ಚುಂಚನಕಟ್ಟೆಯ ಧನುಷ್ಕೋಟಿಯಲ್ಲಿ ಕಾವೇರಿಯ ಚೆಲುವ ನರ್ತನ
ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಚುಂಚನಕಟ್ಟೆಯ ಧನುಷ್ಕೋಟಿಯಲ್ಲಿ ಕಾವೇರಿ ತನ್ನ ಜಲವೈಭವವನ್ನು ಮೆರೆಯುತ್ತಿದ್ದಾಳೆ. ವಿಶಾಲವಾಗಿ ಹರಡಿ ಕಾವೇರಿ ಧುಮ್ಮಿಕ್ಕಿ ಹರಿಯುವುದನ್ನು ನೋಡುವುದೇ ಕಣ್ಣಿಗೆ ಹಬ್ಬವಾಗಿದೆ.
ಚುಂಚನಕಟ್ಟೆಯಲ್ಲಿ ವರ್ಷಕ್ಕೊಮ್ಮೆ ನಡೆಯುವ ಜಾತ್ರೆ ಪ್ರಸಿದ್ಧಿ ಪಡೆದಿದೆ. ಹಾಗೆಯೇ ಇಲ್ಲಿನ ಧನುಷ್ಕೋಟಿಯಲ್ಲಿ ಕಾವೇರಿ ಸೃಷ್ಟಿಸುವ ಜಲನರ್ತನ ಸುಂದರವಾಗಿದ್ದು, ನೋಡುಗರನ್ನು ಸೆಳೆಯುತ್ತದೆ. ಅದರಲ್ಲೂ ಕೊಡಗಿನಲ್ಲಿ ವರುಣ ಕೃಪೆ ತೋರಿ ಕಾವೇರಿ ನದಿ ಉಕ್ಕಿ ಹರಿದಾಗ ಇಲ್ಲಿ ಸೃಷ್ಟಿಯಾಗುವ ರುದ್ರರಮಣೀಯ ದೃಶ್ಯವಂತು ವರ್ಣಿಸಲಸದಳವಾಗಿರುತ್ತದೆ.

ಕಾವೇರಿ ನದಿ ಸೃಷ್ಟಿಸಿದ ಜಲಧಾರೆ
ಕಾವೇರಿ ನದಿಯಿಂದ ಸೃಷ್ಟಿಯಾಗಿರುವ ಚುಂಚನಕಟ್ಟೆಯ ಧನುಷ್ಕೋಟಿ ಜಲಪಾತ ಈ ಭಾಗದ ಜನಕ್ಕೆ ಮುದ ನೀಡುವ ಜಲಧಾರೆ ಎಂದರೆ ತಪ್ಪಾಗಲಾರದು. ಈ ಬಾರಿ ಕೊಡಗಿನಲ್ಲಿ ಉತ್ತಮವಾಗಿ ಮಳೆಯಾಗುತ್ತಿರುವುದರಿಂದ ಮತ್ತು ಕಾವೇರಿ ನದಿಯಲ್ಲಿ ನೀರಿನ ಹರಿವು ಕೂಡ ಉತ್ತಮವಾಗಿರುವುದರಿಂದ ಕಾವೇರಿಯ ನರ್ತನವಂತೂ ಇದ್ದೇ ಇದೆ. ಹೀಗಾಗಿ ಜನ ತಮ್ಮ ದೈನಂದಿನ ಜಂಜಾಟ ಮರೆತು ಖುಷಿಯಾಗಿ ಕಾಲ ಕಳೆಯಲು ಇಲ್ಲಿ ಬರುತ್ತಲೇ ಇರುತ್ತಾರೆ.

ಈ ವರ್ಷ ಕೊರೊನಾದಿಂದ ಜನ ಕಡಿಮೆ
ಪ್ರತಿವರ್ಷವೂ ಕಾವೇರಿ ಭೋರ್ಗರೆದು ಹರಿಯುವಾಗ ಸೃಷ್ಟಿಯಾಗುವ ಈ ಜಲಧಾರೆಯ ದೃಶ್ಯ ವೈಭವವನ್ನು ನೋಡಲೆಂದೇ ಜನ ಮುಗಿ ಬೀಳುತ್ತಿದ್ದರು. ಆದರೆ ಈ ಬಾರಿ ಕೊರೊನಾದಿಂದಾಗಿ ಹೆಚ್ಚಿನವರು ಇತ್ತ ಬರಲೇ ಇಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಗುಂಪು ಗುಂಪಾಗಿ ಪ್ರವಾಸಿ ಸ್ಥಳಕ್ಕೆ ಬರುವುದು ಕೂಡ ಅಪಾಯಕಾರಿಯಾಗಿದೆ.

ಮಳೆಗಾಲದಲ್ಲಿ ರೌದ್ರ ರೂಪ ಪಡೆಯುವ ಜಲಪಾತ
ಬೇಸಿಗೆಯ ದಿನಗಳಲ್ಲಿ ಯಾವುದೇ ಅಬ್ಬರವಿಲ್ಲದೆ ಧುಮುಕುವ ಜಲಧಾರೆ ಮಳೆಗಾಲದಲ್ಲಿ ಮಾತ್ರ ರೌದ್ರತೆಯನ್ನು ತಾಳುತ್ತದೆ. ಹೆಬ್ಬಂಡೆಗಳ ಮೇಲೆ ಅಗಲವಾಗಿ ಕೆಂಬಣ್ಣದಿಂದ ಕೂಡಿದ ಜಲಪಾತವು ಸುಮಾರು 40ಕ್ಕೂ ಹೆಚ್ಚು ಅಡಿ ಎತ್ತರದಿಂದ ಧುಮುಕುತ್ತದೆ. ಈ ಸುಂದರ ದೃಶ್ಯ ನೋಡುಗರಿಗೆ ಮುದನೀಡುತ್ತದೆ. ಇಲ್ಲಿನ ಸುಂದರ ದೃಶ್ಯಗಳನ್ನು ದೂರದಿಂದಲೇ ನೋಡಿ ಹಿಂತಿರುಗಿ ಎಂಬ ಸೂಚನೆ ನೀಡಿದರೂ ಕೆಲವರು ವಿಶಾಲವಾಗಿ ಹರಿಯುವ ಕಾವೇರಿ ನದಿಯಲ್ಲಿ ಈಜುವ ಪ್ರಯತ್ನ ಮಾಡಿ ಪ್ರಾಣ ಕಳೆದುಕೊಳ್ಳುತ್ತಾರೆ. ಈಗಾಗಲೇ ಹಲವರು ಪ್ರಾಣ ಕಳೆದುಕೊಂಡ ನಿದರ್ಶನಗಳಿವೆ. ದೂರದಿಂದ ಬರುವ ಪ್ರವಾಸಿಗರಿಗೆ ಇಲ್ಲಿನ ದುರಂತಗಳ ಅರಿವಿಲ್ಲದೆ ಇರುವುದರಿಂದ ನದಿಗಿಳಿದು ನೀರಿನಲ್ಲಿ ಆಟವಾಡಲು ಮುಂದಾಗುತ್ತಾರೆ. ಆದರೆ ಇದು ಅನಾಹುತಕ್ಕೂ ಎಡೆ ಮಾಡಿಕೊಡುತ್ತದೆ.

ಸುತ್ತಮುತ್ತ ಪ್ರವಾಸಿ ತಾಣಗಳಿವೆ
ಚುಂಚನಕಟ್ಟೆಗೆ ಬಂದ ಪ್ರವಾಸಿಗರು ಇಲ್ಲಿಗೆ ಸಮೀಪವಿರುವ ರಾಮಸಮುದ್ರ ಅಣೆಕಟ್ಟೆ ಮತ್ತು ಸಕ್ಕರೆ ಗ್ರಾಮದ ಬಳಿಯ ಬಳ್ಳೂರು ಅಣೆಕಟ್ಟೆಗೂ ತೆರಳಿ ನಿಸರ್ಗದ ಸೌಂದರ್ಯವನ್ನು ಸವಿಯಬಹುದಾಗಿದೆ. ಒಟ್ಟಾರೆಯಾಗಿ ಕಾವೇರಿ ನದಿ ಸೃಷ್ಟಿಸಿರುವ ಈ ಸುಂದರ ತಾಣ ಹಲವು ರೀತಿಯಲ್ಲಿ ತನ್ನ ಚೆಲುವನ್ನು ತೆರೆದಿಡುತ್ತಿದ್ದು, ಪಟ್ಟಣದ ಜಂಜಾಟಗಳಲ್ಲಿ ಸಿಲುಕಿ ಒದ್ದಾಡುವವರು ಪ್ರಕೃತಿ ಮಡಿಲಲ್ಲಿ ಒಂದಷ್ಟು ಹೊತ್ತು ಇದ್ದು ಹೋದರೆ ಮನಸ್ಸು ಹಗುರವಾಗುತ್ತದೆ.












Click it and Unblock the Notifications