ಕಾಂಗ್ರೆಸ್ಸಿಗೆ ಕಬ್ಬಿಣದ ಕಡಲೆಯಾಗಿರುವ ಕ್ಷೇತ್ರಗಳು
ಬೆಂಗಳೂರು, ಏ.15: ಕಾಂಗ್ರೆಸ್ ಪಕ್ಷ ಅಭ್ಯರ್ಥಿಗಳ ಎರಡನೆಯ ಪಟ್ಟಿಯನ್ನು ಬಿಡುಗಡೆ ಮಾಡುವಲ್ಲಿ ಸಫಲವಾಗಿದೆ. ಆದರೆ ಬಂಡಾಯದ ಆತ್ಮಾಹುತಿ ದಳ ತನ್ನ ಅಂಗಳದಲ್ಲೇ ಠಿಕಾಣಿ ಹೂಡಿದೆ ಎಂಬುದನ್ನು ಅರಿತಿದ್ದ ಪಕ್ಷವು ಬಂಡಾಯದ ಬೆನ್ನಿಗೇ ಇನ್ನೂ 9 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟೊಯನ್ನು ಬಿಡುಗಡೆ ಮಾಡಲು ಹಿಂಜರಿದಿದೆ. ಎರಡು ಹಂತಗಳಲ್ಲಿ ಒಟ್ಟು 215 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿರುವ ಕಾಂಗ್ರೆಸ್ಗೆ 9 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು ಸವಾಲಾಗಿ ಪರಿಣಮಿಸಿದೆ.
ಅತ್ತ ಮಂಡ್ಯದ ಗಂಡು ರಾಜಕೀಯ ಜೀವನದಲ್ಲೂ ರೆಬೆಲ್ ಆಗಿದ್ದು, ಸೋನಿಯಮ್ಮಾನೇ ಮಂಡ್ಯಕ್ಕೇ ಬಂದು ಕೇಳಿದರೂ ಆತ್ಮಾನಂದವೇ ನನಗೇ ಮುಖ್ಯ, ಯಾವುದೋ ರವೀಂದ್ರನನ್ನು ಸುತರಾಂ ಒಪ್ಪೊಲ್ಲ ಎಂದು ಶ್ರೀರಂಗನಾಥನಂತೆ ಕಲ್ಲಾಗಿಬಿಟ್ಟಿದ್ದಾರೆ.
ಇನ್ನು, ಕಾಂಗ್ರೆಸ್ಸಿನ ಪುರಾತನ ಸಂಸದ ಕೆಎಚ್ ಮುನಿಯಪ್ಪ ಸಹ ತಮ್ಮ ಪುತ್ರಿ ರೂಪಾಗೆ ಟಿಕೆಟ್ ಸಿಗಲಿಲ್ವೆಂದು ಒಳಗೊಳಗೇ ಕುದಿಯುತ್ತಿದ್ದಾರೆ. ಹೀಗೆ ಮೇಲ್ನೋಟಕ್ಕೆ ಇನ್ನೂ ಅನೇಕ ನಾಯಕರು ತಾಮಸದಿಂದ ಇದ್ದಾರಾದರೂ ಬಿರುಬಿಸಿಲಿನಲ್ಲಿ ಯಾವುದೇ ಕ್ಷಣ ಸ್ಫೋಟಗೊಳ್ಳಲಿದ್ದಾರೆ. ಮಾಜಿ ಮೇಯರ್ ಬಸನಗುಡಿಯ ಕೆ ಚಂದ್ರಶೇಖರ್ ಅವರದೂ ಇದೇ ಕಥೆ. 'ಕೈ'ಕೊಡವಿಕೊಂಡು ಕೆಜೆಪಿವರೆಗೂ ಪಾದ ಬೆಳೆಸಲು ಚಂದ್ರಶೇಖರ್ 1,2, 3 ಹೇಳುತ್ತಿದ್ದಾರೆ.
ಭುಗಿಲೆದ್ದ ಬಂಡಾಯವನ್ನು ಹದ್ದುಬಸ್ತಿನಲ್ಲಿಡಲು ಕಾಂಗ್ರೆಸ್ ಶತಾಯಗತಾಯ ಹೋರಾಡುತ್ತಿದೆ. ಅದನ್ನು ಸರಿದೂಗಿಸುವಲ್ಲೇ ಸುಸ್ತೆದ್ದು ಹೋಗಿರುವ ಕಾಂಗ್ರೆಸ್ಸಿಗೆ 'ನವ'ವಿಘ್ನಗಳು ಎದುರಾಗಿದ್ದು. ಆ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿಲು ಸ್ವತಃ ಕಾಂಗ್ರೆಸ್ಸಿಗೇ ಸಾಧ್ಯವಾಗುತ್ತಿಲ್ಲ.
ಬನ್ನಿ ಆ ನವ ವಿಘ್ನಗಳು ಯಾವುವು? ಕ್ಷೇತ್ರಗಳ ಮಹಿಮೆ ಏನನ್ನು ಹೇಳುತ್ತಿದೆ ನೋಡಿಕೊಂಡು ಬರೋಣ.

ಮುನಿದ ರಾಜರಾಜೇಶ್ವರಿ ನಗರ:
'ಲೋಕಾಯುಕ್ತ ಕಳಂಕಿತ' ಕಾರ್ಪೊರೇಟರ್ ಮುನಿರತ್ನ ನಾಯ್ಡು ಕೆಪಿಸಿಸಿ ಪತ್ರವನ್ನೇ ತಮ್ಮ ಕೈವಶ ಮಾಡಿಕೊಂಡು ಬಾರಿ ಬಂಡಾಯವೆದ್ದಿದ್ದಾರೆ. ಡಾ.ಪರಮೇಶಿಗೆ ಭಾರಿ ಇರುಸುಮರಸು ತಂದಿದ್ದಾರೆ. ಈ ಮಧ್ಯೆ, ಪಿಎನ್ ಕೃಷ್ಣಮೂರ್ತಿ ಮತ್ತು ಹನುಮಂತರಾಯಪ್ಪ ಸಹ ಟಿಕೆಟಿಗಾಗಿ ಪಟ್ಟು ಹಿಡಿದಿದ್ದಾರೆ.

ಹೆಬ್ಬಾಳ ಟಿಕೆಟ್ ನನಗೇ ಬೇಕು:
ಹೆಬ್ಬಾಳದಲ್ಲಿ ಎಚ್ಎಂ ರೇವಣ್ಣ ಟಿಕೆಟ್ ನನಗೇ ಬೇಕು ಅನ್ನುತ್ತಿದ್ದರೆ ಅವರಿಗಿಂತ ಪುರಾತನ ಕಾಂಗ್ರೆಸ್ಸಿಗ ಸಿಕೆ ಜಾಫರ್ ಷರೀಪ್ ಅವರು ತಮ್ಮ ಮೊಮ್ಮಗ ರೆಹಮಾನ್ ಷರೀಫ್ ಎಲ್ಲಿಗೆ ಹೋಗಬೇಕು ಎಂದು ನೇರವಾಗಿ ಅಹಮದ್ ಪಟೇಲರನ್ನೇ ಕೇಳಿದ್ದಾರೆ.
ಈ ಮಧ್ಯೆ, ಅತ್ತ ಗೆಲ್ಲುವ ಕುದುರೆ ಕಟ್ಟಾ ಪರಿಸ್ಥಿತಿ ಅತಂತ್ರವಾಗಿರುವಾಗ ಅದರ ಲಾಭ ಪಡೆಯಲು ಕಾಂಗ್ರೆಸ್ ವಿಫಲವಾಗುತ್ತಿರುವುದು ಇಂಟರೆಸ್ಟಿಂಗ್ ಆಗಿದೆ. ಅಬ್ದುಲ್ ಅಜೀಂ ಎಂಬ ಮಾಜಿ ಪೊಲೀಸ್ ಅಧಿಕಾರಿಯೂ ಕಣದಲ್ಲಿರುವುದರಿಂದ ಹೆಬ್ಬಾಳ ವಿಧಾನಸಭೆ ಕ್ಷೇತ್ರ ರಂಗೇರಿದೆ.

ಭದ್ರಾವತಿಯಲ್ಲಿ ಇಬ್ರಾಹಿಂಗೆ ಟಿಕೆಟ್ ಅಭದ್ರ:
ಮಾಜಿ ಕೇಂದ್ರ ಸಚಿವ, ಮಾತುಗಾರ ಸಿಎಂ ಇಬ್ರಾಹಿಂ ಮತ್ತು ಹಾಲಿ ಶಾಸಕ ಬಿಕೆ ಸಂಗಮೇಶ್ ಮಧ್ಯೆ ನೇರ ಹಣಾಹಣಿ. ಸಂಗಮೇಶ್ವರ್ ಅವರಿಗೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ನೀಡುವ ಭರವಸೆ ನೀಡಲಾಗಿದೆ. ಇದಕ್ಕೆ ಒಪ್ಪಿದರೆ ಅಭ್ಯರ್ಥಿ ಆಯ್ಕೆ ಸುಗಮವಾಗುತ್ತದೆ. ಒಂದು ವೇಳೆ ತಮ್ಮ ವಿರೋಧದ ನಡುವೆಯೂ ಇಬ್ರಾಹಿಂಗೆ ಟಿಕೆಟ್ ನೀಡಿದರೆ ಸಂಗಮೇಶ್ವರ್ ಬಂಡಾಯ ಅಭ್ಯರ್ಥಿಯಾಗುವುದು ಖಚಿತ.

ಪುತ್ತೂರು: ತುಂಬಾ ಇಂಟರೆಸ್ಟಿಂಗ್
ಪುತ್ತೂರು: ತುಂಬಾ ಇಂಟರೆಸ್ಟಿಂಗ್ ಆದ ಕ್ಷೇತ್ರ. ಅಷ್ಟೇ ಜಿದ್ದಾಜಿದ್ದಯೂ ಇದೆ. ಬಿಜೆಪಿಯ ಹಾಲಿ ಶಾಸಕಿ, ತಾವು ಕಳೆದ ಬಾರಿ ಚುನಾವಣೆ ಗೆದ್ದ ದಿನವೇ ಇನ್ನು ಮುಂದಿನ ಬಾರಿ ಎಲೆಕ್ಷನ್ ಗೆ ನಿಲ್ಲೋಲ್ಲ ಎಂದಿದ್ದವರು. ಅದರಂತೆ ಈ ಬಾರಿ ಚುನಾವಣೆಗೆ ನಿಂತಿಲ್ಲ. ಹಾಗಾಗಿ ಬಿಜೆಪಿ ಸ್ಟ್ರೆಂಥು 'ಶೋಭಾ'ಯಮಾನವಾಗಿಲ್ಲ. ಪರಿಸ್ಥಿತಿ ಹೀಗಿರುವಾಗ ಜೆಡಿಎಸ್ ಭಾರಿ ಕುಳವನ್ನೇ ಕಣಕ್ಕಿಳಿಸಿದೆ. ಇವುಗಳ ಮಧ್ಯೆ, ಗೆಲ್ಲುವ ಅಭ್ಯರ್ಥಿ ಎಂದೇ ಬಿಂಬಿತರಾಗಿರುವ ಶಕುಂತಲಾ ಶೆಟ್ಟಿ ಮತ್ತು ಅದೇ ಸಾಮರ್ಥ್ಯದ ಮಾಜಿ ಶಾಸಕ, ಮಾಜಿ ಸಂಸದ ವಿನಯ್ ಕುಮಾರ್ ಸೊರಕೆ ಮಧ್ಯೆ ಮುಸುಕಿನ ಗುದ್ದಾಟ ನಡೆದಿದೆ.

ಕಾಪು
ಕಾಪು: ಮಾಜಿ ಮಂತ್ರಿ ವಸಂತ್ ಸಾಲಿಯಾನ್ ಮತ್ತು ಜಿ ಸುರೇಶ್ ಶೆಟ್ಟಿ ಮಧ್ಯೆ ಕಾವೇರಿದೆ. ಅತ್ತ ಪುತ್ತೂರು ಕೈತಪ್ಪಿದರೆ ವಿನಯ ಕುಮಾರ್ ಸೊರಕೆ ಕಾಪುನತ್ತ ದಾಪುಗಾಲು ಹಾಕಲು ಸಿದ್ಧರಾಗಿದ್ದಾರೆ.

ದಾವಣಗೆರೆ ಉತ್ತರ:
ದಾವಣಗೆರೆ ಉತ್ತರ: ಒಂದು ಮಟ್ಟಿಗೆ ಶಾಮನೂರು ಶಿವಶಂಕರಪ್ಪಗೆ ಟಿಕೆಟ್ ಕೊಟ್ಟು ಶಾಮನೂರು ಧಣಿಗಳ ಬಂಡಾಯ ದನಿಯನ್ನು ಕಾಂಗ್ರೆಸ್ ಕಟ್ಟಿ ಹಾಕಿದೆ. ಆದರೂ ಶಿವಶಂಕರಪ್ಪ ಪುತ್ರ ಎಸ್ಎಸ್ ಮಲ್ಲಿಕಾರ್ಜುನಗೆ ಟಿಕೆಟ್ ದಾವಣಗೆರೆ ಉತ್ತರ ಬೇಕೇಬೇಕು ಎಂದು ದೊಡ್ಡ ಧಣಿ ಹಠ ಹಿಡಿದಿದ್ದಾರೆ. ಈ ಮಧ್ಯೆ, ಸ್ಥಳೀಯ ಮುಸ್ಲಿಮರು ತಮ್ಮ ಬಾಂಧವರಿಗೆ ಟಿಕೆಟ್ ನೀಡಲೇಬೇಕು ಎಂದು ಒತ್ತಡ ಹಾಕುತ್ತಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ದೊಡ್ಡ ರಾದ್ಧಾಂತ:
ಚಿಂತಾಮಣಿಯ ಡಾ. ಕೆ ಸುಧಾಕರ್ ಅವರು ಟಿಕೆಟ್ ನನಗೇ ಇರಲಿ ಎಂದು ಕೇಳುತ್ತಿರುವಾಗಲೇ ಕಾಂಗ್ರೆಸ್ ಇಲ್ಲಿನ ಟಿಕೆಟ್ ಅನ್ನು ಬೇರೆ ಯಾರಿಗೋ ಕೊಟ್ಟು ಕೈತೊಳೆದುಕೊಂಡಿದೆ ಎನ್ನಲಾಗಿದೆ.

ಮಾಲೂರು ಧರಂ ಸಂಟಕ
ಮಾಲೂರು: ಸಂಸದ ಧರಂ ಸಿಂಗ್ ಅವರು ತಮ್ಮ ಪುತ್ರ ಅಜಯ್ ಸಿಂಗ್ ಗೆ ಜೇವರ್ಗಿ ಕ್ಷೇತ್ರ ಕಾಂಯ ಮಾಡಿಕೊಂಡಿರುವ ಬೆನ್ನಿಗೇ ತಮ್ಮ ಅಳಿಯ ಕೃಷ್ಣ ಸಿಂಗ್ ಅವರಿಗೂ ಟಿಕೆಟ್ ಕೊಡಿ, ಅದೂ ಮಾಲೂರಿನಲ್ಲೇ ಕೊಡಿ ಎಂದು ಅಲವತ್ತುಕೊಂಡಿದ್ದಾರೆ. ಜತೆಗೆ ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಸ್ಥಳೀಯರಿಗೂ ಮಣೆ ಹಾಕಿ ಎಂದು ಇನ್ನೂ ಮೂರು ಮಂದಿಯ ಹೆಸರಿಗಳನ್ನು ತೇಲಿಬಿಟ್ಟಿದ್ದಾರೆ. ಹಾಗಾಗಿ ಮಾಲೂರು ಕಾಂಗ್ರೆಸ್ಸಿಗೆ ಕಗ್ಗಂಟಾಗಿದೆ.

ಬೆಳಗಾವಿ ದಕ್ಷಿಣ ಅನಿಲ್ ಪಾಲು?
ಬೆಳಗಾವಿ ದಕ್ಷಿಣ ಕ್ಷೇತ್ರದಿಂದ ಹಾಲಿ ಶಾಸಕ ಅಭಯ್ ಪಾಟೀಲ್ ಬಿಜೆಪಿಯಿಂದ ಕಣದಲ್ಲಿದ್ದರೆ ಕೆಜೆಪಿಯಿಂದ ಡಾ. ಸಿದ್ದಪ್ಪ ಎಂ ದೊಡ್ಡಮನಿ ಸ್ಪರ್ಧೆಯಲ್ಲಿದ್ದಾರೆ. ಆದರೆ ಜೆಡಿಎಸ್ ಯಾವುದೇ ಅಭ್ಯರ್ಥಿಯನ್ನು ಘೋಷಿಸಿಲ್ಲ.
ಈ ಮಧ್ಯೆ, ಕಾಂಗ್ರೆಸ್ ವತಿಯಿಂದ ಅನಿಲ್ ಪೋತೇದಾರ್ ಮತ್ತು ಜಯರಾಜ್ ಹಲಗೇಕಾರ್ ಜಿದ್ದಾಜಿದ್ದಿಗೆ ಬಿದ್ದಿದ್ದಾರೆ.ಬ್ರಾಹ್ಮಣ ಮತ್ತು ಮರಾಠಿ ಸಮುದಾಯದ ಮತಗಳನ್ನು ಬಾಚಿಕೊಳ್ಳಲು ಕಾಂಗ್ರೆಸ್ ಕೊನೆಗೆ ಯಾರಿಗೆ ಟಿಕೆಟ್ ನೀಡಲಿದೆ ಎಂಬುದು ಸದ್ಯದ ಕುತೂಹಲ.












Click it and Unblock the Notifications