Arvind Bellad Profile: ಆರ್ ಎಸ್ ಎಸ್ ಬೆಂಬಲ ಹೊಂದಿರುವ ಯುವ ರಾಜಕಾರಣಿಯ ವ್ಯಕ್ತಿ ಪರಿಚಯ
ಹಿರಿಯ ನಾಯಕ ಚಂದ್ರಕಾಂತ್ ಬೆಲ್ಲದ್ ಅವರ ಪುತ್ರ ಅರವಿಂದ್ ಆರ್ ಎಸ್ ಎಸ್ ಬೆಂಬಲ ಹೊಂದಿರುವ ಯುವ ರಾಜಕಾರಣಿ. ಎರಡು ಬಾರಿ ಶಾಸಕರಾಗಿರುವ ಅರವಿಂದ್ ಬೆಲ್ಲದ್ ಅವರು ಹುಬ್ಬಳ್ಳಿ -ಗದಗ ಭಾಗದಲ್ಲಿ ತಕ್ಕಮಟ್ಟಿನ ಜನಪ್ರಿಯತೆ ಹೊಂದಿದ್ದಾರೆ.
ಹಿರಿಯ ನಾಯಕ ಚಂದ್ರಕಾಂತ್ ಬೆಲ್ಲದ್ ಅವರ ಪುತ್ರ ಅರವಿಂದ್ ಆರ್ ಎಸ್ ಎಸ್ ಬೆಂಬಲ ಹೊಂದಿರುವ ಯುವ ರಾಜಕಾರಣಿ. ಎರಡು ಬಾರಿ ಶಾಸಕರಾಗಿರುವ ಅರವಿಂದ್ ಬೆಲ್ಲದ್ ಅವರು ಹುಬ್ಬಳ್ಳಿ -ಗದಗ ಭಾಗದಲ್ಲಿ ತಕ್ಕಮಟ್ಟಿನ ಜನಪ್ರಿಯತೆ ಹೊಂದಿದ್ದಾರೆ. ಉತ್ತರ ಕರ್ನಾಟಕ ಭಾಗದ ಎರಡನೇ ಪೀಳಿಗೆಯ ನೇತಾರ ಎಂದು ಬಿಂಬಿಸಲಾಗುತ್ತಿದೆ. ಕರ್ನಾಟಕದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಈ ಹಿಂದೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಸಂದರ್ಭದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕಾಗಿ ಹಲವು ಹೆಸರುಗಳು ಕೇಳಿ ಬಂದಿದ್ದು, ಆ ಹೆಸರುಗಳ ಫೈಕಿ ಅರವಿಂದ್ ಬೆಲ್ಲದ್ ಅವರ ಹೆಸರು ಹೆಚ್ಚಾಗಿ ಸುದ್ದಿಯಲ್ಲಿತ್ತು.
54 ವರ್ಷದ ರಾಜಕಾರಣಿಯಾಗಿರುವ ಅರವಿಂದ್ ಬೆಲ್ಲದ್ ಅವರು 2013 ರಿಂದ ಹುಬ್ಬಳ್ಳಿ-ಧಾರವಾಡ ಕ್ಷೇತ್ರವನ್ನು ಪ್ರತಿನಿಧಿಸಿದ ಶಾಸಕರಾಗಿದ್ದಾರೆ. ಅವರು ಮೇ 2013 ರಲ್ಲಿ ಹುಬ್ಬಳ್ಳಿ-ಧಾರವಾಡ ಪಶ್ಚಿಮದಿಂದ ಆಯ್ಕೆಯಾದರು. ಚಂದ್ರಕಾಂತ್ ಬೆಲ್ಲದ್ ಮತ್ತು ಶ್ರೀಮತಿ ಲೀಲಾವತಿ ಸಿ ಬೆಲ್ಲದ್ ಅವರ ಪುತ್ರ, ಅರವಿಂದ್ ಬೆಲ್ಲದ್ ಅವರ ಕುಟುಂಬದ ಐದು ಮಕ್ಕಳಲ್ಲಿ ಕಿರಿಯ ಪುತ್ರರಾಗಿ 3 ಆಗಸ್ಟ್ 1969 ರಲ್ಲಿ ಜನಸಿದರು.

ಧಾರವಾಡದ ಕೆಇ ಬೋರ್ಡ್ಸ್ ಹೈಸ್ಕೂಲ್ ಮತ್ತು ಕರ್ನಾಟಕ ವಿಜ್ಞಾನ ಕಾಲೇಜಿನಲ್ಲಿ ಪದವಿ ಪಡೆದ ಅರವಿಂದ್ ಬೆಲ್ಲದ್ ಅವರು ಎಸ್ಡಿಎಂ ಕಾಲೇಜ್ ಆಫ್ ಇಂಜಿನಿಯರಿಂಗ್ ಧಾರವಾಡದಲ್ಲಿ ಇಂಜಿನಿಯರಿಂಗ್ ಮುಗಿಸಿದ್ದಾರೆ. ನಂತರ ಅವರು ಫ್ರಾನ್ಸ್ನ INSEAD ನಿಂದ ವ್ಯಾಪಾರ ನಿರ್ವಹಣೆಯಲ್ಲಿ ತಮ್ಮ ಸ್ನಾತಕೋತ್ತರ ಡಿಪ್ಲೊಮ ಪೂರ್ಣಗೊಳಿಸಿದರು. ನಂತರ ಅವರು ಸ್ಮೃತಿ ಅವರನ್ನ ಮದುವೆಯಾಗಿದ್ದು, ಅಗಸ್ತ್ಯ ಮತ್ತು ಪ್ರಾಚಿ ಎಂಬ ಇಬ್ಬರು ಮಕ್ಕಳಿದ್ದಾರೆ.
ಅರವಿಂದ್ ಬೆಲ್ಲದ್ ಅವರು ತಮ್ಮ ಕ್ಷೇತ್ರದಲ್ಲಿ ಸರ್ಕಾರಿ ಶಾಲೆಗಳಲ್ಲಿ ಎಲ್ಕೆಜಿ ಮತ್ತು ಯುಕೆಜಿಯನ್ನು ಪ್ರಾರಂಭಿಸಿದ್ದು. ಸರ್ಕಾರಿ ಶಾಲೆಗಳಲ್ಲಿ ಹಾಜರಾತಿ ಕಡಿಮೆಯಾಗುವುದನ್ನು ಅವರು ಗಮನಿಸಿ, ಮಕ್ಕಳ ಪೋಷಕರೊಂದಿಗೆ ಚರ್ಚಿಸಿದ ನಂತರ ಅವರು ಒಂದು ಶಾಲೆಯಲ್ಲಿ ಪ್ರಿಸ್ಕೂಲ್ ಅನ್ನು ಪ್ರಾಯೋಗಿಕ ಯೋಜನೆಯಾಗಿ ಪ್ರಾರಂಭಿಸಿದರು. ಈ ಪ್ರಯೋಗವು ಯಶಸ್ವಿಯಾಗಿದ್ದು, ಈ ಯೋಜನೆಯನ್ನು62 ಸರ್ಕಾರಿ ಶಾಲೆಗಳಿಗೆ ವಿಸ್ತರಿಸಲು ಕಾರಣವಾಯಿತು. ಈ ಕಾರಣದಿಂದಾಗಿ ವಿದ್ಯಾರ್ಥಿಗಳ ಸೇರ್ಪಡೆಯ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿತ್ತು.

ಅರವಿಂದ್ ಬೆಲ್ಲದ್ ನೇತೃತ್ವದಲ್ಲಿ ಕರ್ನಾಟಕಕ್ಕೆ ಪ್ರಥಮ ಬಾರಿಗೆ ವೈಟ್ ಟಾಪಿಂಗ್ ತಂತ್ರಜ್ಞಾನವನ್ನು ಧಾರವಾಡದಲ್ಲಿ ಅಳವಡಿಸಲಾಯಿತು. ಧಾರವಾಡಕ್ಕೆ ಐಐಟಿ ಪಡೆಯುವಲ್ಲಿ ಮತ್ತು ಅವಳಿ ನಗರದ ಸಮಗ್ರ ಅಭಿವೃದ್ಧಿಯಲ್ಲಿ ಅವರು ನಿರ್ಣಾಯಕ ಪಾತ್ರ ವಹಿಸಿದ್ದಾರೆ.
ಯಡಿಯೂರಪ್ಪ್ ನವರ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಸಂದರ್ಭದಲ್ಲಿ ಅರವಿಂದ್ ಬೆಲ್ಲದ್ ಅವರ ಹೆಸರು ಮುಚ್ಚೂಣಿಯಲ್ಲಿದ್ದು, ನಂತರ ಬೊಮ್ಮಾಯಿ ಸಂಪುಟದಲ್ಲಿ ಮಂತ್ರಿ ಸ್ಥಾನಕ್ಕಾಗಿ ಸಾಕಷ್ಟು ಪ್ರಯತ್ನ ನಡೆಸಿದರು ಎಂದು ಹೇಳಲಾಗಿದೆ.
ಹೈಕಮಾಂಡ್ ನಾಯಕ ಜೊತೆಗೆ ಉತ್ತಮ ಸಂಬಂಧ ಹೊಂದಿರುವ ಅರವಿಂದ್ ಬೆಲ್ಲದ್ ಸದ್ಯ ಸಕ್ರಿಯ ರಾಜಕಾರಣದಲ್ಲಿ ಫುಲ್ ಆಕ್ಟಿವ್ ಆಗಿದ್ದು, 2023 ರ ವಿಧಾನಸಭಾ ಚುನಾವಣೆ ಹಿನ್ನೆಲೆ ರಾಜ್ಯಾದ್ಯಂತ ಬಿಜೆಪಿ ನಡೆಸುತ್ತಿರುವ ವಿಜಯ ಸಂಕಲ್ಪ ಯಾತ್ರೆಯಲ್ಲಿ ಪ್ರಚಾರವನ್ನ ನಡೆಸುತ್ತಿದ್ದಾರೆ.












Click it and Unblock the Notifications