ರೇಣುಕಾಸ್ವಾಮಿ ಮೃತದೇಹ ಬಿಸಾಡಿದ್ದ ಜಾಗದಲ್ಲೇ ಮಚ್ಚು ಎಸೆದ ರಜತ್,ವಿನಯ್
ಬೆಂಗಳೂರು, ಏಪ್ರಿಲ್ 07: ರೀಲ್ಸ್ ಗಾಗಿ ಮಚ್ಚು ಹಿಡಿದು ಹುಚ್ಚಾಟವಾಡಿದ್ದ ಪ್ರಕರಣದಲ್ಲಿ ಬಂಧಿತರಾಗಿದ್ದ ಕನ್ನಡ ಬಿಗ್ಬಾಸ್ ಮಾಜಿ ಸ್ಪರ್ಧಿಗಳಾದ ರಜತ್ ಹಾಗೂ ವಿನಯ್ ಇಂದು ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಮಚ್ಚು ಹಿಡಿದುಕೊಂಡು ರೀಲ್ಸ್ ಮಾಡಿದ್ದ ವಿನಯ್ ಗೌಡ ಹಾಗೂ ರಜತ್ ಕಿಶನ್ನನ್ನು ಮಾರ್ಚ್ 25ರಂದು ಬಸವೇಶ್ವರನಗರ ಪೊಲೀಸರು ಬಂಧಿಸಿದ್ದರು. ಇದೀಗ ಮತ್ತೆ ಮಾಜಿ ಬಿಗ್ ಬಾಸ್ ಸ್ಪರ್ಧಿಗಳಾದ ವಿನಯ್ ಗೌಡ ಹಾಗೂ ರಜತ್ಗೆ ಸಂಕಷ್ಟ ಎದುರಾಗಿದೆ.
ಕಳೆದ ಮಾರ್ಚ್ 20ರಂದು ನಾಗರಬಾವಿಯ ಅಕ್ಷಯ ಸ್ಟುಡಿಯೋ ಬಳಿ ಖಾಸಗಿ ವಾಹಿನಿ ಕಾರ್ಯಕ್ರಮದ ಶೂಟಿಂಗ್ ಸಮಯದಲ್ಲಿ ರಜತ್ ಹಾಗೂ ವಿನಯ್ ಮಚ್ಚು ಹಿಡಿದು ರೀಲ್ಸ್ ಮಾಡಿದ್ದರು. ಸುಮಾರು 18 ಸೆಕೆಂಡ್ಗಳ ರೀಲ್ಸ್ ವಿಡಿಯೋ ಮಾಡಿದ್ದು, ಇದನ್ನು ಬುಜ್ಜಿ ಹೆಸರಿನಲ್ಲಿ ಇನ್ಸ್ಟಾಗ್ರಾಂ ಖಾತೆಗೆ ರಜತ್ ಅಪ್ಲೋಡ್ ಮಾಡಿದ್ದರು. ಆ ವಿಡಿಯೋ ವೈರಲ್ ಆಗುತ್ತಿದ್ದಂತೆ ಬಸವೇಶ್ವನಗರ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ಇಬ್ಬರು ಆರೋಪಿಗಳನ್ನು ವಿಚಾರಣೆಗೊಳಪಡಿಸಿದ್ದರು.

ವಿಡಿಯೋದಲ್ಲಿ ರೀಲ್ಸ್ ಗೆ ಬಳಸಿದ ಮಚ್ಚು ಫೈಬರ್ನದು ಎಂದು ಪೊಲೀಸರ ತನಿಖೆ ಹಾದಿ ತಪ್ಪಿಸಿದ್ದರು. ತಾವು ಮಾಡಿದ ವಿಡಿಯೋದಲ್ಲಿ ನಕಲಿ ಮಚ್ಚು ಉಪಯೋಗಿಸಲಾಗಿದೆ ಎಂದು ಹೇಳಿ ಫೈಬರ್ ನಿಂದ ತಯಾರಿಸಿದ ಮಚ್ಚನ್ನು ಆರೋಪಿಗಳು ಪೊಲೀಸರಿಗೆ ನೀಡಿದ್ದರು ಎಂದು ವರದಿಯಾಗಿದೆ. ಆದರೆ ತನಿಖೆ ವೇಳೆ ವಿಡಿಯೋದಲ್ಲಿ ಬಳಕೆಯಾಗಿರುವ ಮಚ್ಚಿಗೂ ಆರೋಪಿಗಳು ನೀಡಿದ್ದ ಮಚ್ಚಿಗೂ ತಾಳೆಯಾಗದ ಹಿನ್ನೆಲೆ ಪೊಲೀಸರು, ಆರೋಪಿಗಳನ್ನು ಮತ್ತೆ ವಶಕ್ಕೆ ಪಡೆದು ರೀಲ್ಸ್ನಲ್ಲಿ ಬಳಕೆಯಾಗಿರುವ ಮಚ್ಚು ತೋರಿಸುವಂತೆ ಸ್ಥಳ ಮಹಜರಿಗೆ ಒಳಪಡಿಸಿದರು.
ಅಕ್ಷಯ ಸ್ಟುಡಿಯೋದ ಮೂಲೆಮೂಲೆಯಲ್ಲಿ ಹುಡುಕಿದರೂ ಆ ಮಚ್ಚು ಮಾತ್ರ ಪತ್ತೆ ಆಗಿಲ್ಲ. ಮಚ್ಚು ಎಲ್ಲಿದೆ ಎಂದು ಕೇಳಿದರೂ ರಜತ್ ಹಾಗೂ ವಿನಯ್ ಗೌಡ ಬಾಯಿ ಬಿಟ್ಟಿಲ್ಲ. ಸೆಟ್ ಹಾಕಿದ್ದವರು ತಗೊಂಡು ಹೋಗಿರಬಹುದೆಂದು ಎಂದು ಬೇಜವಾಬ್ದಾರಿ ಉತ್ತರ ನೀಡಿದ್ದರು. ಇದೀಗ ಬಿಗ್ ಬಾಸ್ ಮಾಜಿ ಸ್ಪರ್ಧಿಗಳಾದ ರಜತ್ ಅಸಲಿ ಸತ್ಯ ಬಾಯ್ಬಿಟ್ಟಿದ್ದಾರೆ. ಚಿತ್ರದುರ್ಗದ ರೇಣುಕಾಸ್ವಾಮಿ ಮೃತದೇಹ ಬಿಸಾಡಿದ್ದ ಜಾಗದಲ್ಲೇ ರಜತ್ ಹಾಗೂ ವಿನಯ್ ಮಚ್ಚು ಬಿಸಾಡಿರೋದಾಗಿ ಒಪ್ಪಿಕೊಂಡಿದ್ದಾರೆ. ಪೊಲೀಸ್ ಕಸ್ಟಡಿಯಲ್ಲಿದ್ದಾಗ ರೀಲ್ಸ್ನಲ್ಲಿ ಬಳಸಿದ್ದ ಮಚ್ಚನ್ನೂ ಸುಮ್ಮನಹಳ್ಳಿ ರಾಜಕಾಲುವೆಗೆ ಬಿಸಾಡಿದ್ದಾಗಿ ತಿಳಿದು ಬಂದಿದೆ.
ಮಚ್ಚು ಹಿಡಿದು ರೀಲ್ಸ್ ಮಾಡಿದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಕನ್ನಡ ಬಿಗ್ಬಾಸ್ನ ಮಾಜಿ ಸ್ಪರ್ಧಿಗಳಾದ ರಜತ್ ಕಿಶನ್ ಹಾಗೂ ವಿನಯ್ ಗೌಡ ಬಂಧಿಸಲಾಗಿತ್ತು. ಆದರೆ, ಇದೀಗ ಮತ್ತೆ ರಜತ್ ಹಾಗೂ ವಿನಯ್ ಅವರಿಗೆ ಸಂಕಷ್ಟ ಎದುರಾಗಿದೆ. ವಿನಯ್ ರಜತ್ರನ್ನು ಸುಮ್ಮನಹಳ್ಳಿ ರಾಜಕಾಲುವೆ ಬಳಿ ಕರೆದುಕೊಂಡು ಹೋಗಿ ಮಹಜರ್ ನಡೆಸಿದ್ದಾರೆ. ಆದ್ರೆ, ಪೊಲೀಸರ ಮಹಜರ್ ವೇಳೆಯೂ ರೀಲ್ಸ್ನಲ್ಲಿ ಬಳಸಿದ್ದ ಮಚ್ಚು ಪತ್ತೆಯಾಗಿರಲಿಲ್ಲ. ಸದ್ಯ ಆರೋಪಿಗಳು ಪೊಲೀಸರಿಗೆ ಮೊದಲು ನೀಡಿದ್ದ ಫೈಬರ್ ಮಚ್ಚನ್ನ ಎಫ್.ಎಸ್.ಎಲ್ ಗೆ ರವಾನೆ ಮಾಡಿದ್ದಾರೆ. ಎಫ್.ಎಸ್.ಎಲ್ ವರದಿ ಬರುತ್ತಿದ್ದಂತೆ ಆರ್ಮ್ಸ್ ಆಕ್ಟ್ ಜೊತೆಗೆ ಸಾಕ್ಷನಾಶ ಸೆಕ್ಷನ್ ಅಡಿ ಚಾರ್ಜ್ ಶೀಟ್ ಸಲ್ಲಿಕೆಗೆ ಸಿದ್ಧತೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.












Click it and Unblock the Notifications