ರಜತ್,ವಿನಯ್ ಬಳಿಕ ರಕ್ಷಕ್ ಬುಲೆಟ್ಗೆ ಕಾನೂನು ಸಂಕಷ್ಟ: ಆಗಿದ್ದೇನು?
ಕನ್ನಡ ಬಿಗ್ ಬಾಸ್ನ ಮಾಜಿ ಸ್ಪರ್ಧಿಗಳಿಗೆ ಒಬ್ಬರಾದ ಮೇಲೆ ಒಬ್ಬರಿಗೆ ಕಾನೂನಿನ ಸಂಕಷ್ಟ ಎದುರಾಗುತ್ತಿದೆ. ಲಾಯರ್ ಜಗದೀಶ್ ಜೈಲು ಸೇರಿ ಎರಡು ತಿಂಗಳಾಗಿದ್ದು ಇನ್ನೂ ಜಾಮೀನು ಸಿಕ್ಕಿಲ್ಲ. ಇನ್ನು ಬಿಗ್ ಬಾಸ್ ಕನ್ನಡ ಸೀಸನ್ 10ರ ಸ್ಪರ್ಧಿ ವಿನಯ್ ಗೌಡ ಹಾಗೂ ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿ ರಜತ್ ಕಿಶನ್ ಕೂಡ ಜೈಲು ಸೇರಿದ್ದಾರೆ. ಈ ಮಧ್ಯೆಯೇ ಈ ಮತ್ತೊಬ್ಬ ಮಾಜಿ ಬಿಗ್ ಬಾಸ್ ಸ್ಪರ್ಧಿಗೆ ಸಂಕಷ್ಟ ಎದುರಾಗಿದೆ.
ಬಿಗ್ ಬಾಸ್ ಕನ್ನಡ ಸೀಸನ್ 10ರ ಸ್ಪರ್ಧಿಯಾಗಿದ್ದ ಸದ್ಯ ಭರ್ಜರಿ ಬ್ಯಾಚುಲರ್ಸ್ ಕಾರ್ಯಕ್ರಮದ ಸ್ಪರ್ಧಿಯಾಗಿರುವ ನಟ ರಕ್ಷಕ್ ಬುಲೆಟ್ ವಿರುದ್ಧ ದೂರು ನೀಡಲು ಹಿಂದೂ ಕಾರ್ಯಕರ್ತರು ಮುಂದಾಗಿದ್ದಾರೆ. ರಕ್ಷಕ್ ಬುಲೆಟ್ ಖಾಸಗಿ ವಾಹಿನಿಯ ಕಾರ್ಯಕ್ರಮವೊಂದರಲ್ಲಿ ನಾಡ ದೇವತೆ ಚಾಮುಂಡೇಶ್ವರಿ ತಾಯಿಗೆ ಅವಮಾನ ಮಾಡಿದ್ದಾರೆ ಎನ್ನುವ ಆರೋಪ ಜೋರಾಗಿ ಕೇಳಿಬರುತ್ತಿದ್ದು, ಈ ಹಿನ್ನೆಲೆಯಲ್ಲಿ ದೂರು ದಾಖಲಿಸಲು ಸಜ್ಜಾಗಿದ್ದಾರೆ.

ಮಾತಿನ ಭರಾಟೆಯಲ್ಲಿ ರಕ್ಷಕ್ ಬುಲೆಟ್ ಚಾಮುಂಡೇಶ್ವರಿಗೆ ತಾಯಿಗೆ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿ ನೇರವಾಗಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ಅವರಿಗೆ ದೂರು ಸಲ್ಲಿಕೆಗೆ ಸಜ್ಜಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಚಾಮುಂಡೇಶ್ವರಿಗೆ ತಾಯಿಗೆ ಅವಮಾನ ಮಾಡಿದ್ರಾ ನಟ ರಕ್ಷಕ್ ಬುಲೆಟ್?
ರಕ್ಷಕ್ ಬುಲೆಟ್ ಖಾಸಗಿ ವಾಹಿನಿಯ ಕಾರ್ಯಕ್ರಮವೊಂದಲ್ಲಿ ಸ್ಪರ್ಧಿಯಾಗಿದ್ದಾರೆ. ಈ ಕಾರ್ಯಕ್ರಮದ ಭಾಗವಾಗಿ ದರ್ಶನ್ ಹಾಗೂ ರಚಿತಾ ರಾಮ್ ಅಭಿನಯದ ಬುಲ್ ಬುಲ್ ಸಿನಿಮಾದ ದೃಶ್ಯವನ್ನು ಮರುಸೃಷ್ಟಿ ಮಾಡಿದ್ದಾರೆ. ಈ ವೇಳೆ ವೇದಿಕೆ ಮೇಲೆ ಡೈಲಾಗ್ ಹೊಡೆದ ರಕ್ಷಕ್ ಬುಲೆಟ್ 'ನಾವು ನಿಮ್ಮವರೇ ಮಂಡ್ಯದವರು. ನಿಮ್ಮನ್ನು ನೋಡುತ್ತಿದ್ದ ಹಾಗೆ ಅಂದುಕೊಂಡೆ, ತಾಯಿ ಚಾಮುಂಡೇಶ್ವರಿನೇ ಬೆಟ್ಟದಿಂದ ಇಳಿದು ಬಂದು ಸೀರೆ-ಒಡವೆಯನೆಲ್ಲಾ ಬಿಚ್ಚಿಟ್ಟು ಪ್ಯಾಂಟು ಶರ್ಟ್ ಹಾಕಿಕೊಂಡು ಸ್ವಿಟ್ಜರ್ಲೆಂಡ್ನಲ್ಲಿ ಒಳ್ಳೆ ಟ್ರಿಪ್ ಹೊಡೆಯುತ್ತಿದ್ದಾರೆ ಅಂತಾ' ಎಂದು ಹೇಳಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ರಕ್ಷಕ್ ಬುಲೆಟ್ ಹೇಳಿದ್ದು ಸರಿನಾ ಅಂತಾ ಅನೇಕರು ಪ್ರಶ್ನಿಸಿದ್ದಾರೆ. ಇನ್ನು ಕಾರ್ಯಕ್ರಮದ ವೇದಿಕೆ ಮೇಲೆ ಪಕ್ಕದಲ್ಲಿದ್ದ ಹುಡುಗಿಯನ್ನು ಹೊಗಳುವ ಭರದಲ್ಲಿ ರಕ್ಷಕ್ ಬುಲೆಟ್ ನಾಡ ದೇವತೆ ಚಾಮುಂಡೇಶ್ವರಿ ತಾಯಿಗೆ ಅವಮಾನ ಮಾಡಿದ್ದಾರೆ. ಇದರಿಂದ ತಾಯಿಯನ್ನು ಪೂಜಿಸುವ ನಮ್ಮ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಹಿಂದೂ ಕಾರ್ಯಕರ್ತರು ಬೆಂಗಳೂರಿನಲ್ಲಿ ನಟ ರಕ್ಷಕ್ ಬುಲೆಟ್ ವಿರುದ್ಧ ದೂರು ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ.












Click it and Unblock the Notifications