ಸ್ಟೇಡಿಯಂ ಬಳಿ ಜನರ ಮಧ್ಯೆ ಸಿಲುಕಿದ್ದೆ, ನನಗೂ ಉಸಿರುಗಟ್ಟಿತ್ತು: ಚಂದನ್ ಶೆಟ್ಟಿ ಪಾರಾಗಿದ್ದು ಹೇಗೆ?
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಿನ್ನೆ ನಡೆದ ಸಂಭ್ರಮಾಚರಣೆ ವೇಳೆ ಕಾಲ್ತುಳಿತ ಸಂಭವಿಸಿ 11 ಮಂದಿ ಜೀವ ಕಳೆದುಕೊಂಡಿದ್ದಾರೆ. ಈ ಭಯಾನಕ ದುರಂತಕ್ಕೆ ಇಡೀ ಕರುನಾಡು ಬೆಚ್ಚಿಬಿದ್ದಿದೆ. ಘಟನೆಯಲ್ಲಿ ಜೀವಬಿಟ್ಟವರ ಕುಟುಂಬಗಳ ಆಕ್ರಂದನ ಮುಗಿಲುಮುಟ್ಟಿದೆ. ನಿನ್ನೆ ಇದೇ ಜನರ ನಡುವೆ ನಟ, ಕನ್ನಡದ ರ್ಯಾಪರ್ ಚಂದನ್ ಶೆಟ್ಟಿ (Chandan Shetty) ಕೂಡ ಸಿಲುಕಿಕೊಂಡಿದ್ದರು ಎಂದು ತಿಳಿದುಬಂದಿದೆ. ಈ ಬಗ್ಗೆ ವಿಡಿಯೋ ಹಂಚಿಕೊಂಡಿರುವ ಚಂದನ್ ಶೆಟ್ಟಿ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಕಣ್ಣಾರೆ ಕಂಡ ಭಯಾನಕ ಅನುಭವವನ್ನು ಬಿಚ್ಚಿಟ್ಟಿದ್ದಾರೆ.
18 ವರ್ಷಗಳಿಂದಲೂ ಕಾತರದಿಂದ ಕಾದಿದ್ದ ಆ ಒಂದು ದಿನ ಬಂತು ಅಂತ ನಾನು ತುಂಬಾ ಖುಷಿಪಟ್ಟಿದ್ದೆ. ಆದರೆ 18 ವರ್ಷಗಳಿಂದ ಕಾದಿದ್ದ ಆ ದಿನ ಬಂದಾಗ ಎಲ್ಲರ ಎಕ್ಸೈಟ್ಮೆಂಟ್ ಈ ರೀತಿ ಇರುತ್ತೆ ಅಂತ ನಿಜಕ್ಕೂ ಯಾರೂ ಅಂದುಕೊಂಡಿರಲಿಲ್ಲ ಎಂದಿದ್ದಾರೆ ಚಂದನ್ ಶೆಟ್ಟಿ. ನಿನ್ನೆ ನಾನು ಕೂಡ ಆ ಜನರ ಗುಂಪಿನಲ್ಲಿ ಸಿಲುಕಿಕೊಂಡಿದ್ದೆ. ನನಗೆ ಗೇಟ್ ನಂಬರ್ 3ರಲ್ಲಿ ಹೋಗಲು ಪಾಸ್ ಸಿಕ್ಕಿತ್ತು. ಆದರೆ ನಾನು ಗೇಟ್ ಬಳಿಗೂ ಹೋಗಲು ಸಾಧ್ಯವಾಗಲಿಲ್ಲ. ಕೊನೆಗೆ ಹೇಗೋ ಮಾಡಿ ಗೇಟ್ ನಂಬರ್ 10ರ ಬಳಿ ಬಂದೆ. ಅಲ್ಲಿ ಕೂಡ ಕ್ರೌಡ್ ಸಿಕ್ಕಾಪಟ್ಟೆ ಇತ್ತು. ಒಂದು ಕ್ಷಣ ನನಗೆ ಉಸಿರಾಡಲು ಕೂಡ ಕಷ್ಟವಾಯಿತು ಎಂದು ವಿವರಿಸಿದ್ದಾರೆ.

ಆ ಕ್ಷಣಕ್ಕೆ ನನಗೆ ಅಲ್ಲಿ ಏನಾಗಿರಬಹುದು ಎಂಬುದನ್ನ ನಾನು ಊಹೆ ಮಾಡಿದೆ. ಏಕೆಂದರೆ ನಾನು ಕೂಡ ಅಂತದ್ದೇ ಪರಿಸ್ಥಿತಿ ಎದುರಿಸಿದೆ. ಕಾಲ್ತುಳಿತದಲ್ಲಿ ಪ್ರಾಣ ಕಳೆದಕೊಂಡವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಚಂದನ್ ಸಂತಾಪ ಸೂಚಿಸಿದ್ದಾರೆ. ಈ ಘಟನೆಯಿಂದ ನನಗಂತೂ ಬಹಳ ಬೇಜಾರಾಗಿದೆ. ಇದಕ್ಕೆ ಹೊಣೆ ಅಂತ ಹೇಳೋದಕ್ಕೂ ತುಂಬಾ ಕಷ್ಟವಾಗ್ತಿದೆ. ಬಹುಶಃ ಕಾರ್ಯಕ್ರಮ ಸರಿಯಾಗಿ ಆಯೋಜನೆ ಮಾಡಲಿಲ್ಲವಾ ಅನ್ನೋದು ಗೊತ್ತಿಲ್ಲ ಎಂದಿದ್ದಾರೆ.
ಕಾರ್ಯಕ್ರಮವನ್ನು ಇಷ್ಟು ಅರ್ಜೆಂಟಾಗಿ ಮಾಡುವ ಬದಲು ಒಂದೆರಡು ದಿನದ ನಂತರ ಸರಿಯಾಗಿ ಪಾಸ್ ಕೊಟ್ಟು ಈ ವೀಕೆಂಡ್ನಲ್ಲಿ ಕಾರ್ಯಕ್ರಮ ಮಾಡಬಹುದಿತ್ತು ಅನಿಸುತ್ತೆ. ಸರಿಯಾಗಿ ವ್ಯವಸ್ಥೆ ಮಾಡಲಿಲ್ವಾ? ಗೊತ್ತಿಲ್ಲ, 18 ವರ್ಷದ ನಂತರ ಕಪ್ ಬಂದರೆ ಅದರ ಖುಷಿ ಹೀಗಿರುತ್ತೆ ಅಂತಾ ಯಾರಿಗೂ ಗೊತ್ತಾಗಲಿಲ್ಲ. ಎರಡು ಮೂರು ದಿನ ಬಿಟ್ಟು ಕಾರ್ಯಕ್ರಮ ಆಯೋಜನೆ ಮಾಡಿದ್ರೆ ಚೆನ್ನಾಗಿತ್ತು. ಆದರೆ ಈ ಕಾಲ್ತುಳಿತ ದುರಂತದಲ್ಲಿ ಗಂಭೀರವಾಗಿ ಗಾಯಗೊಂಡು ಯಾರೆಲ್ಲ ಇದ್ದಾರೋ ಅವರೆಲ್ಲರೂ ಆದಷ್ಟು ಬೇಗ ಗುಣಮುಖರಾಗಲಿ ಎಂದು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ. ಈ ಘಟನೆಯಲ್ಲಿ ಜೀವ ಕಳೆದುಕೊಂಡ 11 ಮಂದಿಯ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ.












Click it and Unblock the Notifications