ಒಂದೇ ಚಿತ್ರದಲ್ಲಿ ಯಶ್ & ರಿಷಬ್ ಶೆಟ್ಟಿ: ವಿಜಯ್ ಕಿರಗಂದೂರು ಖುಷಿಯಿಂದ ಹೇಳಿದ್ದೇನು..?
ಬೆಂಗಳೂರು, ಆಗಸ್ಟ್ 16: 70ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಇಂದು ಘೋಷಣೆಯಾಗಿದ್ದು, ಕನ್ನಡ ಚಿತ್ರರಂಗಕ್ಕೆ ಮೂರು ಪ್ರಶಸ್ತಿಗಳು ಬಂದಿದೆ. ಕಾಂತಾರ ನಟ ರಿಷಬ್ ಶೆಟ್ಟಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದು, ಅತ್ಯುತ್ತಮ ಕನ್ನಡ ಚಿತ್ರದ ರಾಷ್ಟ್ರೀಯ ಪ್ರಶಸ್ತಿ ಕೆಜಿಎಫ್-2ಗೆ ಲಭಿಸಿದೆ. ಈ ಬಗ್ಗೆ ಎರಡು ಚಿತ್ರಗಳ ನಿರ್ಮಾಣ ಸಂಸ್ಥೆ ಹೊಂಬಾಳೆ ಗ್ರೂಪ್ ಮುಖ್ಯಸ್ಥ ವಿಜಯ್ ಕಿರಗಂದೂರು ಮಾತನಾಡಿದ್ದು, ಕನ್ನಡ ಜನತೆಗೆ ಧನ್ಯವಾದ ತಿಳಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೆಜಿಎಫ್ ಹಾಗೂ ಕಾಂತಾರಕ್ಕೆ ಸಿಕ್ಕಿರುವ ಪ್ರಶಸ್ತಿ ಕನ್ನಡ ಚಿತ್ರರಂಗಕ್ಕೆ ಹಾಗೂ ಕನ್ನಡ ಜನತೆಗೆ ಸೇರಬೇಕಾಗಿದ್ದು. ವರಮಹಾಲಕ್ಷ್ಮಿ ಹಬ್ಬದಂದೇ ಪ್ರಶಸ್ತಿ ದೊರೆತಿರುವುದು ಬಹಳ ಖುಷಿ ವಿಚಾರ. ಮುಂದಿನ ದಿನಗಳಲ್ಲಿ ನಮ್ಮ ಸಂಸ್ಥೆಯಿಂದ ಇನಷ್ಟು ಒಳ್ಳೆ ಒಳ್ಳೆಯ ಸಿನಿಮಾಗಳನ್ನು ನೀಡುತ್ತೇವೆ ಎನ್ನುವ ಭರವಸೆಯನ್ನು ವಿಜಯ್ ಕಿರಗಂದೂರು ನೀಡಿದ್ದಾರೆ.

ಇನ್ನು ಕಾಂತಾರದಲ್ಲಿ ರಿಷಬ್ ಶೆಟ್ಟಿ ಅದ್ಭುತವಾಗಿ ನಟಿಸಿದ್ದಾರೆ. ಅವರಿಗೆ ಅಭಿನಂದನೆಗಳು. ಕೊನೆಯ ಇಪ್ಪತ್ತು ನಿಮಿಷಗಳು ನಮ್ಮ ನಿರೀಕ್ಷೆಯನ್ನು ಮೀರಿ ಅದ್ಭುತವಾಗಿತ್ತು. ಈ ಮೊದಲು ಬಂದಿರುವುದು ಕಾಂತಾರದ ಎರಡನೇ ಭಾಗ, ಇನ್ನು ಮುಂದೆ ಬರುವುದು ಕಾಂತಾರದ ಮೊದಲ ಭಾಗ. ಹೀಗಾಗಿ ಕಾಂತಾರ ಮೊದಲ ಭಾಗವನ್ನು ದೊಡ್ಡ ಮಟ್ಟಿಗೆ ಜನರು ನಿರೀಕ್ಷೆ ಮಾಡಬಹುದು ಎಂದು ಹೇಳಿದರು.
ಯಶ್ ಹಾಗೂ ರಿಷಬ್ ಕಾಂಬಿನೇಷನ್ನಲ್ಲಿ ಮುಂದಿನ ದಿನಗಳಲ್ಲಿ ಸಿನಿಮಾ ಬರಲಿದೆ ಎನ್ನುವ ಸುದ್ದಿ ಬಗ್ಗೆ ಮಾತನಾಡಿದ ವಿಜಯ್ ಕಿರಗಂದೂರು, ಅದು ನನ್ನ ಕೈಯಲ್ಲಿ ಇಲ್ಲ. ನಾಯಕ ನಟರಿಗೆ ಸಂಬಂಧಪಟ್ಟಿದ್ದು, ಯಶ್ ಹಾಗೂ ರಿಷಬ್ಗೆ ಸಂಬಂಧಪಟ್ಟಿದ್ದು, ನಾನು ಒಬ್ಬ ಪ್ರೊಡಕ್ಷನ್ ಪ್ರೊಡ್ಯೂಸರ್ ಆಗಿ ಈ ಬಗ್ಗೆ ಆಸೆ ಇರುತ್ತದೆ. ಆದರೆ ಗೊತ್ತಿಲ್ಲ. ಇಂತಹ ಪ್ರಶ್ನೆಗಳಿಗೆ ನಾವು ಉತ್ತರ ಕೊಡಲು ಆಗುವುದಿಲ್ಲ. ಆದರೆ ನಾವು ಎಲ್ಲಾದಕ್ಕೂ ಸಿದ್ಧರಿದ್ದೇವೆ ಎಂದು ಹೇಳಿದರು.

ಕನ್ನಡ ಚಿತ್ರರಂಗದ ಪ್ರಸ್ತುತ ಸ್ಥಿತಿಗತಿಗಳ ಬಗ್ಗೆ ಮಾತನಾಡಿದ ಅವರು, ಚಿತ್ರರಂಗದಲ್ಲಿ ಮತ್ತೆ ಒಂದು ಉತ್ತಮವಾದ ಬದಲಾವಣೆ ಶುರುವಾಗಿದೆ. ಕಳೆದ ಎರಡು ವರ್ಷಗಳ ಹಿಂದೆ ಚಿತ್ರರಂಗ ತುಂಬಾ ಚೆನ್ನಾಗಿತ್ತು. ಈಗ ಸ್ವಲ್ಪ ಡೌನ್ ಆಗಿದೆ. ಖಂಡಿತ ಮುಂದಿನ ದಿನಗಳಲ್ಲಿ ಒಳ್ಳೆಯ ದಿನಗಳನ್ನು ನಿರೀಕ್ಷೆ ಮಾಡಬಹುದು. ನಮ್ಮ ಚಿತ್ರರಂಗಕ್ಕೆ ಒಳ್ಳೆಯ ದಿನಗಳು ಬಂದೇ ಬರುತ್ತದೆ. ಒಳ್ಳೊಳ್ಳೆ ಚಿತ್ರಗಳಂತೂ ಬಂದೇ ಬರುತ್ತದೆ. ಇದರಿಂದ ಕನ್ನಡ ಚಿತ್ರರಂಗಕ್ಕೆ ಮತ್ತೆ ಕಳೆ ಬರುತ್ತದೆ. ಜೊತೆಗೆ ಕೆಜಿಎಫ್-3 ಬಂದೇ ಬರುತ್ತದೆ ಎಂದು ಹೇಳಿದರು.












Click it and Unblock the Notifications