ದರ್ಶನ್ಗೆ ಬಳ್ಳಾರಿ ಭಯ: ಜೈಲಾಧಿಕಾರಿಗಳ ಮುಂದೆ ಹೊಸ ಪಟ್ಟು ಹಿಡಿದ ದಾಸ
ಬೆಂಗಳೂರು, ಆಗಸ್ಟ್ 28: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಪಾಲಾಗಿ ಸುಮಾರು ಮೂರು ತಿಂಗಳು ಸಮೀಪಿಸುತ್ತಿದೆ. ಇತ್ತ ಪತ್ನಿ ವಿಜಯಲಕ್ಷ್ಮೀ ಸೇರಿದಂತೆ ಕುಟುಂಬಸ್ಥರು ದರ್ಶನ್ ಬಿಡುಗಡೆಗಾಗಿ ಹರಸಾಹಸ ಪಡುತ್ತಿದ್ದರೆ, ಅತ್ತ ದರ್ಶನ್ಗೆ ಜೈಲು ವಾಸ ಕಠಿಣವಾಗುವ ಸಾಧ್ಯತೆಗಳು ಹೆಚ್ಚಾಗುತ್ತಿದೆ. ಫೋಟೋ ಹಾಗೂ ವಿಡಿಯೋ ವೈರಲ್ ಆದ ಕಾರಣ ದರ್ಶನ್ಗೆ ಇನ್ನಷ್ಟು ಸಂಕಷ್ಟ ಎದುರಾಗಿದೆ.
ಸದ್ಯ ಪರಪ್ಪನ ಅಗ್ರಹಾರದಲ್ಲಿರುವ ಕೊಲೆ ಆರೋಪಿ ದರ್ಶನ್ಗೆ ಜೈಲಿನಲ್ಲಿಯೇ ರಾಜಾತಿಥ್ಯ ನೀಡುತ್ತಿರುವ ಅನುಮಾನ ವ್ಯಕ್ತವಾಗುತ್ತಿದೆ. ಆಗಸ್ಟ್ 25ರಂದು ವೈರಲ್ ಆದ ಫೋಟೋ ಹಾಗೂ ವಿಡಿಯೋಗಳಿಂದ ಈ ಅನುಮಾನ ಮತ್ತಷ್ಟು ಹೆಚ್ಚಾಗಿದೆ.

ಜೈಲಿನಲ್ಲಿರುವ ದರ್ಶನ್ ಅವರ ಲೇಟೆಸ್ಟ್ ಫೋಟೋವೊಂದು ಎಲ್ಲೆಡೆ ವೈರಲ್ ಆಗಿತ್ತು. ದರ್ಶನ್ ಟೀ ಕುಡಿಯುತ್ತಾ, ಸಿಗರೇಟ್ ಸೇದುತ್ತಾ ವಿಲ್ಸನ್ ಗಾರ್ಡನ್ ನಾಗ, ಕುಳ್ಳ ಸೀನಾ ಎನ್ನುವ ರೌಡಿಶೀಟರ್ ಜೊತೆಗೆ ಜೈಲಿನ ಆವರಣದ ಒಳಗೆ ಕುಳಿತಿರುವ ಫೋಟೋ ಎಲ್ಲೆಡೆ ವೈರಲ್ ಆಗಿದೆ. ಈ ಫೋಟೋ ಸಾಕಷ್ಟು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಜೊತೆಗೆ ದರ್ಶನ್ ಮತ್ತೊಬ್ಬ ಆರೋಪಿ ಜೊತೆ ವಿಡಿಯೋ ಕಾಲ್ನಲ್ಲಿ ಮಾತನಾಡಿದ ವಿಡಿಯೋ ಕೂಡ ವೈರಲ್ ಆಗಿದೆ.
ಈ ಫೋಟೋ ಹಾಗೂ ವಿಡಿಯೋ ವೈರಲ್ ಆದ ಬಳಿಕ ನ್ಯಾಯಾಲಯ ಆರೋಪಿಗಳನ್ನು ಬೇರೆ ಜೈಲಿಗೆ ಶಿಫ್ಟ್ ಮಾಡಲು ಅನುಮತಿ ನೀಡಿದೆ. ಜೈಲಾಧಿಕಾರಿಗಳು ಮಾಡಿದ ಮನವಿ ಮೇರೆಗೆ ಕೋರ್ಟ್ ದರ್ಶನ್ನನ್ನು ಪರಪ್ಪನ ಅಗ್ರಹಾರದಿಂದ ಬಳ್ಳಾರಿಗೆ ಶಿಫ್ಟ್ ಮಾಡಲು ಅನುಮತಿ ನೀಡಿದೆ. ಕೋರ್ಟ್ ಅನುಮತಿ ಸಿಗುತ್ತಿದ್ದಂತೆ ಜೈಲಾಧಿಕಾರಿಗಳು ದರ್ಶನ್ ಅನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡಲು ಸಿದ್ಧತೆ ಆರಂಭಿಸಿದ್ದಾರೆ.

ದರ್ಶನ್ ಜೊತೆಗೆ ರೇಣುಕಾಸ್ವಾಮಿ ಕೊಲೆ ಪ್ರಕರಣದ ಇತರ ಆರೋಪಿಗಳು ರಾಜ್ಯದ ಬೇರೆ ಬೇರೆ ಜೈಲಿಗೆ ಶಿಫ್ಟ್ ಆಗಲಿದ್ದು, ಡಿ ಗ್ಯಾಂಗ್ ಛಿಧ್ರ ಛಿಧ್ರವಾಗುತ್ತಿದೆ. ಅತ್ತ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡುವುದು ಖಚಿತವಾಗುತ್ತಿದ್ದಂತೆ ಇತ್ತ ದರ್ಶನ್ ಹೊಸ ವರಸೆ ಶುರು ಮಾಡಿದ್ದಾರೆ ಎನ್ನಲಾಗಿದೆ. ಇದರಿಂದ ಜೈಲಾಧಿಕಾರಿಗಳಿಗೆ ಮತ್ತೊಂದು ತಲೆ ನೋವು ಎದುರಾಗಿದೆ.
ಪರಪ್ಪನ ಅಗ್ರಹಾರದಲ್ಲಿ ಎರಡು ತಿಂಗಳಿಗೂ ಹೆಚ್ಚು ಜೈಲುವಾಸ ಅನುಭವಿಸಿರುವ ದರ್ಶನ್, ಬಳ್ಳಾರಿ ಜೈಲಿಗೆ ಹೋಗಲು ನಕಾರ ತೆಗೆದು ಜೈಲಾಧಿಕಾರಿಗಳ ಬಳಿ ನಾನು ಬಳ್ಳಾರಿಗೆ ಹೋಗಲ್ಲ ಎಂದು ಹಠ ಹಿಡಿದಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಆ ಜೈಲಿಗೆ ನಾನ್ಯಾಕೆ ಹೋಗಬೇಕು ಎಂದು ದರ್ಶನ್ ಪಟ್ಟು ಹಿಡಿದಿದ್ದು, ಅಧಿಕಾರಿಗಳು ದರ್ಶನ್ ಮನವೊಲಿಸಲು ಹರಸಾಹಸ ಪಡುತ್ತಿದ್ದಾರೆ ಎನ್ನಲಾಗಿದೆ. ಸದ್ಯ ನ್ಯಾಯಾಲಯದ ಆದೇಶವಿರುವ ಕಾರಣ ಜೈಲಾಧಿಕಾರಿಗಳು ದರ್ಶನ್ ಅನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲೇ ಬೇಕಾದ ಅನಿವಾರ್ಯತೆ ಇದ್ದು, ಈ ಸಮಯದಲ್ಲಿ ಅಧಿಕಾರಿಗಳು ಯಾವ ರೀತಿ ಹೆಜ್ಜೆಯಿಡಲಿದ್ದಾರೆ ಎಂದು ಕಾದು ನೋಡಬೇಕಿದೆ.












Click it and Unblock the Notifications