ಹರ್ಯಾಣ ಚುನಾವಣೆ ಹೊತ್ತಲ್ಲಿ ಕಣ್ಣಿಗೆ ಬಿದ್ದ ಈ 12 ರ ಪತ್ರಕರ್ತ!
ಜಿಂದ್, ಅಕ್ಟೋಬರ್ 24: ಚುನಾವಣೆಯ ಬಿಸಿಯಲ್ಲಿರುವ ಹರ್ಯಾಣದಲ್ಲಿ 12 ವರ್ಷ ವಯಸ್ಸಿನ ಪತ್ರಕರ್ತನೊಬ್ಬ ರಾಷ್ಟ್ರದ ಗಮನ ಸೆಳೆದಿದ್ದಾನೆ. ಘಟಾನುಘಟಿ ನಾಯಕರ ಸಂದರ್ಶನ, ಉತ್ತಮ ವರದಿಗಳ ಮೂಲಕ ಪತ್ರಕರ್ತರ ಸಾಮಾಜಿಕ ಬದ್ಧತೆಯನ್ನು ಪರಿಚಯಿಸಿದ್ದಾರೆ.
ಹರ್ಯಾಣದ ಜಿಂದ್ ಪ್ರದೇಶದ ಗುರ್ಮೀತ್ ಗೋಯತ್ ಅಲಿಯಾಸ್ ಗೊಲ್ಡಿ ಗೋಯತ್ ಗೆ ಪತ್ರಕರ್ತನಾಗಬೇಕು ಎಂಬ ಹುಚ್ಚು ಆಸೆ. "ಮೊಮ್ಮಗ ಸಮಾಜದಲ್ಲಿ ದೊಡ್ಡ ಹೆಸರು ಮಾಡಬೇಕು ಎಂಬುದು ನನ್ನ ತಾತನ ಆಸೆಯಾಗಿತ್ತು. ಅವರ ಆಸೆಯನ್ನು ಈಡೇರಿಸುವ ಆಸೆಯಿಂದ ನಾನು ಪತ್ರಕರ್ತನಾದೆ. ನಾನು ಇದುವರೆಗೂ ನೂರಕ್ಕೂ ಹೆಚ್ಚು ಸಂದರ್ಶನ ಮಾಡಿದ್ದೇನೆ. ಆದರೆ ಅದನ್ನು ನೋಡಲು ಅವು ಬದುಕಿಲ್ಲ ಎಂಬುದೇ ಬೇಸರದ ವಿಷಯ. ನಾನು ಈ ಜನವರಿಯಿಂದ ಒಂದು ವಿಡಿಯೋ ಚಾನೆಲ್ ಆರಂಭಿಸಿದ್ದೇನೆ" ಎನ್ನುತ್ತಾನೆ ಗುರ್ಮೀತ್ ಗೋಯತ್.
ಗೋಯತ್ ತನ್ನದೇ ಆದ ಯೂಟ್ಯೂಬ್ ಚಾನೆಲ್ ಹೊಂದಿದ್ದು, ಈಗಾಗಲೇ ಅದಕ್ಕೆ 1 ಲಕ್ಷಕ್ಕೂ ಹೆಚ್ಚು ವೀಕ್ಷಕರಿದ್ದಾರೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್, ಜೆಜಪಿ ನಾಯಕ ದುಷ್ಯಂತ್ ಚೌಟಾಲಾ ಮುಂತಾದ ಘಟಾನುಘಟಿ ನಾಯಕರನ್ನೂ ಈತ ಸಂದರ್ಶನ ಮಾಡಿದ್ದಾನೆ.

ಚಿಕ್ಕ ವಯಸ್ಸಿನಲ್ಲೇ ಆತ ಕೇಳುವ ಪ್ರಬುದ್ಧ ಪ್ರಶ್ನೆಗಳಿಗೆ ನಾಯಕರೂ ಅಚ್ಚರಿ ಪಟ್ಟಿದ್ದಾರೆ. ಹರ್ಷ್ ಅಂತಾರಾಷ್ಟ್ರೀಯ ಶಾಲೆಯಲ್ಲಿ ಓದುತ್ತಿರುವ ಈತನಿಗೆ ಭವಿಷ್ಯದಲ್ಲಿ ರಾಜಕಾರಣಿಯಾಗಬೇಕು ಅನ್ನೋದು ಆಸೆಯತೆ!
"2034 ರ ವರೆನೂ ನಾನು ಪತ್ರಿಕೋದ್ಯಮದಲ್ಲೇ ಕಾರ್ಯ ನಿರ್ವಹಿಸುತ್ತೇನೆ. ನಂತರ ಚುನಾವಣೆಗೆ ನಿಲ್ಲುತ್ತೇನೆ. ಅದೂ ಸ್ವತಂತ್ರ ಅಭ್ಯರ್ಥಿಯಾಗಿ" ಎಂದು ವಿಶ್ವಾಸದಲ್ಲೇ ಹೇಳುತ್ತಾನೆ ಗೋಯತ್
"ಈ ಸಾರಿ ಹರ್ಯಾಣ ಚುನಾವಣೆಯಲ್ಲಿ ಮೂಲಸೌಕರ್ಯ ಕೊರತೆಯೇ ಮುಖ್ಯವಾಗಿದೆ. ರಾಜ್ಯ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಅವೆಲ್ಲವೂ ಚುನಾವಣೆಯ ಮೇಲೆ ಪರಿಣಾಮ ಬೀರಲಿವೆ" ಎನ್ನುತ್ತಾನೆ ಗೋಯತ್.
ಮನೋಹರ್ ಲಾಲ್ ಖಟ್ಟರ್ ನೇತೃತ್ವದ ಹರ್ಯಾಣ ಬಿಜೆಪಿ ಸರ್ಕಾರವನ್ನು ನಿರಂತರವಾಗಿ ಟೀಕಿಸುತ್ತಿದ್ದ ಗೋಯತ್, ನ್ಯಾಯ ಕೇಳುವುದಕ್ಕೆ, ಸತ್ಯ ಮಾತನಾಡುವುದಕ್ಕೆ ಭಯವೇಕೆ ಎಂದು ಪ್ರಶ್ನಿಸುತ್ತಾರೆ.
ಯಾವ ಪೂರ್ವಗ್ರಹವಿಲ್ಲದೆ ರಾಜಕಾರಣಿಗಳನ್ನು ತನ್ನ ಮೊನಚು ಪ್ರಶ್ನೆಗಳಿಂದಲೇ ಬೆವರಿಳಿಸುವ ಗೋಯತ್, ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಸೆಲೆಬ್ರಿಟಿಯಾಗಿದ್ದಾನೆ.











Click it and Unblock the Notifications