ಬಿಜೆಪಿ ಸ್ಥಾಪಕ ಶ್ಯಾಮ ಪ್ರಸಾದರ ಕಾಶ್ಮೀರ ಕನಸು ಈಗ ನನಸು
"ಸಂವಿಧಾನದ 370ನೇ ಪರಿಚ್ಛೇದ ರದ್ದುಗೊಂಡಿದೆ, ಜಮ್ಮು ಮತ್ತು ಕಾಶ್ಮೀರಕ್ಕೆ ಇದ್ದ ವಿಶೇಷ ಸ್ಥಾನಮಾನ, ರಾಜ್ಯ ಆಡಳಿತ ಅಧಿಕಾರ ರದ್ದಾಗಿದೆ, ಒಂದು ರಾಷ್ಟ್ರ, ಒಂದು ಸಂವಿಧಾನ, ಒಂದು ರಾಷ್ಟ್ರಗೀತೆ ಹಾಗೂ ಒಂದು ರಾಷ್ಟ್ರಧ್ವಜ ಎಂಬ ಪರಿಕಲ್ಪನೆ ಮತ್ತೆ ಕಣಿವೆ ರಾಜ್ಯದಲ್ಲಿ ಅಸ್ತಿತ್ವ ಪಡೆದುಕೊಂಡಿದೆ". ಈ ಮೂಲಕ ಜನಸಂಘ- ಬಿಜೆಪಿ ಸಂಸ್ಥಾಪಕರಾದ ಶ್ಯಾಮ ಪ್ರಸಾದ ಮುಖರ್ಜಿ ಕನಸು ನನಸಾಗಿಸಲಾಗಿದೆ.
ಭಾರತದ ಪ್ರಥಮ ಪ್ರಧಾನಿ ಜವಹಾರ ಲಾಲ್ ನೆಹರೂ ಕ್ಯಾಬಿನೆಟ್ ನಲ್ಲಿ ಸಚಿವರಾಗಿದ್ದ ಶ್ಯಾಮ್ಪ್ರಸಾದ್ ಮುಖರ್ಜಿ ಅವರು ಭಾರತೀಯ ಜನ ಸಂಘದ ಸಂಸ್ಥಾಪಕರು.
ಜಮ್ಮು ಮತ್ತು ಕಾಶ್ಮೀರ ಎಂದೆಂದಿಗೂ ಭಾರತದ ಅವಿಭಾಜ್ಯ ಅಂಗ ಎಂದು ಪ್ರತಿಪಾದಿಸಿದ್ದರು. ಬ್ರಿಟಿಷ್ ಆಡಳಿತದಲ್ಲಿ ಜ್ಯೂರಿಸ್ಟ್ ಆಗಿದ್ದ ಸರ್ ಅಶುತೋಷ್ ಮುಖರ್ಜಿ ಅವರ ಪುತ್ರ ಶ್ಯಾಮ್ ಪ್ರಸಾದ್ ಅವರು ಕಾಶ್ಮೀರ ವಿಷಯ ಸೇರಿದಂತೆ ಇನ್ನು ಕೆಲವರು ವಿರೋಧಿ ನಡೆಗಳಿಂದ ನೆಹರೂ ಕ್ಯಾಬಿನೆಟ್ ತೊರೆಯಬೇಕಾಯಿತು.
ಸ್ವಾತಂತ್ರ್ಯ ಭಾರತದಲ್ಲಿ ಸಂವಿಧಾನ ವಿಧಿ 370 ಅಗತ್ಯವೇನು ಎಂದು ಸಂಸತ್ತಿನಲ್ಲಿ ಪ್ರಶ್ನಿಸಿದ್ದರು. ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಬಗ್ಗೆ ದನಿಯೆತ್ತಿ, ಭಾರತದ ಭಾಗವಾಗಿದ್ದು, ಸಮಾನ ಆದ್ಯತೆ ನೀಡಬೇಕಿದೆ ಎಂದಿದ್ದರು.
"ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ಮೇಲೆ ಭಾಷಾವಾರು ಪ್ರಾಂತ್ಯ ರಚನೆಗೆ ಆದ್ಯತೆ ಸಿಕ್ಕ ಬಳಿಕ ಜಮ್ಮು ಮತ್ತು ಲಡಾಕ್ ಭಾರತದ ಅವಿಭಾಜ್ಯ ಅಂಗವಾಗಿ ಉಳಿಯಬೇಕು" ಎಂದರು.

ಪ್ರತ್ಯೇಕ ಧ್ವಜ ಏಕೆ ಎಂದಿದ್ದ ಶ್ಯಾಮ ಪ್ರಸಾದ್
"ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರತ್ಯೇಕ ಸಂವಿಧಾನ, ಪ್ರತ್ಯೇಕ ಧ್ವಜ ಹೊಂದುವ ಅಧಿಕಾರ ನೀಡುವ ಮೂಲಕ ದೇಶದ ಅಖಂಡತೆ, ಐಕ್ಯತೆ ವಿಷಯದಲ್ಲಿ ರಾಜಿಯಾದಂತಾಗುತ್ತದೆ. ಪಾಕ್ ಆಕ್ರಮಿತ ಕಾಶ್ಮೀರವೂ ನಮ್ಮ ಸ್ವತ್ತು ಇದನ್ನು ಹಿಂಪಡೆಯದಿದ್ದರೆ, ರಾಷ್ಟ್ರೀಯ ಅವಮಾನ" ಎಂದು 1953ರಲ್ಲಿ ನೆಹರೂಗೆ ಪತ್ರ ಬರೆದಿದ್ದರು. ಕಾಶ್ಮೀರ ವಿಚಾರದಲ್ಲಿ ನೆಹರೂ ನಡೆದುಕೊಂಡ ರೀತಿಯನ್ನು ಆರಂಭದಲ್ಲೇ ಖಂಡಿಸಿ, ಅಖಂಡ ಭಾರತ ಉಳಿಸಿಕೊಳ್ಳುವಂತೆ ಆಗ್ರಹಿಸಿದ್ದರು.

ಶೇಖ್ ಅಬ್ದುಲ್ಲಾ ಕೂಡಾ ಪ್ರತಿಕ್ರಿಯಿಸಿರಲಿಲ್ಲ
ಆದರೆ, ಕೇಂದ್ರದ ನೆಹರೂ ಸರ್ಕಾರ, ಕಾಶ್ಮೀರದ ಶೇಖ್ ಅಬ್ದುಲ್ಲಾ ಆಡಳಿತಕ್ಕೆ ಶ್ಯಾಮ ಪ್ರಸಾದ್ ಅವರ ದನಿ ಕೇಳಿಸಲಿಲ್ಲ. ಕೊನೆಗೆ ಜಮ್ಮು ಮತ್ತು ಕಾಶ್ಮೀರದ ಸಮಗ್ರ ಏಕೀಕರಣದ ಕುರಿತು ದೇಶಾದ್ಯಂತ ಜಾಗೃತಿ ಮೂಡಿಸಲು ಶ್ಯಾಮ್ ಪ್ರಸಾದ್ ಮುಖರ್ಜಿ, ಅಟಲ್ ಬಿಹಾರಿ ವಾಜಪೇಯಿ ದೇಶದೆಲ್ಲೆಡೆ ಪ್ರತಿಭಟನೆ ಹಮ್ಮಿಕೊಳ್ಳಲು ಮೇ 8, 1953ರಂದು ಜಮ್ಮು ಕಡೆಗೆ ತೆರಳಿದರು.

ಶ್ಯಾಮ್ ಪ್ರಸಾದರನ್ನು ಜೈಲಿಗೆ ತಳ್ಳಲಾಯಿತು
ಆದರೆ, ಅಷ್ಟರಲ್ಲಿ ಪರ ರಾಜ್ಯದವರ ಪ್ರವೇಶಕ್ಕೆ ಶೇಖ್ ಅಬ್ದುಲ್ಲಾ ಸರ್ಕಾರ ನಿರ್ಬಂಧ ಹೇರಿತ್ತು. ಜಾಗೃತಿ ಅಭಿಯಾನದ ಮೂಲಕ 1953ರ ಮೇ 11ರಂದು ಅನುಮತಿ ಪಡೆಯದೆ ಶ್ರೀನಗರ ಪ್ರವೇಶಿಸಿದ ಶ್ಯಾಮ್ ಪ್ರಸಾದರನ್ನು ಜೈಲಿಗೆ ತಳ್ಳಲಾಯಿತು.
ಜೂನ್ ತಿಂಗಳಿನಲ್ಲಿ ಕೈಕಾಲು ನೋವು, ಜ್ವರದಿಂದ ಬಳಲಿದ ಶ್ಯಾಮ್ ಪ್ರಸಾದ್ 1953ರ ಜೂನ್ 23ರಂದು ಜೈಲಿನಲ್ಲಿ ಹೃದಯಾಘಾತದಿಂದ ಮೃತರಾದರು.

ಸಂಘ ಪರಿವಾರಕ್ಕೆ ಆಗಸ್ಟ್ 05 ಅವಿಸ್ಮರಣೀಯ ದಿನ
ಕಾಶ್ಮೀರದ ಸುಸ್ಥಿತಿಗಾಗಿ ಕನಸು ಕಂಡು ಹೋರಾಟ ನಡೆಸಿದ್ದ ಶ್ಯಾಮ್ ಪ್ರಸಾದ್ ಅವರನ್ನು ಆಗಸ್ಟ್ 05ರಂದು ಹಿರಿಯ ನಾಯಕರಾದ ಎಲ್. ಕೆ ಅಡ್ವಾಣಿ, ಮುರಳಿ ಮನೋಹರ್ ಜೋಶಿ ಅವರು ಸ್ಮರಿಸಿದ್ದಾರೆ. ಹೀಗಾಗಿ, ಬಿಜೆಪಿ, ಆರೆಸ್ಸೆಸ್ ಸಂಘ ಪರಿವಾರಕ್ಕೆ ಆಗಸ್ಟ್ 05 ಅವಿಸ್ಮರಣೀಯ ದಿನ. ಮೋದಿ ಹಾಗೂ ಅಮಿತ್ ಶಾ ಅವರು ವಿಧೇಯಕ ಮಂಡನೆ ಕುರಿತಂತೆ ಸೂಕ್ತ ಯೋಜನೆ ರೂಪಿಸಿ, ಕಣಿವೆ ರಾಜ್ಯದಲ್ಲಿ ಸಮಸ್ಯೆಯಾಗದಂತೆ ಎಲ್ಲವನ್ನು ಕಾರ್ಯಗತಗೊಳಿಸಿದ್ದಾರೆ.












Click it and Unblock the Notifications