ಅಮಿತ್ ಶಾ ಇರುವಾಗ ಹೋಟೆಲ್ ನಲ್ಲಿ ಹಾವು ಕಂಡರೆ ಹೀಗೆ ಕಥೆ ಕಟ್ಟೋದಾ?
Recommended Video
ಇದೀಗ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಬಂದಿದ್ದ ಬೆಂಗಳೂರಿನ ಹೋಟೆಲ್ ನಲ್ಲಿ ಹಾವು ಕಾಣಿಸಿಕೊಂಡ ಸುದ್ದಿಗೆ ವಿಪರೀತ ಪ್ರಾಶಸ್ತ್ಯ ಸಿಕ್ಕಿಹೋಗಿದೆ. ಮಾಧ್ಯಮದಲ್ಲೆಲ್ಲ ಅದೇ ಸುದ್ದಿ. ಅಸಲಿಗೆ ಹಾವು ಕಾಣಿಸಿಕೊಂಡಿದ್ದು ಯಾರಿಗೆ? ಅಮಿತ್ ಶಾ ಅವರಿಗಾ ಅಥವಾ ಬೇರೆ ಯಾರಿಗೆ?
ಅಮಿತ್ ಶಾ ಅವರಿಗೆ ಕಂಡಿದ್ದೇ ಆದರೆ ಅದು ಯಾವ ದಿಕ್ಕಿನಿಂದ ಯಾವ ಕಡೆಗೆ ಸಾಗಿತು? ಹೆಡೆ ಎತ್ತಿ ನಿಂತು ಕಾಣಿಸಿಕೊಂಡಿತಾ? ಇತ್ಯಾದಿ ಪ್ರಶ್ನೆಗಳಿಗೆ ಉತ್ತರವಿಲ್ಲ. ಅಸಲಿಗೆ ಈ ವಿಚಾರವನ್ನು ನಾನಾ ಬಗೆಯಲ್ಲಿ ಯೋಚಿಸಬಹುದು. ಹಾವು ಕಾಣಿಸಿಕೊಂಡ ವ್ಯಕ್ತಿಗೆ ಆತನ ಜೀವನದಲ್ಲಿ ಆಗಬಹುದಾದ ಯಾವುದಾದರೂ ಘಟನೆಯ ಮುನ್ಸೂಚನೆ ಅದಾಗಿರಬಹುದು.
ನಾಗದೋಷ, ದೋಷದ ಕಾರಣಗಳು, ಮನೆಗೆ ಹಾವು ಬಂದರೆ ಏನು ಫಲ?
ಅಥವಾ ಹೋಟೆಲ್ ಮಾಲೀಕರಿಗೆ ಸಂಬಂಧಪಟ್ಟ ಘಟನೆಯೊಂದರ ಮುನ್ಸೂಚನೆ ಆಗಿರಬಹುದು. ಏಕೆಂದರೆ ಅಮಿತ್ ಶಾ ಕಣ್ಣಿಗೆ ಅಥವಾ ಅವರ ಎದುರಿಗೆ ಹಾವು ಕಾಣಿಸಿಕೊಂಡೇ ಇಲ್ಲ. ಪ್ರಾಣಿಗಳನ್ನು ಆಧರಿಸಿ ಶಕುನ ಹೇಳುವ ಪದ್ಧತಿ ಜ್ಯೋತಿಷ್ಯದಲ್ಲಿದೆ. ಆ ವಿಚಾರದಲ್ಲಿ ಎರಡು ಮಾತಿಲ್ಲ. ಆದರೆ ಅದಕ್ಕೆ ಸಂಬಂಧಿಸಿದ ಕೆಲ ವಿಚಾರಗಳನ್ನು ಸಹ ತಿಳಿಸಲಾಗಿದೆ.
ಇನ್ನೂ ವೈಜ್ಞಾನಿಕವಾಗಿ ಹೇಳಬೇಕು ಅಂದರೆ, ಒಂದು ಕಾಲದಲ್ಲಿ ಸರ್ಪಗಳ ಆವಾಸ ಸ್ಥಾನವಾಗಿದ್ದ ಕಡೆಯಲ್ಲೆಲ್ಲ ಈಗ ಮನೆ-ಮಠ, ಹೋಟೆಲ್ ಗಳನ್ನು ನಿರ್ಮಿಸಲಾಗಿದೆ. ಅವುಗಳು ಸಂಚರಿಸುವ ಸ್ಥಳದಲ್ಲಿ ಅವುಗಳೇ ಬರಬಾರದು ಎಂದು ಬಯಸುವುದು ಎಷ್ಟರ ಮಟ್ಟಿಗೆ ತರ್ಕಕ್ಕೆ ನಿಲುಕುವ ವಿಚಾರ?
ಇನ್ನು ಹಾವು ಕಾಣಿಸಿಕೊಂಡರೆ ಶುಭ ಅಥವಾ ಅಶುಭ ಎರಡೂ ಬಗೆಯ ಚಿಂತನೆ ಮಾಡುವುದಿದೆ. ಏಕಾಏಕಿ ಇದು ಅಶುಭ ಸೂಚನೆಯೇ ಎಂದು ಷರಾ ಬರೆಯುವುದಂತೂ ಬಿಲ್ ಕುಲ್ ಸರಿಯಲ್ಲ. ಈ ಹಿಂದೆ ಕುಮಾರಸ್ವಾಮಿ ಅವರ ಮನೆ ಬಳಿ ಸರ್ಪ ಕಾಣಿಸಿಕೊಂಡಿತ್ತು. ಅದಕ್ಕೆ ತಕ್ಕ ಪರಿಹಾರ- ಶಾಂತಿಯನ್ನು ಮಾಡಿಸಿಕೊಂಡಿದ್ದರು. ಅದೂ ಜ್ಯೋತಿಷ್ಯ ರೀತ್ಯಾ ಪರಿಹಾರದ ಮೂಲಕ.
ಇನ್ನು ಪ್ರಸ್ತುತ ಸನ್ನಿವೇಶದಲ್ಲಿ, ಲಘು ಧಾಟಿಯಲ್ಲಿ ಹೇಳಬೇಕೆಂದರೆ, ಹಾವು ಕಾಣಿಸಿಕೊಂಡಿದೆ ಅಂತ ತಲೆಯ ಮೇಲೆ ಗೂಬೆ ಕೂಡಿಸಲು ಹೊರಟಂತಿದೆ.