Get Updates
Get notified of breaking news, exclusive insights, and must-see stories!

ಸ್ಥಳೀಯ ಭಾವನೆಗಳಿಗೆ ಬೆಲೆ ಕೊಡದೆ ಬದುಕು ಸುಂದರ ಹೇಗಾದೀತು?

ದೇಶ ಯಾವುದೇ ಇರಲಿ ನಾವು ಅಲ್ಲಿನ ಭಾಷೆಯನ್ನ ಕಲಿತು ಅಲ್ಲಿನ ಜನರೊಂದಿಗೆ ಬೇರೆಯದಿದ್ದರೆ ಸದಾ ಒಂದು ರೀತಿಯ ಬೇಸರ ಇದ್ದೆ ಇರುತ್ತದೆ. ಸ್ಥಳೀಯರ ಜೊತೆ ಬೆರೆಯುವುದು ಅವರ ರೀತಿ ರಿವಾಜುಗಳನ್ನ ಅಳವಡಿಸಿಕೊಳ್ಳುವುದು ನಾವು ಅವರಿಗೆ ಮಾಡುವ ಉಪಕಾರವಲ್ಲ, ಅದು ನಮಗೆ ನಾವೇ ಮಾಡಿಕೊಳ್ಳುವ ಉಪಕಾರ ಎನ್ನುವುದನ್ನ ಮರೆಯಬಾರದು.

ಒಂದು ಭಾಷೆಯನ್ನ ನಾನು ಬಲ್ಲೆ ಅಥವಾ ನಾನು ಬೇರೊಂದು ದೇಶದ ಸಂಸ್ಕೃತಿಯನ್ನ ಅರ್ಥ ಮಾಡಿಕೊಂಡೆ ಎಂದು ಹೇಳ ಬೇಕಾದರೆ ಮೊದಲಿಗೆ ಅಲ್ಲಿನ ಸ್ಥಳೀಯ ಭಾವನೆಗಳನ್ನ , ಅಲ್ಲಿನ ಆಡುಮಾತಗಳನ್ನ ಮತ್ತು ಅವುಗಳನ್ನ ಯಾವ ಆಧಾರದ ಮೇಲೆ ಮತ್ತು ಯಾವ ಅರ್ಥದಲ್ಲಿ ಹೇಳಿದ್ದಾರೆ ಎನ್ನುವುದನ್ನ ಅರಿತುಕೊಳ್ಳಬೇಕು. ಬಾರ್ಸಿಲೋನಾ ನಿವಾಸಿಯಾದ ಎರಡು ಅಥವಾ ಮೂರು ವರ್ಷದಲ್ಲಿ ಸ್ಪ್ಯಾನಿಷ್ ಆಡು ಮಾತುಗಳು , ಗಾದೆಗಳನ್ನ ಮಾತಿನ ಮಧ್ಯೆ ಉಚ್ಚರಿಸುವ ಅವುಗಳ ಭಾವಾರ್ಥವನ್ನ ಅರ್ಥ ಮಾಡಿಕೊಳ್ಳುವ ಮಟ್ಟಕ್ಕೆ ನನ್ನ ಭಾಷಾಜ್ಞಾನ ವಿಸ್ತರಿಸಿತ್ತು. ಇವತ್ತು ಇಂತಹ ಒಂದೆರೆಡು ಮೂರು ಆಡು ಮಾತುಗಳನ್ನ ನಿಮಗೆ ಹೇಳುವೆ.

ಬದುಕಿನಲ್ಲಿ ಎಷ್ಟೊಂದು ಜನ ಬಂದು ಹೋಗುತ್ತಾರೆ ಅಲ್ಲವೇ ? ಹಾಗೆ ನಮ್ಮ ಬದುಕಿನಲ್ಲಿ ಬಂದವರಲ್ಲಿ ಹಲವರು ಬಹಳ ಸರಳವಾಗಿ ಸುಲಭವಾಗಿ ಬೆರೆತು ಹೋಗುತ್ತಾರೆ . ಇನ್ನು ಕೆಲವರು ಮನಸ್ಸಿಗೆ ಕಿರಿಕಿರಿ ಮಾಡಲೆಂದೇ ಬರುತ್ತಾರೆ . ಹಾಗೆ ನೋಡಲು ಹೋದರೆ ಹಾಗೆ ನಮ್ಮ ಬದುಕಿಗೆ ಬಂದವರು ಯಾರು ಬೇಕಾದರೂ ಆಗಿರಬಹದು . ಗೆಳೆಯ , ಸಹೋದ್ಯೋಗಿ , ಸಹೋದರ , ಸಹೋದರಿ ಕೊನೆಗೆ ಹೆತ್ತವರು ಯಾರಾದರೂ ಸರಿಯೇ !

ಕೆಲವೊಮ್ಮೆ ಹಾಲು ಜೇನಿನಂತೆ , ಹಾಲು ಸಕ್ಕರೆಯಂತೆ ಬೆರೆತು ಖುಷಿಯನ್ನ ನೀಡುವ ಸಂಬಂಧ ಕೆಲವೊಮ್ಮೆ ಎಣ್ಣೆ ಸೀಗೆಕಾಯಿ ಅಥವಾ ಎಣ್ಣೆ -ನೀರಿನಂತೆ ಯಾವ ಸುಖವನ್ನೂ ನೀಡದೆ ಮನಸ್ಸಿಗೆ ದುಃಖವನ್ನ ನೀಡುತ್ತದೆ . ಬದುಕಿನ ಈ ರೀತಿಯ ವೈವಿಧ್ಯತೆಯನ್ನ ಅರಿತ ನಮ್ಮ ಹಿರಿಯರು ಬಹಳ ಸರಳ ವಾಖ್ಯದಲ್ಲಿ ಜೀವನಕ್ಕೆ ಬೇಕಾದ ತತ್ವಜ್ಞಾನವನ್ನ ತಿಳಿಸಿ ಹೇಳಿದ್ದಾರೆ . ಮೆಟ್ಟಲಾಗದ ಚಪ್ಪಲಿಯನ್ನ ಬಿಡುವುದೇ ಲೇಸು ಎನ್ನುವ ನಮ್ಮ ಹಿರಿಯರ ಮಾತಿನಲ್ಲಿ ಅಡಗಿರುವ ತತ್ವವನ್ನ ಅರಿತುಕೊಂಡರೆ ಬದುಕು ಸುಂದರ .

ಕಾಲಿಗೆ ಧರಿಸುವ ಪಾದರಕ್ಷೆ ನಮ್ಮ ಪಾದಕ್ಕೆ ಸರಿಯಾಗಿ ಹೊಂದುವಂತಿದ್ದರೆ ಅದು ನಮ್ಮ ಪಾದದ ರಕ್ಷಣೆ ಮಾಡುತ್ತದೆ . ನಡಿಗೆಯಲ್ಲಿ ವೇಗವನ್ನೂ ನೀಡುತ್ತದೆ . ಅದೇ ಪಾದರಕ್ಷೆ ನಮ್ಮ ಪಾದದ ಆಕಾರಕ್ಕೆ ಅಥವಾ ಗಾತ್ರಕ್ಕೆ ಹೊಂದಿಕೆಯಾಗದಿದ್ದರೆ ಅದು ಕಾಲನ್ನ ರಕ್ಷಣೆ ಮಾಡುವ ಬದಲು ಘಾಸಿಗೊಳಿಸುತ್ತದೆ , ಗಾಯಗೊಳಿಸುತ್ತದೆ . ನೆಡಿಗೆಯ ವೇಗವನ್ನೂ ಕಡಿಮೆ ಮಾಡುತ್ತದೆ . ನೀವೆಷ್ಟೇ ಪ್ರಯತ್ನ ಪಡಿ ಗಾತ್ರ ಸರಿಯಿಲ್ಲದ ಪಾದರಕ್ಷೆ ನೀಡುವುದು ಕೇವಲ ನೋವು .

Barcelona Memories Column By Rangaswamy Mookanahalli Part 78

ಅಂತಹ ಮೆಟ್ಟಲು/ತೊಡಲು ಬಾರದ ಚಪ್ಪಲಿಯನ್ನ ವರ್ಜಿಸುವುದು ಉತ್ತಮ ಎನ್ನುವುದು ಆಡು ಮಾತಿನ ಯಥಾವತ್ತು ಗ್ರಹಿಕೆ . ಹೇಗೆ ಪಾದದ ಗಾತ್ರಕ್ಕೆ ಹೊಂದದ ಪಾದರಕ್ಷೆ ನೋವು ನೀಡುತ್ತದೆಯೋ ಹಾಗೆಯೇ ಕೆಲವು ಸಂಬಂಧಗಳು ಕೂಡ ನೋವನ್ನ ನೀಡುತ್ತವೆ. ಅಂತಹ ಸಂಬಂಧವನ್ನ ಕಡಿದುಕೊಳ್ಳುವುದು ಉತ್ತಮ ಎನ್ನುವುದು ಅಂತರಾರ್ಥ. ಇದನ್ನ ನಮ್ಮ ಸ್ಪ್ಯಾನಿಷ್ ಜನರು Agua que no has de beber déjala correr (ಅಗ್ವಾ ಕೆ ನೋ ಹಾಸ್ ದೆ ಬೆಬೆರ್ ದೆಹಲ ಕೊರೆರ್ ) ಎನ್ನುತ್ತಾರೆ .

ಕುಡಿಯಲು ಆಗದ ನೀರನ್ನ ಹರಿಯಲು ಬಿಡು ಎನ್ನುವುದು ಯಥಾವತ್ತು ಅನುವಾದ . ಒಳಾರ್ಥ ಮಾತ್ರ ಸೇಮ್ ! . ಕುಡಿಯಲು ಯೋಗ್ಯವಲ್ಲದ ನೀರನ್ನ ಹಿಡಿದಿಟ್ಟು ಪ್ರಯೋಜನೆವೆನು ? ಅದನ್ನ ಅದರ ಪಾಡಿಗೆ ಹರಿಯಲು ಬಿಡುವುದು ಒಳ್ಳೆಯದು ಹಾಗೆಯೇ ನೋವನ್ನ ನೀಡುವ ಸಂಬಂಧದಲ್ಲಿ ಇರುವುದಕ್ಕಿಂತ ಅದರಿಂದ ಹೊರಬರುವುದು ಉತ್ತಮ ಎನ್ನುವ ಭಾವನೆ ಇಲ್ಲಿಯದು ಕೂಡ .

ಜಗತ್ತಿನ ಬಹುತೇಕ ಜನ ಬಹಳ ಸುಲಭವಾಗಿ ಯಾವುದಾದರೊಂದು ಕೆಲಸವನ್ನ ಮಾಡಬಲ್ಲೆ ಎಂದು ಹೇಳುತ್ತಾರೆ . ಹೌದೇ ಸರಿ ಮಾಡಿ ಎಂದಾಗ ಮಾತ್ರ ಹೇಳಿದಷ್ಟು ಸುಲಭವಲ್ಲ ಮಾಡುವುದು ಎನ್ನುವುದು ತಿಳಿಯುತ್ತದೆ . ಕಣ್ಣಿಗೆ ಹತ್ತಿರ ಇದೆ ಎನ್ನಿಸುವ ಕಟ್ಟಡವನ್ನ ತಲುಪಲು ನೆಡೆಯಲು ಶುರು ಮಾಡಿದ ಮೇಲೆ ತಿಳಿಯುತ್ತದೆ ಇದು ಕಣ್ಣಿಗೆ ಮಾತ್ರ ಹತ್ತಿರ ಕಾಣಿಸುತ್ತದೆ ಆದರೆ ಇದು ಕಂಡಷ್ಟು ಹತ್ತಿರವಿಲ್ಲ ಎನ್ನುವುದು . ಇದನ್ನ ನಮ್ಮ ಹಿರಿಯರು ' ಕಣ್ಣಿಗೆ ಹತ್ತಿರ ಕಾಲಿಗೆ ದೂರ ' ಎಂದರು . ಇದರ ನೆಲೆಯಲ್ಲೇ ಹುಟ್ಟಿದ ಮಾತು ' ಆಡಿದಷ್ಟು ಸುಲಭವಲ್ಲ ಮಾಡುವುದು' .

ಇತರರಿಗೆ ಹೇಳುವಾಗ ಅದೇನು ಮಹಾ ಒಂದು ವಾರದಲ್ಲಿ ಮಾಡಿ ಕೊಡುತ್ತೇವೆ ಎನ್ನುವುದು ಸಾಮಾನ್ಯವಾಗಿ ಕೆಲಸವನ್ನ ಒಪ್ಪಿಕೊಳ್ಳುವ ಜನ ಅಥವಾ ಸಂಸ್ಥೆಯ ಪ್ರತಿನಿಧಿಸುವ ಜನ ಹೇಳುವ ಮಾತು . ಅದರ ಅದರ ಅನುಷ್ಠಾನಕ್ಕೆ ಹೊರಟಾಗ ಎದುರಾಗುವ ಅಡೆತಡೆಗಳು ಒಂದೆರೆಡಲ್ಲ . ಹೀಗಾಗಿ ಬೇಕೋ ಬೇಡವೋ ಹೇಳಿದ ಸಮಯಕ್ಕೆ ಕೆಲಸವಂತೂ ಮುಗಿಯುವುದಿಲ್ಲ . ಇದು ಎಲ್ಲರಿಗೂ ಸಾಮಾನ್ಯವಾಗಿ ಆಗಿರುವ ಅನುಭವ .

ಈ ಆಡು ಮಾತಿನ ಮೂಲಕ ನಮ್ಮ ಹಿರಿಯರು ' ಬಾಯಲ್ಲಿ ಹೇಳಿದ ವೇಗಕ್ಕೆ ಕೆಲಸ ಮಾಡಲು ಸಾಧ್ಯವಿಲ್ಲ ಆದ್ದರಿಂದ ನಿಧಾನಿಸಿ ಉತ್ತರಿಸು ' ಎನ್ನುವ ಸೂಕ್ಷ್ಮವನ್ನ ತಿಳಿಸಲು ಪ್ರಯತ್ನಿಸಿದ್ದಾರೆ . ಇದನ್ನ ಇನ್ನೊಂದು ಅರ್ಥದಲ್ಲೂ ಅರ್ಥೈಸಬಹುದು ಅದೇನೆಂದರೆ ' ನೀನು ಮಾಡುವ ಕೆಲಸ ಮಾತನಾಡಬೇಕು ' ಎನ್ನುವುದು . ಅಂದರೆ ಅದೇನು ಮಹಾ ಮಾಡಿಬಿಡುತ್ತೇನೆ ಎನ್ನುವುದಕ್ಕಿಂತ ಮಾಡಿ ನಂತರ ಮಾತನಾಡುವುದು ಒಳ್ಳೆಯದು ಎನ್ನುವ ಅರ್ಥ . ಸರಳವಾಗಿ ಹೇಳುವುದಾದರೆ ಮಾತಿಗಿಂತ ಕೃತಿ ಮೇಲು ಎನ್ನುವುದು ಹೆಚ್ಚು ಉತ್ತಮ .

ಇದನ್ನ ಸ್ಪ್ಯಾನಿಷ್ ಪೂರ್ವಜರು No es lo mismo decirlo que hacerlo ಎಂದರು . (ನೊ ಈಸ್ ಲೊ ಮಿಸ್ಮೋ ದಿಸಿರ್ಲೊ ಕೆ ಹಸೆರ್ಲೊ ) . ಬಾಯಲ್ಲಿ ಹೇಳುವುದು ಕೈಯಲ್ಲಿ ಮಾಡುವುದು ಒಂದೇ ಅಲ್ಲ ಎನ್ನುವುದು ಅರ್ಥ . ಇಲ್ಲಿಯೂ ನಮ್ಮ ಕನ್ನಡದ ಆಡು ಮಾತಿನ ಅರ್ಥವನ್ನೇ ನೀಡುತ್ತದೆ . ಆಡುವ ಮುನ್ನ ಎಚ್ಚರವಿರಲಿ ಮಾತು ಆಡಿದ ಮೇಲೆ ಅದಕ್ಕೆ ತಕ್ಕಂತೆ ನೆಡೆದುಕೊಳ್ಳುವುದು ಅಷ್ಟು ಸುಲಭವಲ್ಲ ಎನ್ನುವುದು ಇಲ್ಲಿನ ಹಿರಿಯರು ಕೂಡ ನಂಬಿದ್ದ ಮಾತಾಗಿದೆ .

ಜಗತ್ತಿನಲ್ಲಿ ಇಷ್ಟೊಂದು ಜನರಿದ್ದೇವೆ ಒಬ್ಬಬ್ಬರ ಬದುಕು ಒಂದೊಂದು ತರ. ಒಂದೇ ತಾಯಿಯ ಹೊಟ್ಟೆಯಲ್ಲಿ ಜನಿಸಿದ ಮಕ್ಕಳಲ್ಲಿ , ಅವರ ಬದುಕಲ್ಲಿ ಬಹಳಷ್ಟು ಅಂತರವಿರುತ್ತದೆ. ಹೀಗೇಕೆ ? ಅವರು ಬೆಳೆದ ವಾತಾವರಣ , ನೀಡಿದ ಶಿಕ್ಷಣ , ಪ್ರೀತಿ , ಸುರಕ್ಷತಾ ಭಾವ ಎಲ್ಲವೂ ಒಂದೇ ಇದ್ದೂ ಬೆಳೆಯುತ್ತಾ ಅವರ ಜೀವನದಲ್ಲಿ ಬಹಳಷ್ಟು ಅಂತರ ಸೃಷ್ಟಿಯಾಗುತ್ತದೆ ಹೀಗೇಕೆ ? ಇಲ್ಲಿ ಏಕೆ ಎನ್ನವುದಕ್ಕೆ ಉತ್ತರವನ್ನ ನಿಖರವಾಗಿ ನೀಡಲು ಸಾಧ್ಯವಿಲ್ಲದ ಸಮಯದಲ್ಲಿ ' ಹಣೆಬರಹ, ಪೂರ್ವ ಜನ್ಮದ ಕರ್ಮ ಅಥವಾ ಡೆಸ್ಟಿನಿ ' ಎನ್ನುವ ಪದಗಳು ಸೃಷ್ಟಿಯಾಗಿರಬಹದು .

ಅಲ್ಲದೆ ಕೆಲವೊಮ್ಮೆ ಎಷ್ಟೇ ಕಷ್ಟಪಟ್ಟರೂ ಕೆಲವೊಂದು ವಿಷಯಗಳಿಗೆ ನಿಖರ ಉತ್ತರ ಹುಡುಕುವುದು ಅಥವಾ ಕಾರಣ ಕೊಡುವುದು ಕಷ್ಟಸಾಧ್ಯ . ನಾವು ನಂಬಲಿ ಅಥವಾ ಬಿಡಲಿ ಕೆಲವೊಂದು ವಿಷಯವನ್ನ ಇದ್ದಹಾಗೆ ಒಪ್ಪಿಕೊಳ್ಳುವುದ ಬಿಟ್ಟು ಹೆಚ್ಚಿನದೇನೂ ನಾವು ಮಾಡಲು ಸಾಧ್ಯವಿಲ್ಲ . ಈ ಮಾತಿನ ಅರ್ಥ ಇಂತಹುದೆ ವಿಷಯವನ್ನ ಸ್ಪಷ್ಟ ಮಾಡುತ್ತದೆ . ಜೀವನದಲ್ಲಿ ಎಲ್ಲಾ ತರದ ಸೋಲು, ನೋವು ತಿಂದ ವ್ಯಕ್ತಿಯೊಬ್ಬ ಇನ್ನು ಈ ಜೀವನ ನನಗೆ ಸಾಕು ಎಂದು ತನ್ನ ಜೀವನವನ್ನ ಕೊನೆಗೊಳಿಸಲು ಪ್ರಯತ್ನಿಸುತ್ತಾನೆ .

ಅಲ್ಲಿಯೂ ಹಲವು ವಿಫಲಗಳನ್ನ ಕಂಡು ಕೊನೆಗೆ ಸಮುದ್ರದಲ್ಲಿ ಮುಳುಗಿ ಸಾಯುವ ನಿಶ್ಚಯಕ್ಕೆ ಬರುತ್ತಾನೆ . ಹೀಗೆ ಸಮುದ್ರ ಹೊಕ್ಕಾಗ ಅಲ್ಲಿನ ನೀರು ಕೂಡ ಹಿಂಗಿ ಹೋಗಿ ಕೇವಲ ಮೊಳಕಾಲವರೆಗೆ ಮಾತ್ರ ನೀರು ಇರುತ್ತದೆ . ಕೊನೆಗೆ ಅವನ ಸಾಯುವ ಪ್ರಯತ್ನಕ್ಕೆ ಸಮುದ್ರ ಹೊಕ್ಕರು ಜಯ ಸಿಗುವುದಿಲ್ಲ . ಇಲ್ಲಿ ಋಣಾತ್ಮಕ ಉದಾಹರಣೆ ಕೊಡಲಾಗಿದೆ ಆದರೆ ಇದನ್ನ ಬದುಕಿನ ಎಲ್ಲಾ ಮಜಲುಗಳಲ್ಲೂ ಅನ್ವಯಿಸಬಹದು .

ಅರ್ಥ ಬಹಳ ಸರಳ ಕೆಲವೊಮ್ಮೆ ಮನುಷ್ಯ ಎಷ್ಟೇ ಪ್ರಯತ್ನ ಪಟ್ಟರೂ ಅವರಿಗೆ ಅದರಲ್ಲಿ ಜಯ ಸಿಗದೇ ಹೋಗಬಹದು ಏಕೆಂದರೆ ಅವರ ಹಣೆಬರಹದಲ್ಲಿ ಅದು ಇರುವುದಿಲ್ಲ , ಅಥವಾ ಆ ವಸ್ತು ಅಥವಾ ವಿಷಯದ ಪ್ರಾಪ್ತಿ ಅಥವಾ ಲಬ್ಧತೆ ಇರುವುದಿಲ್ಲ . ಈ ಗಾದೆ ನಮಗಿಂತ ಹೆಚ್ಚಿನ ಬಲವುಳ್ಳ ಕಣ್ಣಿಗೆ ಕಾಣದ ಶಕ್ತಿಯ ಬಗ್ಗೆ ಜೊತೆಗೆ ನಮ್ಮ ಡೆಸ್ಟಿನಿ ಬಗ್ಗೆ ನಂಬಿಕೆ ಹೆಚ್ಚಿಸುವ ಮಾತನಾಡುತ್ತದೆ . ನಾವೆಲ್ಲಾ ನಮ್ಮ ಹಣೆಬರಹವನ್ನ ಹೊತ್ತು ಬಂದಿರುತ್ತೇವೆ ಎನ್ನವುದು ಸಾಮಾನ್ಯ ಅರ್ಥ .

ಇದನ್ನ ಸ್ಪಾನಿಷ್ ಭಾಷಿಕರು El que nace para tamal, del cielo le caen las hojas ಎಂದರು . (ಎಲ್ ಕೆ ನಾಸೆ ಪರ ತಮಾಲ್ , ದೆಲ್ ಸಿಯಲೋ ಕಾಯೆನ್ ಲಾಸ್ ಹೋಹಾಸ್ ) . ಇದು ನಮ್ಮ ಪಾಪಿ ಸಮುದ್ರ ಹೊಕ್ಕರೂ ಮೊಳಕಾಲುದ್ದ ನೀರು ಎನ್ನುವ ಗಾದೆಯ ಯಥಾವತ್ತು ಅರ್ಥ ನೀಡುತ್ತದೆ . ಇಲ್ಲಿ ಬಳಸಿರುವ ಉಪಮೆ ಮಾತ್ರ ಬಿನ್ನವಾಗಿದೆ . ತಮಾಲ್ ಎನ್ನುವುದು ಲಾಟಿನ್ ಭಾಷಿಕರು ಮಾಡುವ ಒಂದು ಖಾದ್ಯ . ಜೋಳ ಮತ್ತು ಮಾಂಸವನ್ನ ಸೇರಿಸಿ ಬೇಯಿಸಿ ಮಾಡುವ ಒಂದು ಆಹಾರ ಪದಾರ್ಥ .

ಈ ಗಾದೆ ಹೇಳುತ್ತದೆ ಕೆಲವರು ತಮಾಲ್ ಖಾದ್ಯವನ್ನ ಮಾಡಲೆಂದೇ ಹುಟ್ಟಿರುತ್ತಾರೆ ಅಂತವರಿಗೆ ಎಲೆಯಲ್ಲಿ ಕಟ್ಟಿದ ಮಾಂಸ ಮತ್ತು ಜೋಳ ಆಕಾಶದಿಂದ ಬೀಳುತ್ತದೆ . ಇದರರ್ಥ ಕೆಲವರ ಹಣೆಬರಹ ಅಥವಾ ಅದೃಷ್ಟ ಎಷ್ಟು ಚನ್ನಾಗಿರುತ್ತದೆ ಎಂದರೆ ಅವರ ನಿಂತ ಜಾಗಕ್ಕೆ ಆ ಖಾದ್ಯ ತಯಾರಿಸಲು ಬೇಕಾದ ವಸ್ತು ಸಿಗುತ್ತದೆ . ಅದೇ ಕೆಲವರು ಎಷ್ಟೇ ಕಷ್ಟ ಪಟ್ಟರೂ ಅವರಿಗೆ ತಮಾಲ್ ತಯಾರಿಸುವ , ತಿನ್ನುವ ಯೋಗ ವಿರುವುದಿಲ್ಲ . ವೇಳೆ , ಹಣೆಬರಹ ಚೆನ್ನಾಗಿದ್ದರೆ ಮುಟ್ಟಿದ್ದೆಲ್ಲಾ ಚಿನ್ನ ಇಲ್ಲವೇ ಎಲ್ಲವೂ ವಿರುದ್ಧ ಎನ್ನುವುದು ಎರಡೂ ಗಾದೆ ಮಾತುಗಳ ಅರ್ಥ.

ಇವು ಕೇವಲ ಕೆಲವೊಂದು ಉದಾಹರಣೆ ಮಾತ್ರ . ಇಂತಹ ನೂರಾರು ಆಡು ಮಾತುಗಳು, ಗಾದೆ ಮಾತುಗಳು ನಮ್ಮಲ್ಲಿ ಇದ್ದಂತೆ ಇಲ್ಲಿಯೂ ಇದೆ , ಮುಕ್ಕಾಲು ಪಾಲು ಇಂತಹ ಮಾತುಗಳ ಅರ್ಥ ಕೂಡ ಅದೇ ಇರುತ್ತದೆ. ಸಮಾಜವಾಗಿ ಅಂದಿಗೆ ಜಗತ್ತು ಒಂದಾಗಿತ್ತು ಎನ್ನುವುದನ್ನ ಈ ಮಾತುಗಳು ನನಗೆ ಕಲಿಸಿದವು. ಅಭಿವೃದ್ಧಿಯ ಹೆಸರಿನಲ್ಲಿ ಜಗತ್ತಿನೆಲ್ಲೆಡೆ ಮನುಷ್ಯ ಬದುಕಿನ ಮೂಲಭೂತ ಮೌಲ್ಯಗಳನ್ನ ಮರೆಯುತ್ತಾ ಹೋದಂತೆಲ್ಲ , ಸಮಾಜದಲ್ಲಿನ ಬದುಕು ನಿರಸವಾಯಿತು. 'ನಾವು- ನಮ್ಮದು' ಎನ್ನುವ ಜಾಗದಲ್ಲಿ 'ನಾನು-ನನ್ನದು ' ಸ್ಥಾನ ಪಡೆಯಿತು. ಅದರ ಫಲಿತಾಂಶ ಇಂದು ನಾವೆಲ್ಲರೂ ನೋಡುತ್ತಿದ್ದೇವೆ ಅಲ್ಲವೇ ? ಬದಲಾವಣೆ ಜಗದ ನಿಯಮ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+