ಕಾಂಗ್ರೆಸ್ ನಾಯಕರ ಆತ್ಮವಿಶ್ವಾಸ ಜೆಡಿಎಸ್ ಗೆ ಮುಳುಗು ನೀರಾಗುತ್ತಾ?
ಪಂಚರಾಜ್ಯಗಳ ವಿಧಾನಸಭಾ ಚುನಾವಣೆ ಫಲಿತಾಂಶ ಲೋಕಸಭಾ ಚುನಾವಣೆಗೆ ದಿಕ್ಸೂಚಿ ಎಂದು ಕೆಲವು ರಾಜಕೀಯ ವಿಶ್ಲೇಷಕರು ಹೇಳುತ್ತಿದ್ದು, ಈ ಚುನಾವಣಾ ಫಲಿತಾಂಶ ಕಾಂಗ್ರೆಸ್ಗೆ ಒಂದಷ್ಟು ಧೈರ್ಯವನ್ನು, ಉತ್ಸಾಹವನ್ನು ತುಂಬಿರಬಹುದು. ಹಾಗೆಂದು ಬಿಜೆಪಿಯ ಸಾಮರ್ಥ್ಯವನ್ನು ಕುಗ್ಗಿಸಿದೆ ಎಂದು ಸುಲಭವಾಗಿ ಹೇಳಲಾಗದು.
ಏಕೆಂದರೆ ಕೇಂದ್ರದಲ್ಲಿ ಬಿಜೆಪಿ ಆಡಳಿತವಿದೆ. ಲೋಕಸಭಾ ಚುನಾವಣೆಗೂ ಒಂದಷ್ಟು ಕಾಲವಿದೆ. ಎಲ್ಲಿ ತಪ್ಪಾಗಿದೆ? ಏನನ್ನು ಸರಿ ಮಾಡಿದರೆ ಮತದಾರರನ್ನು ಸೆಳೆಯಬಹುದು? ಎಲ್ಲವನ್ನು ಆತ್ಮಾವಲೋಕನ ಮಾಡಲು ಸಮಯವಿದೆ. ಸರಿಪಡಿಸಿಕೊಳ್ಳಲು ಬೇಕಾದ ಅಧಿಕಾರವೂ ಅವರ ಕೈಯ್ಯಲ್ಲಿದೆ.
ಕಾಂಗ್ರೆಸ್ ಮೈಮರೆತರೆ ಕಷ್ಟ.. ಕಷ್ಟ.. ಮೂರು ವಿಧಾನಸಭಾ ಕ್ಷೇತ್ರದ ಗೆಲುವಿನಲ್ಲೇ ಕಾಂಗ್ರೆಸ್ ಮೈಮರೆಯುವ ಬದಲು ಲೋಕಸಭಾ ಚುನಾವಣೆಗೆ ಈಗಿನಿಂದಲೇ ತಯಾರಾಗಬೇಕಿದೆ.
ವಿಧಾನಸಭಾ ಚುನಾವಣೆಗೂ ಲೋಕಸಭಾ ಚುನಾವಣೆಗೂ ಅಜಗಜಾಂತರ ವ್ಯತ್ಯಾಸವಿರುವುದರಿಂದ ವಿಧಾನಸಭಾ ಚುನಾವಣಾ ಫಲಿತಾಂಶವೇ ಲೋಕಸಭಾ ಚುನಾವಣೆಗೂ ಮಾನದಂಡವಾಗುತ್ತದೆ ಎಂದು ಹೇಳುವುದು ಕಷ್ಟ ಸಾಧ್ಯ. ಇನ್ನು ಪಂಚರಾಜ್ಯ ವಿಧಾನಸಭಾ ಚುನಾವಣೆಯ ಫಲಿತಾಂಶ ರಾಷ್ಟ್ರಮಟ್ಟದ ಕಾಂಗ್ರೆಸ್ಸಿಗರಿಗೆ ಎಷ್ಟು ಆತ್ಮವಿಶ್ವಾಸ ತುಂಬಿದೆಯೋ ಗೊತ್ತಿಲ್ಲ.
ಆದರೆ ಕರ್ನಾಟಕದ ಕೈ ನಾಯಕರು ಮಾತ್ರ ಬೀಗುತ್ತಿದ್ದಾರೆ. ಅವರೊಂದಿಗೆ ಅಧಿಕಾರ ನಡೆಸಲು ಕೈ ಜೋಡಿಸಿದ್ದೇವೆ ಎಂಬ ಒಂದೇ ಕಾರಣಕ್ಕೆ ಜೆಡಿಎಸ್ ನಾಯಕರು ಕೂಡ ಜೈ ಎನ್ನುತ್ತಿದ್ದಾರೆಯಾದರೂ ಕಾಂಗ್ರೆಸ್ನ ಆತ್ಮವಿಶ್ವಾಸ ಜೆಡಿಎಸ್ ಗೆ ಮುಳುಗು ನೀರಾಗುತ್ತದೆ ಎನ್ನುವುದು ಇದೀಗ ಕಾಂಗ್ರೆಸ್ ನಡೆಯಿಂದ ಗೊತ್ತಾಗತೊಡಗಿದೆ.
ರಾಷ್ಟ್ರದಲ್ಲಿ ಪ್ರಧಾನಿ ಮೋದಿ ವಿರುದ್ಧ ವಿಪಕ್ಷಗಳು, ಪ್ರಾದೇಶಿಕ ಪಕ್ಷಗಳು ಒಂದಾಗಬೇಕು ಎನ್ನುವ ಅಜೆಂಡಾದೊಂದಿಗೆ ಇದೀಗ ಹಲವು ನಾಯಕರು ಮಾತುಕತೆಯಲ್ಲಿ ತೊಡಗಿದ್ದಾರೆ. ಆಂಧ್ರದ ಸಿಎಂ ಚಂದ್ರಬಾಬು ನಾಯ್ಡು ಅವರು ಜೆಡಿಎಸ್ ನ ರಾಷ್ಟ್ರಾಧ್ಯಕ್ಷ ಎಚ್.ಡಿ.ದೇವೇಗೌಡರೊಂದಿಗೆ ಮಾತುಕತೆ ನಡೆಸಿ, ದೆಹಲಿಯಲ್ಲಿ ಸಭೆಯನ್ನು ನಡೆಸಿದ್ದಾರೆ.
ಆ ಸಭೆಯಲ್ಲಿ ದೇವೇಗೌಡರನ್ನು ಹೇಗೆ ನಡೆಸಿಕೊಂಡರು ಎಂಬುದು ಎಲ್ಲರೂ ನೋಡಿದ್ದಾರೆ. ಈಗಾಗಲೇ ರಾಹುಲ್ಗಾಂಧಿ ಅವರೇ ಮುಂದಿನ ಪ್ರಧಾನಮಂತ್ರಿ ಅಭ್ಯರ್ಥಿ ಎಂದು ಕಾಂಗ್ರೆಸ್ ಘೋಷಿಸಿಕೊಂಡಿದೆ. ಆದರೆ ತೃತೀಯ ರಂಗದ ನಾಯಕರಲ್ಲಿ ಬಹುತೇಕರು ಪ್ರಧಾನ ಮಂತ್ರಿ ಪಟ್ಟದ ಮೇಲೆ ಕಣ್ಣಿಟ್ಟಿದ್ದಾರೆ.
ಹೀಗಾಗಿ ಎಲ್ಲರೂ ಒಂದಾಗಿ ಚುನಾವಣೆಯನ್ನು ಎದುರಿಸಿದರೂ ಪ್ರಧಾನಮಂತ್ರಿ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಒಮ್ಮತಕ್ಕೆ ಬರುವುದು ಅಷ್ಟು ಸುಲಭವಲ್ಲ.

ಜೆಡಿಎಸ್ ಗೆ ಶರಣು
ಇನ್ನು ಕರ್ನಾಟಕದ ವಿಚಾರಕ್ಕೆ ಬಂದಿದ್ದೇ ಆದರೆ ಅವತ್ತು ಸೋಲಿನ ಹೊಸ್ತಿಲಲ್ಲಿದ್ದಾಗ ಹೇಗಾದರೂ ಮಾಡಿ ಕರ್ನಾಟಕದ ಆಡಳಿತದಲ್ಲಿ ಸಂಪೂರ್ಣವಲ್ಲದಿದ್ದರೂ ಭಾಗಶಃವಾದರೂ ಹಿಡಿತದಲ್ಲಿಟ್ಟುಕೊಂಡು ಬಿಜೆಪಿಯನ್ನು ಹೊರಗಿಡಬೇಕೆಂಬ ತೀರ್ಮಾನಕ್ಕೆ ಬಂದಿದ್ದ ಕಾಂಗ್ರೆಸ್ ನಾಯಕರು ವಿಧಾನಸಭಾ ಚುನಾವಣೆ ನಡೆದು ಪಕ್ಷ ಎರಡನೇ ಸ್ಥಾನಕ್ಕೆ ತಳ್ಳಲ್ಪಟ್ಟಾಗ ಅನಿವಾರ್ಯವಾಗಿ ಮೂರನೇ ಸ್ಥಾನದಲ್ಲಿದ್ದ ಜೆಡಿಎಸ್ ಗೆ ಶರಣಾಗಿದ್ದರು.

ಇನ್ನೂ ವಿರೋಧಿಗಳಾಗಿಯೇ ಇದ್ದಾರೆ
ಬೇಷರತ್ ಬೆಂಬಲ ನೀಡುವ ಮೂಲಕ ಜೆಡಿಎಸ್ ನ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಗಾದಿಯಲ್ಲಿ ಕೂರಿಸಿ ಬೆನ್ನೆಲುಬಾಗಿ ನಾಯಕರು ನಿಂತಿದ್ದರು. ಅದು ಅನಿವಾರ್ಯವೂ ಆಗಿತ್ತು. ಎಲ್ಲೆಡೆ ಸೋತು ಸುಣ್ಣವಾಗಿದ್ದ ಕಾಂಗ್ರೆಸ್ ಬಿಜೆಪಿ ಮುಂದೆ ಮಂಡಿಯೂರಲು ತಯಾರಿರಲಿಲ್ಲ. ಹೀಗಾಗಿಯೇ ಅದು ತಾನು ವಿರೋಧಿಸುತ್ತಾ ಬಂದಿದ್ದ ನಾಯಕರು ಮತ್ತು ಪಕ್ಷದ ತೆಕ್ಕೆಗೆ ಬಿದ್ದು ಅಧಿಕಾರದ ಚುಕ್ಕಾಣಿಯನ್ನು ಅವರ ಕೈಗಿಡಲು ಮುಂದಾಗಿತ್ತು. ಇದು ಮೇಲ್ಮಟ್ಟದ ನಾಯಕರು ಮಾಡಿಕೊಂಡ ಒಪ್ಪಂದ. ಇದನ್ನು ಇವತ್ತಿಗೂ ಮಾನಸಿಕವಾಗಿ ಎರಡು ಪಕ್ಷಗಳ ತಳಮಟ್ಟದ ನಾಯಕರಿಗೆ ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅದೆರಡು ಪಕ್ಷಗಳ ಕಾರ್ಯಕರ್ತರು ಮತ್ತು ಕೆಳಮಟ್ಟದ ನಾಯಕರು ಇನ್ನೂ ವಿರೋಧಿಗಳಾಗಿಯೇ ಇದ್ದಾರೆ. ಅವರು ಒಂದಾಗುವುದು ಅಷ್ಟು ಸುಲಭವಲ್ಲ ಅದಕ್ಕೆ ಕಾರಣವೂ ಇದೆ.

ಮೂರನೇ ಸ್ಥಾನದಲ್ಲಿರುವ ಬಿಜೆಪಿ
ರಾಜ್ಯದ ಬಹುತೇಕ ಕಡೆಗಳಲ್ಲಿ ಬಿಜೆಪಿ ಮೂರನೇ ಸ್ಥಾನದಲ್ಲಿದೆ. ಇಲ್ಲಿ ಪ್ರಬಲ ವಿರೋಧಿಗಳು ಕಾಂಗ್ರೆಸ್ ಮತ್ತು ಜೆಡಿಎಸ್. ಇಂತಹ ಸ್ಥಳಗಳಲ್ಲಿ ಮಾನಸಿಕವಾಗಿ ಅವೆರಡು ಪಕ್ಷಗಳ ನಾಯಕರು ಒಂದಾಗಿ ಬಿಟ್ಟರೆ ಅಲ್ಲಿ ಬಿಜೆಪಿ ಪ್ರಬಲವಾಗಿ ಬೆಳೆದು ಬಿಡುತ್ತದೆ. ಜತೆಗೆ ಜೆಡಿಎಸ್ ಮತ್ತು ಕಾಂಗ್ರೆಸ್ನಲ್ಲಿರುವ ನಾಯಕರು ತಮ್ಮ ಇರವನ್ನು ಉಳಿಸಿಕೊಳ್ಳಲು ಹೆಣಗಾಡಬೇಕಾಗುತ್ತದೆ. ಹೀಗಾಗಿಯೇ ತಳಮಟ್ಟದಲ್ಲಿ ಇವತ್ತಿಗೂ ಜೆಡಿಎಸ್ ಮತ್ತು ಕಾಂಗ್ರೆಸ್ ಪ್ರಬಲ ವಿರೋಧಿಗಳಾಗಿಯೇ ಮುಂದುವರೆಯುತ್ತಿದ್ದಾರೆ. ರಾಜ್ಯಮಟ್ಟದ ನಾಯಕರಷ್ಟೆ ಮೈತ್ರಿ ಸರ್ಕಾರವನ್ನು ಒಪ್ಪಿಕೊಂಡಿದ್ದಾರೆ. ಕಾರಣ ಅವರು ಅಧಿಕಾರದ ದೃಷ್ಠಿಯಿಂದಷ್ಟೆ ಒಂದಾಗಿದ್ದಾರೆ. ಉಳಿದಂತೆ ಯಾವ ರೀತಿಯಲ್ಲಿಯೂ ಮೈತ್ರಿ ನಡೆ ಉತ್ತಮವಾಗಿದೆ ಎಂದು ಹೇಳುವುದು ಕಷ್ಟವೇ.

ಒಂದೊಂದೇ ಸ್ಥಾನ ಕಬಳಿಸುವುದು ಖಚಿತ
ಕಾಂಗ್ರೆಸ್ ಅನ್ನು ಕೈ ಹಿಡಿಯುತ್ತಾರೆಂಬ ಪ್ರಬಲ ನಂಬಿಕೆ ಈಗಿನ ಬೆಳವಣಿಗೆಯನ್ನು ನೋಡಿದ ನಾಯಕರು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನ್ನು ಮತದಾರರು ಕೈಹಿಡಿಯುತ್ತಾರೆ ಎಂಬ ನಂಬಿಕೆಯಲ್ಲಿದ್ದಾರೆ. ಆ ನಂಬಿಕೆಯಲ್ಲಿ ಮುಂದಿನ ಲೋಕಸಭಾ ಚುನಾವಣೆಗೆ ಜೆಡಿಎಸ್ ಮೈತ್ರಿಯನ್ನು ಕಳಚಿಕೊಂಡು ಹೋಗುವ ತೀರ್ಮಾನ ಮಾಡಿದರೂ ಅಚ್ಚರಿಯಿಲ್ಲ. ಇಲ್ಲಿ ತನಕ ಮೌನವಾಗಿದ್ದ ಕೈ ನಾಯಕರು ಈಗ ಸರ್ಕಾರದ ಮೇಲೆ ತಮ್ಮ ಪ್ರಭಾವ ಬೀರತೊಡಗಿದ್ದಾರೆ. ಅದರ ಮೊದಲ ದಾಳವೇ ವಿಧಾನಪರಿಷತ್ ಸಭಾಪತಿ ಸ್ಥಾನದಿಂದ ಬಸವರಾಜ ಹೊರಟ್ಟಿ ಹೊರ ಹಾಕಿ ಕಾಂಗ್ರೆಸ್ನ ಪ್ರತಾಪ್ ಚಂದ್ರ ಶೆಟ್ಟಿ ಅವರನ್ನು ತಂದು ಕೂರಿಸಿದ್ದು.. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ನಾಯಕರು ಆಯಕಟ್ಟಿನ ಒಂದೊಂದೇ ಸ್ಥಾನವನ್ನು ಕಬಳಿಸುವುದಂತು ಖಚಿತ. ಈಗಾಗಲೇ ನಾನು ಹಂಗಿನಲ್ಲಿದ್ದೇನೆ ಎನ್ನುತ್ತಿರುವ ಸಿಎಂ ಎಚ್.ಡಿ.ಕುಮಾರಸ್ವಾಮಿ ಎಲ್ಲವನ್ನು ಹೇಗೆ ಅರಗಿಸಿಕೊಂಡು ಆಡಳಿತ ನಡೆಸುತ್ತಾರೆ ಎಂಬುದು ಮಾತ್ರ ಪ್ರಶ್ನೆಯಾಗಿಯೇ ಉಳಿದಿದೆ.
-
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
Karnataka Weather: ಕರ್ನಾಟಕದಲ್ಲಿ ಹೆಚ್ಚಿದ ಬಿಸಿಲ ಧಗೆ: ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ ದಾಖಲು, ಬೀದರ್ನಲ್ಲಿ ಚಳಿ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Expenses: ಬೆಂಗಳೂರು ಎಷ್ಟು ದುಬಾರಿ, ಅಮೆಜಾನ್ ಉದ್ಯೋಗಿ ಹಂಚಿಕೊಂಡ ವಾರಾಂತ್ಯದ ವೆಚ್ಚದ ವಿಡಿಯೋ ವೈರಲ್ -
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
Vijay Divorce: ನನ್ನ ಸಮಸ್ಯೆಗಳ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ: ಡಿವೋರ್ಸ್ ಬಗ್ಗೆ ಕೊನೆಗೂ ಮೌನ ಮುರಿದ ನಟ ದಳಪತಿ ವಿಜಯ್ -
Horoscope March 8: ಈ ರಾಶಿಯವರಿಗೆ ಉದ್ಯೋಗದಲ್ಲಿ ಒಳಿತು, ಹೂಡಿಕೆಗಳಿಂದ ಲಾಭ, ದಿನ ಭವಿಷ್ಯ -
Kamal Haasan: ನಿಮ್ಮ ಕೆಲಸ ಎಷ್ಟಿದೆಯೋ ಅಷ್ಟು ನೋಡಿಕೊಳ್ಳಿ; ಭಾರತ ಸಾರ್ವಭೌಮ ರಾಷ್ಟ್ರ: ಟ್ರಂಪ್ಗೆ ಕಮಲ್ ಹಾಸನ್ ತಿರುಗೇಟು -
ಚಿಕ್ಕಬಳ್ಳಾಪುರದ ಜಿಲ್ಲೆಯ ಸತ್ಯಸಾಯಿ ಗ್ರಾಮಕ್ಕೆ ನಟ ರಿಷಬ್ ಶೆಟ್ಟಿ ಭೇಟಿ: ಮಾನವೀಯ ಕಾರ್ಯಗಳಿಗೆ ಶ್ಲಾಘನೆ -
Kiccha Sudeep: ಸುದೀಪ್ ನಂ 1 ಅಂತ ಗೂಗಲ್ನಲ್ಲಿ ಬರುತ್ತಾ, ನಟ ಆದ್ರೆ ತಲೆ ಮೇಲೆ ಕೊಂಬು ಇದ್ಯಾ: ಡಾಗ್ ಸತೀಶ್, ವೈರಲ್ ವಿಡಿಯೋ












Click it and Unblock the Notifications