ಚಿತ್ರರಂಗದ ಒಳಿತಿಗಾಗಿ ಕಲಾವಿದರ ಸಂಘದ ಪೂಜೆ: ನಟಿಯ ಮೇಲೆ ಬಂದ ದೇವರು
ಬೆಂಗಳೂರು, ಆಗಸ್ಟ್ 14: ಕನ್ನಡ ಚಿತ್ರರಂಗದ ಒಳಿತಿಗಾಗಿ ಕಲಾವಿದರ ಸಂಘ ದೇವರ ಮೊರೆ ಹೋಗಿದ್ದು ಇಂದು ವಿಶೇಷ ಪೂಜೆ ನಡೆಸಲಾಗುತ್ತಿದೆ. ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕಲಾವಿದರ ಸಂಘದ ಕಟ್ಟಡದಲ್ಲಿ ಸುಬ್ರಮಣ್ಯ ಸರ್ಪ ಶಾಂತಿ ಹೋಮದ ಪೂಜಾ ಕೈಕಾರ್ಯಗಳು ಬೆಳಗ್ಗೆ 8 ಗಂಟೆಯಿಂದಲೇ ಆರಂಭವಾಗಿದೆ. ಎಂಟು ಜನರ ವಿಶೇಷ ಪುರೋಹಿತರ ತಂಡದಿಂದ ಈ ಪೂಜೆ ನಡೆಯುತ್ತಿದೆ.
ಗಣ ಹೋಮ, ಮೃತ್ಯುಂಜಯ ಹೋಮ ಹಾಗೂ ಸರ್ಪ ಶಾಂತಿ ಹೋಮ ನಡೆಸಲಾಗುತ್ತಿದ್ದು, ಕನ್ನಡ ಚಿತ್ರರಂಗದ ಹಿರಿಯ ನಟ ದೊಡ್ಡಣ್ಣ ಹಾಗೂ ಅವರ ಪತ್ನಿ ಪೂಜೆ ನಡೆಸಿಕೊಡಲಿದ್ದಾರೆ. ಹಿರಿಯ ನಟಿ ಶಾಂತಲಾ, ಮಾಲತಿ ಶ್ರೀ ಮೈಸೂರು, ಪದ್ಮಜಾ ರಾವ್ ಮೊದಲಾದವರು ದೀಪ ಬೆಳಗಿ ಪೂಜೆಗೆ ಚಾಲನೆ ನೀಡಿದ್ದಾರೆ. ಮೊದಲು ಗಣಪತಿ ಹೋಮ ನಡೆದಿದ್ದು, ಬಳಿಕ ಮೃತ್ಯುಂಜಯ ಹೋಮ ಹಾಗೂ ಸರ್ಪ ಶಾಂತಿ ಹೋಮ ನಡೆದಿದೆ.

ಸರ್ಪ ಶಾಂತಿ ಹೋಮದ ಸಮಯದಲ್ಲಿ ಈ ಪೂಜೆಯಲ್ಲಿ ಭಾಗಿಯಾದ ನಟಿಯೊಬ್ಬರ ಮೇಲೆ ದೇವರು ಬಂದಿದೆ. ಸರ್ಪ ಶಾಂತಿ ಹೋಮದ ಪೂಜಾ ಕೈ-ಕಾರ್ಯಗಳು ನಡೆಯುತ್ತಿದ್ದ ವೇಳೆ ನಟಿ ಜ್ಯೋತಿ ಅವರ ಮೇಲೆ ದೇವರು ಬಂದ ಸನ್ನಿವೇಶ ನಡೆದಿದೆ. ಕೂಡಲೇ ಸ್ಥಳದಲ್ಲಿದ್ದ ಇತರ ಕಲಾವಿದರು ಅವರನ್ನು ಉಪಚರಿಸಿದ್ದಾರೆ. ಸದ್ಯ ಪೂಜೆ ಮುಂದುವರಿದಿದ್ದು, ಮುಂದಿನ ಕ್ರಮಗಳನ್ನು ಪುರೋಹಿತರ ತಂಡ ಮಾಡುತ್ತಿದ್ದಾರೆ.
ಇತ್ತೀಚಿನ ಕೆಲ ದಿನಗಳಿಂದ ಕನ್ನಡ ಚಿತ್ರರಂಗ ಬಹಳ ಸಂಕಷ್ಟಕ್ಕೆ ಸಿಲುಕುತ್ತಿದೆ. ನಿರೀಕ್ಷಿಸಿದ ಮಟ್ಟದಲ್ಲಿ ಯಶಸ್ಸು ಯಾವ ಚಿತ್ರಕ್ಕೂ ಸಿಗುತ್ತಿಲ್ಲ. ಕೆಲ ನಟರ ಅನಿರೀಕ್ಷಿತ ಅಗಲಿಕೆ ಕೂಡ ಸಂಭವಿಸಿದೆ. ಅಲ್ಲದೇ ಕೋವಿಡ್ ನಂತರ ಜನ ಚಿತ್ರಮಂದಿರಗಳಿಗೆ ಬರುವುದನ್ನು ಕಡಿಮೆ ಮಾಡುತ್ತಿದ್ದು, ನಿರ್ಮಾಪಕರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಚಿತ್ರರಂಗವನ್ನು ಕಾಪಾಡುವಂತೆ ಕಲಾವಿದರ ಸಂಘ ಇಂದು ಬೃಹತ್ ಹೋಮ-ಹವನ ನಡೆಸಿದ್ದಾರೆ.

ಇನ್ನು ಈ ವಿಶೇಷ ಪೂಜೆಯ ಬಗ್ಗೆ ಪ್ರಧಾನ ಪುರೋಹಿತರು ಮಾಹಿತಿ ನೀಡಿದ್ದು, 'ರಾಹು ಹಾಗೂ ಕೇತುವಿನ ದೃಷ್ಟಿಯಿಂದ ಪಾರಾಗಲು ಈ ಪೂಜೆ ಮಾಡಲಾಗುತ್ತಿದೆ. ಕನ್ನಡ ಚಿತ್ರರಂಗದ ಒಳಿತಿಗಾಗಿ ವಿಶೇಷ ಹೋಮಗಳನ್ನು ನಡೆಸಲಾಗುತ್ತಿದೆ. ಇಂದು ಉತ್ತಮವಾದ ದಿನವಾದ ಕಾರಣ ಈ ಪೂಜೆ ನಡೆಸಲಾಗುತ್ತಿದೆ. ಸುಮಾರು ಎಂಟು ಜನರ ಪುರೋಹಿತರಿಂದ ಗಣ ಹೋಮ, ಮೃತ್ಯುಂಜಯ ಹೋಮ, ಆಶ್ಲೇಷ ಬಲಿ ಹಾಗೂ ಸರ್ಪಶಾಂತಿ ನಡೆಯಲಿದೆ' ಎಂದು ತಿಳಿಸಿದ್ದಾರೆ.












Click it and Unblock the Notifications