ಪ್ರೀತಿ..ವಶೀಕರಣ..ಮದುವೆ..ಕುಟುಂಬದಿಂದ ದೂರ: ತಾಳ ತಪ್ಪಿದ ಗಾಯಕಿ ಪೃಥ್ವಿ ಭಟ್ ಬದುಕು!
ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಸರಿಗಮಪ ಮೂಲಕ ಜನಪ್ರಿಯತೆ ಪಡೆದಿರುವ ಪೃಥ್ವಿ ಭಟ್ ಇತ್ತೀಚಿಗಷ್ಟೇ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಖ್ಯಾತ ಗಾಯಕಿ ಪ್ರಥ್ವಿ ಭಟ್ ಕಳೆದ ಕೆಲವು ದಿನಗಳ ಹಿಂದೆ ಅಭಿಷೇಕ್ ಎನ್ನುವವರನ್ನು ಮದುವೆಯಾಗಿದ್ದಾರೆ. ಹಸೆಮಣೆ ಏರಿ ಹೊಸ ಜೀವನಕ್ಕೆ ಕಾಲಿಟ್ಟ ಗಾಯಕಿ ಹಾಗೂ ಆಕೆಯ ಪತಿ ವಿರುದ್ಧ ಆರೋಪ ಕೇಳಿಬಂದಿದ್ದು, ಸ್ವತಃ ಪೃಥ್ವಿ ಭಟ್ ತಂದೆ, 'ಮಗಳು ನಮ್ಮ ವಿರೋಧದ ನಡುವೆಯೂ ಮನೆ ಬಿಟ್ಟು ಹೋಗಿ ಮದುವೆಯಾಗಿದ್ದಾಳೆ. ಆಕೆಯನ್ನು ವಶೀಕರಣ ಮಾಡಿಕೊಂಡು ಮದುವೆ ಮಾಡಿಕೊಳ್ಳಲಾಗಿದೆ' ಎಂದು ಆರೋಪಿಸಿದ್ದಾರೆ.
ಗಾಯಕಿ ಪೃಥ್ವಿ ಭಟ್ ತಮ್ಮ ಪೋಷಕರ ವಿರೋಧದ ನಡುವೆ ಮನೆ ಬಿಟ್ಟು ಹೋಗಿ ಮದುವೆಯಾಗಿದ್ದಾರೆ ಎನ್ನುವ ಮಾಹಿತಿ ಇದರಿಂದ ಬಹಿರಂಗವಾಗಿದೆ. ಪ್ರಥ್ವಿ ಭಟ್ ತಂದೆ ಮಾತನಾಡಿದ್ದಾರೆ ಎನ್ನಲಾದ ಆಡಿಯೋವೊಂದು ಈಗ ಎಲ್ಲೆಡೆ ವೈರಲ್ ಆಗುತ್ತಿದ್ದು, ಈ ಆಡಿಯೋದಲ್ಲಿ ಪೃಥ್ವಿ ಭಟ್ ತಂದೆ ಸಂಗೀತ ಶಿಕ್ಷಕ ನರಹರಿ ದೀಕ್ಷಿತ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

'ನಾನು ಶಿವ ಪ್ರಸಾದ್, ಗಾಯಕಿ ಪ್ರಥ್ವಿ ಭಟ್ ಅಪ್ಪ. ನನ್ನ ಮಗಳು ಕಳೆದ ತಿಂಗಳು ಇಪ್ಪತ್ತೇಳನೇ ತಾರೀಖಿನಂದು ದೇವಸ್ಥಾನದಲ್ಲಿ ಯಾರನ್ನೋ ಮದುವೆಯಾಗಿ ನಮ್ಮನ್ನು ಬಿಟ್ಟು ಹೋಗಿದ್ದಾಳೆ. ನಮ್ಮ ಸಂಪರ್ಕದಲ್ಲಿ ಇಲ್ಲ ಅವಳು ಈಗ. ಅವನು ಹವ್ಯಕ ಅಲ್ಲ, ಬ್ರಾಹ್ಮಣನೂ ಅಲ್ಲ. ಜಾತಿ ಯಾವುದಾದರೇನೂ ಅವಳು ನಮ್ಮನ್ನು ಬಿಟ್ಟು ಹೋಗಿ ಆಗಿದೆ. ಇನ್ನು ಜಾತಿ ಕಟ್ಟಿಕೊಂಡು ಏನು ಮಾಡಲು ಆಗುವುದಿಲ್ಲ. ನಮ್ಮನ್ನು ಬಿಟ್ಟು ಹೋಗಿ ಇಪ್ಪತ್ತು ದಿವಸ ಆಗಿ ಹೋಯ್ತು. ಅವಳಿಗೆ ಇಷ್ಟು ತನಕ ನಮ್ಮ ನೆನಪು ಕೂಡ ಬಂದಿಲ್ಲ. ಆ ರೀತಿ ಇದ್ದಾಳೆ'.
'ಇದನ್ನು ನೀವ್ಯಾರೂ ನಿರೀಕ್ಷೆ ಮಾಡುವಂತಹ ವಿಷಯವೇ ಅಲ್ಲ. ಅವಳು ಯಾವ ರೀತಿ ಇದ್ದಳು. ಅವಳನ್ನು ನಾವು ಯಾವ ರೀತಿ ಬೆಳೆಸಿದ್ದೇವೆ ಎನ್ನುವುದು ನೋಡಿದವರಿಗೆ ಗೊತ್ತಿರುವ ವಿಚಾರ. ಯಾಕೆ ಹೀಗೆ ಆಯ್ತು ಎನ್ನುವುದು ಯಾರಿಗೂ ಅರ್ಥವಾಗುವುದಿಲ್ಲ. ಇದರಲ್ಲಿ ಮುಖ್ಯವಾದ ವಿಷಯ ಅಂದರೆ ಅವಳನ್ನು ಧಾರೆ ಎರೆದು ಮದುವೆ ಮಾಡಿಕೊಟ್ಟಿರುವುದು, ನಮ್ಮ ಗಿರಿ ನಗರದ ವಲಯದ ನಿವಾಸಿ. ಭಯಂಕರ ಸಂಗೀತ ಶಿಕ್ಷಕ. ಮಹಾ ದುಷ್ಟ. ನರಹರಿ ದೀಕ್ಷಿತ್ ಎನ್ನುವವರು'.

'ನರಹರಿ ದೀಕ್ಷಿತ್ ಬಗ್ಗೆ ನಿಮಗೆಲ್ಲರಿಗೂ ಗೊತ್ತಿರಬಹುದು, ಹಲವು ಕಡೆ ಸಂಗೀತ ತರಗತಿಗಳನ್ನು ಮಾಡುತ್ತಾನೆ. ಜೀ ಕನ್ನಡದ ಸರಿಗಮಪದ ಜ್ಯೂರಿಯಾಗಿ ಭಾಗವಹಿಸುತ್ತಾರೆ. ಈಗ ಅವನು ನಾನು ಮೊದಲೇ ಶಿವಣ್ಣಗೆ ಎಲ್ಲಾ ಹೇಳಿದ್ದೆ, ಪರಿಸ್ಥಿತಿ ಕೈ ಮೀರಿದೆ ಅಂತಾ ಹೇಳಿದ್ದೆ, ನಾವೇ ಅದನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ ಅಂತಾ ಹೇಳುತ್ತಾನೆ. ಈ ಹಿಂದೆ ನಮ್ಮ ಮನೆಗೆ ಬಂದಿದ್ದ ಬರಲು ನಾನೇ ಹೇಳಿದ್ದು, ನಿಮ್ಮ ಶಿಷ್ಯರಲ್ಲಿ ಯಾರಾದರೂ ಹವ್ಯಕ ಗಾಯಕ ಇದ್ದರೆ ಹೇಳಿ ಮಗಳಿಗೆ ಹುಡುಗ ನೋಡುತ್ತಿದ್ದೇನೆ ಅಂತಾ ಫೋನ್ ಮಾಡಿ ಹೇಳಿದ್ದೆ'.
'ಮಾರ್ಚ್ ಏಳನೇ ತಾರೀಕು ನಮ್ಮ ಮನೆಗೆ ಬಂದವ ಜೀ ಕನ್ನಡದಲ್ಲಿ ಅಭಿಷೇಕ್ ಎನ್ನುವ ಹುಡುಗ ನಮ್ಮ ಪೃಥ್ವಿ ಹಿಂದೆ ಬಿದ್ದಿದ್ದಾನೆ. ಪೃಥ್ವಿಯನ್ನು ಇಷ್ಟಪಡುತ್ತಿದ್ದಾನೆ, ಪೃಥ್ವಿಗೂ ಮನಸ್ಸು ಇರುವ ಹಾಗಿದೆ ಹೀಗಾಗಿ ಮೊದಲು ಅದನ್ನು ಬಗೆಹರಿಸಿಕೊಳ್ಳಿ ಆಮೇಲೆ ಹುಡುಗ ಹುಡುಕಲು ಜಾತಕ ಕೊಡಿ ಅಂತಾ ಹೇಳಿದ್ದ. ಪರಿಸ್ಥಿತಿ ಕೈ ಮೀರಿದೆ. ಅವರು ಮದುವೆ ಹಂತಕ್ಕೆ ಬಂದಿದ್ದಾರೆ ಅದನ್ನು ಯಾವುದನ್ನು ಹೇಳಿಲ್ಲ ಅವರು'.

'ಅವರು ಹೋದ ಮೇಲೆ ಪೃಥ್ವಿಯನ್ನು ವಿಚಾರಿಸಿದಾಗ ಅಭಿಷೇಕ್ ತುಂಬಾ ಸಮಯದಿಂದ ನನ್ನನ್ನು ಇಷ್ಟಪಡುತ್ತಿದ್ದಾರೆ. ನಿಮಗೆ ಇಷ್ಟವಾದರೆ ನನಗೂ ಇಷ್ಟ. ಇಲ್ಲವಾದರೆ ನನಗೂ ಬೇಡ. ನಿಮಗೆ ಇಷ್ಟ ಇದ್ದರೆ ನಾನು ಮದುವೆಯಾಗುತ್ತೇನೆ ಅಂತಾ ಹೇಳಿದ್ದಳು. ನನಗೆ ಧೈರ್ಯ ಬರಲಿಲ್ಲ. ಅವಳಿಗೆ ದೇವರ ಮೇಲೆ ನಂಬಿಕೆ ಇದೆ. ಹೀಗಾಗಿ ದೇವರ ಕೋಣೆಯಲ್ಲಿ ದೇವರ ಮೇಲೆ ಆಣೆ ಮಾಡು ಅಂದಾಗ, ಪ್ರಮಾಣ ಮಾಡಿ ನೀವು ಹೇಳಿದ ಹುಡುಗನನ್ನೇ ಮದುವೆಯಾಗುವುದು ಎಂದು ಹೇಳಿದಳು. ನನ್ನ ತಲೆ ಮೇಲೆ ಕೈ ಇಟ್ಟು ಆಣೆ ಮಾಡಿದಳು. ಇಷ್ಟೆಲ್ಲಾ ಆದ ಮೇಲೆ ನಮ್ಮ ಮಗಳನ್ನು ನಾವು ನಂಬದೇ ಇರಲು ಸಾಧ್ಯವೇ?' ಎಂದಿದ್ದಾರೆ.
'ಈ ನರಹರಿ ದೀಕ್ಷಿತ್ ಬಂದು ಹೋದ ಮೇಲೆ ಅವಳ ನಡವಳಿಕೆಯಲ್ಲಿ ಬದಲಾವಣೆ ಆಗಿತ್ತು. ಒಂದು ರೀತಿ ವಶೀಕರಣ ಆದವರ ರೀತಿ ಇದ್ದಳು. ನಾನು ಅದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಿತ್ತು. ಅವಳ ವರ್ತನೆ ಬದಲಾದಾಗ ಸ್ವಲ್ಪ ಯೋಚನೆ ಮಾಡಬೇಕಿತ್ತು ನಾನು. ಇಪ್ಪತ್ತೇಳನೇ ತಾರೀಖು ರೆಕಾರ್ಡಿಂಗ್ ಇದೆ ಅಂತಾ ಹೇಳಿದ್ದಳು. ನಾನೇ ಸ್ಟುಡಿಯೋಗೆ ಬಿಟ್ಟು ಬಂದೆ. ಮಧ್ಯಾಹ್ನ ನಮಗೆ ಪೊಲೀಸ್ ಠಾಣೆಯಿಂದ ಕರೆ ಬಂತು ಪೃಥ್ವಿ ನಿಮ್ಮ ಮಗಳಾ? ಅವರು ಅಭಿಷೇಕ್ ಎನ್ನುವವರನ್ನು ಮದುವೆಯಾಗಿದ್ದಾರೆ. ಈಗ ನಿಮ್ಮ ಮನೆಗೆ ಬರುತ್ತಾರೆ ಅಂತಾ ಹೇಳಿದರು. ಆಗ ನಾನು ನಮ್ಮ ಮನೆಗೆ ಬರುವುದು ಬೇಡ ಅಂತಾ ಹೇಳಿದೆ'.
'ಅದಾದ ಮೇಲೆ ಒಂದೆರಡು ಸಾರಿ ತಪ್ಪಾಯ್ತು ಅಪ್ಪ-ಅಮ್ಮ ಅಂತಾ ಫೋನ್ ಮಾಡಿದ್ದಳು. ಅದಾದ ಮೇಲೆ ಗೊತ್ತಾಯ್ತು. ನರಹರಿ ದೀಕ್ಷಿತ್ ಧಾರೆ ಎರೆದಿದ್ದಾರೆ ಅಂತಾ. ಅದು ನಮಗೆ ಆಘಾತವಾಯ್ತು. ನಮ್ಮ ಜೊತೆಯಲ್ಲೇ ಇದ್ದುಕೊಂಡು ಹೀಗೆ ಮಾಡಿದರು ಅಂತಾ. ಅವರು ಜೀ ಕನ್ನಡದಲ್ಲಿ ಏನೋ ಲಾಭ ಕಂಡಿದ್ದಾರೆ. ಹೀಗಾಗಿ ಈ ಮದುವೆ ಮಾಡಿದ್ದಾರೆ. ಅವಳು ಮದುವೆಯಾಗುವ ದಿನ ಬೆಳಗ್ಗೆ ವಿಷಯ ಗೊತ್ತಾದಾಗ ನನಗೆ ಹೇಳಬಹುದಿತ್ತು. ನಮ್ಮ ಜೀವನದಲ್ಲಿ ಧಾರೆ ಎರೆಯುವ ಒಂದೇ ಒಂದು ಅವಕಾಶವನ್ನು ಕಿತ್ತುಕೊಂಡರು. ಜೀ ಕನ್ನಡದವರು ಹೇಳಿದ್ದಾರೆ ಅಂತಾ ಧಾರೆ ಎರೆದಿದ್ದಾರಂತೆ. ಇದಕ್ಕೆ ಅರ್ಥ ಇದೆಯಾ. ಇವನಿಗೆ ಕ್ಷಮೆ ಇದೆಯಾ? ಇವನ ಬಗ್ಗೆ ಜನರಿಗೆ ತಿಳಿಸಿ. ಇವನನ್ನು ನಂಬಿಕೊಂಡು ಹೆಣ್ಣು ಮಕ್ಕಳನ್ನು ಇವನ ಕ್ಲಾಸ್ಗೆ ಕಳುಹಿಸುವುದು ಹೇಗೆ' ಎಂದು ಗಾಯಕಿ ಪೃಥ್ವಿ ಭಟ್ ತಂದೆ ತಮ್ಮ ನೋವು ತೋಡಿಕೊಂಡಿದ್ದಾರೆ.












Click it and Unblock the Notifications