ಗಾಯಕಿ ಪೃಥ್ವಿ ಭಟ್ ಪತಿಯೊಂದಿಗೆ ಹೊಸ ಫೋಟೋ ವೈರಲ್: ಗುರುರಾಯರ ದರ್ಶನ ಪಡೆದ ನವ ದಂಪತಿ
ಗಾಯಕಿ ಪೃಥ್ವಿ ಭಟ್ ಪ್ರೇಮ ವಿವಾಹದ ಬಳಿಕ ಮೊದಲ ಬಾರಿಗೆ ಸಾಮಾಜಿಕ ಜಾಲತಾಣದಲ್ಲಿ ಫೊಟೋವನ್ನು ಹಂಚಿಕೊಂಡಿದ್ದಾರೆ. ಪತಿ ಅಭಿಷೇಕ್ ಜೊತೆಯಾಗಿ ದೇವಸ್ಥಾನದಲ್ಲಿ ನಿಂತಿರುವ ಫೋಟೋವನ್ನು ಗಾಯಕಿ ಪೃಥ್ವಿ ಭಟ್ ಶೇರ್ ಮಾಡಿದ್ದಾರೆ. ಈ ಫೋಟೋಗೆ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.
ಹೌದು ಇತ್ತೀಚೆಗೆ ಪೋಷಕರ ವಿರೋಧದ ನಡುವೆಯೂ ಗಾಯಕಿ ಪೃಥ್ವಿ ಭಟ್ ಹಾಗೂ ಅಭಿಷೇಕ್ ಇಬ್ಬರೂ ಮದುವೆಯಾಗಿದ್ದರು. ಮದುವೆಯಾದ ಬಳಿಕ ಈ ಜೋಡಿ ಇದೀಗ ಮಂತ್ರಾಲಯದ ರಾಘವೇಂದ್ರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದೆ. ಈ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಅಭಿಮಾನಿಗಳು ಶುಭಾಶಯಗಳನ್ನು ತಿಳಿಸಿದ್ದಾರೆ. ಕೆಲವರು ಪೋಷಕರನ್ನು ನೋಯಿಸಬೇಡಿ ಅವರಿಗೆ ತಿಳಿ ಹೇಳಿ ನಿಮ್ಮಿಬ್ಬರನ್ನು ಒಪ್ಪುವಂತೆ ಮನವೊಲಿಸಿ ಎಂದು ಸಲಹೆ ನೀಡಿದ್ದಾರೆ.

ಜೀ ಕನ್ನಡ ವಾಹಿನಿಯಲ್ಲಿ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಆಗಿ ಕೆಲಸ ಮಾಡುವ ಅಭಿಷೇಕ್ ಅವರಿಗೆ ಸರಿಗಮಪ ಗಾಯನ ಸ್ಪರ್ಧೆ ಮೂಲಕ ಪೃಥ್ವಿ ಭಟ್ ಪರಿಚಯವಾದರು. ನಂತರ ಇವರಿಬ್ಬರ ನಡುವಿನ ಸ್ನೇಹ ಪ್ರೀತಿಯಾಗಿ ಇಬ್ಬರು ಪ್ರೇಮ ವಿವಾಹ ಮಾಡಿಕೊಂಡರು. ಆದರೆ ಪೃಥ್ವಿ ಅವರ ತಂದೆ ತಾಯಿ ಇಬ್ಬರ ಪ್ರೀತಿಯನ್ನು ಒಪ್ಪಿಕೊಂಡಿಲ್ಲ. ವಿರೋದದ ನಡುವೆ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಪೃಥ್ವಿ ಪೋಷಕರು ತಮ್ಮ ಮಗಳಿಗೆ ಹವ್ಯಕ ಹುಡುಗನನ್ನೇ ಹುಡುಕಿ ಮದುವೆ ಮಾಡಬೇಕು ಅನ್ನೋ ಕನಸು ಹೊಂದಿದ್ದರು. ಆದರೆ ಮಗಳ ಪ್ರೇಮ ವಿಚಾರ ತಿಳಿದು ಪೃಥ್ವಿ ತಂದೆ ಶಿವಪ್ರಸಾದ್ ಮಗಳನ್ನು ಕರೆದು ಒಮ್ಮೆ ಪ್ರೀತಿ ಬಗ್ಗೆ ಮಾತನಾಡಿದ್ದರಂತೆ. ಆದರೆ ಮಗಳು ಪೃಥ್ವಿ, ದೇವರ ಮೇಲೆ ಪ್ರಮಾಣ ಮಾಡಿ ಯಾವುದೇ ರೀತಿಯ ಪ್ರೀತಿ ಇಲ್ಲ. ನೀವು ತೋರಿಸಿದ ಹುಡುಗನನ್ನೇ ಮದುವೆಯಾಗುವುದಾಗಿ ಹೇಳಿದ್ದರಂತೆ. ಆದರೂ ಕೂಡ ಅಭಿಷೇಕ್ ಜೊತೆ ಪೃಥ್ವಿ ಮದುವೆಯಾಗಿದ್ದಾರೆ.

ತಮ್ಮ ಮಗಳು ಮದುವೆ ಆಗಿರಲು ಸಾಧ್ಯವಿಲ್ಲ ಎನ್ನುವ ಮಾತನ್ನು ಶಿವಪ್ರಸಾದ್ ಆಡಿಯೋ ಮೂಲಕ ಹೇಳಿದ್ದರು. ಅಲ್ಲದೆ ತಮ್ಮ ಮಗಳಿಗೆ ಮಾಟ, ಮಂತ್ರ ಮಾಡಿಸಿ ಮೋಸ ಮಾಡಿ ಮದುವೆ ಮಾಡಿಸಿಕೊಂಡಿದ್ದಾರೆ. ಸಂಗೀತ ಶಿಕ್ಷಕ ನರಹರಿ ದೀಕ್ಷಿತ್ ತಮ್ಮ ಮಗಳನ್ನು ಧಾರೆ ಎರೆದು ಕೊಟ್ಟಿದ್ದಾರೆ. ಮದುವೆಯ ವಿಷಯವನ್ನು ನನ್ನಿಂದ ಗುಟ್ಟಾಗಿ ಇಟ್ಟಿದ್ದಾರೆ ಎಂದು ಪೃಥ್ವಿ ತಂದೆ ಆಡಿಯೋದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು.
ನಿಮ್ಮಂತೆ ನಡೆದುಕೊಳ್ಳುತ್ತೇನೆ ಎಂದು ನನ್ನ ಮಗಳು ನನಗೆ ಮಾತು ಕೊಟ್ಟಿದ್ದಳು. ಆದರೆ ಅವಳು ನಮ್ಮ ಮಾತು ಮುರಿದು ಮದುವೆ ಆಗಿದ್ದಾಳೆ. ಪೃಥ್ವಿಗೆ ಅನ್ಯ ಜಾತಿಯವನೊಂದಿಗೆ ಮದುವೆ ಮಾಡಿಸಿದ ಸಂಗೀತ ಶಿಕ್ಷಕ ನರಹರಿ ದೀಕ್ಷಿತ್ ಅಂಥವರಿಗೆ ಹವ್ಯಕ ಸಮಾಜ ಪ್ರೋತ್ಸಾಹ ನೀಡಬಾರದು ಎಂದು ಪೃಥ್ವಿ ತಂದೆ ಆಡಿಯೋ ಮೂಲಕ ಮನವಿ ಕೂಡ ಮಾಡಿದ್ದರು. ಹವ್ಯಕ ಸಮಾಜ ಗ್ರೂಪ್ನಲ್ಲಿ ಹಂಚಿಕೊಂಡ ಪೃಥ್ವಿ ತಂದೆ ಶಿವಪ್ರಸಾದ್ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು.
ನಂತರ ಇದೆಲ್ಲದಕ್ಕೂ ಪ್ರತಿಕ್ರಿಯೆ ನೀಡಿದ ಗಾಯಕಿ ಪೃಥ್ವಿ, ನನ್ನ ಮದುವೆ ವಿಚಾರದಲ್ಲಿ ಸಂಗೀತ ಶಿಕ್ಷಕ ನರಹರಿ ದೀಕ್ಷಿತ್ ಅವರ ಪಾತ್ರವಿಲ್ಲ. ಮದುವೆ ಆಗುವ ದಿನ ನಾವು ಮದುವೆ ಆಗಿ ಅವರಿಂದ ಆಶೀರ್ವಾದ ಪಡೆದವು. ನರಹರಿ ಅವರದ್ದು ತಪ್ಪೇನು ಇಲ್ಲ. ನಿಮಗೆ ತಿಳಿಸದೇ ನಾನು ಮದುವೆ ಮಾಡಿಕೊಂಡಿರುವುದು ತಪ್ಪಾಗಿದೆ. ನನ್ನನ್ನು ಕ್ಷಮಿಸಿ ಎಂದು ಪೋಷಕರ ಬಳಿ ಪೃಥ್ವಿ ಆಡಿಯೋ ಮೂಲಕ ಕ್ಷಮೆ ಕೇಳಿದ್ದರು.
ಅಲ್ಲದೆ ಪೃಥ್ವಿ ತಾವು ಪ್ರೀತಿಸುವ ಹುಡುಗನ ವಿಚಾರ ಪೋಷಕರಿಗೆ ತಿಳಿಸಿದೆ. ಆದರೆ ಅವರ ಭಯಕ್ಕೆ ನಾನು ಸುಮ್ಮನಾದೆ. ಪ್ರೀತಿ ವಿಚಾರ ಹೇಳಿದ ನಂತರ ಮನೆಯಲ್ಲಿ ತಂದೆ ತಾಯಿ ನನಗೆ ಕಡಿವಾಣ ಹಾಕಲು ಶುರು ಮಾಡಿದರು. ನನ್ನನ್ನು ಕೆಲವೆಡೆ ಕಳುಹಿಸಿಕೊಡುತ್ತಿರಲಿಲ್ಲ. ನನ್ನನ್ನು ಕಟ್ಟಿ ಹಾಕಲು ಪ್ರಯತ್ನಿಸಿದ್ದರಿಂದ ಅನಿವಾರ್ಯವಾಗಿ ನಾನು ಮನೆಯಿಂದ ಹೊರ ಬರಬೇಕಾಯ್ತು ಎಂದು ಪೃಥ್ವಿ ಬರೆದುಕೊಂಡಿದ್ದಾರೆ.
ಇದೆಲ್ಲಾ ಆಗಿ ಕೆಲ ದಿನಗಳ ಬಳಿಕ ಇದೀಗ ಗಾಯಕಿ ಪೃಥ್ವಿ ಭಟ್ ಹಾಗೂ ಅಭಿಷೇಕ್ ಇಬ್ಬರೂ ಮಂತ್ರಾಲಯದ ರಾಘವೇಂದ್ರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ದೇವಸ್ಥಾನಕ್ಕೆ ಭೇಟಿ ನೀಡಿದ ಫೋಟೋವನ್ನು ಪೃಥ್ವಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.












Click it and Unblock the Notifications