Darshan Thoogudeepa: ದರ್ಶನ್ ಅರೆಸ್ಟ್ ಆಗಿ ಇಂದಿಗೆ 100 ದಿನ : ಇನ್ನೆಷ್ಟು ದಿನ ದಾಸನ ಜೈಲು ವಾಸ?
ಬೆಂಗಳೂರು, ಸೆಪ್ಟೆಂಬರ್ 18: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ನಟ ದರ್ಶನ್ ಮತ್ತು ಗ್ಯಾಂಗ್ ಜೈಲು ಸೇರಿದ್ದು ಅಕ್ಷರಶಃ ವಿಲವಿಲ ಎನ್ನುತ್ತಿದ್ದಾರೆ. ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ನಟ ದರ್ಶನ್ ಅವರು ಬಂಧನಕ್ಕೆ ಒಳಗಾಗಿ ಇಂದಿಗೆ (ಸೆಪ್ಟೆಂಬರ್ 18) ಬರೋಬ್ಬರಿ 100 ದಿನ ತುಂಬಿದೆ.
ನಟ ದರ್ಶನ್ ಜೈಲಿನಿಂದ ಯಾವಾಗ ಬಿಡುಗಡೆಯಾಗುತ್ತಾರೆ ಎಂದು ಸಾಕಷ್ಟು ಜನ ಅಭಿಮಾನಿಗಳು ಕಾದು ಕುಳಿತಿದ್ದು, ದರ್ಶನ್ ಬಿಡುಗಡೆಗಾಗಿ ಸಾವಿರಾರು ಅಭಿಮಾನಿಗಳು ದೇವರ ಮೊರೆ ಹೋಗಿದ್ರೆ, ಇತ್ತ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರು ಕಾನೂನು ಹೋರಾಟವನ್ನ ಮುಂದುವರೆಸಿದ್ದಾರೆ.

ಸೆಪ್ಟೆಂಬರ್ 17ರಂದು ದರ್ಶನ್ ನ್ಯಾಯಾಂಗ ಬಂಧನದ ಅವಧಿ ಪೂರ್ಣಗೊಳ್ಳುವುದರಲ್ಲಿ ಇತ್ತು. ಹೀಗಾಗಿ, ಬೆಂಗಳೂರಿನ 24ನೇ ಎಸಿಎಂಎಂ ಕೋರ್ಟ್ ಎದುರು ನಟ ದರ್ಶನ್ ಅವರನ್ನು ಹಾಜರುಪಡಿಸಲಾಯಿತು. ಎಲ್ಲಾ ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ ಮಾಡಿ ಜಡ್ಜ್ ಆದೇಶ ಹೊರಡಿಸಿದ್ದಾರೆ. ಇಂದಿಗೆ ನಟ ದರ್ಶನ್ ಅವರು ಅರೆಸ್ಟ್ ಆಗಿ ಬರೋಬ್ಬರಿ 100 ದಿನ ಪೂರೈಸಿದ್ದಾರೆ.
ನಟ ದರ್ಶನ್ ಅವರು ಜೈಲುವಾಸವನ್ನ ಅನುಭವಿಸುತ್ತಿದ್ದು, ಸಿನಿಮಾ ಶೂಟಿಂಗ್ ಮಾಡಿಕೊಂಡಿರಬೇಕಿದ್ದ ಅವರು ಇದೀಗ ಜೈಲಿನಲ್ಲಿ ಕುಳಿತು ಟಿವಿ, ಕುರ್ಚಿ, ಮನೆಯೂಟ ಸೇರಿ ಅನೇಕ ಸವಲತ್ತಿಗೆ ಬೇಡಿಕೆ ಇಡುತ್ತಾ ಪರಿತಪಿಸಬೇಕಾಗುತ್ತಿದೆ. ದರ್ಶನ್ ಅವರ ಬಿಡುಗಡೆ ಹಾಗೂ ಕಾನೂನು ಹೋರಾಟದ ಕುರಿತು ವಿಜಯಲಕ್ಷ್ಮಿ ಅವರು ಓಡಾಟ ನಡೆಸಿದ್ದು, ನಟ ದರ್ಶನ್ ಅವರ ಪರವಾಗಿ ಇನ್ನೂ ಜಾಮೀನು ಅರ್ಜಿ ಸಲ್ಲಿಕೆ ಆಗಿಲ್ಲ. ಹೀಗಾಗಿ ಅವರು ಮತ್ತಷ್ಟು ದಿನ ಜೈಲಿನಲ್ಲೇ ಇರಬೇಕಾದ ಪರಿಸ್ಥಿತಿ ಎದುರಾಗಿದೆ.
ಜೂನ್ 8ರಂದು ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ನಡೆಯಿತು. ಜೂನ್ 11 ರಂದು ಮೈಸೂರಿನ ಹೋಟೆಲ್ನಲ್ಲಿ ನಟ ದರ್ಶನ್ ಬಂಧನ ಆಯಿತು. ಜೂನ್ 11 ರಂದೆ ದರ್ಶನ್ ಅವರನ್ನು ಬೆಂಗಳೂರಿಗೆ ಪೊಲೀಸರು ಕರೆತಂದಿದ್ದರು. ಅವರನ್ನು ಪೊಲೀಸ್ ಕಸ್ಟಡಿಗೆ ನೀಡಲಾಯಿತು. ಆ ಬಳಿಕ ಕೇಸ್ನಲ್ಲಿ ಭಾಗಿಯಾದ ಇತರ 16 ಆರೋಪಿಗಳನ್ನು ಬಂಧಿಸಲಾಯಿತು. ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ಪೊಲೀಸರು ವಿಚಾರಣೆ ನಡೆಸಿದ್ದರು. 12 ದಿನ ಕೊಲೆ ಕೇಸ್ ಸಂಬಂಧ ಪೊಲೀಸರು ದರ್ಶನ್ ವಿಚಾರಣೆ ನಡೆಸಿದ್ದರು. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಎ2 ಆಗಿದ್ದಾರೆ.
ಸದ್ಯ ದರ್ಶನ್ ಅವರು ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ ಇದ್ದಾರೆ. ಸದ್ಯ ಅವರ ನ್ಯಾಯಾಂಗ ಬಂಧನದ ಅವಧಿ ಸೆಪ್ಟೆಂಬರ್ 30ರವರೆಗೆ ವಿಸ್ತರಣೆ ಆಗಿದೆ. ಜೈಲಿನಲ್ಲಿ ಸಖತ್ ಹಿಂಸೆ ಆಗುತ್ತಿದೆ ಎಂದು ಅಲವತ್ತುಕೊಳ್ಳುತ್ತಿದ್ದಾರೆ. ನಟ ದರ್ಶನ್ ಅವರ ಕುಟುಂಬದವರು ಕಾನೂನು ಹೋರಾಟಕ್ಕೆ ಮುಂದಾಗಿದ್ದು, ಸದ್ಯ ದರ್ಶನ್ ಅವರಿಗೆ ಇನ್ನೂ ಮೂರು ತಿಂಗಳು ಬಿಡುಗಡೆ ಭಾಗ್ಯವಿಲ್ಲ ಎಂದು ಹೇಳಲಾಗಿದೆ.












Click it and Unblock the Notifications