ಸಮ್ಮಿಶ್ರ ಸರ್ಕಾರದಲ್ಲಿ ಯಾರ ಪ್ರಣಾಳಿಕೆ ಜಾರಿಗೆ ಬರಲಿದೆ?
ಬೆಂಗಳೂರು, ಮೇ 23: ಜೆಡಿಎಸ್ ಮತ್ತು ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಮುಂದಿರುವ ಸದ್ಯದ ಮಹತ್ವದ ಸವಾಲು ಎಂದರೆ ಪ್ರಣಾಳಿಕೆಗಳಲ್ಲಿರುವ ಯೋಜನೆಗಳನ್ನು ಜಾರಿಗೆ ತರುವುದು!
ಸಮ್ಮಿಶ್ರ ಸರ್ಕಾರವಾಗಿರುವುದರಿಂದ ಎರಡು ಪಕ್ಷಗಳೂ ಹೊಂದಿರುವ ಪ್ರತ್ಯೇಕ ಪ್ರಣಾಳಿಕೆಗಳಲ್ಲಿ ಎರಡನ್ನೂ ಜಾರಿಗೆ ತರಲಾಗುತ್ತದೆಯೇ? ಅಥವಾ ಅವೆರಡರಲ್ಲೂ ಜನಪ್ರಿಯವಾದವನ್ನು ಆಯ್ದು ಕೆಲವನ್ನಷ್ಟೇ ಜಾರಿಗೆ ತರಲಾಗುತ್ತದೆಯೇ ಎಂಬುದು ಸದ್ಯಕ್ಕಿರುವ ಕುತೂಹಲ.
ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಏನಿದೆ? ಇಲ್ಲಿವೆ ಮುಖ್ಯಾಂಶಗಳು
ಎಚ್ ಡಿ ಕುಮಾರಸ್ವಾಮಿಯವರು ಈ ರಾಜ್ಯದ 25 ನೇ ಮುಖ್ಯಮಂತ್ರಿಯಾಗಿ ಇಂದು ಪ್ರಮಾಣವಚನವನ್ನೇನೋ ಸ್ವೀಕರಿಸುತ್ತಾರೆ. ಬೇಷರತ್ ಬೆಂಬಲ ನೀಡಿದ್ದ ಕಾಂಗ್ರೆಸ್ ಇದೀಗ ಉಪಮುಖ್ಯಮಂತ್ರಿ ಹುದ್ದೆಗೆ ಬೇಡಿಕೆ ಇಟ್ಟು, ದಲಿತ ಮುಖಂಡ ಜಿ ಪರಮೇಶ್ವರ್ ಅವರಿಗೆ ಡಿಸಿಎಂ ಹುದ್ದೆ ಗಿಟ್ಟಿಸಿಕೊಳ್ಳುವಲ್ಲಿ ಸಫಲವಾಗಿದೆ.
ಅದೇನೇ ಇದ್ದಿರಲಿ, 2019 ರ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಅಧಿಕಾರ ನಡೆಸಲಬೇಕಾದ ಅನಿವಾರ್ಯತೆಯಲ್ಲಿರುವ ಕರ್ನಾಟಕದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಈ ಒಂದು ವರ್ಷದಲ್ಲಿ ತಾನು ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ಪ್ರಯತ್ನಿಸಲೇಬೇಕಿದೆ.
ಸಹಕಾರಿ ಬ್ಯಾಂಕುಗಳ 50,000 ರೂ. ವರೆಗಿನ ಸಾಲಮನ್ನಾ ಮಾಡುವ ಘೋಷಣೆಯನ್ನು ಕುಮಾರಸ್ವಾಮಿ ಚುನಾವಣೆಗೂ ಮುನ್ನ ಮಾಡಿದ್ದರು. ಆದರೆ ಬಹುಮತ ಬಂದಿಲ್ಲದ ಕಾರಣ ಸಾಲಮನ್ನಾ ಮಾಡುವುದು ಕಷ್ಟ ಎಂದು ನಿನ್ನೆಯಷ್ಟೇ ಹೇಳಿಕೆ ನೀಡೀ ಯೂ ಟರ್ನ್ ತೆಗೆದುಕೊಂದಿದ್ದರು. ಆದರೆ ಮತ್ತೀಗ ಮೈಸೂರಿನಲ್ಲಿ, 'ಸಾಲಮನ್ನಾ ವಿಷಯಕ್ಕೆ ಸಂಬಂಧಿಸಿದಂತೆ ಯೂಟರ್ನ್ ಹೊಡೆಯುವ ಪ್ರಶ್ನೆಯೇ ಇಲ್ಲ' ಎಂದಿದ್ದರು.