Darshan Thoogudeepa: ದರ್ಶನ್ ಶಿಫ್ಟ್ ಆಗುವ ಬಳ್ಳಾರಿ ಜೈಲಿನಲ್ಲಿದ್ದಾನೆ ಬಾಂಬ್ ಬ್ಲಾಸ್ಟರ್..! ಹೇಗಿದೆ ಜೈಲು ಗೊತ್ತಾ?
ಬಳ್ಳಾರಿ ಆಗಸ್ಟ್ 28: ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜನಂತೆ ಮೆರೆಯಲು ಹೋಗಿ ದರ್ಶನ್ ಬಳ್ಳಾರಿ ಜೈಲು ಪಾಲಾಗಿದ್ದಾರೆ. ಇಂದು ಅಥವಾ ನಾಳೆ ದರ್ಶನ್ ಅವರನ್ನು ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗುತ್ತದೆ. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ A2 ಆರೋಪಿ ಆಗಿರುವ ದರ್ಶನ್ ತೂಗುದೀಪ, ಜೈಲನ್ನು ತಮಗೆ ಬೇಕಾದಂತೆ ಬಿಂದಾಸ್ ಆಗಿ ಬದಲಾಯಿಸಿಕೊಂಡಿದ್ದರು. ಈ ಫೋಟೋ ವೈರಲ್ ಆಗುತ್ತಿದ್ದಂತೆ ಕೋರ್ಟ್ ದರ್ಶನ್ ಜೈಲನ್ನು ಬದಲಾಯಿಸಿದೆ.
ಹೌದು... ದರ್ಶನ್ ಹಾಗೂ ಗ್ಯಾಂಗ್ ಜೈಲಿನಲ್ಲಿ ಬಿಂದಾಸಾಗಿ ಸಿಗರೇಟ್ ಹೊಡೆಯುತ್ತಿರುವ ಪೋಟೋ ಹಾಗೂ ವಿಡಿಯೋ ವೈರಲ್ ಆಗಿದೆ. ಈ ಒಂದೇ ಒಂದು ಫೋಟೋ ದರ್ಶನ್ ಜೈಲನ್ನೇ ಬದಲಾಯಿಸಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ದರ್ಶನ್ ಇನ್ಮುಂದೆ ಬಳ್ಳಾರಿ ಸೆಂಟ್ರಲ್ ಜೈಲಿಗೆ ಶಿಫ್ಟ್ ಮಾಡಲು ಕೋರ್ಟ್ ಆದೇಶ ನೀಡಿದೆ. ಹಾಗಾದರೆ ಬಳ್ಳಾರಿ ಜೈಲು ಹೇಗಿದೆ? ಇಲ್ಲಿನ ವ್ಯವಸ್ಥೆಗಳು ಏನು? ಇಲ್ಲಿನ ಇತಿಹಾಸ, ಕೈದಿಗಳು ಎಷ್ಟು? ಎಲ್ಲಾ ವಿಷಯಗಳನ್ನು ಈಗ ತಿಳಿಯೋಣ.

ಬಳ್ಳಾರಿ ಜೈಲಿನ ಇತಿಹಾಸ
ಬ್ರಿಟಿಷರ ಆಳ್ವಿಕೆಯಲ್ಲಿ ಬಳ್ಳಾರಿಯು ಪ್ರಮುಖ ಪಟ್ಟಣವಾಗಿತ್ತು. ವಿಶೇಷವಾಗಿ 1800ರಲ್ಲಿ ಆಗಿನ ಮದ್ರಾಸ್ ಪ್ರೆಸಿಡೆನ್ಸಿಯೊಂದಿಗೆ ವಿಲೀನಗೊಂಡ ನಂತರ ಹೆಚ್ಚಿನ ಪ್ರಾಶಸ್ತ್ಯ ಬಂತು. ಆಗ ಬ್ರಿಟಿಷರು ನಿರ್ಮಿಸಿದ್ದ ಬಳ್ಳಾರಿ ಜೈಲಿನಲ್ಲಿ ಕ್ವಿಟ್ ಇಂಡಿಯಾ ಚಳವಳಿಯ ಸಮಯದಲ್ಲಿ ಸ್ವಾತಂತ್ರ್ಯ ಹೋರಾಟದ ಅನೇಕ ದಿಗ್ಗಜರನ್ನು ಹಾಕಲಾಗಿತ್ತು. ಸ್ವಾತಂತ್ರ್ಯ ಹೋರಾಟದ ದಿಗ್ಗಜರನ್ನು ಈ ಜೈಲಿನಲ್ಲಿ ಬಂಧಿಸಲಾಗಿತ್ತು.
ಅಲ್ಲದೆ ವಿದೇಶಿ ಯುದ್ಧ ಕೈದಿಗಳೂ ಇಲ್ಲಿದ್ದರು. ಇಷ್ಟೇ ಅಲ್ಲದೆ ಮಹಾತ್ಮಾ ಗಾಂದೀಜಿ ಎರಡು ಬಾರಿ ಇಲ್ಲಿಗೆ ಭೇಟಿ ನೀಡಿದ್ದರು ಎನ್ನಲಾಗುತ್ತದೆ. ಜೈಲಿನಲ್ಲಿ ಈಗಲೂ ಕೆಲವು ಕಟ್ಟಡಗಳು ಹಳೆಯ ಶೈಲಿನಲ್ಲಿಯೇ ಇವೆ. ಹೆಚ್ಚಿನ ಭದ್ರತೆ ಕೂಡ ಇಲ್ಲಿದೆ ಎನ್ನಲಾಗುತ್ತದೆ. ಸದ್ಯ ಈ ಜೈಲಿಗೆ ಕನ್ನಡ ಸಿನಿಮಾ ನಟ ದರ್ಶನ್ನನ್ನು ಶಿಫ್ಟ್ ಮಾಡಲಾಗುತ್ತಿದೆ. ವಿಪರ್ಯಾಸ ಅಂದರೆ ಈ ಜೈಲಿನಲ್ಲಿ ಈ ಹಿಂದೆ ದರ್ಶನ್ ಸಿನಿಮಾ ಶೂಟಿಂಗ್ ಮಾಡಿದ್ದರು. ಈಗ ಜೈಲಿನ ಸದ್ಯದ ಪರಿಸ್ಥಿತಿ ಹೇಗಿದೆ ಅನ್ನೋದನ್ನ ನೋಡ್ತಾ ಹೋಗೋಣ.

ಬಳ್ಳಾರಿ ಜೈಲಿನಲ್ಲಿ ಸದ್ಯಕ್ಕಿರುವ ಕೈದಿಗಳ ಸಂಖ್ಯೆ ಎಷ್ಟು?
ಜೈಲಾಧಿಕಾರಿಯೊಬ್ಬರು ನೀಡಿದ ಮಾಹಿತಿ ಪ್ರಕಾರ, ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ ಸದ್ಯ 385 ಜನ ಕೈದಿಗಳು ಇದ್ದಾರೆ. ಆದರೆ ದರ್ಶನ್ ಯಾವಾಗ ಈ ಜೈಲಿಗೆ ಬರುತ್ತಾರೆ ಎನ್ನುವ ಬಗ್ಗೆ ಖಾತರಿ ಇಲ್ಲ. ಇವತ್ತು ಬರಬಹುದು ಅಥವಾ ನಾಳೆ ಕೂಡ ಜೈಲಿಗೆ ಶಿಫ್ಟ್ ಆಗಬಹುದು. ಜೈಲಿನ ಮೆನು ಪ್ರಕಾರ ಕೈದಿಗಳಿಗೆ ಆಹಾರ ನೀಡಲಾಗುತ್ತದೆ.
ಬಳ್ಳಾರಿ ಜೈಲಿನ ಆಹಾರ ಮೆನು ಹೀಗಿದೆ...
ಬಳ್ಳಾರಿ ಜೈಲಿನಲ್ಲಿ ವಾರಕ್ಕೊಮ್ಮೆ ಮಾಂಸಹಾರವನ್ನು ನೀಡಲಾಗುತ್ತದೆ. ಉಳಿದ ದಿನ ಸಸ್ಯಾಹಾರವನ್ನು ನೀಡಲಾಗುತ್ತದೆ. ಬೆಳಗಿನ ಉಪಾಹಾರಕ್ಕೆ ಉಪ್ಪಿಟ್ಟು, ಒಗ್ಗರಣೆ ಇತರ ತಿಂಡಿಗಳನ್ನು ನೀಡಲಾಗುತ್ತದೆ. ನಿತ್ಯ ಮಧ್ಯಾಹ್ನದ ಊಟಕ್ಕೆ ಅನ್ನ ಸಾಬಾಂರ್ ಇರುತ್ತದೆ. ಇನ್ನೂ ರಾತ್ರಿ ಊಟಕ್ಕೆ ಮುದ್ದೆ, ಚಪಾತಿ, ಅನ್ನ ಸಾಂಬಾರ್ ಇರುತ್ತದೆ.
ಬಳ್ಳಾರಿ ಜೈಲಿನಲ್ಲಿರುವ ಕೈದಿಗಳಲ್ಲಿ ಒಬ್ಬ ಬಾಂಬ್ ಬ್ಲಾಸ್ಟರ್ ..
ಜೈಲಿನ ಒಳಗಡೆ ದರ್ಶನ್ ಬರುತ್ತಾರೆ ಎನ್ನುವ ಕಾರಣಕ್ಕೆ ಯಾವುದೇ ಭದ್ರತೆಯನ್ನು ಹೆಚ್ಚಿಸಲಾಗಿಲ್ಲ. ಆದರೆ ಜೈಲಿನ ಹೊರಗಡೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಇನ್ನೂ ಬಳ್ಳಾರಿ ಜೈಲಿನಲ್ಲಿ ಇರುವ 385 ಜನ ಕೈದಿಗಳ ಪೈಕಿ ಒಬ್ಬ ಬಾಂಬ್ ಬ್ಲಾಸ್ಟರ್ ಇದ್ದಾನೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಬಳ್ಳಾರಿ ಜೈಲಿನಲ್ಲಿ ಎಷ್ಟು ಬಾರಿ ಒಬ್ಬ ಕೈದಿಯನ್ನು ಭೇಟಿ ಮಾಡಬಹುದು ಮತ್ತು ಯಾರು?
ಇನ್ನೂ ಜೈಲಿನ ನಿಯಮದ ಪ್ರಕಾರ, ಒಬ್ಬ ಕೈದಿಯನ್ನು ವಾರದಲ್ಲಿ ಐದು ಜನ ಭೇಟಿ ಮಾಡಬಹುದು. ಕೈದಿಯನ್ನು ಭೇಟಿ ಮಾಡಲು ಸಂಬಂಧಿಕರು, ಆಪ್ತರು, ವಕೀಲರಿಗೆ ಮಾತ್ರ ಅವಕಾಶವಿರುತ್ತದೆ. ಇವರನ್ನು ಹೊರತಾಗಿ ಬೇರೆಯವರಿಗೆ ಅವಕಾಶವಿರುವುದಿಲ್ಲ. 45 ನಿಮಿಷ ಕೈದಿಗಳು ಮಾತನಾಡಬಹುದು.
ಜೈಲಿನಿಂದ ಯಾರಿಗೆ ಕರೆ ಮಾಡಬಹುದು ಮತ್ತು ಎಷ್ಟು ಸಮಯ ನೀಡಲಾಗುತ್ತದೆ?
ಇನ್ನೂ ಜೈಲಿನಲ್ಲಿರುವ ಕೈದಿ ಹೊರಗಡೆ ಇರುವ ತನ್ನವರೊಂದಿಗೆ ಮಾತನಾಡಲು ಕೆಲ ನಿಯಮಗಳಿವೆ. ಕೈದಿ ಮುಂಚಿತವಾಗಿ ನಂಬರ್ ನೀಡಿರಬೇಕು. ಜೈಲಿನಲ್ಲಿ ಪ್ರಿಜನ್ ಕಾಲ್ ಸಿಸ್ಟಮ್ ಇರುತ್ತದೆ. ಒಬ್ಬ ಕೈದಿ ಕುಟುಂಬಸ್ಥರಿಗೆ, ಆಪ್ತರಿಗೆ, ವಕೀಲರಿಗೆ ಫೋನ್ ಕರೆ ಮಾಡಿ ಮಾತನಾಡಬಹುದು.
ಕೈದಿ ಯಾರಿಗೆ ಕರೆ ಮಾಡಿದ್ದಾನೆ ಎಂದು ಗುರುತಿಸಲು ಕಾಲ್ ಅನ್ನು ರೆಕಾರ್ಡ್ ಮಾಡಲಾಗುತ್ತದೆ. 45 ನಿಮಿಷ ಮಾತನಾಡಲು ಕೈದಿಗೆ ಅವಕಾಶ ನೀಡಲಾಗುತ್ತದೆ. ಕೈದಿ ಮಾತನಾಡಿದ ಬಳಿಕ ಅದನ್ನು ಕೇಳಿಸಿಕೊಳ್ಳಲಾಗುತ್ತದೆ. ಕೈದಿ ಹಾಗೂ ಕೈದಿಯೊಂದಿಗೆ ಮಾತನಾಡಿದ ವ್ಯಕ್ತಿಗಳ ಮಾತಿನಲ್ಲಿ ಯಾವುದೇ ಅನುಮಾನಾಸ್ಪದ ಮಾತುಗಳು ಇಲ್ಲದೇ ಇದ್ದಲ್ಲಿ ಮುಂದಿನ ಕರೆಗೆ ಅವರಿಗೆ ಅವಕಾಶ ನೀಡಲಾಗುತ್ತದೆ. ಅನುಮಾನ ಬಂದಲ್ಲಿ ಆ ಕರೆ ರೆಕಾರ್ಡ್ ತೆಗೆದುಕೊಂಡು ಪರಿಶೀಲನೆ ಮಾಡಲಾಗುತ್ತದೆ.
ದರ್ಶನ್ ಹಾಕಿಕೊಳ್ಳುವ ಬಟ್ಟೆ ಯಾವುದು?
ಸಾಮಾನ್ಯವಾಗಿ ಜೈಲಿನಲ್ಲಿ ಇರುವ ಕೈದಿಗಳು ಆರೋಪಿ ಎಂದು ಸಾಬೀತಾಗಿದ್ದರೆ ಅವರಿಗೆ ಬಿಳಿ ಬಣ್ಣ ಅಂದರೆ ಜೈಲಿನಲ್ಲಿ ಕೈದಿಗಳಿಗೆ ನೀಡುವ ಬಟ್ಟೆ ಹಾಕಿಕೊಳ್ಳಬೇಕು. ಆದರೆ ದರ್ಶನ್ ಇನ್ನೂ ಆರೋಪಿ ಎಂದು ಸಾಬೀತಾಗದೇ ಇರುವ ಕಾರಣ ಅವರು ತಮ್ಮ ಬಟ್ಟೆ ಅಂದರೆ ಮನೆಯಿಂದ ತಂದ ಬಟ್ಟೆಗಳನ್ನೇ ಧರಿಸಬಹುದು.
ದರ್ಶನ್ ವಿಚಾರಿಸಿಕೊಳ್ಳಲು ಹೆಚ್ಚುವರಿ ಸಿಬ್ಬಂದಿ ಇರುತ್ತಾರಾ?
ಜೈಲಿನಲ್ಲಿ ಎಲ್ಲಾ ಕೈದಿಗಳನ್ನು ಒಂದೇ ರೀತಿ ನೋಡಿಕೊಳ್ಳಲಾಗುತ್ತದೆ. ಅನಾರೋಗ್ಯ ಇದ್ದಾಗ ಮಾತ್ರ ಸಿಬ್ಬಂದಿ ಕೈದಿ ಬಗ್ಗೆ ಕಾಳಜಿ ವಹಿಸುತ್ತಾರೆ. ಆದರೆ ದರ್ಶನ್ ಅವರಿಗಂತಲೇ ವಿಶೇಷವಾಗಿ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿಲ್ಲ ಎನ್ನುವ ಮಾಹಿತಿ ಜೈಲಾಧಿಕಾರಿಗಳಿಂದ ಲಭ್ಯವಾಗಿದೆ.












Click it and Unblock the Notifications