Metoo: ಸ್ಯಾಂಡಲ್ವುಡ್ ಅಂಗಳದಲ್ಲಿ ಮತ್ತೆ 'ಮೀಟೂ' ಸದ್ದು- ಕನ್ನಡ ಚಿತ್ರರಂಗದಲ್ಲಿ ಲೈಂಗಿಕ ದೌರ್ಜನ್ಯ ನಡೆಯುತ್ತಿರುವುದು ಹೇಗೆ?
ಬೆಂಗಳೂರು ಸೆಪ್ಟೆಂಬರ್ 4: ಸ್ಯಾಂಡಲ್ವುಡ್ ಅಂಗಳದಲ್ಲಿ ಮತ್ತೆ ' ಮೀಟೂ' ಸದ್ದು ಮಾಡುತ್ತಿದೆ. ಕನ್ನಡ ಚಿತ್ರರಂಗದಲ್ಲಿ ಲೈಂಗಿಕ ದೌರ್ಜನ್ಯ ನಡೆಯುತ್ತಿದ್ದು ಇದರಿಂದ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ. ಹೀಗಾಗಿ ಸಮಿತಿಯೊಂದನ್ನು ರಚಿಸಿ ಕೇರಳ ಮಾದರಿ ತನಿಖೆ ಆಗಬೇಕು ಎಂದು ಸ್ಯಾಂಡಲ್ವುಡ್ ನಟ, ನಟಿಯರು ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದ್ದಾರೆ.
ಮನವಿ ಪತ್ರಕ್ಕೆ 153 ಜನ ಸಹಿ
ಹೌದು... ಸ್ಯಾಂಡಲ್ವುಡ್ನಲ್ಲಿ ಸಮಿತಿ ರಚಿಸುವಂತೆ ಸ್ಯಾಂಡಲ್ವುಡ್ನ ಖ್ಯಾತ ನಟ ನಟಿಯರು ಸಿಎಂಗೆ ಮನವಿ ಪತ್ರ ಸಲ್ಲಿಕೆ ಮಾಡಿದ್ದಾರೆ. ಈ ಮನವಿ ಪತ್ರದಲ್ಲಿ ಸ್ಯಾಂಡಲ್ವುಡ್, ವಿವಿಧ ಕ್ಷೇತ್ರಗಳ ಗಣ್ಯರಿಂದ 153 ಸಹಿ ಹಾಕಲಾಗಿದೆ. ಸಿಎಂಗೆ ಸಲ್ಲಿಸಿದ ಮನವಿ ಪತ್ರಕ್ಕೆ 153 ಜನ ಸಹಿ ಹಾಕಿದ್ದು ಮಾತ್ರವಲ್ಲದೆ ಸಮಿತಿಯಲ್ಲಿ ನಿವೃತ್ತ ನ್ಯಾಯಾಧೀಶರನ್ನು ನೇಮಿಸುವಂತೆ ಬೇಡಿಕೆ ಇಡಲಾಗಿದ್ದು, ಲೈಂಗಿಕ ದೌರ್ಜನ್ಯ ತನಿಖೆಗೆ ಆಗ್ರಹಿಸಲಾಗಿದೆ.

ನಟಿ ರಮ್ಯಾ, ನಿರ್ದೇಶಕಿ ಕವಿತಾ ಲಂಕೇಶ್, ನಟ ಸುದೀಪ್, ನಟ ಚೇತನ್, ನಟ ಕಿಶೋರ್, ಮೇಘನಾ, ಪೂಜಾ ಗಾಂಧಿ, ನಿರ್ದೇಶಕ ಸುನಿ, ಲೇಖಕಿ ಉಷಾ, ಶ್ರುತಿ ಹರಿಹರನ್, ಐಂದ್ರಿತಾ ರೈ, ಶಾನ್ವಿ ಶ್ರೀವಾಸ್ತವ, ಆಶಿಕಾ ರಂಗನಾಥ್ ಹೀಗೆ 153 ಜನ ಮನವಿ ಪತ್ರದಲ್ಲಿ ಸಹಿ ಹಾಕಿದ್ದಾರೆ. ಅಷ್ಟಕ್ಕೂ ಕನ್ನಡ ಚಿತ್ರರಂಗದಲ್ಲಿ ಲೈಂಗಿಕ ದೌರ್ಜನ್ಯ ನಡೆಯುತ್ತಿರುವುದು ಹೇಗೆ? ಇದರ ಬಗ್ಗೆ ನಟಿ ಸಂಜನಾ ವಿವರವಾಗಿ ಹೇಳಿಕೊಂಡಿದ್ದಾರೆ.
ಶೂಟಿಂಗ್ಗೆ ಸಮಯ, ಸ್ಥಳ ಇಲ್ಲದೇ ಇರುವುದು ಕಾಮುಕರಿಗೆ ಅಸ್ತ್ರ
ಸುದ್ದಿಗಾರರೊಂದಿಗೆ ಮಾತನಾಡಿದ ನಟಿ ಸಂಜನಾ, ಸಾಮಾನ್ಯವಾಗಿ ಶೂಟಿಂಗ್ಗೆ ಸಮಯ ಇರುವುದಿಲ್ಲ. ಬೆಂಗಳೂರೇ ಶೂಟಿಂಗ್ ಸ್ಪಾಟ್ ಆಗಿರುವುದಿಲ್ಲ. ಹೀಗಾಗಿ ಲೈಂಗಿಕ ದೌರ್ಜನ್ಯಕ್ಕೆ ಇದೊಂದು ವಿಷಯ ಅಸ್ತ್ರವಾಗಿದೆ. ಇಂಡಸ್ಟ್ರಿಗೆ ಹೊಸದಾಗಿ ಬರುವ ಹುಡುಗಿಯರಿಗೆ ಇದೆಲ್ಲವೂ ತಿಳಿದಿರುವುದಿಲ್ಲ. ಕೆಲವರು ಲೇಟ್ ನೈಟ್ ಶೂಟಿಂಗ್ಗೆ ಕರೆಸಿಕೊಂಡು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಾರೆ. ಇನ್ನೂ ಕೆಲವರು ಬೇರೆ ಸ್ಥಳಗಳಿಗೆ ಕರೆದುಕೊಂಡು ಹೋಗಿ ಮಹಿಳೆಯರ ಮೇಲೆ ದೌರ್ಜನ್ಯ ಎಸಗುತ್ತಾರೆ.

ಎಷ್ಟೋ ಜನರಿಗೆ ತಾವು ಒಬ್ಬರೇ ಹೋಗಬೇಕಾ? ತಮ್ಮ ಪೋಷಕರೊಂದಿಗೆ ಹೋಗಬೇಕಾ? ಒಬ್ಬರೇ ಹೋದರೆ ಅಲ್ಲಿರುವ ಸೌಲಭ್ಯಗಳೇನು ಎನ್ನುವುದು ತಿಳಿದಿರುವುದಿಲ್ಲ. ಇಂಥಹ ವಿಷಯಗಳನ್ನು ಅವರು ಯಾರೊಂದಿಗೆ ಹೇಳಿಕೊಳ್ಳಬೇಕು. ಯಾರಿಗೆ ದೂರು ನೀಡಬೇಕು ಎನ್ನುವ ಮಾಹಿತಿ ಕೂಡ ಇರುವುದಿಲ್ಲ. ಇಂತಹ ಪ್ರಸ್ತಾಪಗಳು ನನಗೂ ಬಂದಿವೆ. ನನಗೆ ಅಂಥವರಿಂದ ದೂರ ಇರುವುದು ಗೊತ್ತಿತ್ತು. ಆದರೆ ಎಷ್ಟೋ ಹುಡುಗಿಯರಿಗೆ ಇದು ತಿಳಿದಿರುವುದಿಲ್ಲ ಎಂದು ನಟಿ ಸಂಜನಾ ಹೇಳಿದ್ದಾರೆ.
ಹೊಸದಾಗಿ ಬರುವ ಮಹಿಳೆಯರೇ ಟಾರ್ಗೇಟ್
ನಟಿಯರಿಗೆ ಅಥವಾ ಇತರ ಮಹಿಳೆಯರಿಗೆ ಮೊದಲ ಬಾರಿ ಸಿನಿಮಾ ಆಗಿತ್ತು ಅಂದರೆ ನಿರ್ದೇಶಕರು, ನಿರ್ಮಾಪಕರು ಸೇರಿದಂತೆ ಎಲ್ಲರ ಮಾತು ಕೇಳಬೇಕು ಅನ್ನೋ ಮನೋಭಾವನೆ ಇರುತ್ತದೆ. ಇದನ್ನೇ ಕೆಲವರು ದುರ್ಬಳಕೆ ಮಾಡಿಕೊಳ್ಳುತ್ತಾರೆ. ಇದನ್ನು ಎದುರಿಸುವುದು ಎಷ್ಟೋ ಜನರಿಗೆ ಗೊತ್ತಿಲ್ಲ. ಗೊತ್ತಾಗುವುದಿಲ್ಲ. ಇಂಥಹ ಸಂದರ್ಭದಲ್ಲಿ ಎಷ್ಟೋ ಜನ ಮಹಿಳೆಯರು ತಮ್ಮ ಜೀವನ ಹಾಳು ಮಾಡಿಕೊಳ್ಳುತ್ತಾರೆ ಎಂದು ನಟಿ ಸಂಜನಾ ಹೇಳಿದ್ದಾರೆ.
ನಾನಾ ಸೌಲಭ್ಯ, ಹೆಚ್ಚಿನ ಸಂಭಾವನೆ ನೀಡುವ ಆಮಿಷ!
ಇನ್ನೂ ಈ ಬಗ್ಗೆ ಮಾತನಾಡಿದ ನಟಿ ಶ್ರುತಿ ನಂದೀಶ್, ಸಿನಿಮಾ ಇಂಡಸ್ಟ್ರಿಯಲ್ಲಿ ಮಹಿಳೆಯರಿಗೆ ಸುರಕ್ಷತೆ ಇಲ್ಲ. ಏಳು ವರ್ಷ ಹಿಂದೆ ನನಗೆ ಒಂದು ಹುಡುಗಿ ಬಂದು ತನ್ನ ಮೇಲಾಗುತ್ತಿರುವ ದೌರ್ಜನ್ಯದ ಬಗ್ಗೆ ಹೇಳಿಕೊಂಡಿದ್ದಳು. ಮೊದಲಿಗೆ ಈ ಬಗ್ಗೆ ಅಪ್ರೋಚ್ ಮಾಡುತ್ತಾರೆ.
ಉದಾ: ರಾತ್ರಿ ಪಾರ್ಟಿ ಮಾಡಲು ಆಹ್ವಾನ ನೀಡುತ್ತಾರೆ. ಒಬ್ಬೊಂಟಿಯಾಗಿದ್ದರೆ ಡ್ರಿಂಕ್ಸ್ ಮಾಡಿಸುವುದು. ಬೇಕಾದ ಸೌಲಭ್ಯಗಳು ನೀಡುವುದು, ಶಾಪಿಂಗ್ ಮಾಡಿಸುವುದು, ಹೆಚ್ಚಿನ ಸಂಭಾವನೆ ನೀಡುವ ಆಸೆ ಹುಟ್ಟಿಸುವುದು, ಇದೆಲ್ಲದರ ಹಿಂದಿನ ಉದ್ದೇಶ ಎಷ್ಟೋ ಮಹಿಳೆಯರಿಗೆ ಅರ್ಥವಾಗುವುದಿಲ್ಲ. ಅದೇ ಒಂದು ಸಮಿತಿ ಅಂತ ಇದ್ದರೆ ಮಹಿಳೆಯರು ಧೈರ್ಯವಾಗಿ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಬಹುದು ಎಂದು ಶ್ರುತಿ ನಂದೀಶ್ ಹೇಳಿಕೊಂಡಿದ್ದಾರೆ.












Click it and Unblock the Notifications