ನಿನ್ನ ಕೆಂದುಟಿಯ ನೆನಪು ತಂದ ಗಿಳಿ ಕೊಕ್ಕಿಗೆ ಮೆತ್ತಿದ ಬೆಳ್ಳನೆ ಹಾಲು
ಒಲವಿನ ಚೆಲುವೆ ಶಕುಂತಲೇ,
ಜೋಳದ ತೋಟಕ್ಕೆ ಕಾವಲಿದ್ದೆ. ಅದು ಸಂಜೆ ಹೊತ್ತಿನ ಕಾವಲು. ಈ ಹೊತ್ತಿನಲ್ಲಿ ಗಿಳಿಗಳ ಕಾಟ ವಿಪರೀತ ಇರುತ್ತದೆ. ಆದರೆ ಆವೊತ್ತಿನ ಕಾವಲು ಹೇಗಿತ್ತೆಂದರೆ, ಗಿಳಿಗಳು ತೆನೆ ತಿನ್ನಲು ನಾನು ಕಾವಲಿದ್ದಂತಿತ್ತು. ಅದೆಷ್ಟೋ ಗಿಳಿಗಳು ತೆನೆಗಳ ಮೇಲೆ ಕೂತು ತಿಂದಿದ್ದೇ ತಿಂದಿದ್ದು. ಹೀಗೇಕೆ ಮಾಡಿದ್ದು ಎಂದು ನೀನು ಅಂದುಕೊಳ್ಳಬಹುದು. ಅದಕ್ಕೆ ಕಾರಣ ನೀನೇ ಮನದನ್ನೆ.
ನಿನ್ನಲ್ಲೀಗ ಪ್ರಶ್ನೆ ಏಳುತ್ತೆ: ನಾನು ನಮ್ಮೂರಲ್ಲಿದ್ದೇನೆ. ಕಾವಲನ್ನು ಹೇಗೆ ಕೆಡಿಸಿದೆ? ನಿಜ, ನೀನು ನಿಮ್ಮೂರಲ್ಲಿರುವೆ. ನಾನು ನಿನ್ನ ರೂಪವನ್ನು ಮನಸ್ಸಿನಲ್ಲಿಟ್ಟುಕೊಂಡಿರುವಾಗ ನೀನೆಲ್ಲಿದ್ದರೂ ನನಗೆ ನನ್ನಲ್ಲೇ ಇದ್ದಂತಲ್ಲವೆ? ಮನಸ್ಸಿನಲ್ಲಿ ನೀನಿರಲು, ಕಣ್ಣಿನಲ್ಲಿ ನಿನ್ನ ರೂಪ ತುಂಬಿರಲು ಗಿಳಿಗಳು ಕಂಡಾವೆ ಶಕುಂತಲೆ!
ತಂಗಾಳಿಗೆ ಆಡುತ್ತಿದ್ದ ಜೋಳದ ಗರಿಗಳು ಹಾರಾಡುತ್ತಿದ್ದ ನಿನ್ನ ಸೀರೆಯ ಸೆರಗಿನಂತೆ ಕಾಣುತ್ತಿತ್ತು. ಚಿಲುಕು ಚಿಲುಕು ಅನ್ನುತ್ತಿದ್ದ ಗಿಳಿಗಳ ಕೊರಳ ಧ್ವನಿ ನಿನ್ನ ಪ್ರೇಮದ ಮಾತುಗಳಂತೆ ಕೇಳಿಸುತ್ತಿದ್ದವು. ಅವುಗಳಿಗೆ ಅವುಗಳ ಕಣ್ಣೇ ಇರಲಿಲ್ಲ. ಪ್ರತಿಯೊಂದು ಗಿಳಿಯ ಕಣ್ಣುಗಳೂ ನಿನ್ನ ಕಣ್ಣುಗಳೇ ಆಗಿದ್ದವು. ಅವುಗಳ ಕೆಂಪು ಕೊಕ್ಕುಗಳಲ್ಲಿ ನಿನ್ನ ಮೃದು ಕೆಂದುಟಿಗಳೇ ಕಾಣುತ್ತಿದ್ದವು. ಅವು ಹಾರಾಡುತ್ತ ತೆನೆಗಳನ್ನು ಕಚ್ಚಿ ತಿನ್ನುತ್ತಿದ್ದರೆ ನೀನೇ ಗಿಳಿಯಾಗಿ ಹಾರಾಡುತ್ತ ತಿನ್ನುತ್ತಿರುವಂತೆ ಅನ್ನಿಸುತ್ತಿತ್ತು.
ಒಂದು ಗಿಳಿಯ ಕೊಕ್ಕಿಗೆ ಜೋಳದ ತೆನೆಯ ಬೆಳ್ಳನೆಯ ಹಾಲು ಮೆತ್ತಿಕೊಂಡಿತ್ತು. ನನಗಾಗ ಅದು ಕೊಕ್ಕಿನಂತೆ ಕಾಣುತ್ತಿರಲಿಲ್ಲ. ನಿನ್ನ ಕೆಂದುಟಿಯೇ ಅನಿಸುತ್ತಿತ್ತು. ಹೀಗಿರುವಾಗ ಅವುಗಳನ್ನು ಹೇಗೆ ಓಡಿಸುವುದು? ಒಂದು ವೇಳೆ ಓಡಿಸಿದರೆ ನಿನ್ನನ್ನೇ ಓಡಿಸಿದಂತಾಗುತ್ತಿತ್ತು. ಈಗ ಹೇಳು, ಇದಕ್ಕೆ ಕಾರಣ ನೀನೇ ಅಲ್ಲವೆ?

ಗಿಳಿಗಳ ಗದ್ದಲ ಜಾಸ್ತಿಯಾದಾಗ ತೋಟದಲ್ಲಿರುವುದು ನೀನಲ್ಲ, ಗಿಳಿಗಳು ಎಂದು ಅರಿವಾಯಿತು. ಅವುಗಳನ್ನು ಓಡಿಸಬೇಕು ಅಂದುಕೊಳ್ಳುವಾಗ ಬದುವಿನ ಮೇಲಿದ್ದ ಗಿಡದಲ್ಲಿ ನಗುತ್ತಿದ್ದ ಮಲ್ಲಿಗೆ ಹೂವೊಂದು ಕಂಡು ನೀನೇ ಅಲ್ಲಿ ಮೌನವಾಗಿ ನಗುತ್ತಿರುವಂತೆ ಅನ್ನಿಸಿ, ಗಿಳಿಗಳನ್ನು ಅಟ್ಟವುದು ಮರೆತು ಅದರ ಬಳಿಗೆ ಹೋದೆ.
ಅದು ಮುಡಿಯುವ ಹೆಣ್ಣು ಇನ್ನೂ ನಿನ್ನ ಮನೆ ತುಂಬಿಲ್ಲ ಅಂದಂತಾಯಿತು. ನಿನಗೇ ಅಂದುಕೊಂಡು ಅದಕ್ಕೊಂದು ಮುತ್ತು ಕೊಟ್ಟೆ. ಅದರ ಪರಿಮಳ ಮನಸ್ಸು ತುಂಬಿ, ಮೈ ಮರೆತು ನಿಂತೆ. ಅಪ್ಪ ಬಂದು ತೋಟದತ್ತ ನುಗ್ಗಿ ಹೊಹೋಹೋ ಎಂದು ಕೇಕೆ ಹಾಕಿದಾಗ ಮೈ ಮರೆವು ಕರಗಿತು. ಇನ್ನು ಸಹಸ್ರನಾಮ ಗ್ಯಾರಂಟಿ ಅಂದುಕೊಂಡೆ. ವಿಚಿತ್ರವೆಂದರೆ ಅವನು ನಗುತ್ತ ಗಿಳಿಗಳನ್ನು ಓಡಿಸುತ್ತಿದ್ದ!
ಅಮ್ಮ ಅವನ ಹಿಂದೆಯೇ ಬಂದಿದ್ದಳು. ಗಿಳಿಗಳನ್ನು ಓಡಿಸುವ ಅವಳ ಧ್ವನಿಯೂ ಕೇಳಿಸಿತು. ನಾನು ಧ್ವನಿಯೇರಿಸಿ ಕೂಗುತ್ತ, ಒಬ್ಬನಿಂದ ಈ ಕೆಲಸ ಆಗದು. ಇವು ಫಟಿಂಗ ಗಿಳಿಗಳು. ಇತ್ತ ಓಡಿಸುತ್ತಿದ್ದರೆ, ಅತ್ತ ಹೋಗಿ ತೆನೆಗಳಿಗೆ ಎರಗುತ್ತವೆ ಎಂದೆ. ಸಾಕು ನಿನ್ನ ಕಳ್ಳಾಟ ಎಂದಳು ಅಮ್ಮ.
ಅವರಿಬ್ಬರು ಗಿಳಿಗಳನ್ನು ಅಟ್ಟುತ್ತ ಅತ್ತ ಹೋದರು. ನಾನು ಇತ್ತ ಕೂಗು ಹಾಕುತ್ತಿದ್ದೆ. ಗಿಳಿಗಳನ್ನೆಲ್ಲ ಓಡಿಸಿಯಾದ ಮೇಲೆ ಅವರು ತೋಟದಿಂದ ಹೊರಬಂದರು. ಬದುವಿನ ಮೇಲೆ ನಿಂತರು. 'ವಸಂತ ಎಲ್ಲಾ ನನ್ನ ಹಾಗೇನೇ. ನಿನ್ನನ್ನು ನೋಡಿಕೊಂಡು ಬಂದ ಮೇಲೆ ನಾನೂ ಹೀಗೆಯಲ್ಲವೆ ತೋಟ ಕಾಯುತ್ತಿದ್ದು! ಇದೆಲ್ಲ ನಿಮ್ಮ ಹೆಂಗಸರ ಮಾಯೆ' ಎಂದು ಅಮ್ಮನೊಂದಿಗೆ ಅಪ್ಪ ಹೇಳುತ್ತಿದ್ದುದು ಕೇಳಿಸಿತು.
ಅವನು ಯಾಕೆ ಬೈಯಲಿಲ್ಲವೆಂದು ಈಗ ಅರ್ಥವಾಯಿತು. 'ಏನಿಲ್ಲವೆಂದರೂ ಇವತ್ತು ಗಿಳಿಗಳು ಅರ್ಧ ಮೂಟೆಯಷ್ಟು ಕಾಳನ್ನಾದರೂ ಮುಕ್ಕಿರುತ್ತವೆ' ಎಂದು ಅಪ್ಪ ನಷ್ಟವನ್ನು ಅಂದಾಜು ಮಾಡಿ ಹೇಳುತ್ತಿದ್ದ. ಅಪ್ಪನ ಮುಖ ನೋಡುತ್ತ ಅಮ್ಮ ನಗುತ್ತಿದ್ದಳು. ಅವಳ ನಗೆಯಲ್ಲಿ ಹಿಂದಿನ ನೆನಪು ಹರಿದಾಡುತ್ತಿತ್ತು ಶಕುಂತಲೆ.
ತೋಟದ ಕಾವಲಲಿ ವಿಶಾಲ ದೀರ್ಘ ರಾತ್ರಿಯಲಿ
ನಾನಿರುವೆ ಶಕುಂತಲೆ ಒಂಟಿ
ಮನಸು ಮಾಡಿ ಬಾ ಕನಸಿಗೆ
ನೀನಾಡೊ ಮಾತುಗಳ ಕೇಳುತ್ತ ಹೂಂಗುಟ್ಟುವೆ
-
Gold Rate: ಆಭರಣ ಪ್ರಿಯರ ಗಮನಕ್ಕೆ; ಮಾರುಕಟ್ಟೆಯಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ ಗೊತ್ತಾ? ಇಲ್ಲಿದೆ ಮಾಹಿತಿ -
ಮಕ್ಕಳನ್ನ ಫ್ಯಾಕ್ಟರಿಯಂತೆ ಹೆರುತ್ತಾರೆ, ಪೋಷಿಸುವ ತಾಕತ್ತಿದ್ರೆ ಮಾತ್ರ ಮಕ್ಕಳು ಮಾಡ್ಕೊಳ್ಳಿ: ನಟಿ ವರಲಕ್ಷ್ಮಿ ಶರತ್ಕುಮಾರ್ -
Viral Video: ಶಾಲಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರ ಟವಲ್ ಡ್ಯಾನ್ಸ್: ಚರ್ಚೆ ಹುಟ್ಟುಹಾಕಿದ ವೈರಲ್ ವಿಡಿಯೋ -
Viral Video: ಪೋಷಕರಿಗೆ ಹೊಸ ಕಾರು ಗಿಫ್ಟ್ ಮಾಡಿದ ಹೆಣ್ಣುಮಕ್ಕಳು, ನೆಟ್ಟಿಗರ ಹೃದಯ ಗೆದ್ದ ಈ ವಿಡಿಯೋ -
Anushka Shetty Marriage: ಬೆಂಗಳೂರಿನ ಖ್ಯಾತ ಉದ್ಯಮಿ ಜೊತೆ ನಟಿ ಅನುಷ್ಕಾ ಶೆಟ್ಟಿ ಮದುವೆ, ಈ ವರ್ಷದಲ್ಲೇ ಮುಹೂರ್ತ: ವರದಿ -
1 ರೂಪಾಯಿಗೆ 1 ಲೀಟರ್ ಹಾಲು: ಫ್ಲಿಪ್ಕಾರ್ಟ್ ವಿರುದ್ಧ ಸಿಡಿದೆದ್ದ ಡಿ.ಕೆ. ಸುರೇಶ್; ಪ್ರಧಾನಿ ಮೋದಿಗೆ ದೂರು -
ಬಿಜೆಪಿಯಿಂದ ನಟ ವಿಜಯ್ಗೆ ಡಿಸಿಎಂ ಹುದ್ದೆ, 80 ಸೀಟುಗಳ ಆಫರ್; ತಮಿಳುನಾಡು ಚುನಾವಣೆಗೆ ಹೊಸ ಮೈತ್ರಿ ಲೆಕ್ಕಾಚಾರ -
Karnataka Weather: ಸಿಲಿಕಾನ್ ಸಿಟಿಯಲ್ಲಿ ಹೆಚ್ಚಿದ ತಾಪಮಾನ; ಕರಾವಳಿ, ಮಲೆನಾಡಿನಲ್ಲಿ ಇಂದು ಮಳೆಯಾಗುವ ಸಾಧ್ಯತೆ -
LPG New Rule: ಎಲ್ಪಿಜಿ ಹೊಸ ನಿಯಮ: ಪಿಎನ್ಜಿ ಸಂಪರ್ಕ ಇದ್ದರೆ ಇನ್ನು ಮುಂದೆ ಸಿಲಿಂಡರ್ ಸಿಗಲ್ಲ -
Government Employees: ಪಶ್ಚಿಮ ಬಂಗಾಳ ಸರ್ಕಾರಿ ನೌಕರರಿಗೆ ಸಿಎಂ ಮಮತಾ ಬ್ಯಾನರ್ಜಿ ಬಂಪರ್ ಕೊಡುಗೆ -
ರಾಜ್ಯದಲ್ಲಿ ಕಮರ್ಷಿಯಲ್ ಉದ್ದೇಶಕ್ಕೆ ಗೃಹಬಳಕೆ LPG ಸಿಲಿಂಡರ್ ಬಳಸಿದವರ ಮೇಲೆ ಅಧಿಕಾರಿಗಳ ಖಡಕ್ ದಾಳಿ -
ಬೆಂಗಳೂರು 2ನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ vs ಹೊಸೂರು ಏರ್ಪೋರ್ಟ್: ಯೋಜನೆ ಯಾವ ಹಂತದಲ್ಲಿದೆ












Click it and Unblock the Notifications