Darshan: ವಿಶ್ವಕಪ್ ಗೆದ್ದಿದ್ದು ಟೀಂ ಇಂಡಿಯಾ, ಧನ್ಯವಾದ ಹೇಳ್ತಾ ಇರೋದು ನಟ ದರ್ಶನ್ಗೆ!
ಬೆಂಗಳೂರು, ಜೂನ್. 30: ಟೀಂ ಇಂಡಿಯಾ ತಂಡ ಮತ್ತು ಕೋಟ್ಯಾಂತರ ಭಾರತೀಯರ ಐಸಿಸಿ ಟಿ20 ವಿಶ್ವಕಪ್ ಕನಸು ನನಸಾಗಿದೆ. ಬಾರ್ಬಡೊಸ್ನ ಬ್ರಿಡ್ಜ್ಟೌನ್ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧ ಫೈನಲ್ ಪಂದ್ಯದಲ್ಲಿ ಭಾರತ ತಂಡ 7 ರನ್ಗಳಿಂದ ಗೆದ್ದು ಚಾಂಪಿಯನ್ ಪಟ್ಟವನ್ನು ಮುಡಿಗೇರಿಸಿಕೊಂಡಿದೆ. ಆದರೆ, ವಿಶ್ವಕಪ್ ಗೆದ್ದಿದ್ದಕ್ಕೆ ನೆಟ್ಟಿಗರು ನಟ ದರ್ಶನ್ ತೂಗುದೀಪ್ಗೆ ಧನ್ಯವಾದ ಹೇಳುತ್ತಿದ್ದಾರೆ!.
ಹೌದು... ಭಾರತ ತಂಡ ವಿಶ್ವಕಪ್ ಗೆದ್ದು ಕೋಟ್ಯಾಂತರ ಭಾರತೀಯರಿಗೆ ಹೆಮ್ಮೆ ತಂದಿದೆ. ಆದರೆ, ನೆಟ್ಟಿಗರು ಕೊಲೆ ಆರೋಪದಲ್ಲಿ ಜೈಲು ಸೇರಿರುವ ನಟ ದರ್ಶನ್ ತೂಗುದೀಪ ಅವರಿಗೆಗೆ ಧನ್ಯವಾದ ಹೇಳುತ್ತಿದ್ದಾರೆ. ಟೀಂ ಇಂಡಿಯಾ ವಿಶ್ವಕಪ್ ಗೆಲ್ಲಲು ನೀವೆ ಕಾರಣ ಎಂದು ಧನ್ಯವಾದ ಹೇಳಿ ಟ್ರೋಲ್ ಮಾಡುತ್ತಿದ್ದಾರೆ.

ಟೀಂ ಇಂಡಿಯಾ ಗೆಲುವಿಗೆ ದರ್ಶನ್ಗೆ ಕ್ರೆಡಿಟ್!?
ಟೀಂ ಇಂಡಿಯಾ ಗೆಲ್ಲಲು ನಟ ದರ್ಶನ್ ಕಾರಣ ಎಂದು ಟ್ರೋಲ್ ಮಾಡುತ್ತಿದ್ದಾರೆ, ಜೊತೆಗೆ ದರ್ಶನ್ಗೆ ಧನ್ಯವಾದ ಎಂದು ಹಂಚಿಕೊಳ್ಳುತ್ತಿದ್ದಾರೆ. ಇದಕ್ಕೆ ಕಾರಣವೂ ಇದೆ. ಭಾರತ ಕಳೆದ ಬಾರಿ ವಿಶ್ವಕಪ್ ಗೆದ್ದಿದ್ದು 2011 ರಲ್ಲಿ ಆ ವರ್ಷವೂ ಸಹ ನಟ ದರ್ಶನ್ ಜೈಲು ಸೇರಿದ್ದರು. ಈಗ ಮತ್ತೆ ವಿಶ್ವಕಪ್ ಗೆದ್ದಿದೆ. ಈ ಬಾರಿಯೂ ದರ್ಶನ್ ಜೈಲಿನಲ್ಲಿದ್ದಾರೆ!.
ಪತ್ನಿ ವಿಜಯಲಕ್ಷ್ಮಿ ಮೇಲೆ ಹಲ್ಲೆ ಮಾಡಿ 2011 ರಲ್ಲಿ ಜೈಲು ಪಾಲಾಗಿದ್ದ ದರ್ಶನ್ 13 ವರ್ಷಗಳ ಬಳಿಕ 2024 ರಲ್ಲಿ ಮತ್ತೆ ಜೈಲಿಗೆ ಹೋಗಿದ್ದಾರೆ. ಈಗ ಮತ್ತೆ ಟೀಂ ಇಂಡಿಯಾ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿದೆ. ಹೀಗಾಗಿ ದರ್ಶನ್ ಜೈಲು ಸೇರಿರುವುದು ಭಾರತ ತಂಡಕ್ಕೆ ಅದೃಷ್ಟವಾಗಿದ್ದು, ಚಾಂಪಿಯನ್ ಟ್ರೋಫಿ ಕೈ ಸೇರಿದೆ ಎನ್ನುತ್ತಿದ್ದಾರೆ ನೆಟ್ಟಿಗರು.
ಆದರೆ, ಇಲ್ಲಿ ಮರೆಯಾಗುತ್ತಿರುವುದು ನಟ ದರ್ಶನ್ ಅವರು 2011 ರಲ್ಲಿ ಜೈಲು ಸೇರುವ ಮುಂಚೆ ಭಾರತ ವಿಶ್ವಕಪ್ ಗೆದ್ದಿತ್ತು. 2011 ರ ಏಪ್ರಿಲ್ 2ಕ್ಕೆ ಎಂಎಸ್ ಧೋನಿ ನಾಯಕತ್ವದಲ್ಲಿ ಭಾರತ ತಂಡ ವಿಶ್ವಕಪ್ ಗೆದ್ದರೆ, ಸೆಪ್ಟೆಂಬರ್ 9 ರಂದು ನಟ ದರ್ಶನ್ ಜೈಲು ಸೇರಿದ್ದರು. ಹೀಗಾಗಿ ನೆಟ್ಟಿಗರು ಸುಮ್ಮನೆ ಟ್ರೋಲ್ ಮಾಡುತ್ತಿದ್ದಾರೆ.
#Darshan went to jail to make sure India wins world cup.
— ಕನ್ನಡ ಡೈನಾಸ್ಟಿ (@appudynasty1) June 29, 2024
2011 now 2024!
✨✨✨#T20WorldCup #INDvsSA pic.twitter.com/Ol7SiB2RcS
ಇನ್ನು, ಭಾರತ- ದಕ್ಷಿಣ ಆಫ್ರಿಕಾ ಟಿ20 ವಿಶ್ವಕಪ್ ಫೈನಲ್ ಪಂದ್ಯದ ವೇಳೆಯೂ ದರ್ಶನ್ ಅವರ ಹಲವು ಪೋಸ್ಟ್ಗಳು ಸೋಶಿಯಲ್ ಮಿಡಿಯಾದಲ್ಲಿ ಸದ್ದು ಮಾಡುತ್ತಿದ್ದವು. "Did You Know??? 2011 ರಲ್ಲಿ ಭಾರತ ತಂಡ World Cup ಗೆದ್ದಾಗ ದರ್ಶನ್ ಜೈಲಿನಲ್ಲಿದ್ದರು... 2024 ರಲ್ಲಿ ಭಾರತ ಫೈನಲ್ ತಲುಪಿದೆ, ಮತ್ತು ದರ್ಶನ್ ಜೈಲಿನಲ್ಲಿದ್ದಾರೆ.. ಚರಿತ್ರೆ ಮರುಕಳಿಸುತ್ತಾ??" ಎನ್ನುವ ಪೋಸ್ಟರ್ ಎಲ್ಲೆಡೆ ವೈರಲ್ ಆಗಿತ್ತು.

ನಟ ದರ್ಶನ್ 2011 ರಲ್ಲಿ ಪತ್ನಿ ವಿಜಯಲಕ್ಷ್ಮಿ ಮೇಲೆ ಭೀಕರ ಹಲ್ಲೆ ಮಾಡಿದ್ದರು. ವಿಜಯಲಕ್ಷ್ಮಿ ಅವರ ಕೈಗಳ ಮೂಳೆ ಮುರಿದಿತ್ತು, ತಲೆಯ ಭಾಗಕ್ಕೆ ಗಂಭೀರ ಗಾಯವಾಗಿತ್ತು. ಆ ಪ್ರಕರಣದಲ್ಲಿಯೂ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿ 28 ದಿನ ಕಳೆದಿದ್ದರು. ಈಗ ಮತ್ತೆ ಕೊಲೆ ಪ್ರಕರಣದಲ್ಲಿ ಗಂಭೀರ ಆರೋಪ ಹೊತ್ತಿರುವ ಅವರು ಅದೇ ಜೈಲಿನ ಗೋಡೆಗಳ ಮಧ್ಯೆ ದಿನ ಕಳೆಯುತ್ತಿದ್ದಾರೆ. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ದರ್ಶನ್ ಮತ್ತು ಅವರ ಆಪ್ತೆ ಪವಿತ್ರಾ ಗೌಡ ಸೇರಿದಂತೆ 19 ಮಂದಿ ಜೈಲು ಸೇರುತ್ತಿದ್ದಾರೆ. ತನಿಖೆ ನಡೆಯುತ್ತಿದೆ.












Click it and Unblock the Notifications