ ವರ್ಚಸ್ಸು- ಜನ ಮನ್ನಣೆ ಪಡೆಯಬಲ್ಲಂಥ ನಾಯಕನಿಗೆ ಕೆಪಿಸಿಸಿ ಸಾರಥ್ಯ ನೀಡಬೇಕು. ಆದರೆ ಈಗ ಕೇಳಿಬರುತ್ತಿರುವ ಮಾತಿನ ಪ್ರಕಾರ ಇದ್ಯಾವುದೂ ಆಗುವಂತೆ ಕಾಣುವುದಿಲ್ಲ. ಅದರಲ್ಲೂ ಸಿದ್ದರಾಮಯ್ಯ ಅಥವಾ ಡಿ.ಕೆ.ಶಿವಕುಮಾರ್ ರಂಥ ನಾಯಕರ ಕೈಗೆ ಜವಾಬ್ದಾರಿ ನೀಡಿದರೆ ಪರಿಸ್ಥಿತಿಯೇ ಬೇರೆ. ಆದರೆ ಇಂಥ ಯಾವ ಅಂಶವನ್ನು ಪ್ರತಿನಿಧಿಸದ ವ್ಯಕ್ತಿ ಕೆಪಿಸಿಸಿ ಚುಕ್ಕಾಣಿ ಹಿಡಿಯುವಂತಿದೆ. ಇನ್ನು ಲೋಕಸಭೆ ಚುನಾವಣೆಗೆ ಹೊಂದಾಣಿಕೆಗೆ ಎಂದು ಮುಂದಾಗಿರುವಾಗ ಜೆಡಿಎಸ್ ಕೇಳುತ್ತಿರುವುದು ಕಾಂಗ್ರೆಸ್ ಗೆ ಗೆಲ್ಲುವ ಅವಕಾಶ ಇರುವಂಥ ಸ್ಥಾನಗಳನ್ನು. ಬಿಜೆಪಿ ಜತೆಗೆ ಬಡಿದಾಡಿ, ಗೆಲ್ಲಲೇಬೇಕಾದ ಅನಿವಾರ್ಯಕ್ಕೆ ಕಾಂಗ್ರೆಸ್ ಸಿಲುಕಿಕೊಳ್ಳುತ್ತದೆ. ಆದರೆ ಜೆಡಿಎಸ್ ಗೆ ಬಲಿಷ್ಠಗೊಳ್ಳುವ ಅವಕಾಶ ಹೆಚ್ಚಿದೆ.

ಕಾಂಗ್ರೆಸ್ ನ ಹಿರಿಯ ನಾಯಕರಿಗೆ ಸಚಿವ ಸ್ಥಾನ ಬೇಡ ಎಂದಿದ್ಯಾಕೆ?
ಇನ್ನು ಕಾಂಗ್ರೆಸ್ ನಿಂದ ಹಿರಿಯರಿಗೆ ಸಂಪುಟದಲ್ಲಿ ಅವಕಾಶ ಬೇಡ ಎಂಬ ವಿಷಯವನ್ನು ಪದೇ ಪದೇ ಏಕೆ ಎತ್ತುತ್ತಿದ್ದಾರೆ ಅಂದರೆ, ಮುಖ್ಯಮಂತ್ರಿ ಸ್ಥಾನದಲ್ಲಿರುವ ಜೆಡಿಎಸ್ ನ ಎಚ್.ಡಿ.ಕುಮಾರಸ್ವಾಮಿ ಸ್ವತಃ ಅನನುಭವಿ. ಈಗ ಮೈತ್ರಿ ಸರಕಾರದಲ್ಲಿ ಕಾಂಗ್ರೆಸ್ ಪಕ್ಷದಿಂದ ಅನುಭವಿಗಳು ದಂಡು ಬಂದು ಕೂತುಬಿಟ್ಟರೆ ಕುಮಾರಸ್ವಾಮಿಗೆ ಸಿಗಬೇಕಾದ ಮೈಲೇಜ್ ಅಂದುಕೊಂಡ ಮಟ್ಟಕ್ಕೆ ಸಿಗುವುದಿಲ್ಲ. ಜತೆಗೆ ಅಂಥವರ ಜತೆಗೆ ನಿಭಾಯಿಸುವುದು ಕೂಡ ಕಷ್ಟ. ಆದರೆ ಜೆಡಿಎಸ್ ನಿಂದ ತನಗೆ ಬೇಕಾದಂತಹ ನಡೆ ಕಾಂಗ್ರೆಸ್ ನಿಂದ ಕೈಗೊಳ್ಳುವಂತೆ ಮಾಡಲು ಬೆಂಗಳೂರಿನಲ್ಲಿ ಕೂತಿರುವ ದೇವೇಗೌಡರ ಪರವಾಗಿ ರಿಮೋಟ್ ಕಂಟ್ರೋಲ್ ನಂತೆ ಕಾಂಗ್ರೆಸ್ ನಾಯಕರೊಬ್ಬರು ದೆಹಲಿ ಮಟ್ಟದಲ್ಲಿ ಕೆಲಸ ಮಾಡಿದ್ದಾರೆ ಎಂಬ ಸುದ್ದಿ ಇದೆ. ಮುಂದಿನ ಲೋಕಸಭಾ ಚುನಾವಣೆಗೆ ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಹುದ್ದೆಯಲ್ಲಿ ಕೂರುವಂತೆ ಮಾಡುವ ಜವಾಬ್ದಾರಿ ನನ್ನದು ಎಂದು ಸ್ವತಃ ದೇವೇಗೌಡರು ಮಾತು ಕೊಟ್ಟಿದ್ದಾರೆ. ಅದನ್ನು ನಂಬಿರುವ ರಾಹುಲ್, ಕಾಂಗ್ರೆಸ್ ಸಂಪುಟದ ವಿಸ್ತರಣೆ, ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಯ್ಕೆಯನ್ನು ಸಹ ಗೌಡರ ಆಣತಿಯಂತೆ ಮಾಡುತ್ತಿದ್ದಾರೆ ಎಂಬ ವಿಶ್ಲೇಷಣೆ ಮಾಡಲಾಗುತ್ತಿದೆ.

ಹಸುವಿನ ಮುಂಭಾಗ ಕಾಂಗ್ರೆಸ್ ನದು- ಹಿಂಭಾಗ ಜೆಡಿಎಸ್ ನದು
ಸಂಪುಟ ವಿಸ್ತರಣೆಯ ನಂತರ ಖಾತೆ ಹಂಚಿಕೆ ಹೇಗಾಗುತ್ತದೆ ಎಂಬುದನ್ನು ಗಮನಿಸಿ. ಹಸುವಿನ ಮುಂಭಾಗ ಕಾಂಗ್ರೆಸ್ ನವರದು ಹಾಗೂ ಹಿಂಭಾಗ ಜೆಡಿಎಸ್ ನವರದು ಎಂಬ ಲೆಕ್ಕಾಚಾರದಲ್ಲೇ ಆಗುತ್ತದೆ. ಅಂದರೆ ಯಾವುದೆಲ್ಲ ಸೇವಾ ಖಾತೆಗಳು ಇರುತ್ತವೋ ಅವೆಲ್ಲ ಕಾಂಗ್ರೆಸ್ ಪಾಲು. ಆರೋಗ್ಯ, ಪ್ರಾಥಮಿಕ ಶಿಕ್ಷಣ, ಸಾರಿಗೆ... ಹೀಗೆ ಹುಲ್ಲು- ಹಿಂಡಿ ಬಯಸುವ ಸೇವಾ ಖಾತೆಗಳನ್ನು ಕಾಂಗ್ರೆಸ್ ಹೆಗಲಿಗೆ ಆನಿಸಿ, ಹಣ- ಹೆಸರು ಹರಿದಾಡುವ ಲೋಕೋಪಯೋಗಿ, ಹಣಕಾಸು ಖಾತೆಯಂಥ ಮಹತ್ವದ ಖಾತೆಗಳು ಜೆಡಿಎಸ್ ತನ್ನ ಬಳಿ ಉಳಿಸಿಕೊಂಡಿದೆ. ಕಾಂಗ್ರೆಸ್ ನೊಳಗೆ ಸಿದ್ದರಾಮಯ್ಯ ಅವರನ್ನು ಹಣಿಯಬೇಕು ಎಂಬ ಲೆಕ್ಕಾಚಾರದಲ್ಲಿದ್ದವರು ಮುಖ್ಯಮಂತ್ರಿ ಹುದ್ದೆಯನ್ನು ಬೆಳ್ಳಿ ತಟ್ಟೆಯಲ್ಲಿಟ್ಟು ಜೆಡಿಎಸ್ ಗೆ ಬಿಟ್ಟುಕೊಟ್ಟಿದ್ದರ ಬಗ್ಗೆ ಈ ಹಿಂದೆಯೇ ನೀವು ತಿಳಿದಿರುತ್ತೀರಿ. ಅದೇ ಮಲ್ಲಿಕಾರ್ಜುನ ಖರ್ಗೆ ಏನಾದರೂ ಕಾಂಗ್ರೆಸ್ ನಿಂದ ಮುಖ್ಯಮಂತ್ರಿ ಆಗಿದ್ದರೆ ಆಗ ಕಥೆಯೇ ಬೇರೆ ಇರುತ್ತಿತ್ತು.

ಕಾಂಗ್ರೆಸ್ ನಿರ್ನಾಮ ಎಂದು ಯಡಿಯೂರಪ್ಪ ಹೇಳುತ್ತಿರುವುದು ಇದನ್ನೇ
ಈಗ ಹೋದಲ್ಲಿ- ಬಂದಲ್ಲಿ, ವಿಧಾನಸೌಧದಲ್ಲಿ ವಿಶ್ವಾಸ ಮತ ಯಾಚನೆ ಸಮಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳುತ್ತಿರುವುದು ಇದನ್ನೇ: ಈ ಅಪ್ಪ-ಮಕ್ಕಳು ಸೇರಿ ಕಾಂಗ್ರೆಸ್ ನ ಇಲ್ಲವಾಗಿಸುತ್ತಾರೆ, ನಿರ್ನಾಮ ಮಾಡುತ್ತಾರೆ ಎಂದು ಪ್ರಚಾರ ಮಾಡಿಕೊಂಡು ಬರುತ್ತಿದ್ದಾರೆ. ಎಷ್ಟಾದರೂ ಇಪ್ಪತ್ತು ತಿಂಗಳ ಕಾಲ ಜೆಡಿಎಸ್ ಜತೆಗೆ ಸರಕಾರ ನಡೆಸಿದ್ದ ಅನುಭವ ಅವರದು. ಈಗಿನ ಮೈತ್ರಿ ಸರಕಾರದಲ್ಲಿ ಎಷ್ಟು ಮಂದಿ ಕಾಂಗ್ರೆಸ್ ನ ಪ್ರಭಾವಿ- ಹಿರಿಯ ಶಾಸಕರಿದ್ದಾರೆ ಅನ್ನೋದನ್ನು ಬೆರಳು ಮಡಚಿ ಹೇಳಿಬಿಡಿ ನೋಡೋಣ. ಇವೆಲ್ಲ ಕಾಂಗ್ರೆಸ್ ಹೈ ಕಮಾಂಡ್ ತೀರ್ಮಾನ ಅಂತ ಅದೇನೇ ಗಿಳಿ ಪಾಠ ಒಪ್ಪಿಸುತ್ತಿದ್ದರೂ ಅದಾಗಲೇ ರಾಹುಲ್ ಗಾಂಧಿ ಕರ್ನಾಟಕದಲ್ಲಿ ತಮ್ಮ ಪಕ್ಷವನ್ನು ಜೆಡಿಎಸ್ ನ ಅಧಿನಾಯಕ ದೇವೇಗೌಡರ ಪದ ತಲಕ್ಕೆ ಅರ್ಪಿಸಿದ್ದಾರೆ. ಸಿದ್ದರಾಮಯ್ಯ- ಡಿ.ಕೆ.ಶಿವಕುಮಾರ್ ರಂಥ ನಾಯಕರನ್ನು ಹಣಿದ ಸಮಾಧಾನ, ತಮ್ಮ ಮಗನನ್ನು ಮುಖ್ಯಮಂತ್ರಿ ಮಾಡಿದ ಹಾಗೂ ತಮ್ಮಿಚ್ಛೆಗೆ ತಕ್ಕಂತೆ ನಡೆವ ಸಂಪುಟ ರಚನೆಯ ನೆಮ್ಮದಿ, ತಮ್ಮನ್ನು ಜರೆದ ರಾಷ್ಟ್ರೀಯ ಪಕ್ಷದ ನಾಯಕನನ್ನು ತಮ್ಮ ಬೆರಳ ಇಶಾರೆಯಲ್ಲಿ ಕುಣಿಸಿದ ತೃಪ್ತಿ ಎಲ್ಲವನ್ನೂ ಏಕಕಾಲಕ್ಕೆ ದೇವೇಗೌಡರು ಅನುಭವಿಸುತ್ತಿದ್ದಾರೆ.

ಸಿದ್ದರಾಮಯ್ಯ ಸ್ಥಿತಿ ಕಷ್ಟ ಕಷ್ಟ
ಯಾವ ಕಾಂಗ್ರೆಸ್ ನಾಯಕರ ಸ್ಥಿತಿ ಏನು ಎತ್ತಲೋ ಗೊತ್ತಿಲ್ಲ. ಆದರೆ ಸಿದ್ದರಾಮಯ್ಯ ಅವರು ರಾಜಕಾರಣದಿಂದ ದೂರ ಉಳಿಯಲು ಸಕಾಲ. ಇಲ್ಲದಿದ್ದರೆ ಐದು ವರ್ಷ ಪೂರ್ಣಗೊಳಿಸಿದ ಕಾಂಗ್ರೆಸ್ ನ ಮುಖ್ಯಮಂತ್ರಿಗಳಲ್ಲಿ ಒಬ್ಬರು. ಹಲವಾರು ಯೋಜನೆಗಳ ಮೂಲಕ ರಾಷ್ಟ್ರ ಮಟ್ಟದಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಸಡ್ಡು ಹೊಡೆದ ನಾಯಕ ಎಂದೆಲ್ಲ ಗುರುತಿಸಿಕೊಂಡಿದ್ದ ಶ್ರೇಯ ಮಣ್ಣು ಪಾಲಾಗುವ ದಿನ ಹೆಚ್ಚು ದೂರವಿಲ್ಲ. ಗೌರವಯುತವಾಗಿ ಪಕ್ಷದಿಂದ ಅಂತರ ಕಾಯ್ದುಕೊಂಡರೆ ಮುಂದೆ ಎದುರಾಗಬಹುದಾದ ಸಂಭವನೀಯ ಅವಮಾನಗಳಿಂದ ತಪ್ಪಿಸಿಕೊಳ್ಳಬಹುದು. ಆದರೆ ಲೋಕಸಭೆ ಚುನಾವಣೆಗೆ ಮತ್ತೆ ನಾಯಕತ್ವ ವಹಿಸಿಕೊಳ್ಳಲು ಕೇಂದ್ರ ನಾಯಕರ ಬಳಿಗೆ ಸಿದ್ದರಾಮಯ್ಯ ಅವರೇ ದುಂಬಾಲು ಬಿದ್ದು ಹೋದರೆ ಕಷ್ಟ ಕಷ್ಟ. ರಾಷ್ಟ್ರ ಮಟ್ಟದಲ್ಲಿ ಸಿದ್ದರಾಮಯ್ಯ ಅವರಿಗೆ ಸೂಕ್ತ ಸ್ಥಾನ-ಮಾನವಿಲ್ಲ. ರಾಜ್ಯ ಕಾಂಗ್ರೆಸ್ ನಲ್ಲಿ ಗೌರವವಿಲ್ಲ. ಇಂಥ ಸ್ಥಿತಿ ತಂದುಕೊಳ್ಳದಿರುವುದು ಉತ್ತಮ.












Click it and Unblock the Notifications