ಏನಿದು ಹವಾಲ ವ್ಯವಹಾರ, ಇದು ಯಾಕಿಷ್ಟು ಕುಖ್ಯಾತಿ?
Recommended Video
ಹವಾಲ ಎಂಬ ಪದ ಬೇಜಾರು ಆಗುವ ಮಟ್ಟಕ್ಕೆ ನೀವು ಕೇಳಿರುವ ಸಾಧ್ಯತೆ ಇದೆ. ಅದರಲ್ಲೂ ಈಗ ಸಚಿವ ಡಿ.ಕೆ.ಶಿವಕುಮಾರ್ ಹೆಸರು ಹವಾಲ ಹಣದ ವರ್ಗಾವಣೆ ಮಾಡಿದ್ದಾರೆ ಎಂದು ಆರೋಪ ಕೇಳಿಬರುತ್ತಿರುವಾಗ ಏನಪ್ಪಾ ಹವಾಲ ಅಂದರೆ ಅನ್ನೋ ಕುತೂಹಲ ಮತ್ತೂ ಹೆಚ್ಚಾಗಿರಬಹುದು. ಆ ಹವಾಲ ವ್ಯವಹಾರವನ್ನು ಆದಷ್ಟೂ ಸರಳವಾಗಿ ವಿವರಿಸುವ ಪ್ರಯತ್ನವಿದು.
ಬೆಂಗಳೂರಿನ ಒಬ್ಬ ಉದ್ಯಮಿಗೆ ತುರ್ತಾಗಿ ಹತ್ತು ಲಕ್ಷ ರುಪಾಯಿ ಹಣ ಬೇಕು. ಆತನಿಗೆ ಲೇವಾದೇವಿ ಮಾಡುವ ವ್ಯಕ್ತಿ ನಗರದಲ್ಲಿ ಇಲ್ಲ. ಆದರೆ ಆ ಮೊತ್ತವನ್ನು ಹೊಂದಿಸಲೇಬೇಕಾದ ಅನಿವಾರ್ಯ ಇದೆ. ಆಗ ಉದ್ಯಮಿಗೆ ಬಹಳ ಬೇಕಾದ ಮತ್ತೊಬ್ಬ ವ್ಯಕ್ತಿ ಚಿಕ್ಕಮಗಳೂರಿನ ಲೇವಾದೇವಿ ವ್ಯವಹಾರಸ್ಥನೊಬ್ಬನ ಸಂಪರ್ಕ ಸಂಖ್ಯೆ ಕೊಟ್ಟು, ಮಾತನಾಡಿದರೆ ಹಣದ ವ್ಯವಸ್ಥೆ ಆಗುತ್ತದೆ ಎಂಬ ಭರವಸೆ ನೀಡುತ್ತಾನೆ.
ಹೈಕಮಾಂಡ್ಗೆ ಹಣ ನೀಡಿಲ್ಲ, ಹವಾಲಾ ಬಗ್ಗೆ ಗೊತ್ತೇ ಇಲ್ಲ: ಡಿಕೆಶಿ
ಸರಿ, ಈ ಉದ್ಯಮಿಗೆ ಕೆಲ ಗಂಟೆಗಳಲ್ಲಿ ಆ ಹಣ ಬೇಕು. ಆದರೆ ಅಷ್ಟು ಮೊತ್ತವನ್ನು ತನ್ನ ಬ್ಯಾಂಕ್ ಖಾತೆ ಮೂಲಕ ತೋರಿಸಬಾರದು. ಅದೇ ಮಾದರಿಯಲ್ಲೇ ವ್ಯವಹಾರ ನಡೆಯುತ್ತದೆ. ಚಿಕ್ಕಮಗಳೂರಿನ ಲೇವಾದೇವಿದಾರ ಸಂಕೇತಾಕ್ಷರವೊಂದನ್ನು ಬೆಂಗಳೂರಿನ ಉದ್ಯಮಿಗೆ ರವಾನಿಸುತ್ತಾನೆ. ಮತ್ತು ಬೆಂಗಳೂರಿನಲ್ಲಿನ ತನ್ನ ವ್ಯಕ್ತಿಗೂ ಈ ಸಂಕೇತಾಕ್ಷರವನ್ನು ತಿಳಿಸುತ್ತಾನೆ.
ಸಂಕೇತಾಕ್ಷರ ಹೇಳಿದ ವ್ಯಕ್ತಿಗೆ ಹಣ ಹಸ್ತಾಂತರ
ಯಾರು ಬಂದು, ಆ ಸಂಕೇತಾಕ್ಷರ ಹೇಳುತ್ತಾರೋ ಅವರಿಗೆ ಹಣ ನೀಡುವಂತೆ ಸೂಚನೆ ಇರುತ್ತದೆ. ಆ ಪ್ರಕಾರ ವ್ಯವಹಾರ ನಡೆಯುತ್ತದೆ. ಹೀಗೆ ಯಾವ ಬ್ಯಾಂಕ್, ಸರಕಾರ ಒಟ್ಟಾರೆ ಕಾನೂನು ವ್ಯಾಪ್ತಿಗೆ ಬಾರದಂತೆ ಮಾಡುವ ವ್ಯವಹಾರಕ್ಕೆ ಹವಾಲ ಎನ್ನಲಾಗುತ್ತದೆ. ಹೀಗೆ ತಕ್ಷಣವೇ ಹಣ ಹೊಂದಿಸಲು ಹಾಗೂ ಯಾವುದೇ ತೆರಿಗೆ ಬೀಳದಂತೆ ಇರಲು ಒಂದಿಷ್ಟು ಕಮಿಷನ್ ಹಾಕಲಾಗುತ್ತದೆ. ಈ ವ್ಯವಹಾರದಲ್ಲಿ ಒಬ್ಬೊಬ್ಬರು ಒಂದೊಂದು ರೀತಿಯ ನಿಗೂಢ ಕೋಡ್ ಬಳಸುತ್ತಾರೆ.
ರಜನೀಕಾಂತ್ ಶಿವಾಜಿ ಸಿನಿಮಾದಲ್ಲಿ ಆ ದೃಶ್ಯವಿದೆ
ತೆರಿಗೆ ಮೊತ್ತಕ್ಕಿಂತ ಕಮಿಷನ್ ಪ್ರಮಾಣ ಕಡಿಮೆ ಇದ್ದೇ ಇರುತ್ತದೆ. ತಮ್ಮ ಮಾಮೂಲಿ ಗ್ರಾಹಕರು ಹಾಗೂ ನಂಬಿಕಸ್ತರಿಗಷ್ಟೇ ಈ ರೀತಿ ಹಣ ವರ್ಗಾವಣೆ ಮಾಡಿಕೊಡಲಾಗುತ್ತದೆ. ತಮಿಳಿನ ರಜನೀಕಾಂತ್ ಅಭಿನಯದ ಶಿವಾಜಿ ಸಿನಿಮಾದಲ್ಲಿ ಭಾರತದಲ್ಲಿ ಒಟ್ಟು ಮಾಡಿದ ಹಣವನ್ನು ವಿದೇಶಕ್ಕೆ ಸಾಗಿಸುವ ದೃಶ್ಯವೊಂದಿದೆ. ಆ ದೃಶ್ಯಕ್ಕೆ ಬಳಸಿರುವುದು ಇದೇ ಹವಾಲ ಟೆಕ್ನಿಕ್.
ಸರಕಾರಕ್ಕೆ ಮಾಡುವ ಮೋಸ
ಈಗಲೂ ವಿದೇಶದಲ್ಲಿ ದುಡಿದ ಹಣವನ್ನು ಭಾರತಕ್ಕೆ ತರುವಾಗ ಹಲವರು ಇದೇ ಹವಾಲ ಮಾದರಿಯನ್ನೇ ಬಳಸುತ್ತಾರೆ ಎಂಬ ಗುಮಾನಿ ಇದೆ. ಇನ್ನು ಉತ್ತರ ಭಾರತದಲ್ಲಿ ದೊಡ್ಡ ಮೊತ್ತವನ್ನು ಜತೆಯಲ್ಲಿ ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ವ್ಯಾಪಾರಿಗಳು ಹೀಗೆ ಹವಾಲ ವ್ಯವಹಾರ ಮಾಡುತ್ತಾರೆ ಎಂಬುದು ಗುಟ್ಟಲ್ಲ. ಆದರೆ ಇದು ಸರಕಾರಕ್ಕೆ ಮಾಡುವ ಮೋಸ ಹಾಗೂ ತೆರಿಗೆ ವಂಚನೆ.
ತೆರಿಗೆಗಿಂತ ಕಮಿಷನ್ ಕಡಿಮೆ
ದುಬೈನಲ್ಲಿ ಕೆಲಸ ಮಾಡುವ ವ್ಯಕ್ತಿ ಅಲ್ಲಿ ತಾನು ದುಡಿದ ಹಣವನ್ನು ಭಾರತದಲ್ಲಿರುವ ತನ್ನ ಕುಟುಂಬಕ್ಕೆ ತಲುಪಿಸಬೇಕು ಅಂದರೆ ಅದಕ್ಕೆ ಒಂದಿಷ್ಟು ತೆರಿಗೆ ಬೀಳುತ್ತದೆ. ಅಂಥ ಸನ್ನಿವೇಶದಲ್ಲಿ ದುಬೈನಲ್ಲಿರುವ ವ್ಯಾಪಾರಿಯೊಬ್ಬನಿಗೆ ಆ ಹಣ ನೀಡುತ್ತಾನೆ. ಅದು ಕೊಟ್ಟಂತೆ ಯಾವುದೇ ಖಾತೆಯಲ್ಲಿ ಜಮಾ ಆಗುವುದಿಲ್ಲ. ಆ ಹಣ ಪಡೆದ ವ್ಯಾಪಾರಿಯು ಭಾರತದಲ್ಲಿ ಇರುವ ತನ್ನ ಖಾಸಾ ವ್ಯಕ್ತಿ ಮೂಲಕ ದುಬೈನಲ್ಲಿ ಹಣ ಪಡೆದ ವ್ಯಕ್ತಿಯ ಕುಟುಂಬಕ್ಕೆ ಆ ಮೊತ್ತವನ್ನು ತಲುಪಿಸುತ್ತಾನೆ; ಒಂದಿಷ್ಟು ಕಮಿಷನ್ ಮುರಿದುಕೊಂಡು. ಆ ಮೊತ್ತವೂ ಈ ಹಿಂದೆಯೇ ಹೇಳಿದ ಹಾಗೆ ತೆರಿಗೆಗಿಂತ ಕಡಿಮೆ ಇದ್ದೇ ಇರುತ್ತದೆ.