Kantara 1 Trailer: ರಾಜಮೌಳಿ ಸಿನಿಮಾ ಮೀರಿಸುವಂತಿದೆ "ಕಾಂತಾರಾ ಚಾಪ್ಟರ್-1' ದೃಶ್ಯ ವೈಭವ...Rishab Shetty
Kantara Chapter 1 Trailer: ಹೊಂಬಾಳೆ ಫಿಲಂಸ್ನ ವಿಜಯ್ ಕಿರಗಂದೂರು ನಿಮಾರ್ಣದಲ್ಲಿ, ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ 'ಕಾಂತಾರ ಚಾಪ್ಟರ್ 1' ಟ್ರೈಲರ್ ಬಿಡುಗಡೆ ಆಗಿದೆ. ಕನ್ನಡಿಗರು ಸೇರಿದಂತೆ ಅಪಾರ ಸಂಖ್ಯೆ ಭಾರತೀಯ ಚಿತ್ರಪ್ರೇಮಿಗಳ ಮನಸ್ಸು ಗೆದ್ದಿದೆ. ನಿರ್ದೇಶಕ ರಾಜಮೌಳಿ ನಂತರ ದೃಶ್ಯ ವೈಭವ ಕಟ್ಟಿಕೊಡುವಲ್ಲಿ ರಿಷಬ್ ಶೆಟ್ಟಿ ಯಶಸ್ವಿಯಾಗಿದ್ದಾರೆ. ಟ್ರೈಲರ್ ನೋಡಿದ ಪ್ರೇಕ್ಷಕರು ಸಿನಿಮಾ ನೋಡಲು ತುದಿಗಾಲಲ್ಲಿ ನಿಂತಿದ್ದಾರೆ.
ಅಕ್ಟೋಬರ್ 2 ರಂದು ಸಾವಿರಾರು ಥಿಯೇಟರ್ಗಳಲ್ಲಿ ಬಿಡುಗಡೆ ಆಗಲಿರುವ ಕಾಂತಾರ ಸಿನಿಮಾದ ಪೇಯ್ಡ್ ಪ್ರೀಮಿಯರ್ ಶೋಗಳು 2500 ಸ್ಕ್ರೀನ್ಗಳಲ್ಲಿ ಪ್ರದರ್ಶನಗೊಳ್ಳಲಿವೆ. ಈ ಸಿನಿಮಾಗೆ "ದಿ ಲಯನ್ ಕಿಂಗ್', 'ಮಿಷನ್ ಇಂಪಾಸಿಬಲ್'ನಂಥಹ ದೊಡ್ಡ ಸಿನಿಮಾಗಳಿಗೆ ವಿಎಫ್ಎಕ್ಸ್ ಮಾಡಿದ ಎಂಪಿಸಿ ಟೀಂ ವಿಎಫ್ಎಕ್ಸ್ ಹಾಗೂ ಸಿಜಿಐ ಮಾಡಿದೆ. ಕನ್ನಡ ಗಟ್ಟಿ ಕಥೆಯೊಂದಿಗೆ ತಾಂತ್ರಿಕತೆಯಲ್ಲೂ ಕಾಂತಾರ ಅಧ್ಯಾಯ 1 ಭಾರೀ ಸೌಂಡ್ ಮಾಡುತ್ತಿದೆ.

ಹೊಂಬಾಳೆ ಫಿಲಂಸ್ ಯೂಟ್ಯೂಬ್ ಚಾನಲ್ನಲ್ಲಿ ಬಿಡುಗಡೆಯಾದ ಸಿನಿಮಾದ ಟ್ರೈಲರ್ ನೋಡಿದವರು ಮತ್ತೆ ಮತ್ತೆ ಟ್ರೈಲರ್ ನೋಡುತ್ತಿದ್ದಾರೆ. ಪ್ರತಿ ಸೀನ್ಗಳಲ್ಲೂ ಅದ್ಧೂರಿತನ ಕಾಣಿಸುತ್ತದೆ. ಮೇಕಿಂಗ್ ನೋಡಿದಮೇಲಂತೂ ಇಡಿ ಚಿತ್ರತಂಡದ ಡೆಡಿಕೇಷನ್ ಕಾಣಿಸುತ್ತದೆ. ಇದರಲ್ಲಿ ರಿಷಬ್ ಶೆಟ್ಟಿ ಕಟ್ಟುಮಸ್ತಾದ ಬಾಡಿ ಹೊಂದಿದ್ದಾರೆ. ಉದ್ದ ಕೂದಲಿನ ಅವರ ಹುರಿಗಟ್ಟಿದ ದೇಹ ಪ್ರೇಕ್ಷಕರಿಗೆ ಇಷ್ಟವಾಗಿದೆ. ಈ ಸಿನಿಮಾ ಕಮರ್ಷಿಯಲ್ ಹಿಟ್ ಆಗುವುದರದಲ್ಲಿ ಅನುಮಾನವೇ ಇಲ್ಲ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.
ದಂತಕಥೆಯ ಮುನ್ನುಡಿ , ಕಾರ್ಣಿಕದ ಆದಿ ಪರ್ವ… ನಿಮ್ಮಿಂದ ನಿಮಗಾಗಿ .. #KantaraChapter1 is our tribute to the land and people who made this journey possible. ❤️
— Hombale Films (@hombalefilms) September 22, 2025
Presenting #KantaraChapter1Trailer in Kannada : https://t.co/avAf24FXUL#Kantara #KantaraChapter1onOct2 @hombalefilms…
ಅತ್ಯುತ್ತಮ ಕಥೆ, ವಿಎಫ್ಎಕ್ಸ್, ಒಂದೊಂದು ಫ್ರೇಮ್ನಲ್ಲಿ ರಿಷಬ್ ಶೆಟ್ಟಿಯವರ ಅಚ್ಚುಕಟ್ಟುತನ, ಎಲ್ಲಿಯೂ ರಾಜಿ ಇಲ್ಲದೇ ಸಿನಿಮಾವನ್ನು ಮಾಡಿರುವ ಬಗೆ ನೋಡಿದರೆ ತೆಲುಗಿನ ರಾಜಮೌಳಿ ಸಿನಿಮಾ ಬಳಿಕ ಕನ್ನಡದಲ್ಲಿ ಅದ್ಭೂತ ದೃಶ್ಯಕಾವ್ಯವೊಂದು ಕಣ್ತುಂಬಿಕೊಳ್ಳಲು ಜನರಿಗೆ ಸಿಗಲಿದೆ. ಕೆಲವರಂತೂ ದಿಗ್ಗಜ ನಿರ್ದೇಶಕರ ಸಿನಿಮಾಗಳನ್ನು ಕನ್ನಡದ 'ಕಾಂತಾರ ಚಾಪ್ಟರ್ 1'ರ ಸಿನಿಮಾ ಮೀರಿಸಲಿದೆ ಎಂದು ಹಾರೈಸಿದ್ದಾರೆ. ಜೊತೆಗೆ ಚಿತ್ರತಂಡದವರ ಶ್ರಮವನ್ನು ಶ್ಲಾಘಿಸಿದ್ದಾರೆ.
ಉಡುಪಿ ಭಾಗದಲ್ಲಿ ದೊಡ್ಡ ದೊಡ್ಡ ಸೆಟ್ಗಳಲ್ಲಿ ಸಿನಿಮಾವನ್ನು ಚಿತ್ರೀಕರಿಸಲಾಗಿದೆ. ಈ ಸಿನಿಮಾದ ಟ್ರೈಲರ್ 12.45ಕ್ಕೆ ಬಿಡುಗಡೆ ಆಯಿತು. ಹೃತಿಕ್ ರೋಷನ್ ಹಿಂದಿ ವರ್ಷನ್ ಅನ್ನು ರಿಲೀಸ್ ಮಾಡಿದರೆ, ತೆಲುಗು ವರ್ಷನ್ ಅನ್ನು ಪ್ರಭಾಸ್, ತಮಿಳು ವರ್ಷನ್ ಅನ್ನು ಶಿವಕಾರ್ತಿಕೇಯನ್ ಹಾಗೂ ನಟ ಪೃಥ್ವಿರಾಜ್ ಸುಕುಮಾರ್ ಮಲಯಾಳಂ ವರ್ಷನ್ ಅನ್ನು ರಿಲೀಸ್ ಮಾಡಲಿದ್ದಾರೆ. ಕನ್ನಡ ಟ್ರೈಲರ್ ಅನ್ನು ಕನ್ನಡ ಜನತೆಯೇ ಬಿಡುಗಡೆ ಮಾಡಿದ್ದಾರೆ. ಅದಕ್ಕಾಗಿ ಚಿತ್ರತಂಡ ನೀಡಿದ್ದ ಡಿಜಿಟಲ್ ಲಿಂಕ್ ಬಳಸಿ ಕಾರ್ಡ್ ಪಡೆದು ರಿಲೀಸ್ ಮಾಡಿದರು.
""ದಂತಕಥೆ ಎಂದು ಆರಂಭವಾಗುವ ಟ್ರೈಲರ್ನಲ್ಲಿ ಕಾಂತಾರ ಜನರ ಮೇಲಿನ ದೌರ್ಜನ್ಯ, ಧರ್ಮ, ಅಧರ್ಮ ಹಾದಿ ಮಧ್ಯೆ ಧರ್ಮ ಮೆಟ್ಟಿ ನಿಲ್ಲುವ ನಾಯಕ, ಅರಸನ ಮನೆಯ ನಾಯಕಿಯನ್ನು ಮನಸೋಲುವ ರಿಷಬ್ ಶೆಟ್ಟಿಯ ಕಥೆ ಇದರಲ್ಲಿ. 'ಕಾಡ ಬೆಂಕಿ ' ಹಾಡು ಗುನುಗುವಂತಿದೆ. ಬ್ಯಾಕ್ಗ್ರೌಂಡ್ ಸಂಗೀತ ಸಖತ್ ಸದ್ದು ಮಾಡುತ್ತಿದೆ. ಈ ನೆಲದ ಕಥೆಯನ್ನು ವಿಭಿನ್ನ ಬಗೆಯಲ್ಲಿ ಹೇಳ ಹೊರಟ ಚಿತ್ರತಂಡಕ್ಕೆ ನಾಡಿನ ಜನರ ಶಬ್ಬಾಶ್ ಗಿರಿ ಕೊಡುತ್ತಿದ್ದಾರೆ.'' ಇದಿಷ್ಟು ಟ್ರೈಲರ್ ನೋಡಿದವರು ಹೇಳುತ್ತಿರುವ ಮಾತು.
ಜನರ ಮುಂದೆ ಬರಲಿದೆ ಕಾಂತಾರ ಟೀಂ
ರಿಷಬ್ ಶೆಟ್ಟಿ ಹಾಗೂ ಹೊಂಬಾಳೆ ಫಿಲಂಸ್ ಇತ್ತೀಚಿನ ವರೆಗೆ ಸಿನಿಮಾದ ನಟಿ ಯಾರು, ಖಳನಾಯಕರು ಯಾರು? ಯಾರೆಲ್ಲ ನಟಿಸಿದ್ದಾರೆ ಎಂಬ ಸಣ್ಣ ಸುಳಿವು ಸಹ ಬಿಟ್ಟಿರಲಿಲ್ಲ. ರುಕ್ಮಿಣಿ ವಸಂತ್ ಸೇರಿದಂತೆ ಕೆಲವು ಕಲಾವಿದರ ಬಗ್ಗೆ ಇತ್ತೀಚೆಇಗೆ ಪೋಸ್ಟರ್ ಬಿಡುಗಡೆ ಮೂಲಕ ತಿಳಿಸಿತ್ತು. ಇನ್ನು ಅದೆಷ್ಟೋ ಕೌತುಕಗಳನ್ನು ಕಾಂತಾರ-1 ತನ್ನಲ್ಲಿಟ್ಟುಕೊಂಡಿದೆ. ಇದೀಗ ಆ ಎಲ್ಲ ಕಲಾವಿದರು, ತಂತ್ರಜ್ಞರು, ಸಹ ನಟರನ್ನು ಪರಿಚಯಸಲಿದ್ದಾರೆ. ಈ ಸಂಬಂಧ ಇಡೀ ಚಿತ್ರತಂಡ ಸದಸ್ಯರೊಂದಿಗೆ ಇಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಯಲಿದೆ. ಆಗ ಎಲ್ಲರು ಜನರಿಗೆ ಪರಿಚಿತವಾಗಲಿದ್ದಾರೆ.












Click it and Unblock the Notifications