Actor Umesh: ಹಾಸ್ಯ ನಟ ಎಂ.ಎಸ್.ಉಮೇಶ್ಗೆ ಕ್ಯಾನ್ಸರ್ ಇರುವುದು ಪತ್ತೆ, ಹೇಗಿದೆ ಆರೋಗ್ಯ ಸ್ಥಿತಿ?
ಕನ್ನಡ ಚಿತ್ರರಂಗದ ಹಾಸ್ಯ ನಟ ಎಂ.ಎಸ್.ಉಮೇಶ್ ಅವರು ಇತ್ತೀಚೆಗೆ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮನೆಯಲ್ಲಿ ಜಾರಿ ಬಿದ್ದಿದ್ದ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿತ್ತು. ಇದೀಗ ಅವರ ಚಿಕಿತ್ಸೆ ವೇಳೆ ಆಘಾತಕಾರಿ ವಿಚಾರವೊಂದು ಬಹಿರಂಗವಾಗಿದೆ. ಆಸ್ಪತ್ರೆಗೆ ದಾಖಲಾದ ಬಳಿಕ ಅವರಿಗೆ ಸ್ಕ್ಯಾನಿಂಗ್ ಮಾಡಲಾಯಿತು. ಈ ವೇಳೆ ಉಮೇಶ್ ಅವರಿಗೆ ಕ್ಯಾನ್ಸರ್ ಇರೋದು ಪತ್ತೆಯಾಗಿದ್ದು, ಬೆಂಗಳೂರಿನ ಆಸ್ಪತ್ರೆಯಲ್ಲಿ ಉಮೇಶ್ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ವೈದ್ಯರು, ನಟ ಉಮೇಶ್ ಅವರಿಗೆ ಕ್ಯಾನ್ಸರ್ ಇರೋದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಸ್ಕ್ಯಾನಿಂಗ್ ಮಾಡಿದಾಗ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ. ಉಮೇಶ್ ಅವರಿಗೆ ಕ್ಯಾನ್ಸರ್ ಮೂರನೇ ಸ್ಟೇಜ್ನಲ್ಲಿದೆ ಎಂದು ತಿಳಿಸಿದ್ದಾರೆ. ಸದ್ಯ ಅವರು ಬೆಂಗಳೂರಿನ ಮುದ್ದಿನಪಾಳ್ಯದ ಶಾಂತ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಉಮೇಶ್ ಅವರಿಗೆ ಲಿವರ್ ಕ್ಯಾನ್ಸರ್ ಬಂದಿದ್ದು, ದೇಹದ ಕೆಲ ಭಾಗಕ್ಕೆ ಕ್ಯಾನ್ಸರ್ ಹರಡಿಕೊಂಡಿದೆ. ಈ ಕಾರಣ ದೇಹದ ಗಾಯಕ್ಕೆ ಸರ್ಜರಿ ಮಾಡುವುದು ಕಷ್ಟವಾಗಿದೆ. ಹೀಗಾಗಿ ಅವರೇ ಚೇತರಿಕೆ ಕಾಣುವ ಸಾಧ್ಯತೆ ಹೆಚ್ಚಿದೆ ಎಂದು ವೈದ್ಯರು ಹೇಳಿದ್ದು, ಮುಂದಿನ ಚಿಕಿತ್ಸೆ ಹೇಗೆ ನೀಡಬೇಕು ಎಂದು ಪರಿಶೀಲಿಸುತ್ತಿದ್ದಾರೆ.
ಈ ನಡುವೆ ನಟ ಉಮೇಶ್ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ಮನೆಯಲ್ಲಿ ಸ್ನಾನ ಮಾಡುವಾಗ ಕಾಲು ಜಾರಿ ಬಿದ್ದೆ. ಈ ಘಟನೆಯಿಂದ ಸೊಂಟಕ್ಕೆ, ಭುಜಕ್ಕೆ ಏಟಾಗಿದೆ. ಸದ್ಯ ಏನೂ ತೊಂದರೆ ಇಲ್ಲ. ನಮ್ಮ ಸ್ನೇಹಿತರು, ಕಲಾವಿದರ ಸಂಘಕ್ಕೆ ವಿಷಯ ತಿಳಿಸಿದೆ. ಈ ಡಾಕ್ಟರ್ ನನಗೆ ಬಹಳ ವರ್ಷಗಳಿಂದ ಪರಿಚಯ ಇದ್ದಾರೆ. ನನ್ನನ್ನ ಚೆನ್ನಾಗಿ ನೋಡಿಕೊಳ್ತಿದ್ದಾರೆ. ಅಭಿಮಾನಿಗಳು ಯಾರೂ ಇದರಿಂದ ಆತಂಕಪಡುವ ಅಗತ್ಯವಿಲ್ಲ. ಆದಷ್ಟು ಬೇಗನೇ ಹುಷಾರಾಗಿ ಬರುತ್ತೀನಿ ಎಂದಿದ್ದಾರೆ.
ಇನ್ನೊಂದು ನಾಲ್ಕೈದು ದಿನಗಳ ನಂತರ ನನಗೆ ಸರ್ಜರಿ ಆಗುತ್ತೆ. ಆದಷ್ಟು ಬೇಗ ಹುಷಾರಾಗಿ ಸಿನಿಮಾ, ಸೀರೀಯಲ್ ಮಾಡ್ತೀನಿ. ನಿಮ್ಮ ಸಹಕಾರ ಹೀಗೇ ಇರಲಿ. ಯಾರೂ ಅಪಾರ್ಥ ಮಾಡ್ಕೋಬೇಡಿ ಎಂದು ತಮ್ಮ ಡೈಲಾಗ್ ಕೂಡ ಹೊಡೆದಿದ್ದಾರೆ. ಕಾಲಿಗೆ ಸರ್ಜರಿ ಮಾಡುವಾಗ ಅವರಿಗೆ ಲಿವರ್ ಕ್ಯಾನ್ಸರ್ ಇರುವುದ ಪತ್ತೆಯಾಗಿದೆ. ಇದರಿಂದ ಅವರ ಕುಟುಂಬಸ್ಥರು ಹಾಗೂ ಅಭಿಮಾನಿಗಳು ಆತಂಕದಲ್ಲಿರುವುದಂತೂ ಸತ್ಯ.
ಹಿರಿಯ ಕಲಾವಿದರು ಭೇಟಿ
ಕನ್ನಡ ಚಿತ್ರರಂಗದ ಹಿರಿಯ ಕಲಾವಿದರು ಆಸ್ಪತ್ರೆಗೆ ಭೇಟಿ ನೀಡಿ ನಟ ಉಮೇಶ್ ಅವರ ಆರೋಗ್ಯ ವಿಚಾರಿಸಿದ್ದಾರೆ. ಹಿರಿಯ ನಟಿ ಗಿರಿಜಾ ಲೋಕೇಶ್, ಡಿಂಗ್ರಿ ನಾಗರಾಜ್, ಶ್ರುತಿ ಅವರ ತಾಯಂದಿರು ಹಾಗೂ ತಂದೆ, ನಟ ಗಣೇಶ್ ರಾವ್ ಸೇರಿದಂತೆ ಕಲಾವಿದರು ಒಟ್ಟಿಗೆ ಹೋಗಿ ಉಮೇಶ್ ಅವರನ್ನ ಮಾತನಾಡಿಸಿದ್ದಾರೆ. ಗಿರಿಜಾ ಲೋಕೇಶ್ ಅವರು ಹಳೆಯ ಹಾಡನ್ನು ಹಾಡಿದ್ದಾರೆ. ಉಮೇಶ್ ಅವರೂ ಬೆಡ್ ಮೇಲೆ ಮಲಗಿ ಹಾಡಿಗೆ ಧ್ವನಿಗೂಡಿಸಿದ್ದಾರೆ. ಬೇಗನೆ ಗುಣಮುಖರಾಗುವಂತೆ ಕಲಾವಿದರು ಉಮೇಶ್ ಅವರಿಗೆ ತಿಳಿಸಿದ್ದಾರೆ.












Click it and Unblock the Notifications