ಸಮೀಕ್ಷೆ: ಚುನಾವಣಾ ನಿರತ ಮುಂದಿನ ಸಿಎಂ ಯಾರಾಗಬೇಕು?
ಕೇರಳ ಜೊತೆಗೆ ತಮಿಳುನಾಡು, ಅಸ್ಸಾಂ, ಪುದುಚೇರಿ , ಪಶ್ಚಿಮ ಬಂಗಾಳದ ವಿಧಾನಸಭೆಗೆ ಚುನಾವಣೆ ದಿನಾಂಕಗಳನ್ನು ಪ್ರಕಟಿಸಲಾಗಿದೆ. ಮಾರ್ಚ್ 27ರಿಂದ ಚುನಾವಣೆ ಪ್ರಕ್ರಿಯೆ ಆರಂಭಗೊಳ್ಳಲಿದ್ದು, ಮೇ 2ರಂದು ಫಲಿತಾಂಶ ಹೊರಬರಲಿದೆ. ಈ ನಡುವೆ ಎಬಿಪಿ ಸಿ -ವೋಟರ್ ಚುನಾವಣಾ ಪೂರ್ವ ಸಮೀಕ್ಷೆ ಫಲಿತಾಂಶ ನೀಡಿದೆ.
ತಮಿಳುನಾಡು, ಕೇರಳ, ಅಸ್ಸಾಂ, ಪಶ್ಚಿಮ ಬಂಗಾಳ ಹಾಗೂ ಪುದುಚೇರಿ ವಿಧಾನಸಭಾ ಕ್ಷೇತ್ರಗಳಲ್ಲಿ ತಕ್ಷಣವೇ ನೀತಿ ಸಂಹಿತೆ ಜಾರಿಗೆ ಬರಲಿದೆ. 5 ರಾಜ್ಯಗಳಲ್ಲಿನ 824 ಕ್ಷೇತ್ರಗಳಲ್ಲಿ 18.68 ಕೋಟಿ ಮತದಾರರಿದ್ದಾರೆ. ಚುನಾವಣಾ ಆಯೋಗದ ಸಹಾಯವಾಣಿ ಸಂಖ್ಯೆ 1950 ಬಳಸಲು ಸೂಚಿಸಲಾಗಿದೆ. ಮತದಾನಕ್ಕೆ 1 ಗಂಟೆ ಹೆಚ್ಚಿನ ಅವಧಿ ನೀಡಲಾಗಿದೆ.
ಅಸ್ಸಾಂ, ಪುದುಚೇರಿಗಳಲ್ಲಿ ಬಿಜೆಪಿ ಬಹುಮತ ಸಾಧಿಸಲಿದ್ದರೆ, ತಮಿಳುನಾಡು, ಕೇರಳ ಹಾಗೂ ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ನಿರಾಶೆ ಕಾದಿದೆ. ಬೆಂಗಾಳದಲ್ಲಿ ಮಾತ್ರ ಎರಡನೆ ಸ್ಥಾನಕ್ಕೇರಲಿದ್ದು , ಉತ್ತಮ ಸಾಧನೆ ತೋರಲಿದೆ ಎಂದು ಎಬಿಪಿ ಸಿ -ವೋಟರ್ ಸಮೀಕ್ಷೆ ತಿಳಿಸಿದೆ. ಅದೇ ರೀತಿ ಚುನಾವಣೆ ಎದುರಿಸುತ್ತಿರುವ ಐದು ರಾಜ್ಯಗಳಲ್ಲಿ ಮುಂದಿನ ಸಿಎಂ ಯಾರಾಗಬೇಕು? ಎಂಬ ಪ್ರಶ್ನೆಗೂ ಸಮೀಕ್ಷೆಯಲ್ಲಿ ಉತ್ತರ ಕಂಡುಕೊಳ್ಳಲಾಗಿದ್ದು, ಜನಾಭಿಮತ ಮುಂದಿದೆ...

ಕೇರಳ ಸಿಎಂ ಆಗಲು ಯಾರು ಸೂಕ್ತ?
ಎಬಿಪಿ ಸಿ -ವೋಟರ್ ಚುನಾವಣಾ ಪೂರ್ವ ಸಮೀಕ್ಷೆಯಂತೆ, ಹಾಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಪರ ಶೇ 38.5ರಷ್ಟು ಮತ ಹಾಕಿದ್ದಾರೆ. ಶೇ 27ರಷ್ಟು ಮಂದಿ ಮಾಜಿ ಸಿಎಂ ಉಮ್ಮನ್ ಚಾಂಡಿ ಸಿಎಂ ಆದರೆ ಒಳ್ಳೆಯದು ಎಂದಿದ್ದಾರೆ. ಕೇರಳ ಆರೋಗ್ಯ ಸಚಿವೆ ಶೈಲಜಾ ಅವರ ಹೆಸರು ಕೇಳಿ ಬಂದಿದ್ದು, ಅವರ ಪರ ಶೇ 6.9ರಷ್ಟು ಮಂದಿ ನಿಂತಿದ್ದಾರೆ. ಇನ್ನು ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್ ಮುಖಂಡ ಶಶಿ ತರೂರ್ ಪರ ಶೇ 5.2ರಷ್ಟು ಮಂದಿ ಮತ ಹಾಕಿರುವುದು ವಿಶೇಷ.

ಪುದುಚೇರಿ ಸಿಎಂ ಆಗಲು ಯಾರು ಸೂಕ್ತ
ಅವಧಿಗೂ ಮುನ್ನ ನಾರಾಯಣ ಸ್ವಾಮಿ ಅವರ ಸರ್ಕಾರ ಪತನಗೊಂಡು ರಾಷ್ಟ್ರಪತಿ ಆಳ್ವಿಕೆಯನ್ನು ಪುದುಚೇರಿ ಕಾಣುತ್ತಿದೆ. ಚುನಾವಣೆಗೂ ಮುನ್ನ ಈ ಬೆಳವಣಿಗೆ ಕಂಡು ಬಂದರೂ ನಾರಾಯಣ ಸ್ವಾಮಿ ಪರ ಶೇ 38.2ರಷ್ಟು ಮಂದಿ ಮತಹಾಕಿದ್ದಾರೆ. ಆದರೆ, ನಾರಾಯಣ ಸ್ವಾಮಿ ಎರಡನೇ ಸ್ಥಾನದಲ್ಲಿದ್ದು, ಅಗ್ರಸ್ಥಾನ ಎನ್ ರಂಗಸ್ವಾಮಿ ಪಾಲಾಗಿದೆ. ರಂಗಸ್ವಾಮಿ ಅವರ ಪರ ಶೇ 45.8 ಮಂದಿ ಮತ ಹಾಕಿದ್ದಾರೆ.

ತಮಿಳುನಾಡು ಸಿಎಂ ಆಗಲು ಯಾರು ಸೂಕ್ತ
ತಮಿಳುನಾಡಿನಲ್ಲಿ ಹಾಲಿ ಸಿಎಂ ಪಳನಿಸ್ವಾಮಿಗೆ ಹೋಲಿಸಿದರೆ ಡಿಎಂಕೆ ಮುಖ್ಯಸ್ಥ ಎಂ.ಕೆ ಸ್ಟಾಲಿನ್ ಅವರು ಮುಂದಿನ ಸಿಎಂ ಆಗಲು ಸೂಕ್ತ ಎಂದು ಸಮೀಕ್ಷೆಯಲ್ಲಿ ಜನತೆ ಹೇಳಿದ್ದಾರೆ. ಪಳನಿಸ್ವಾಮಿ ಅವರು ಶೇ 32.1ರಷ್ಟು ಮತ ಗಳಿಸಿದ್ದಾರೆ. ಜೈಲಿನಿಂದ ಬಂದ ಶಶಿಕಲಾ ಅವರಿಗೆ ಶೇ 7.8ರಷ್ಟು ಮತ ಸಿಕ್ಕಿವೆ. ಇನ್ನು ರಾಜಕೀಯದಿಂದ ದೂರ ಉಳಿಯಲು ನಿರ್ಧರಿಸಿದ ರಜನಿಕಾಂತ್ ಅವರ ಪರ ಶೇ 3.2ರಷ್ಟು ಮಂದಿ ಮತ ಹಾಕಿದ್ದಾರೆ.

ಅಸ್ಸಾಂ ಸಿಎಂ ಆಗಲು ಯಾರು ಸೂಕ್ತ
ಎಬಿಪಿ ಸಿ -ವೋಟರ್ ಚುನಾವಣಾ ಪೂರ್ವ ಸಮೀಕ್ಷೆಯಂತೆ, ಹಾಲಿ ಸಿಎಂ ಸರ್ಬನಂದ್ ಸೊನೊವಾಲ್ ಸೂಕ್ತ ಎಂದು ಶೇ 43.3ರಷ್ಟು ಮಂದಿ ಮತ ಹಾಕಿದ್ದಾರೆ.ಶೇ 26.4ರಷ್ಟು ಮಂದಿ ಕಾಂಗ್ರೆಸ್ಸಿನ ಗೌರವ್ ಗೊಗಾಯಿ ಪರ ಇದ್ದಾರೆ. ಶೇ 15.3 ರಷ್ಟು ಮಂದಿ ಬಿಜೆಪಿ ಮುಖಂಡ ಹಿಮಂತಾ ಬಿಸ್ವಾ ಶರ್ಮ ಪರ ಮತ ಹಾಕಿದ್ದಾರೆ.

ಬೆಂಗಾಳ ಸಿಎಂ ಆಗಲು ಯಾರು ಸೂಕ್ತ
ಎಬಿಪಿ ಸಿ -ವೋಟರ್ ಚುನಾವಣಾ ಪೂರ್ವ ಸಮೀಕ್ಷೆಯಂತೆ, ಶೇ 54.5 ರಷ್ಟು ಮಂದಿ ಮಮತಾ ಬ್ಯಾನರ್ಜಿ ಮುಂದಿನ ಸಿಎಂ ಆಗಲಿ ಎಂದು ಬಯಸಿದ್ದಾರೆ. ಬಿಜೆಪಿ ಅಧ್ಯಕ್ಷ ದಿಲಿಪ್ ಘೋಶ್ ಪರ ಶೇ 24.6ರಷ್ಟು ಮಂದಿ ಮತ ಹಾಕಿದ್ದಾರೆ. ಬಿಜೆಪಿಯ ಮುಕುಲ್ ರಾಯ್ ಅವರಿಗೆ ಶೇ 8.5 ರಷ್ಟು ಮತ ಸಿಕ್ಕಿದೆ. ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿಗೆ ಶೇ 2.2ರಷ್ಟು ಹಾಗೂ ಸಿಪಿಐ(ಎಂ)ನ ಸುಜಾನ್ ಚಕ್ರವರ್ತಿಗೆ ಶೇ 3.2ರಷ್ಟು ಮತಗಳು ಸಿಕ್ಕಿವೆ












Click it and Unblock the Notifications