ಕಮಲ್ ಕನ್ನಡ ಕಾಂಟ್ರೋವರ್ಸಿ; ಕನ್ನಡಕ್ಕಾಗಿ ಹೋರಾಡ್ತೀವಿ, ಬೇಕಿದ್ರೆ ಸಾಯ್ತೀವಿ: ಶಿವಣ್ಣ ಫಸ್ಟ್ ರಿಯಾಕ್ಷನ್
ಬೆಂಗಳೂರು, ಮೇ 29: ಕನ್ನಡ ಹುಟ್ಟಿದ್ದೇ ತಮಿಳು ಭಾಷೆಯಿಂದ ಎಂದು ಹೇಳುವ ಮೂಲಕ ಭಾರೀ ವಿವಾದಕ್ಕೀಡಾಗಿರುವ ತಮಿಳಿನ ಹಿರಿಯ ನಟ ಕಮಲ್ ಹಾಸನ್ ವಿರುದ್ಧ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಮಲ್ ಹಾಸನ್ ಅವರು 'ಥಗ್ ಲೈಫ್' ಸಿನಿಮಾದ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ಕನ್ನಡದ ಬಗ್ಗೆ ಆಡಿರುವ ಮಾತುಗಳು ವಿವಾದಕ್ಕೆ ಕಾರಣವಾಗಿವೆ. ಅಲ್ಲದೇ ಈ ಕಾರ್ಯಕ್ರಮದಲ್ಲಿ ನಟ ಶಿವರಾಜ್ ಕುಮಾರ್ ಅತಿಥಿಯಾಗಿದ್ದರು.
ಈ ಕಾರ್ಯಕ್ರಮದಲ್ಲಿ ನಟ ಕಮಲ್ ಹಾಸನ್ ಅವರ ಭಾಷಣದ ಸರದಿ ಬಂದಾಗ, ಡಾ ರಾಜ್ಕುಮಾರ್, ಶಿವರಾಜ್ ಕುಮಾರ್ ಅವರ ಬಗ್ಗೆ ಅಭಿಮಾನದ ಮಾತುಗಳನ್ನಾಡಿದ ಕಮಲ್ ಹಾಸನ್, ಕರ್ನಾಟಕ, ಬೆಂಗಳೂರಿನ ಬಗ್ಗೆ ಮಾತನಾಡುತ್ತಾ 'ತಮಿಳು ಭಾಷೆಯಿಂದ ಕನ್ನಡದ ಜನನಾವಾಯ್ತು' ಎಂದು ಹೇಳಿರುವುದು ಭಾರೀ ವಿವಾದಕ್ಕೆ ಕಾರಣವಾಗಿದೆ. ಈ ಕುರಿತಂತೆ, ನಟ ಶಿವರಾಜ್ ಕುಮಾರ್ ಮಾತನಾಡಬೇಕು ಎಂದು ಹಲವಾರು ಕನ್ನಡ ಪರ ಸಂಘಟನೆಗಳು, ಮಾಧ್ಯಮಗಳು ಆಗ್ರಹಿಸಿದ್ದವು. ಇದೀಗ ನಟ ಶಿವರಾಜ್ ಕುಮಾರ್ ಅವರ ಪ್ರತಿಕ್ರಿಯೆ ಹೊರಬಿದ್ದಿದೆ.

ಕಮಲ್ ಅವರು ಬಂದಿದ್ದಾಗ ಅವರು ಕನ್ನಡದ ಬಗ್ಗೆ, ಕರ್ನಾಟಕ, ಬೆಂಗಳೂರಿನ ಬಗ್ಗೆ ಬಹಳ ಹೆಮ್ಮೆಯಿಂದ ಮಾತನಾಡಿದರು. ಹಲವು ವಿಷಯಗಳನ್ನು ನೆನಪು ಮಾಡಿಕೊಂಡರು. ನಾನು ಅವರ ಬಹಳ ದೊಡ್ಡ ಅಭಿಮಾನಿ, ಅವರನ್ನು ನೋಡಿ ನಾನು ಸ್ಪೂರ್ತಿ ಪಡೆದಿದ್ದೀನಿ. ನಮ್ಮನ್ನು ಗೌರವದಿಂದ ಸಮಾರಂಭಕ್ಕೆ ಕರೆದಿದ್ದರು, ಅದೇ ಗೌರವದಿಂದ ನಾನೂ ಸಹ ಹೋಗಿದ್ದೆ. ಅವರು ದೊಡ್ಡವರು, ಅವರಿಗೆ ಗೊತ್ತಾಗುತ್ತೆ, ಯಾವುದಕ್ಕೇ ಏನು ಮಾಡಬೇಕೊ ಅದನ್ನು ಅವರು ಮಾಡಿಯೇ ಮಾಡುತ್ತಾರೆ ಎಂದು ಶಿವರಾಜ್ ಕುಮಾರ್ ಹೇಳಿದ್ದಾರೆ.
ವೇದಿಕೆ ಮೇಲೆ ಏನು ತಪ್ಪಾಯ್ತು ಎಂಬುದು ನನಗೂ ಗೊತ್ತಾಗಲಿಲ್ಲ. ಇಂದು ಬಂದು ನೋಡಿದಾಗ ವಿವಾದ ಆಗಿತ್ತು. ಅವರು ಇಲ್ಲಿಯೇ ಇದ್ದರು, ಎಲ್ಲರೊಟ್ಟಿಗೆ ಮಾತನಾಡುತ್ತಿದ್ದರು. ಇಲ್ಲಿಯೇ ಅವರನ್ನು ಕೇಳಬಹುದಿತ್ತು, ಆದರೆ ಯಾಕೆ ಆಗ ಕೇಳಲಿಲ್ಲವೊ ಗೊತ್ತಿಲ್ಲ. ಆದರೆ ಕನ್ನಡ ಪ್ರೀತಿ ಎಂಬುದು ಯಾರೋ ಒಬ್ಬರು ಮಾತನಾಡಿದಾಗ ಮಾತ್ರವೇ ಬರಬಾರದು. ಕನ್ನಡ ಪ್ರೇಮ ಎಂಬುದು ಸದಾ ಕಾಲ ಜೊತೆಗೆ ಇರಬೇಕು. ನಾವು ಕನ್ನಡಕ್ಕಾಗಿ ಹೋರಾಡುತ್ತೀವಿ, ಸಾಯುತ್ತೀವಿ ಬೇಕಾದರೆ. ಕೇವಲ ಮಾತಿನಲ್ಲಿ ಮಾತನಾಡಿ, ಫೋಸು ಕೊಡುವುದು ದೊಡ್ಡ ವಿಷಯ ಅಲ್ಲ ಎಂದು ಹೇಳಿದ್ದಾರೆ.
ಕನ್ನಡಕ್ಕೆ ಏನು ಮಾಡುತ್ತಿದ್ದೀವಿ ಎಂಬುದನ್ನು ನೀವೇ ಹುಡುಕಿ ನೋಡಿ, ನಿಮ್ಮ ಮನಸ್ಸನ್ನು ಕೇಳಿಕೊಂಡು ನೋಡಿ ನಿಮಗೆ ಉತ್ತರ ಸಿಗುತ್ತದೆ. ಕನ್ನಡ ಸಿನಿಮಾಕ್ಕೆ ನೀವು ಏನು ಮಾಡಿದ್ದೀರಿ, ಯಾರೋ ಸ್ಟಾರ್ ನಟರ ಸಿನಿಮಾಗಳಿಗೆ ಬೆಂಬಲ ಕೊಟ್ಟರೆ ಮಾತ್ರ ಸಾಲದು. ಹೊಸಬರ ಸಿನಿಮಾಕ್ಕೂ ಬೆಂಬಲ ಕೊಡಿ. ನಾವು ಮಾಡುತ್ತಿರುವುದು ಸರಿಯಾ, ತಪ್ಪಾ ಎಂದು ನೀವೇ ಕೇಳಿಕೊಳ್ಳಿ, ನಿಮಗೆ ಉತ್ತರ ಸಿಗುತ್ತೆ ಎಂದು ಶಿವರಾಜ್ ಕುಮಾರ್ ಹೇಳಿದ್ದಾರೆ.












Click it and Unblock the Notifications