Actor Darshan: ಜೈಲಿನಲ್ಲೂ ದರ್ಶನ್ ಮೋಜು ಮಸ್ತಿ! ಕೈಯಲ್ಲಿ ಸಿಗರೇಟ್, ಟೀ ಜೊತೆ ರೌಡಿಶೀಟರ್ ಜೊತೆ ಹರಟೆ; ಫೋಟೊ ವೈರಲ್
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ತೂಗುದೀಪ ಮನೆ ಊಟಕ್ಕಾಗಿ ಅರ್ಜಿ ಸಲ್ಲಿಸಿದ್ದರೂ, ಮನೆ ಊಟ ಕೊಡಲು ಸಾಧ್ಯವಿಲ್ಲ ಎಂದು ಪರಪ್ಪನ ಅಗ್ರಹಾರ ಜೈಲಿನ ಅಧಿಕಾರಿಗಳು ಹೇಳಿದ್ದರು. ಆದರೆ ಇದೀಗ ದರ್ಶನ್ ವಿಲ್ಸನ್ ಗಾರ್ಡನ್ ನಾಗನ ಜೊತೆ ಪರಪ್ಪನ ಅಗ್ರಹಾರದಲ್ಲಿ ಸಿಗರೇಟು ಸೇದುತ್ತಾ, ಟೀ ಕುಡಿಯುತ್ತಾ ಹರಟೆ ಹೊಡೆಯುತ್ತಿರುವ ಫೋಟೊ ವೈರಲ್ ಆಗಿದ್ದು, ಪರಪ್ಪನ ಅಗ್ರಹಾರದಲ್ಲಿ ಕೂಡ ದರ್ಶನ್ಗೆ ರಾಜಾಥಿತ್ಯ ಸಿಗುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ.
ವೈರಲ್ ಆಗಿರುವ ಫೋಟೊದಲ್ಲಿ ದರ್ಶನ್ ಇತರ ಮೂವರು ವ್ಯಕ್ತಿಗಳ ಜೊತೆ ಜೈಲು ಅಂಗಳದಲ್ಲಿ ಟೀ ಹೀರುತ್ತಾ ಸಿಗರೇಟು ಸೇದುತ್ತಿದ್ದಾರೆ. ಈ ಫೋಟೊ ಇದೀಗ ಜೈಲು ಅಧಿಕಾರಿಗಳ ದಕ್ಷತೆಯನ್ನೇ ಪ್ರಶ್ನಿಸುವಂತೆ ಮಾಡಿದೆ.

ಕೊಲೆ ಆರೋಪಿಗಳು ಪ್ರಭಾವಿಗಳಾಗಿದ್ದ ಮಾತ್ರಕ್ಕೆ ಅವರಿಗೆ ಕಾನೂನು ಅನ್ವಯಿಸುವುದಿಲ್ಲವಾ ಎನ್ನುವ ಪ್ರಶ್ನೆಗಳು ಕೂಡ ಎದ್ದಿವೆ.
ಜೈಲಿನಲ್ಲಿ ದರ್ಶನ್ಗೆ ರಾಜಾತಿಥ್ಯ?
65 ದಿನಗಳಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ತೂಗುದೀಪ, ಮನೆ ಊಟ ಇಲ್ಲದೆ ತೂಕ ಕಳೆದುಕೊಂಡಿದ್ದಾರೆ. ಧ್ಯಾನ ಮಾಡುತ್ತಿದ್ದಾರೆ, ಮಾಡಿದ ತಪ್ಪಿಗೆ ಪಶ್ಚಾತಾಪ ಪಡುತ್ತಿದ್ದಾರೆ ಎಂದೆಲ್ಲಾ ಹೇಳಲಾಗಿತ್ತು, ಆದರೆ ಇದೀಗ ವೈರಲ್ ಆಗಿರುವ ಫೋಟೊ ನೋಡಿದರೆ ಎಲ್ಲವೂ ಸುಳ್ಳು ಎನ್ನುವ ಅನುಮಾನ ಮೂಡುತ್ತಿದೆ. ದರ್ಶನ್ ಜೈಲಿನಲ್ಲಿ ಕೂಡ ಆರಾಮಾಗಿ ಕಾಲ ಕಳೆಯುತ್ತಿದ್ದು, ಸಿಗರೇಟು ಸೇದುತ್ತಾ ಕಾಫಿ ಕುಡಿಯುತ್ತಿರುವ ಫೋಟೊ ಅದಕ್ಕೆ ಸಾಕ್ಷಿಯಾಗಿದೆ.
ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗನ ಜೊತೆ ದರ್ಶನ್ ಸಿಗರೇಟು ಸೇದುತ್ತಾ ಹರಟೆ ಹೊಡೆಯುತ್ತಿದ್ದಾರೆ. ಆತನ ಜೊತೆ ವಿಚಾರಣಾಧೀನ ಖೈದಿಯಾಗಿರುವ ಮ್ಯಾನೇಜರ್ ನಾಗರಾಜ್ ಕೂಡ ಇದ್ದಾನೆ, ಮತ್ತೊಬ್ಬನನ್ನು ಕುಳ್ಳ ಸೀನ ಎಂದು ಗುರುತಿಸಲಾಗಿದೆ.
ಫೋಟೊ ಆಚೆ ಬಂದಿದ್ದು ಹೇಗೆ?
ಇದೀಗ ಜೈಲಿನಲ್ಲಿ ದರ್ಶನ್ ಮೋಜು ಮಸ್ತಿ ಮಾಡುತ್ತಿರುವುದು ಒಂದೆಡೆಯಾದರೆ, ಈ ಫೋಟೊ ಹೊರ ಬಂದಿದ್ದಾರು ಹೇಗೆ ಎನ್ನುವ ಪ್ರಶ್ನೆ ಎದ್ದಿದೆ. ಮೂಲಗಳ ಪ್ರಕಾರ ಜೈಲಿನಲ್ಲಿರುವ ಖೈದಿಯೊಬ್ಬ ಫೋಟೊ ತೆಗೆದು ತನ್ನ ಹೆಂಡತಿಗೆ ವಾಟ್ಸಾಪ್ ಮಾಡಿದ್ದು, ಅಲ್ಲಿಂದ ಅದು ಬೇರೆ ಕಡೆ ಹರಡಿದ್ದು, ಇದೀಗ ವೈರಲ್ ಆಗಿದೆ.
ಜೈಲಿನಲ್ಲಿ ದರ್ಶನ್ಗೆ ವ್ಯವಸ್ಥೆ ಕಲ್ಪಿಸಲು ಹಲವು ಗ್ಯಾಂಗ್ಗಳ ನಡುವೆಯೇ ಪೈಪೋಟಿ ಉಂಟಾಗಿತ್ತು. ವಿಲ್ಸನ್ ಗಾರ್ಡನ್ ನಾಗ ಈ ಮೊದಲು ಕೂಡ ದರ್ಶನ್ರ ಭೇಟಿಗಾಗಿ ಪ್ರಯತ್ನ ಮಾಡಿದ್ದ ಎಂದು ವರದಿಯಾಗಿತ್ತು, ಇದೀಗ ವೈರಲ್ ಆಗಿರುವ ಫೋಟೊ ಅದಕ್ಕೆ ಪುಷ್ಠಿ ಕೊಟ್ಟಿದೆ.












Click it and Unblock the Notifications