Get Updates
Get notified of breaking news, exclusive insights, and must-see stories!

'ಈಗಲೂ ದರ್ಶನ್ ಕುಡಿತ, ಚಂಗಲು ಹುಡುಗ ಹುಡುಗಿಯರ ಸಹವಾಸ ಬಿಟ್ಟರೆ...'

ನಟ ದರ್ಶನ್ ತೂಗುದೀಪ್ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದಾರೆ. ಸ್ಯಾಂಡಲ್‌ವುಡ್‌ನ ಹೆಸರಾಂತ ನಟನ ಮೇಲೆ ಬಂದಿರುವ ಗಂಭೀರ ಆರೋಪವಿದು. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೂನ್ 20ವರೆಗೆ ಎಲ್ಲಾ ಆರೋಪಿಗಳನ್ನು ನ್ಯಾಯಾಲಯ ಪೊಲೀಸ್ ವಶಕ್ಕೆ ನೀಡಿದೆ. ಇದರ ಬೆನ್ನಲ್ಲೆ ದರ್ಶನ್ ಸಿನಿಮಾರಂಗಕ್ಕೆ ಬಂದ ಬಗ್ಗೆ ಲೇಖಕ ಮತ್ತು ಹಿರಿಯ ಪತ್ರಕರ್ತ ಪ್ರಕಾಶ್ ಬಾಬು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.

ಲೇಖಕ ಪ್ರಕಾಶ್ ಬಾಬು ಬರೆದಿರುವ ಮನದಾಳದ ಪೂರ್ಣ ಪಠ್ಯ ಇಲ್ಲಿದೆ.

"ನಾನೂ ಕಂಡ ದರ್ಶನ... ಹಣ ಅಂತಸ್ತು ಎಂಥ ಮನುಷ್ಯನ ತಲೆಯನ್ನೂ ಗಿರಗಿಟ್ಲೆ ತರಹ ಆಡಿಸುತ್ತೆ ಅನ್ನೋದಕ್ಕೆ ದರ್ಶನ್ ಸಾಕ್ಷಿ ಆಗಿದ್ದಾನೆ. 2000 ಇಸವಿಯಲ್ಲಿ ದಿಕ್ಕು ದೆಸೆ ಇಲ್ಲದೆ ಅಲೆಯುತ್ತಿದ್ದವನಿಗೆ ಗಾಂಧಿ ನಗರದ ಮಾರ್ಗ ತೋರಿಸಿಕೊಟ್ಟಿದ್ದು ನಾನು. ಆದರೇ ಸಿನಿಮಾ ಸ್ಟಾರ್ ಆದ ಆರಂಭದಲ್ಲೇ ಆತನ ದುರಹಂಕಾರ ಗಮನಿಸಿ ದೂರವಾಗಿದ್ದೆ. ಆತ ಒಮ್ಮೆ ಹತ್ತಿರದಲ್ಲೇ ಇದ್ದರೂ ಆತನನ್ನು ಮಾತನಾಡಿಸಲಿಲ್ಲ. ಆತ ಮಾತನಾಡಿಸಲು ಮುಂದಾದಾಗಲೂ ನಾನೂ ಕ್ಯಾರೇ ಅನ್ನಲಿಲ್ಲ. ಏಕೆಂದರೆ, ಒಮ್ಮೆ ನನಗೇ ಈತ ಸರಿ ಇಲ್ಲಾ ಅನ್ನಿಸಿದರೆ, ಆತ ಅದೆಷ್ಟೇ ದೊಡ್ಡ ಮನುಷ್ಯನನ್ನು ನಾನೂ ಹತ್ತಿರಕ್ಕೆ ಬಿಟ್ಟುಕೊಳ್ಳುವುದಿಲ್ಲ"

Journalist and author Prakash Babu shares how actor Darshan entered the Kannada film industry

"ಸರಿ ಸುಮಾರು 24 ವರ್ಷದ ಹಿಂದೆ ಇಟ್ಟಿಗೆಗೂಡಿನ ಬಿಳಿಗಿರಿ ಪ್ರಿಂಟಿಂಗ್ ಪ್ರೆಸ್ ನಲ್ಲಿ ಗೆಳೆಯ ದಿವಂಗತ ಬಿಳಿಗಿರಿ ರಂಗನಾಥ್ ನೆರವಿನಿಂದ ನಾನೇ ಸ್ವಂತ ಪತ್ರಿಕೆ ಮಾಡುತ್ತಿದ್ದೆ. ಪ್ರೆಸ್ ಪಕ್ಕದಲ್ಲೇ ಇದ್ದ ಗೆಳೆಯ ಕೇಬಲ್ ಮುರಳಿ ತಮ್ಮಂದಿರಾದ ಧರ್ಮ ಮತ್ತು ಪಾಪು ಅಲಿಯಾಸ್ ಗೋಪಾಲ ಕೃಷ್ಣ ನಿತ್ಯ ಬಂದು ತೂಗುದೀಪ ಶ್ರೀನಿವಾಸ್ ಮಗ ದರ್ಶನ್ ಬಗ್ಗೆ ಬರೆಯಣ್ಣ ಅಂತಾ ಪೀಡಿಸುತ್ತಿದ್ದರು. ಇವರಿಬ್ಬರು ದರ್ಶನ್ ಸಹಪಾಠಿಗಳು. ಆರಂಭದಲ್ಲಿ ಧರ್ಮನಿಗೆ ಕ್ಲಾಸ್ ಮೇಟ್ ಆಗಿದ್ದ ದರ್ಶನ್, ಫೇಲ್ ಆಗಿ ಕಿರಿಯವನಾದ ಪಾಪುಗೂ ಕ್ಲಾಸ್ ಮೇಟ್ ಆಗಿದ್ದ".

ನಾನೂ 1997ರಲ್ಲಿ ಎಸ್. ನಾರಾಯಣ ನಿರ್ದೇಶನದ ಮಹಾಭಾರತ ಚಿತ್ರದಲ್ಲಿ ದರ್ಶನ್ ಅಭಿನಯಿಸುವಾಗಲೇ "ರೂಪ ತಾರಾ" ಮಾಸಿಕಕ್ಕೆ ದರ್ಶನ್ ಮತ್ತು ಯಾದವಗಿರಿ ಅಪಾರ್ಟ್ಮೆಂಟ್ ನಲ್ಲಿದ್ದ ನಟ ಸೌರವ್ ಬಗ್ಗೆ ಸಂದರ್ಶನ ಮಾಡಲು ಬಯಸಿದ್ದೆ. ಆಗ ಅವರ ಮನೆಗೆ ಫೋನ್ ಮಾಡಿದಾಗ ತಾಯಿ ಮೀನಾ ಶ್ರೀನಿವಾಸ್ "ಚಿಕ್ಕ ಪಾತ್ರ ಮಾಡಿದ್ದಾನೆ. ರೂಪ ತಾರಾ ಪತ್ರಿಕೆ ಯಲ್ಲಿ ಬಂದರೆ ಗಾಂಧಿ ನಗರದ ಆಗದವರ ಕಣ್ಣು ಬೀಳುತ್ತೆ ಬೇಡ" ಎಂದಿದ್ದರು. ಇದನ್ನೇ ಧರ್ಮ ಮತ್ತು ಪಾಪುಗೆ ಹೇಳಿದ್ದೆ.

ಆದರೂ ಒಮ್ಮೆ ದರ್ಶನ್ ಕರೆತಂದು "ಅಣ್ಣ ದರ್ಶನ್ ಬಂದವ್ನೆ" ಅಂದ್ರೂ. ನಾನೂ ಬಿಳಿಗಿರಿ ಪ್ರೆಸ್ ನಲ್ಲಿ ಡಿಟಿಪಿ ಕೆಲಸ ಮಾಡಿಸುತ್ತಿದ್ದೆ. ಆ ಬಿಜಿಯಲ್ಲಿ "ಯಾವ್ ದರ್ಶನ್ನು "ಅಂದೇ. "ಅವತ್ತು ಹೇಳಿದ್ನಲ್ಲಣ್ಣ ತೂಗುದೀಪ ಶ್ರೀನಿವಾಸ್ ಮಗ " ಅಂದ, ನಾನೂ ಒಳಗೆ ಕರೀ ಎಂದೇ. ಪ್ರೆಸ್ ಬಾಗಿಲಲ್ಲೇ ನಿಂತಿದ್ದ ದರ್ಶನ್ ಒಳ ಬಂದಾಗ ನಾನೇ ಒಂದು ಕ್ಷಣ ದಂಗಾಗಿ ಹೋದೆ. ಮೇ ತಿಂಗಳ ಮಧ್ಯಾಹ್ನ 4 ಗಂಟೆ ಬೇಸಿಗೆ ಬಿಸಿಲ ಪ್ರಖರ ಬೆಳಕು ಆತನ ಮೇಲೇ ಬೀಳುತ್ತಿತ್ತು. ಆ ಹೈಟು -ವೈಟು -ಆ ಪರ್ಸನಾಲಿಟಿ ನೋಡಿ ದಂಗಾಗಿ ಹೋದೆ. ಇಂತಹ ಸುರ ಸುಂದರಾಂಗ ಹೀಗೇ ಮೂಲೆಗುಂಪಗಿದ್ದಾನಲ್ಲ ಅಂತಾ ನನ್ನ ಪತ್ರಿಕೆಯಲ್ಲಿ "ಕನ್ನಡದ ಹೃತಿಕ್ ರೋಷನ್ ದರ್ಶನ್ ತೂಗುದೀಪ್ " ಅಂತಾ ಬರೆದೆ.

ಲೇಖನ ಬರೆದು ಸುಮ್ಮನಿರದೆ, ಅವನಿಗೆ ಬೈದು ಬೈದು ಬೆಂಗಳೂರಿಗೇ ಕಳುಹಿಸಿ ಚಿತ್ರಮಂದಿಯ ಬಳಿ ಚಾನ್ಸ್ ಕೇಳು, ಸುಮ್ಮನೆ ಮೈಸೂರ್ ನಲ್ಲಿ ಕುಳಿತಿದ್ರೆ ಯಾರ್ ಕೆಲಸ ಕೊಡ್ತಾರೆ ಅಂತಾ ಕಳುಹಿಸುತ್ತಿದ್ದೆ. ಹೀಗಿರುವಾಗ ಎಸ್. ನಾರಾಯಣ್ ಉದಯ ಟಿವಿಗೆ ತಯಾರಿಸುತ್ತಿದ್ದ ಅಂಬಿಕಾ ಧಾರವಾಹಿ ಮಾಡ್ತಿದ್ರೂ. ಅವರ ಬಳಿ ಚಾನ್ಸ್ ಕೇಳಲು ಕಳುಹಿಸಿದ್ದೆ . ಅವರ ಬಳಿ ಹೋಗಿ ಬಂದ ದರ್ಶನ್ ಮುಖ ಊದಿಸಿಕೊಂಡು ಬಂದಿದ್ದ . ಏನಾಯ್ತು ಅಂತ ಕೇಳಿದರೆ, "ಹೋಗಣ್ಣ, ಆ ಯಪ್ಪ ಮುಖ ಕೊಟ್ಟೂ ಮಾತಾಡಿಸಲ್ಲ "ಅಂತ ನೊಂದುಕೊಂಡು ಹೇಳುತ್ತಿದ್ದ.

ಹಾಗೇ ತೂಗುದೀಪ ಶ್ರೀನಿವಾಸ್ ಯಾವ್ ಯಾವ ನಿರ್ಮಾಪಕರು ಬ್ಯಾಲೆನ್ಸ್ ಹಣ ಕೊಡಬೇಕು ಅಂತಾ ಒಂದು ಎಕ್ಷಸೈಸ್ ಬುಕ್ ನಲ್ಲಿ ಬರೆದಿಟ್ಟಿದ್ದರು. ಅದನ್ನು ತೋರಿಸಿ, ಈ ಹಣ ವಾಪಾಸ್ ಕೊಟ್ಟು ಬಿಟ್ಟರೆ ಒಂದು ಪ್ರಾವಿಷನ್ ಸ್ಟೋರ್ ಹಾಕಿಕೊಂಡು ಲೈಫ್ ಲ್ಲಿ ಸೆಟ್ಲ್ಗ ಆಗ್ಬಿಡ್ತೀನಿ ಅಂತಾ ನೊಂದು ಕೊಂಡು ಹೇಳುತ್ತಿದ್ದ.

ಆಗ. ನಾನು ಸಮಾಧಾನ ಮಾಡಿ, " ನೋಡಪ್ಪಾ, ಫಿಲಂ ಲ್ಯಾಂಡ್ ನಲ್ಲಿ ಹೀರೋ, ಹೀರೋಯಿನ್‌ಗೇ ಮಾತ್ರ ಬೆಲೆ. ಉಳಿದ ಸಣ್ಣ ಪುಟ್ಟ ಕಲಾವಿದರಿಗೆ ಬೆಲೆ ಇರೋಲ್ಲ. ನಿಮ್ಮಪ್ಪ 500ಚಿತ್ರ ಮಾಡಿದ್ರೂ, ಕರೆದು ಚಿತ್ರ ಮಾಡು ಬಾ ಅನ್ನೋಲ್ಲ. ನಿಮ್ಮಪ್ಪನಂಥ ಪೋಷಕ ಕಲಾವಿದರು, ಏನ್ ಭಗವಾನ್ ಅಣ್ಣ ಹೊಸ ಚಿತ್ರ ಮಾಡ್ತಿದ್ದೀರಂತೆ ಅಂತ ಕೇಳಿದರೆ, ಹೌದು ಬರೋ ನಿಂಗು ಒಂದ್ ಪಾತ್ರ ಕೊಡ್ತೀನಿ ಅಂತಿದ್ರು. ಬಂದವರಿಗೆ ಟೋಕನ್ ಅಡ್ವಾನ್ಸ್ ಅಂತ ಐನೂರು ರೂಪಾಯಿನೂ ಕೊಡ್ತಿರಲಿಲ್ಲ. ಅದಕ್ಕೆ ಸಹಕಲಾವಿದರ ಬದುಕು ಬಹಳ ಕಷ್ಟದಲ್ಲಿರೋದು. ಇದನ್ನೂ ತಿಳಿದೇ ನಿಮ್ಮ ತಂದೆ ಎರಡೂ ಬೇಕರಿ ಅಂಗಡಿ ಮಾಡಿ, ಅದರಿಂದ ಬರೋ ಆದಾಯದಲ್ಲಿ ಮನೆ ನಡೆಸುತ್ತಿದ್ದರು " ಅಂತ ಬುದ್ದಿ ಹೇಳಿ, ಸಂದೇಶ ನಾಗರಾಜ್ ಬಳಿ ಕಳುಹಿಸಿದೆ.

ಆಗ ಸಂದೇಶ ನಾಗರಾಜ್ "ಮೌನ ರಾಗ "ಚಿತ್ರ ಮಾಡ್ತಿದ್ರು. ಸಂದೇಶ ನಾಗರಾಜ್ ಬಳಿ ಚಾನ್ಸ್ ಕೇಳಲು ಹೋದ ದರ್ಶನ್‌ಗೇ "ನಿಮ್ಮಪ್ಪ ಮನೆ ಕಟ್ಟಸೋನಲ್ಲ, ಅದನ್ನು ಮಾರಿ ಸಿನಿಮಾ ಮಾಡು ಅಂತ ನಿಮ್ಮವ್ವನಿಗೆ ಹೇಳು ಹೋಗು" ಅಂತ ಬೈದು ಕಳುಹಿಸಿದ್ದರು. ಇದಾದ ನಂತರ ಈ ಟಿವಿಗಾಗಿ ರಾಜ್ ಕುಟುಂಬದವರು "ಊರ್ವಶಿ" ಸೀರಿಯಲ್ ಮಾಡ್ತಿದ್ದಾರೆ, ಹೋಗಿ ಚಾನ್ಸ್ ಕೇಳು ಅಂತ ಕಳುಹಿಸಿದೆ. ನಿರ್ಮಾಪಕ ಚಿನ್ನೇಗೌಡರು, ನೋಡೋಕ್ಕೆ ಚೆನ್ನಾಗಿದ್ದಾನೆ ಅಂತ ಹೀರೋ ಪಾತ್ರವನ್ನೇ ಕೊಟ್ಟರು.

ಆ ಸೀರಿಯಲ್ ನಲ್ಲಿ ಅವನ ಬಾಲಿಷ ನಟನೆ ನೋಡಿ ಇಟ್ಟಿಗೆಗೂಡಿನ ಅವನ ಸ್ನೇಹಿತ ಪಾಪು ಮನೆ ಮುಂದೆಯೇ ಚೆನ್ನಾಗಿ ಬೈದೆ. "ಅಲ್ಲಿ ಟೈಮೇ ಕೊಡೋಲ್ಲ, ಓಕೆ ಅಂದ್ಬಿಡ್ತಾರೆ" ಅಂದಿದ್ದ. ನೀನು ನನ್ನಂಥ ನೂರು ಜನಕ್ಕೆ ನಿನ್ನ ತಪ್ಪಿಲ್ಲ ಅಂತ ಹೇಳಬಹುದು, ಸಾವಿರಾರು ಜನಕ್ಕೆ ಹೇಳಲು ಸಾಧ್ಯನಾ? ಫಸ್ಟ್ ಇಂಪ್ರೆಸ್ ಈಸ್ ಬೆಸ್ಟ್ ಇಂಪ್ರೆಸ್ ಆಗಿರಬೇಕು. ಇನ್ನೊಂದು ಟೇಕ್ ಮಾಡ್ತೀನಿ ಅಂತ ಡೈರೆಕ್ಟರ್ ಗೆ ಹೇಳು. ಇದು ನಿನ್ನ ಭವಿಷ್ಯ. ಅವರೇನು ಅಂದ್ಕೊತಾರೆ, ಅಂತ ಸಂಕೋಚ ಇಟ್ಕೊಂಡರೇ ಇಂಡಸ್ಟ್ರಿಯಲ್ಲಿ ಬೆಳೆಯೋಕ್ಕೆ ಆಗೋಲ್ಲ. ನೀನು ಹ್ಯಾಂಡ್ ಸಮ್ ಆಗಿದ್ದು ನೋಡಿ ಹಸು ಸಾಕಾಣಿಕೆ, ಪ್ರಾವಿಷನ್ ಸ್ಟೋರ್ ಇಡೋ ನಿನ್ನ ಐಡಿಯಾಗಳಿಗೆ ಬ್ರೇಕ್ ಕೊಟ್ಟು, ಒಂದೆರಡು ವರ್ಷ ಸಿನಿಮಾದಲ್ಲಿ ಬೆಳೆಯುವ ಪ್ರಯತ್ನ ಮಾಡು ಅಂತ ನಿನಗೆ ಹೇಳಿದ್ದು. ನೀನು ಹೀಗೇ ಮಾಡೋದಾದ್ರೆ, ಈಗ್ಲೇ ನಿನ್ನ ಹಳೆ ಕೆಲಸ ಮಾಡ್ಕೊಂಡು ಬದುಕು ಕಟ್ಟಿಕೊ ಎಂದು ರೇಗಿದ್ದೆ.

Journalist and author Prakash Babu shares how actor Darshan entered the Kannada film industry

ಊರ್ವಶಿ ಸೀರಿಯಲ್ ಸಕ್ಸಸ್ ಆಗದಿದ್ದರೂ, ಗಾಂಧಿ ನಗರಕ್ಕೆ ತೂಗುದೀಪ ಶ್ರೀನಿವಾಸ್ ಮಗ ಅಂತ ಪರಿಚಯವಾಯ್ತು, "ಮೆಜೆಸ್ಟಿಕ್ "ಚಿತ್ರದ ಟೈಟಲ್ ಕೇಳಿ ಸುದೀಪ ನಗಾಡಿ ನಿರಾಕರಿಸಿದಾಗ ನಿರ್ದೇಶಕ ಪಿ ಏನ್. ಸತ್ಯ ನಿರ್ಮಾಪಕ ರಾಮ್ ಮೂರ್ತಿಗೇ, ದರ್ಶನ್ ವಿಷಯ ಹೇಳಿದ್ದೆ. ಕ್ಯಾಮೆರಾಮನ್ ಅಣಜಿ ನಾಗರಾಜ್. ಜನುಮದ ಜೋಡಿ ಚಿತ್ರದಲ್ಲಿ ಇವರಿಬ್ಬರೂ ನಟಿ ರಕ್ಷಿತಾ ತಂದೆ ಬಿ. ಸಿ. ಗೌರಿ ಶಂಕರ್ ಬಳಿ ಕೆಲಸ ಮಾಡ್ತಿದ್ರೂ. ಹೀಗಾಗಿ "ಮೆಜೆಸ್ಟಿಕ್" ಚಿತ್ರದಲ್ಲಿ ಮೊದಲ ಬಾರಿ ಹೀರೋ ಪಾತ್ರ ಮಾಡಿದ.

ಚಿತ್ರ ಕಂಪ್ಲೀಟ್ ಆದಾಗ ನನ್ನ ಬೆಂಗಳೂರು ಜೆ. ಪಿ. ನಗರದಲ್ಲಿದ್ದ ಸಣ್ಣ ಬಾಡಿಗೆ ಮನೆಗೆ ಕರೆದೋಯ್ದಿದ್ದ. ಅಲ್ಲಿ ತಾಯಿ ಮೀನಾ ಅಕ್ಕಾ ದಿವ್ಯ ತಮ್ಮ ದಿನಕರ ಇದ್ದರು. ಅಲ್ಲಿಗೆ ಸುಂದರ ಕೃಷ್ಣ ಅರಸ್ ಮಗ ನಾಗೇಂದ್ರ ಅರಸ್, ಸುಧೀರ್ ಮಗ ನಂದಾಕಿಶೋರ್ ಬಂದರು. ತಾಯಿ ಮೀನಾ ಬೆಂಗಳೂರು ಸಹಕಲಾವಿದರ ಕುಟುಂಬದ ಸಂಕಷ್ಟ ನೋಡಿ "ನನ್ನ ಗಂಡ ಏನೂ ಮಾಡಿಲ್ಲ ಅಂತಾ ಬೈದು ಕೊಳ್ತಿದ್ದೆ. ಬೆಂಗಳೂರಿಗೇ ಬಂದ ಮೇಲೇ ಸಹ ಕಲಾವಿದರ ಮನೆಗೇ ಹೋಗಿ ಬಂದ ಮೇಲೇ ನನ್ನ ಶ್ರೀನಿವಾಸ್ ಸ್ವಂತ ಸೂರಾದ್ರೂ ಕಟ್ಟಿಸಿದ್ದಾರೆ. ಅವರೆಲ್ಲಾ ಬಾಡಿಗೆ ಮನೆಯಲ್ಲಿ ದಿನದ ಹೊತ್ತಿಗೂ ಕಷ್ಟ ಪಡುತ್ತಿದ್ದಾರೆ " ಅಂತಾ ನೊಂದು ಕೊಂಡು ಹೇಳಿದ್ರೂ.

ಮೆಜೆಸ್ಟಿಕ್ ಸಿನಿಮಾಗೇ ದರ್ಶನ್ ಗೇ ಯಾವ ಸಂಭಾವನೆ ಕೊಟ್ಟಿರಲಿಲ್ಲ

ಮೆಜೆಸ್ಟಿಕ್ ಸಿನಿಮಾಗೇ ದರ್ಶನ್ ಗೇ ಯಾವ ಸಂಭಾವನೆ ಕೊಟ್ಟಿರಲಿಲ್ಲ. ಸೆಕೆಂಡ್ ಹ್ಯಾಂಡ್ ಐಕಾನ್ ಬ್ಲೂ ಕಲರ್ ಕಾರ್ ಕೊಟ್ಟಿದ್ರು. ಅಷ್ಟಕ್ಕೇ ಖುಷಿಯಾಗಿದ್ದ ದರ್ಶನ್ ನನ್ನನ್ನು ನವರಂಗ್ ಸರ್ಕಲ್ ನಲ್ಲಿದ್ದ ನನ್ನ ಮನೆವರೆಗೆ ಕರೆತರುವವರೆಗೂ ಮೆಜೆಸ್ಟಿಕ್ ನಿರ್ಮಾಪಕರನ್ನ ಹೊಗಳುತ್ತಲೇ ಇದ್ದ. ಮಧ್ಯದಲ್ಲಿ ಪೆಟ್ರೊಲ್ ಹಾಕಿಸುವಾಗ ಬುಲೆಟ್ ಬೈಕ್ ನಲ್ಲಿ ಅಡ್ಡ ಬಂದವನಿಗೆ ದರ್ಶನ್, ಹಿಂದೆ ಕುಳಿತಿದ್ದ ದಿನಕರ, ಕಿಶೋರ್, ನಾಗೇಂದ್ರ ಅರಸ್ ಜಗಳವಾಡಲು ಹೋದರು. ನಾನೇ ಅವರನ್ನೆಲ್ಲ ಸಮಾಧಾನ ಮಾಡಿ ಕಾರೀನೊಳಗೆ ಕೂರಿಸಿದೆ.

"ನಾಳೆ ಪತ್ರಿಕೆಯಲ್ಲೆಲ್ಲ ವಿಲ್ಲಾ ಮಕ್ಕಳಿಂದ ದಾಂಧಾಲೇ ಅಂತಾ ನ್ಯೂಸ್ ಬರಬೇಕಾ " ಅಂತಾ ತರಾಟೆಗೆ ತೆಗೆದುಕೊಂಡಿದ್ದೆ. ಮೆಜೆಸ್ಟಿಕ್ ಚಿತ್ರ ಬಿಡುಗಡೆ ಆಯ್ತು. ಸ್ನೇಹಿತನ ಚಿತ್ರ ಅಂತಾ ಧರ್ಮ ಪಾಪು ಮೈಸೂರ್ ನ ಅಪೇರ ಟಾಕೀಸ್ ನಲ್ಲಿ ರಾತ್ರಿ ಎಲ್ಲಾ ಸ್ಟಾರ್ ಕಟ್ಟಿ ಸಂಭ್ರಮ ಪಟ್ಟರು. ಮೆಜೆಸ್ಟಿಕ್ ಚಿತ್ರ ಯಶಸ್ವಿ ಆಯ್ತು. ಆದ್ರೂ ದರ್ಶನ್ ಅರಕ್ಕೇರಲಿಲ್ಲ.

ಎರಡನೇ ಚಿತ್ರ ಧ್ರುವ ಚಿತ್ರೀಕರಣ ಮೈಸೂರು ಅರಮನೆ ಸುತ್ತಮುತ್ತ ನಡೆಯುವಾಗ ಕರೆದ. ಅವತ್ತು ಗಣೇಶನ ಹಬ್ಬ ಉದಯವಾಣಿ ಪತ್ರಿಕೆಗೆ ಮತ್ತೆ ಸೇರಿದ್ದೆ. ಇರೋ ಒಂದು ರಜಾ ಅಂತಾ ಅಕ್ಕನ ಮನೆಗೆ ಹೋದೆ. ಅಷ್ಟರಲ್ಲಿ ದೊಡ್ಡ ಒಕ್ಕಲಗೇರಿ ಹುಡುಗರು ಗಣೇಶನನ್ನು ಕೂರಿಸಿದ್ರು. ಅಲ್ಲಿಗೆ ದರ್ಶನ್ ಕರೆಸುವಂತೆ ಕೋರಿದರು. ನಾನೂ ದರ್ಶನ್‌ಗೇ ಹೇಳಿದಾಗ ಬರ್ತೇನೆ ಎಂದವನು ಬರಲಿಲ್ಲ. ಹುಡುಗರು ಬೇಸರ ಮಾಡಿಕೊಂಡರು. ಆಗ ನಾನೂ ಯಾಕೇ ಬರಲಿಲ್ಲ ಅಂತಾ ಕೇಳಿದೆ. ಕುಂಬಾರ ಕೊಪ್ಪಲಲ್ಲಿ ಕರೆದಿದ್ರು ಅಲ್ಲಿ ಹೋಗಿದ್ದೆ ಅಂದ. ಆಗ ಅವನ ಮಾತಲ್ಲಿ ಸಣ್ಣ ಪ್ರಮಾಣದಲ್ಲಿ ಅಹಂ ಕಾಣಿಸಿದ್ದು ಗಮನಿಸಿದೆ.

ಅಲ್ಲಿಂದ ಮತ್ತೆ ಅವನನ್ನು ನೋಡಿದ್ದು ಶ್ರೀರಂಗ ಪಟ್ಟಣದಲ್ಲಿ ನಡೆಯುತ್ತಿದ್ದ ದಳಪತಿ ಶೂಟಿಂಗ್ ನಲ್ಲಿ. ಅಂಬರೀಷ್ 2004ರ ಚುನಾವಣೆ ಹೊತ್ತಿಗೆ ಪ್ರಚಾರಕ್ಕೆ ಸಿನಿಮಾ ಮಾಡಬೇಕು ಅಂತ "ದಳಪತಿ" ಚಿತ್ರ ಮಾಡ್ತಿದ್ರು. ಆಗ ನಿರ್ದೇಶಕ ಓಂ ಪ್ರಕಾಶ್ ಆಯ್ಕೆ ಮಾಡಿದ್ದೂ, ಸುದೀಪ್, ಆದರೇ ಮಹಾತಾಯಿ ಮೀನಮ್ಮ ಸ್ವಜಾತಿ ಬಾಂಧವ್ಯದ ಸಲುಗೆಯಲ್ಲಿ ಸುಮಲತಾ ಬಳಿ ಕೋರಿಕೊಂಡಾಗ ದರ್ಶನ್ ಆಯ್ಕೆಯಾದ. ಶೂಟಿಂಗ್ ಸ್ಥಳಕ್ಕೆ ಸಂದೇಶ ನಾಗರಾಜ್ ಅವ್ರೇ ನನ್ನ ಅವರ ಕಾರ್ಮ ನಲ್ಲಿ ಶ್ರೀರಂಗಪಟ್ಟಣಕ್ಕೆ ಕರೆದೋಯ್ದಿದ್ದರು.

ಎಸ್. ಎಂ ಕೃಷ್ಣ ಸರ್ಕಾರದಲ್ಲಿ ಸಂದೇಶ ನಾಗರಾಜ್ ಗೇ ಮುಡಾ ಅಧ್ಯಕ್ಷ ಸ್ಥಾನ ಕೊಡಿಸಿದ್ದು ಅಂಬರೀಷ್. ಆದರೇ ಅದಕ್ಕೆ ಪ್ರತಿಯಾಗಿ ಕೊಡುಗೆ ಕೊಡಲಿಲ್ಲ ಅಂತಾ ಅಂಬರೀಷ್ ಮುನಿಸಿಕೊಂಡಿದ್ದರು. ನಮ್ಮನ್ನು ಕಾರಿನಲ್ಲಿ ಕರೆದುಕೊಂಡು ಹೋಗುವ ನೆಪದಲ್ಲಿ ಸಂದೇಶ ನಾಗರಾಜ್ ನಮ್ಮೊಂದಿಗೆ ಬಂದಿದ್ದರು. ಆದರೇ ಅಂಬರೀಷ್ ಮುಖ ಕೊಟ್ಟು ಸಹ ಮಾತನಾಡಿಸಲಿಲ್ಲ. ಮುಂದೆ ನಗರಭಿವೃದ್ಧಿ ಮಂತ್ರಿ ಡಿ. ಕೆ. ಶಿವಕುಮಾರ್ ಯಾವುದೇ ಫೈಲ್‌ಗೂ ಸಹಿ ಹಾಕ್ತಿಲ್ಲ ಅಂತಾ ಸಂದೇಶ ನಾಗರಾಜ್ ಹೇಳಿದ್ದರಿಂದ ಸಮಾಧಾನವಾಗಿ "ಗೌಡ್ರು "ಚಿತ್ರಕ್ಕೆ ಅಂಬರೀಷ್ ಕಾಲ್ ಶೀಟ್ ನೀಡಿದ್ದರು.

Journalist and author Prakash Babu shares how actor Darshan entered the Kannada film industry

ದಳಪತಿ ಚಿತ್ರೀಕರಣ ಸಂದರ್ಭದಲ್ಲಿ ಆಗಷ್ಟೇ ಧರ್ಮ ಸ್ಥಳದಲ್ಲಿ ವಿಜಯಲಕ್ಷ್ಮಿ ಯೊಂದಿಗೆ ಮದುವೆ ಆಗಿ ಬಂದಿದ್ದ ದರ್ಶನ್ ಗೇ "ಹೇಗಿದೆ ಆಫ್ಟರ್ ಮ್ಯಾರೇಜ್ " ಅಂತಾ ಕೇಳಿದ್ದೆ. ಆಗ ಸುಹಾಸಿನಿ ಪಕ್ಕ ಕುಳಿತಿದ್ದ ಅಂಬರೀಷ್ ಬಾಲಿವುಡ್ ಹಿರಿಯ ನಟ ಶತ್ರುಘ್ನ ಸಿನ್ಹ ಹೇಳಿದ " ಹ್ಯಾಪಿ ಮ್ಯಾರೀಡ್ ಲೈಫ್ ಅಂತಾ ಹೇಳಲೇ ಬಾರದು. ಮ್ಯಾರೇಜ್ ಗೂ ಹ್ಯಾಪ್ಪಿಗೂ ಅಡ್ಜಸ್ಟ್ ಆಗೋಲ್ಲ. ಹ್ಯಾಪಿ ಹೇಳ್ಬೇಕು ಇಲ್ಲಾ ಮ್ಯಾರೇಜ್ ಹೇಳ್ಬೇಕು " ಅಂತಾ ಜೋಕ್ ಮಾಡಿದ್ರೂ.

ದರ್ಶನ್ ಸುತ್ತಾ ಇದ್ದವರು ಖಾಲಿ ಪೋಲಿಗಳೇ

ದಳಪತಿ ಚಿತ್ರ ಯಶಸ್ವಿ ಆಗಲಿಲ್ಲ. ಮುಂದೆ ಮಂಡ್ಯ ಹುಡುಗರು ದರ್ಶನ್ ನ್ನು ತುಂಬಾ ಪ್ರೀತಿಸಿ ಬೆಳೆಸಿದರು. ದಾಸ ಮತ್ತು ಕಲಾಸಿ ಪಾಳ್ಯ ವರೆಗೂ ಅವನು ನಟನೆ ಅಷ್ಟಕ್ಕಷ್ಟೇ. ಮುಂದೆ ಚೆನ್ನಾಗಿ ಅಭಿನಯ ಕಲಿತ, ಅದ್ಭುತವಾಗಿ ಬೆಳೆದ. ಹಣ ಕೈ ಸೇರುತ್ತಿದ್ದಂತೆ ಅವನ ತಲೆ ಭುಜದ ಮೇಲೇ ನಿಲ್ಲದಾಯಿತು. ನಾನು ನೋಡಿದಂತೆ ದರ್ಶನ್ ಮುಗ್ದ, ಎಲ್ಲ ಎಳೆ ಹುಡುಗರಲ್ಲಿರುವ ಹುಡುಗುತನ ತುಡುಗುತನ ಇದೆ. ಆತನಿಗೆ ಬುದ್ದಿ ಹೇಳುವ ಒಳ್ಳೆ ಜನ ಬೇಕು. ಆದರೇ, ಅವನ ಸುತ್ತಾ ಇದ್ದವರು ಖಾಲಿ ಪೋಲಿಗಳೇ. ಹೀಗಾಗಿ ಅವನು ದಾರಿ ತಪ್ಪಿದ ಮಗ ಆದ.

ಅಂದ ಹಾಗೇ, ತೂಗುದೀಪ ಶ್ರೀನಿವಾಸ್ ಮೈಸೂರಿನ ಸಿದ್ದಾರ್ಥ ನಗರದಲ್ಲಿ 1989ರಲ್ಲಿ ಕಟ್ಟಿದ ಮನೆಗೇ ಇಟ್ಟ "ಮು. ಪಾ. ಕೃಪಾ "ಮುತ್ತುರಾಜ್ ಪಾರ್ವತಮ್ಮ ಕೃಪಾ"ಅಲ್ಲ. " ಮುತ್ಯಾಲ ನಾಯ್ಡು ಪಾರ್ವತಮ್ಮ ಕೃಪಾ " ಅಂತ ಸ್ವತಃ ದರ್ಶನ್ ನನಗೇ ಹೇಳಿದ್ದ. ತೂಗುದೀಪ ಶ್ರೀನಿವಾಸ್ ಅವರಿಗೆ ಜೀವ ನೀಡಿದ ತಮ್ಮ ತಂದೆ ತಾಯಿ ಹೆಸರು ಹಾಗೂ ಜೀವನ ನೀಡಿದ ಅಣ್ಣಾವ್ರು-ಪಾರ್ವತಮ್ಮ ಹೆಸರು ಕೂಡಿ ಬಂದಿದ್ದರಿಂದ ಬಹಳ ಖುಷಿಯಿಂದ ಹೆಸರು ಬರೆಸಿದ್ದರು.

ನಾನು 1989ರಲ್ಲಿ ಪತ್ರಿಕೆಗಳಲ್ಲಿ ಓದಿದಂತೆ, ಸ್ವತಃ ತೂಗುದೀಪ ಶ್ರೀನಿವಾಸ್ ತಮ್ಮ ಮನೆ ಕಟ್ಟಲು ರಾಜ್ ನೆರವಾಗಿದ್ದರು. ಅಣ್ಣಾವ್ರ ಸಹಾಯದಿಂದಲೇ ಮನೆ ಕಟ್ಟಿದ ಕೃತಜ್ಞತೆಗಾಗಿ ಮುಪಾ ಕೃಪಾ ಅಂತ ಹೆಸರಿಟ್ಟಿದ್ದಾಗಿ ಹೇಳಿಕೊಂಡಿದ್ದರು. ಇದಾಗಿ 11ವರ್ಷಕ್ಕೆ 2000ಇಸವಿಯಲ್ಲಿ ದರ್ಶನ್ ನಿಂದ ಮುಪಾ ಕೃಪಾ ವಿಚಾರ ತಿಳಿಯಿತು.

ಈಗಲೂ ದರ್ಶನ್ ಕುಡಿತ ಮತ್ತು ಚಂಗಲು ಹುಡುಗ ಹುಡುಗಿಯರ ಸಹವಾಸ ಬಿಟ್ಟರೆ, ಅವನ ಮುಖ ಹಿಂದಿನಂತೆ ಸುಂದರವಾಗುತ್ತೆ, ಮತ್ತಷ್ಟು ಎತ್ತರಕ್ಕೆ ಬೆಳೆಯುತ್ತಾನೆ. ಪುನೀತ್ ಯಶ್ ರಲ್ಲಿರುವ ಒಂದಿಷ್ಟು ಶ್ರದ್ದೆಯಿಂದ ಸಿನಿಮಾದಲ್ಲಿ ಅಭಿನಯಿಸುವುದನ್ನು ರೂಢಿಸಿಕೊಂಡರೆ, ಬಾಲಿವುಡ್ ಏನೂ ಹಾಲಿವುಡ್ ನಲ್ಲೂ ಮೆಗಾ ಸ್ಟಾರ್ ಆಗಿ ಮಿಂಚುವ ಗತ್ತು ಗೈರತ್ತು ಅವನಿಗಿದೆ.

ನಾನು 24ವರ್ಷದ ಹಿಂದೆ ಆತನ ಹೈಟು ವೈಟು ನೋಡಿ "ಕನ್ನಡದ ಹೃತಿಕ್ ರೋಷನ್ "ಅಂತ ಪ್ರಿಡಿಕ್ಟ್ ಮಾಡಿ ಪತ್ರಿಕೆಯಲ್ಲಿ ಬರೆದಿದ್ದಕ್ಕೂ, ನಾನು ಅವನ ಬಗ್ಗೆ ಕಂಡ ದೊಡ್ಡದಾದ ಕನಸು ನನಸಾಗುತ್ತೆ ಅಂತಾ ಯೋಚಿಸುತ್ತಿದ್ದಾಗಲೇ ಚಿತ್ರದುರ್ಗದ ಅಭಿಮಾನಿ ರೇಣುಕಾ ಸ್ವಾಮಿ ಎಂಬ ಅಮಾಯಕನನ್ನು ಕೊಂದ ಆರೋಪದಲ್ಲಿ ಜೈಲು ಪಾಲಾಗಿದ್ದಾನೆ. ಅವನಿಂದ ಹಲ್ಲೆಗೊಳಗಾದವರ ಹಿಟ್ ಲಿಸ್ಟ್ ಕೆಡಕುತ್ತಾ ಹೋದರೆ, ಬಹುಷಃ ಆವನೆಂದು ಜೈಲಿನಿಂದ ಹೊರಬರುವುದೇ ಇಲ್ಲಾ ಅನಿಸುತ್ತೆ. - ಎಸ್. ಪ್ರಕಾಶ್ ಬಾಬು, ಪತ್ರಕರ್ತ-ಗ್ರಂಥಕರ್ತ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+