ಕ್ಷೇತ್ರ ಪರಿಚಯ : ಶಿವಮೊಗ್ಗ ನಗರದಲ್ಲಿ ಈ ಬಾರಿ ಕಮಲ ಅರಳುವುದೇ?
ಮಲೆನಾಡ ಹೆಬ್ಬಾಗಿಲು ಶಿವಮೊಗ್ಗ. ಸಾಹಿತ್ಯ, ರಾಜಕೀಯ, ಚಳವಳಿಗಳ ತವರು ಜಿಲ್ಲೆ. ಶಿವಮೊಗ್ಗ ನಗರ ದಿನದಿಂದ ದಿನಕ್ಕೆ ಬೆಳೆದಂತೆ ಸಮಸ್ಯೆಗಳು ಹೆಚ್ಚಾಗುತ್ತಿವೆ. ಶಿವಮೊಗ್ಗ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಲ್ಲಿ ಶಿವಮೊಗ್ಗ ನಗರವೂ ಒಂದು. ಭೂಮಿಗೆ ಬಂಗಾರದ ಬೆಲೆ ಇರುವ ಕ್ಷೇತ್ರವಿದು. ನಗರದಲ್ಲಿ ಈಗ ಪಾರ್ಕಿಂಗ್ ಸಮಸ್ಯೆ ಶುರುವಾಗಿದೆ.
ಶಿವಮೊಗ್ಗ ನಗರದ ಆಡಳಿತ ಈಗ ಮಹಾನಗರ ಪಾಲಿಕೆ ಪಾಲಾಗಿದೆ. ಜನರು ಕುಡಿಯುವ ನೀರು ಕೊಡಿ ಎಂದು ಬೇಡಿಕೆ ಇಡುತ್ತಿದ್ದಾರೆ. ಅವಳಿ ನಗರಗಳಾದ ಶಿವಮೊಗ್ಗ-ಭದ್ರಾವತಿ ಕರುಳ ಬಳ್ಳಿ ಸಂಬಂಧವನ್ನು ಹೊಂದಿವೆ. ಬಸ್ಸು, ರೈಲಿನ ಸಂಪರ್ಕವನ್ನು ನಗರ ಹೊಂದಿದೆ. ವಿಮಾನದಲ್ಲಿ ಹಾರಾಡುವ ನಗರದ ಜನರ ಕನಸು ಇನ್ನೂ ನನಸಾಗಿಲ್ಲ.
ದಿನದಿಂದ ದಿನಕ್ಕೆ ಬೆಳೆಯುತ್ತಿರುವ, ಅಭಿವೃದ್ಧಿ ಹೊಂದುತ್ತಿರುವ ಶಿವಮೊಗ್ಗ ನಗರವನ್ನು ಒಳಗೊಂಡಿರುವ ಕ್ಷೇತ್ರವಿದು. ಕ್ಷೇತ್ರದ ಬಹುತೇಕ ಪ್ರದೇಶ ನಗರದ ವ್ಯಾಪ್ತಿಗೆ ಒಳಗೊಂಡಿರುವುದರಿಂದ ಮೂಲಸೌಕರ್ಯಗಳು ಅಭಿವೃದ್ಧಿಗೊಂಡಿವೆ. ಕುಡಿಯುವ ನೀರಿನ ಪೂರೈಕೆ, ಕೆಲವು ಬಡಾವಣೆಗಳ ರಸ್ತೆಗಳ ಸ್ಥಿತಿ ಇನ್ನೂ ಅಭಿವೃದ್ಧಿಯಾಗಬೇಕು.
ನಗರ ವೇಗವಾಗಿ ಬೆಳೆಯುತ್ತಿದ್ದು, ಟ್ರಾಫಿಕ್ ಮತ್ತು ಪಾರ್ಕಿಂಗ್ ಸಮಸ್ಯೆ ಆರಂಭವಾಗುತ್ತಿದೆ. ಶಿವಮೊಗ್ಗ ಮಹಾನಗರ ಪಾಲಿಕೆ ಅಭಿವೃದ್ಧಿ ಕಾರ್ಯಗಳನ್ನು ನೋಡಿಕೊಳ್ಳುತ್ತದೆ. ಪಾರ್ಕಿಂಗ್ ಸಮಸ್ಯೆಯನ್ನು ನಿವಾರಣೆ ಮಾಡಲು ಈಗಲೇ ಆಡಳಿತ ನಡೆಸುವವರು ಗಮನ ಹರಿಸುವುದು ಉತ್ತಮ.
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಯಾರಿಗೆ ಗೆಲುವು?
ರಾಜಕೀಯವಾಗಿ ಶಿವಮೊಗ್ಗ ನಗರ ವಿಧಾನಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಅವರ ಕ್ಷೇತ್ರ. ಕಳೆದ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಅವರು ಸೋಲು ಅನುಭವಿಸಿದ್ದಾರೆ. ಬಿಜೆಪಿ ಮತ್ತು ಕೆಜೆಪಿ ನಡುವಿನ ಮತ ವಿಭಜನೆಯಿಂದಾಗಿ ಈಶ್ವರಪ್ಪ ಅವರಿಗೆ ಸೋಲಾಯಿತು ಎನ್ನುವುದು ಒಪ್ಪಿಕೊಳ್ಳಬೇಕಾದ ಸತ್ಯ.
ಕಾಂಗ್ರೆಸ್ ಪಕ್ಷದ ಕೆ.ಬಿ.ಪ್ರಸನ್ನ ಕುಮಾರ್ ಕ್ಷೇತ್ರದ ಶಾಸಕರು. ಕಳೆದ ಬಾರಿ ಕೆಜೆಪಿಯಿದ ಸ್ಪರ್ಧಿಸಿದ್ದ ಯಡಿಯೂರಪ್ಪ ಆಪ್ತರಾದ ರುದ್ರೇಗೌಡರು ಈಶ್ವರಪ್ಪ ಅವರನ್ನು ಮೂರನೇ ಸ್ಥಾನಕ್ಕೆ ತಳ್ಳಲು ಯಶಸ್ವಿಯಾಗಿದ್ದರು.
ತುಂಗಾ ನದಿಯಲ್ಲಿ ಹೊಸ ನೀರು ಹರಿದಿದ್ದು, ರಾಜಕೀಯದ ಚಕ್ರ ಒಂದು ಸುತ್ತು ತಿರುಗಿದೆ. ಯಡಿಯೂರಪ್ಪ ಬಿಜೆಪಿಗೆ ವಾಪಸ್ ಆಗಿದ್ದಾರೆ. ಆದ್ದರಿಂದ, ಶಿವಮೊಗ್ಗ ನಗರದಲ್ಲಿ ಈ ಬಾರಿ ಕಮಲ ಅರಳಲಿದೆ ಎಂಬ ನಿರೀಕ್ಷೆ ಇದೆ. ಆದರೆ, ಅಭ್ಯರ್ಥಿ ಯಾರು? ಎಂಬುದು ಇನ್ನೂ ಗುಟ್ಟಾಗಿ ಉಳಿದಿದೆ.
ಈ ಬಾರಿಯ ಚುನಾವಣೆಗೆ ಯಡಿಯೂರಪ್ಪ ಅವರೇ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ. ತವರು ಜಿಲ್ಲೆಯ ಶಿವಮೊಗ್ಗ ಕ್ಷೇತ್ರವನ್ನು ಗೆಲ್ಲಲು ಅವರು ಪ್ರಯತ್ನ ನಡೆಸಲಿದ್ದಾರೆ. ಈ ಬಾರಿ ಕ್ಷೇತ್ರದಿಂದ ಯಾರಿಗೆ ಟಿಕೆಟ್? ಎಂಬುದು ಕುತೂಹಲ ಮೂಡಿಸಿರುವ ಪ್ರಶ್ನೆ. ರುದ್ರೇಗೌಡ, ಈಶ್ವರಪ್ಪ ಅವರ ಹೆಸರು ಸದ್ಯ ಚಾಲ್ತಿಯಲ್ಲಿದೆ.
2013ರ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಕೆ.ಬಿ.ಪ್ರಸನ್ನ ಕುಮಾರ್ 39,355 ಮತಗಳನ್ನು ಪಡೆದು ಜಯಗಳಿಸಿದ್ದರು. ಕೆಜೆಪಿಯಿಂದ ಸ್ಪರ್ಧಿಸಿದ್ದ ಎಸ್.ರುದ್ರೇಗೌಡ ಅವರು 39,077 ಮತಗಳನ್ನು ಪಡೆದಿದ್ದರು. ಬಿಜೆಪಿ ಅಭ್ಯರ್ಥಿಯಾಗಿದ್ದ ಕೆ.ಎಸ್.ಈಶ್ವರಪ್ಪ 33,462 ಮತಗಳೊಂದಿಗೆ ಮೂರನೇ ಸ್ಥಾನ ಪಡೆದಿದ್ದರು.