ಗುರು ರಾಘವೇಂದ್ರರ ಸ್ತುತಿಸುವ ಹಾಡು
ಮಿತ್ರ ಗುರುನಾಥ ಘಳಗಿ(ತಬಲಾ ವಾದಕ) ಜೊತೆಗೆ ಬರಲು ಸಿದ್ಧನಾದ. ಇಬ್ಬರು ಪಾದಯಾತ್ರೆ ಮಾಡಿ ಮಂತ್ರಾಲಯಕ್ಕೆ ನಡೆದರು. ಹೊರಡುವ ಪೂರ್ವದಲ್ಲಿ “ಜೀವಿ, ನನಗೆ ರಾಯರ ಮೇಲೊಂದು ಹಾಡು ಬರೆದು ಕೊಡು, ಅದನ್ನು ಹಾಡುತ್ತ ಪ್ರವಾಸ ಮಾಡುವೆ." ಎಂದು ಕನಕಾಪುರ್ ಕೇಳಿದ. ಅವನ ಸ್ವಪ್ನದ ಹಿನ್ನೆಲೆಯಲ್ಲಿ ನಾನು ಹಾಡು ಬರೆದುಕೊಟ್ಟೆ. ಅದನ್ನು ಪ್ರತಿನಿತ್ಯ ಹಾಡುತ್ತ ಮಂತ್ರಾಲಯಕ್ಕೆ ಹೋಗಿ, ಒಂದು ವಾರ ಸೇವೆ ಮಾಡಿ ಮರಳಿ ಬಂದ.
ನಾವು ವಿದ್ಯಾರ್ಥಿ ಮಿತ್ರರು ಹನುಮಜಯಂತಿ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸುತ್ತಿದ್ದೆವು. ಬಾಲಮಾರುತಿ ದೇವಸ್ಥಾನದ ಮುಂದೆ ಪೆಂಡಾಲ್ ಹಾಕಿ ಮನರಂಜನೆ ಕಾರ್ಯಕ್ರಮ ನಡೆಸುತ್ತಿದ್ದೆವು. ಮಿತ್ರ ಗೋಪಾಲದಾಸನ ಕೀರ್ತನ. ಮುಖ್ಯ ಅತಿಥಿ ವರಕವಿ ಬೇಂದ್ರೆ. ಅಂದೇ ಕನಕಾಪುರ ಮಂತ್ರಾಲಯದಿಂದ ಮರಳಿ ಬಂದಿದ್ದ. ಅವನ ಕೈಯಲ್ಲಿ ಪೇಟಿ (ಹಾರ್ಮೋನಿಯಂ) ಕೊಟ್ಟು ಹಾಡಲು ಹೇಳಿದೆವು. ಅವನು ಹಾಡಿದ ಹಾಡು 'ರಾಘವೇಂದ್ರಾ ದಯ ತೋರೋ"(ಲಲತ್ ರಾಗ ಸಂಯೋಜನೆ). ನಾನು ಬರೆದ ಹಾಡು.
ಈ ಹಾಡಿನ ಹಿನ್ನೆಲೆಯ ಪೀಠಿಕೆ ನಾನು ಹೇಳಿದೆ. ಹಾಡು ಕೇಳಿದ ಶ್ರೋತೃಗಳ ಕಣ್ಣುಗಳೂ ತೇವಗೊಂಡವು(1958). ಮುಂದೆ ಆ ಹಾಡು ರೇಡಿಯೋದಲ್ಲಿ ಬಹಳ ಪ್ರಸಿದ್ಧವಾಯಿತು. ಕಲಾವಿದೆ ಎಚ್.ಆರ್.ಲೀಲಾವತಿ ಬಹಳ ಕಡೆ ಆ ಹಾಡನ್ನು ಹಾಡಿದರು.
ಆ ಹಾಡು ಹೀಗಿದೆ:
“ಗುರು | ರಾಘವೇಂದ್ರಾ ದಯ ತೋರೋ|
ತಂದೆಯು ನೀನೆ, ತಾಯಿಯು ನೀನೇ ||ಪ||
-1-
ಭವದಾ ಕಂಟಕ ಮುಳ್ಳೀನ ಹಾಸಿಗೆ
ತೊರೆಯುತ ನಡೆದಿಹೆ ನಿನ್ನಯ ಕಡೆಗೆ
ಜೀವದ ಕುಸುಮವ ಬಾಡಿಸ ಬೇಡವೊ
ಬಂದಿದೆ ಏರಲು ನಿನ್ನಯ ಅಡಿಗೆ ||
-2-
ಜೊತೆಯಲಿ ಇರುವುದು ಈ ವನ ಕಾನನ
ಕುಡಿಯಲು ದೊರೆವುದೆ ಗಂಗೆಯ ಪೀಳಿಗೆ
ಚುಕ್ಕೆಯ ಆಸರ ಗುರಿಯೋ ಧ್ರುವವು
ಅದರಿಂದಲೆಯೇ ಏಳಿಗೆ ಬಾಳಿಗೆ ||
-3-
ನಿನ್ನಯ ಮಾತನು ಪಾಲಿಸಲೆಂದೇ
ಯಾತ್ರೆಯ ನಡೆಸಿಹೆ ನಿನ್ನಡಿಗಿಂದೇ
ಮಂತ್ರದ ಶಕ್ತಿಯ ಕಾಣುವೆ ಮುಂದೇ
ಮುಂದಿನ ಬಾಳಿಗೆ ಗತಿ ನೀ ಒಂದೇ ||
-4-
ಕತ್ತಲೆಯಾಟವ ನೋಡುತ ಬಾಡಿದೆ
ಬೆಳಕಿನ ದಾರಿಗೆ ಮುಖವದು ಹೊರಳಿದೆ
ಮುಂದಿನ ಹೆಜ್ಜೆಗೆ ಗೆಜ್ಜೆಯು ಎಳೆದಿದೆ
ಕುಣಿಯುತ ನಡೆದಿರೆ ನಿನ್ನದೆ ನೆರವಿದೆ ||
-5-
ಸುಖವೋ ದುಃಖವೋ ತಾಪದ ಹೊನಲೋ
ಬೇರೆಯ ಬಣ್ಣದ ಒಂದೇ ನೀರು
ಏಳೂ ಬಣ್ಣವ ಬೆಳ್ಳಗೆ ಮಾಡುವ
ಲೋಲಕ ದೃಷ್ಟಿಯ ನೀಡುವರಾರು? ||
ಕನಕಾಪುರ್ 'ಸಂಗೀತ ವಿಶಾರದ"ರಾದರು. ಅಳ್ನಾವರದಲ್ಲಿಯ ಸ್ಕೂಲ್ನಲ್ಲಿ ಸಂಗೀತ ಶಿಕ್ಷಕರಾದರು. ಮುಂದೆ ಧಾರವಾಡ ಆಕಾಶವಾಣಿಯಲ್ಲಿ ಕಲಾವಿದರಾಗಿ ಕೆಲಸಕ್ಕೆ ಸೇರಿದರು. ಈಗ ನಿವೃತ್ತರಾಗಿದ್ದಾರೆ.(೧೯೭೫-೯೪) ಹಲವಾರು ಪ್ರಶಸ್ತಿ-ಪಾರಿತೋಷಕಗಳನ್ನು ಪಡೆದಿದ್ದಾರೆ. ಕರ್ನಾಟಕ ಸರಕಾರದ ಬಹು ಮಹತ್ವದ, 2004,5ನೇ ಸಾಲಿನ, 'ಕನಕ-ಪುರಂದರ ಪ್ರಶಸ್ತಿ"ಯನ್ನು ಇವರು ಪಡೆದಿದ್ದಾರೆ. ನಾನು ಭೇಟಿಯಾದಗೊಮ್ಮೆ, “ನನ್ನ ಫರ್ಮಾಯಿಶ್, 'ರಾಘವೇಂದ್ರಾ ದಯ ತೋರೋ" ಹಾಡಿರಿ ವಸಂತ್ " ಎಂದು ಕೇಳುತ್ತೇನೆ.
ರಾಘವೇಂದ್ರ ಸ್ವಾಮಿಗಳ ಇನ್ನಷ್ಟು ಪವಾಡ ಮತ್ತಿತರ ಸಂಗತಿಗಳು ಮುಂದಿನ ವಾರ..












Click it and Unblock the Notifications