ಕಾರ್ತಿಕದಲ್ಲಿ ಕಾದಿದೆ ಗಂಡಾಂತರ: ಕೋಡಿಶ್ರೀಗಳ ಭವಿಷ್ಯ
ತಾವು ಹಿಂದೆ ನುಡಿದಿದ್ದ ಭವಿಷ್ಯವನ್ನು ಕೋಡಿಮಠದ ಶ್ರೀಗಳು ಮತ್ತೆ ಹುಬ್ಬಳ್ಳಿಯಲ್ಲಿ ಪುನರುಚ್ಚಿಸಿದ್ದಾರೆ. ಜಲಪ್ರಳಯವಾಗಲಿದೆ ಎಂದು ಏಪ್ರಿಲ್ ತಿಂಗಳಲ್ಲೇ ಕೋಡಿಶ್ರೀಗಳು ಹೇಳಿದ್ದರು, ಅದು ಬಹುತೇಕ ನಿಜವಾಗಿದೆ. ಅದಕ್ಕೆ ಬೆಂಗಳೂರಿನ ಮಳೆಯೇ ಸಾಕ್ಷಿ.
ಎರಡು ವಾರಗಳ ಕೆಳಗೆ ಶಿವಮೊಗ್ಗ ಜಿಲ್ಲೆಯಲ್ಲಿ ಭವಿಷ್ಯ ನುಡಿದಿದ್ದ ಕೋಡಿಶ್ರೀಗಳು ಮುಂದೆ ನಡೆಯಬಹುದಾದ ರಾಜಕೀಯ ವಿದ್ಯಮಾನ ಮತ್ತು ಪ್ರಾಕೃತಿಕ ವಿಕೋಪದ ಬಗ್ಗೆ ಕಳವಳವನ್ನು ವ್ಯಕ್ತ ಪಡಿಸಿದ್ದರು.
ಭೂಮಿ ನಡುಗಿತು, ಮೇಘ ಅಬ್ಬರಿಸಿತು, ನೀರು ತಲ್ಲಣಗೊಂಡಿತು: ಕೋಡಿ ಶ್ರೀಭವಿಷ್ಯ
ಕಾರ್ತಿಕದಲ್ಲಿ ಇನ್ನೂ ತೊಂದರೆಯಾಗಲಿದೆ ಎಂದು ಕೋಡಿಶ್ರೀಗಳು ಪುನರುಚ್ಚಿಸಿದ್ದಾರೆ ಮತ್ತು ದೇವರ ಸ್ಮರಣೆಯೇ ಇದಕ್ಕೆಲ್ಲಾ ಪರಿಹಾರ ಎನ್ನುವ ಮಾತನ್ನು ಹೇಳಿದ್ದಾರೆ. ಆಸ್ತಿಕ ವಲಯ ಕೋಡಿಶ್ರೀಗಳ ಭವಿಷ್ಯದಿಂದ ಚಿಂತೆ ಪಡುವಂತಾಗಿದೆ.
ದೇಶದಲ್ಲಿ ಮತೀಯ ಗಲಭೆ ಸಂಭವಿಸಲಿದೆ ಎಂದು ಕೋಡಿಶ್ರೀಗಳು ಜೂನ್ ತಿಂಗಳಲ್ಲಿ ಬಳ್ಳಾರಿಯಲ್ಲಿ ನುಡಿದಿದ್ದರು. ಅದರಂತೆಯೇ, ಬಿಜೆಪಿ ನಾಯಕಿ ನೂಪರ್ ಶರ್ಮಾ ಹೇಳಿಕೆಯಿಂದ ದೇಶದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.
ಕೋಡಿಮಠದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮಿಗಳು
ಹುಬ್ಬಳ್ಳಿಯಲ್ಲಿ ಮಾತನಾಡುತ್ತಿದ್ದ ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮಿಗಳು, "ದೈವಕೃಪೆಯಿಂದ ಈ ನಾಡಿನಲ್ಲಿ ವಿಪರೀತ ಮಳೆಯಾಗಿದೆ. ನಾಡಿಗೆ ಈ ನೀರು, ಕೆರೆಯಿಂದ, ಗುರುಗಳು ಸ್ಥಾಪಿಸಿರುವಂತಹ ಕೆರೆಯಿಂದ ಎಲ್ಲೂ ತೊಂದರೆಯಾಗುವುದಿಲ್ಲ. ಬೆಂಕಿ ಅವಗಢದ ಮುನ್ಸೂಚನೆ ನಮಗೆ ಸಿಕ್ಕಿದೆ"ಎಂದು ಶ್ರೀಗಳು ಭವಿಷ್ಯ ನುಡಿದಿದ್ದಾರೆ.
ಅಗ್ನಿಭಂಗ, ಭೂಕಂಪ ಹೆಚ್ಚಾಗುವ ಲಕ್ಷಣಗಳಿವೆ
"ಇಂದಿನಿಂದ ಮುಂದಕ್ಕೆ ಚೆನ್ನಾಗಿ ನಡೆದುಕೊಂಡು ಹೋಗುತ್ತದೆ, ಜನತೆಗೆ ಸುಖಶಾಂತಿ ಸಿಗುತ್ತದೆ. ಜಲದ ಸಮಸ್ಯೆ ಮುಂದೆಯೂ ಹೆಚ್ಚಾಗುವ ಲಕ್ಷಣಗಳು ಕಾಣಿಸುತ್ತಿವೆ. ಜಲಬಾಧೆ, ಭೂಮಿ ನಡುಗುವಂತಹ ಘಟನೆಗಳು ಹೆಚ್ಚಾಗಿ ನಡೆಯಲಿವೆ. ಅಗ್ನಿಭಂಗ, ಭೂಕಂಪ ಹೆಚ್ಚಾಗುವ ಲಕ್ಷಣಗಳಿವೆ, ಕಾರ್ತಿಕ ಮಾಸದಲ್ಲಿ ತೊಂದರೆಯಾಗುವ ಲಕ್ಷಣಗಳಿವೆ"ಎಂದು ಕೋಡಿಮಠದ ಶ್ರೀಗಳು ಭವಿಷ್ಯ ನುಡಿದಿದ್ದಾರೆ.
ಮಲೆನಾಡು ಬಯಲು ಸೀಮೆಯಾದೀತು
"ಈ ಸಂವತ್ಸರದಲ್ಲಿ ಅಶುಭಗಳೇ ಹೆಚ್ಚಾಗುತ್ತದೆ ಎಂದು ಹೇಳಿದ್ದೆ, ಅದನ್ನು ಮತ್ತೆ ಪುನರುಚ್ಚಿಸುತ್ತಿದ್ದೇನೆ. ಗಾಳಿ ಮಳೆ ಹೆಚ್ಚಾಗಲಿದೆ, ವಿಪರೀತ ಮಿಂಚು ಬರಲಿದೆ, ಸಾವುನೋವು ಹೆಚ್ಚಾಗಲಿದೆ, ಜಲಾಶಯಗಳು ತುಂಬಿ ಹರಿಯುತ್ತವೆ. ಮಲೆನಾಡು ಬಯಲು ಸೀಮೆಯಾದೀತು"ಎಂದು ಕೋಡಿಮಠದ ಶ್ರೀಗಳು ಹೇಳಿದ್ದಾರೆ. ಹಾಸನದಲ್ಲಿ ಈ ಹಿಂದೆಯೇ ಭವಿಷ್ಯವನ್ನು ಶ್ರೀಗಳು ನುಡಿದಿದ್ದರು.
ಜನರು ದೇವರನ್ನು ನಂಬಿ, ಭಕ್ತಿಯಲ್ಲಿ ಹೋದರೆ ಎಲ್ಲದೂ ಒಳ್ಳೆಯದು
"ಜನರು ದೇವರನ್ನು ನಂಬಿ, ಭಕ್ತಿ ಮಾರ್ಗದಲ್ಲಿ ಹೋದರೆ ಎಲ್ಲದೂ ಒಳ್ಳೆಯದಾಗುತ್ತದೆ"ಎಂದು ಶ್ರೀಗಳು ಹುಬ್ಬಳ್ಳಿಯಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡುತ್ತಾ ಹೇಳಿದ್ದಾರೆ. ಅಪಮೃತ್ಯು, ಕೊಲೆಗಳು, ಮತೀಯ ಗಲಭೆಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ವಿಕೋಪಕ್ಕೆ ತುತ್ತಾಗಲಿದೆ. ರಾಜಕೀಯದಲ್ಲಿ ತಲ್ಲಣ, ಗುಂಪುಗಳು ಆಗಲಿವೆ. ಮಳೆ ಬಂದರೆ ಬೆಳೆ ಸಿಗುವುದಿಲ್ಲ, ಈ ಸಂವತ್ಸರದ ಫಲ ಅಶುಭ ಎಂದು ಶ್ರೀಗಳು ಭವಿಷ್ಯವನ್ನು ನುಡಿದಿದ್ದರು.