'ನಿಮ್ಮಂತೆ ಫ್ಯಾಮಿಲೀಲಿ ಯಾರೂ ಇಲ್ಲ..' ದೊಡ್ಮನೆ ಸೊಸೆಯ ಪೋಸ್ಟ್ ವೈರಲ್!
ಸ್ಯಾಂಡಲ್ವುಡ್ ನಟ ಪುನೀತ್ ರಾಜ್ಕುಮಾರ್ ಅವರ ಮೂರನೇ ವರ್ಷದ ಪುಣ್ಯಸ್ಮರಣೆ ಇಂದು ಅದ್ಧೂರಿಯಾಗಿ ನೆರವೇರಿದೆ. ಸಹಸ್ರಾರು ಅಭಿಮಾನಿಗಳು ಪುನೀತ್ ಅವರನ್ನು ನೆನೆದು ಕಣ್ಣೀರು ಹಾಕಿದ್ದಾರೆ. ಅಪ್ಪು ಅವರಿಗೆ ಮನೆಯಲ್ಲಿಯೂ ದೊಡ್ಡ ಅಭಿಮಾನಿಗಳಿದ್ದಾರೆ. ಈ ಪೈಕಿ ಯುವರಾಜ್ಕುಮಾರ್ ಪತ್ನಿ ಶ್ರೀದೇವಿ ಬೈರಪ್ಪ ಕೂಡ ಒಬ್ಬರು.
ಇವರೇ ಹೇಳಿಕೊಂಡಿರುವಂತೆ ಚಿಕ್ಕಂದಿನಿಂದಲೂ ಶ್ರೀದೇವಿ ಅವರಿಗೆ ಪುನೀತ್ ರಾಜ್ಕುಮಾರ್ ಅವರೆಂದರೆ ಎಲ್ಲಿಲ್ಲದ ಅಭಿಮಾನ. ಅವರ ಸಿನಿಮಾಗಳನ್ನು ಕ್ಲಾಸ್ ಬಂಕ್ ಮಾಡಿ ಸ್ನೇಹಿತರೊಂದಿಗೆ ನೋಡಿ ಬರುತ್ತಿದ್ದೆ ಎಂದು ಶ್ರೀದೇವಿ ಹೇಳಿಕೊಂಡಿದ್ದಾರೆ. ಅಲ್ಲದೆ ಮುಂದೆ ಇವರು ಅದೇ ರಾಜ್ ಕುಟುಂಬಕ್ಕೆ ಸೊಸೆಯಾಗಿ ಹೋಗಿದ್ದರ ಬಗ್ಗೆಯೂ ಅವರು ಸಂತಸ ವ್ಯಕ್ತಪಡಿಸಿದ್ದರು.

ಸದ್ಯ ಅವರು ಈ ದಿನದ ಪುಣ್ಯಸ್ಮರಣೆಯಂದು ಅಪ್ಪು ಅವರನ್ನು ನೆನೆದು ಭಾವುಕರಾಗಿದ್ದಾರೆ. ತಮ್ಮ ಇನ್ಸ್ಟಾಗ್ರಾಂನಲ್ಲಿ ಫೋಟೋ ಹಂಚಿಕೊಂಡು ಪುನೀತ್ ರಾಜ್ಕುಮಾರ್ ಅವರನ್ನು ನೆನೆದಿದ್ದಾರೆ. ನಿಮ್ಮಂತೆ ಯಾರೂ ಇಲ್ಲ..ನಿಮ್ಮ ಕುಟುಂಬದಲ್ಲೂ, ಇಡೀ ಪ್ರಪಂಚದಲ್ಲೂ ಯಾರೂ ಇಲ್ಲ. ನೀವು ಎಂದಿಗೂ ನೀವೇ.. ಈಗಲೂ, ಎಂದೆಂದಿಗೂ..ನೀವು ಉತ್ತಮ ಸ್ಥಳದಲ್ಲಿದ್ದೀರಿ ಎಂದೇ ನಾನು ಭಾವಿಸಿದ್ದೇನೆ ಎಂದು ಶ್ರೀದೇವಿ ಅವರು ಇನ್ಸ್ಟಾಗ್ರಾಂನಲ್ಲಿ ಪುನೀತ್ ಅವರನ್ನು ನೆನೆದು ಪೋಸ್ಟ್ ಹಾಕಿದ್ದಾರೆ.
ನನ್ನ ಪೋಷಕರು ಬಹಳ ಸ್ಟ್ರಿಕ್ಟ್ ಆಗಿದ್ದರು. ನಾನು ನನ್ನ ಗ್ಯಾಂಗ್ ಜೊತೆಗೆ ಕಾಲೇಜಿಗೆ ಬಂಕ್ ಹಾಕಿ ನಿಮ್ಮ ಸಿನಿಮಾಗಳನ್ನು ನೋಡುತ್ತಿದ್ದ ವಿಚಾರ ಅವರಿಗೆ ಗೊತ್ತಿಲ್ಲ ಎಂದೂ ಶ್ರೀದೇವಿ ಅವರು ಮತ್ತೊಂದು ಪೋಸ್ಟ್ ಹಂಚಿಕೊಂಡಿದ್ದಾರೆ. ಇದರ ಜೊತೆಗೆ ಅವರ ಕೈಮೇಲೆ ಅಪ್ಪು ಎಂದು ಟ್ಯಾಟೂ ಹಾಕಿಸಿಕೊಂಡಿರುವ ಫೋಟೋ ಸಹ ಶೇರ್ ಮಾಡಿಕೊಂಡಿದ್ದಾರೆ.

ಮತ್ತೊಂದು ಪೋಸ್ಟ್ನಲ್ಲಿ ಪುನೀತ್ ರಾಜ್ಕುಮಾರ್ ಅವರ ಗಂಧದಗುಡಿ ಸಿನಿಮಾದ ದೃಶ್ಯವೊಂದನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಪುನೀತ್ ರಾಜ್ಕುಮಾರ್ ಅವರು ಗುಡ್ನೈಟ್ ಎಂದು ಹೇಳಿದ್ದಾರೆ. ಇದಕ್ಕೆ ಭಾವುಕರಾಗಿರುವ ಶ್ರೀದೇವಿ ಅವರು, ನಿಮ್ಮ ಈ ಕೊನೇ ಚಿತ್ರಕ್ಕಾಗಿ ನಾವು ಕೆಲಸ ಮಾಡಿದ್ದೆವು. ಆದರೆ, ಈ ಪೋಸ್ಟ್ ಹಂಚಿಕೊಂಡ ನಂತರ ನಾವೆಲ್ಲ ಕಣ್ಣೀರು ಹಾಕಿದ್ದೆವು ಎಂದು ಆ ದಿನವನ್ನು ನೆನೆದಿದ್ದಾರೆ. ಸದಾ ಕಣ್ಣಲೇ..ಎಂದು ಪುನೀತ್ ರಾಜ್ಕುಮಾರ್ ಅವರು ಹಾಡಿದ್ದ ವಿಡಿಯೋ ಕೂಡ ಶ್ರೀದೇವಿ ಹಂಚಿಕೊಂಡಿದ್ದಾರೆ.
ಬಿರುಕು ಮೂಡಿಸಿದ್ದ ಡಿವೋರ್ಸ್ ವಿಚಾರ!
ಡಾ. ರಾಜ್ಕುಮಾರ್ ಕುಟುಂಬದಲ್ಲಿ ವಿಚ್ಛೇದನದ ಸುದ್ದಿ ಎಲ್ಲರಿಗೂ ಶಾಕ್ ನೀಡಿತ್ತು. ಯುವರಾಜ್ಕುಮಾರ್ ಹಾಗೂ ಶ್ರೀದೇವಿ ಬೈರಪ್ಪ ದಂಪತಿ ಡಿಪೋರ್ಸ್ ಪಡೆಯಲು ಮುಂದಾಗಿದ್ದಾರೆ ಎಂದು ಎಲ್ಲೆಡೆಯೂ ಸುದ್ದಿ ಹರಿದಾಡಿತ್ತು. ಅಲ್ಲದೆ ಯುವ ಡಿವೋರ್ಸ್ಗಾಗಿ ಅರ್ಜಿ ಸಲ್ಲಿಸಿದ್ದಾರೆ ಎಂದೂ ಹೇಳಲಾಗಿತ್ತು.
ಬಳಿಕ ಶ್ರೀದೇವಿ ಅವರೂ ಸೋಶಿಯಲ್ ಮೀಡಿಯಾದಲ್ಲೇ ಪತಿ ಯುವ ರಾಜ್ಕುಮಾರ್ ವಿರುದ್ಧ ಹಲವು ಶಾಕಿಂಗ್ ವಿಚಾರಗಳನ್ನು ಹೇಳಿದ್ದರು. ಕೆಲವು ಗಂಭೀರ ಆರೋಪಗಳನ್ನೂ ಮಾಡಿದ್ದರು. ಇದು ದೊಡ್ಮನೆ ಕುಟುಂಬದಲ್ಲಿ ಬಿರುಕು ಎಂದೇ ಎಲ್ಲೆಡೆ ಸದ್ದು ಮಾಡಿತ್ತು. ಬಳಿಕ ಈ ವಿಚಾರ ತಣ್ಣಗಾಗಿತ್ತು.












Click it and Unblock the Notifications