ಕೊರೊನಾ ನಿರ್ಮೂಲನೆ; ಮೋದಿಗೆ ಪ್ರಕಾಶ್ ಅಮ್ಮಣ್ಣಾಯ ಸಲಹೆ ಏನು?
ಮಂಗಳೂರು, ಏಪ್ರಿಲ್ 25; ದೇಶದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದೆ. ಬಡವ-ಬಲ್ಲಿದ, ಹಿರಿಯ-ಕಿರಿಯರೆನ್ನದೆ ಕೊರೊನಾ ಎಲ್ಲರನ್ನೂ ಕಾಡುತ್ತಿದೆ. ಕೊರೊನಾ ಸೋಂಕಿತು ಹಾಸಿಗೆ, ಆಕ್ಸಿಜನ್ ಸಿಗದೆ ನರಳಾಡುತ್ತಿದ್ದಾರೆ. ದೇಶದಲ್ಲಿ ಅಕ್ಷರಶಃ ಆರೋಗ್ಯ ತುರ್ತು ಪರಿಸ್ಥಿತಿ ಏರ್ಪಟ್ಟಿದೆ. ಕಣ್ಣಿಗೆ ಕಾಣದ ಮಾರಕ ವೈರಸ್ ದೇಶದಲ್ಲಿ ಜನರ ಬಾಳಿನಲ್ಲಿ ಎಂದೂ ಕಾಣದ ಭೀಕರ ಸ್ಥಿತಿಯನ್ನು ತಂದೊಡ್ಡಿದೆ.
ಕೊರೊನಾಗೆ ಲಸಿಕೆ ಬಂದರೂ ರೋಗ ಮಾತ್ರ ನಿಯಂತ್ರಣಕ್ಕೆ ಬರುತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿ ದೇಶದಲ್ಲಿ ಕೊರೊನಾ ನಿಯಂತ್ರಣಕ್ಕೆ ಸಾಲು-ಸಾಲು ಸಭೆಗಳನ್ನು ಮಾಡಿದರೂ ನಿಯಂತ್ರಣ ವಾಗುತ್ತಿಲ್ಲ. ದೇಶದಲ್ಲಿ ಕೊರೊನಾ ನಿಯಂತ್ರಣ ವಾಗಬೇಕಾದರೆ ಪ್ರಧಾನಿ ನರೇಂದ್ರ ಮೋದಿ ಕುಕ್ಕೆ ಸುಬ್ರಹ್ಮಣ್ಯ ಕ್ಕೆ ಭೇಟಿ ನೀಡಬೇಕು ಎಂದು ಖ್ಯಾತ ಜ್ಯೋತಿರ್ವಿಜ್ಞಾನಿ ಪ್ರಕಾಶ್ ಅಮ್ಮಣ್ಣಾಯ ಅಭಿಪ್ರಾಯಪಟ್ಟಿದ್ದಾರೆ.
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸಕಲ ಸಂಕಷ್ಟಗಳನ್ನು ನಿವಾರಿಸುವ ಶಕ್ತಿಯಿದೆ. ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಮಾರಕ ರೋಗ ರುಜಿನಗಳು ದೂರವಾದ ಇತಿಹಾಸವಿದೆ. ಪ್ರಧಾನಿ ಮೋದಿ ಸುಬ್ರಹ್ಮಣ್ಯನ ಪಾದತಳದಲ್ಲಿ ನಿಂತು ಮುಕ್ತ ಮನಸ್ಸಿನಿಂದ ಪ್ರಾರ್ಥನೆ ಮಾಡಿದರೆ ದೇಶವಾಸಿಗಳನ್ನು ಬಾದಿಸುತ್ತಿರುವ ಮಾರಕ ರೋಗ ನಿರ್ಮೂಲನೆ ಆಗುತ್ತದೆ ಅಂತಾ ಪ್ರಕಾಶ್ ಅಮ್ಮಣ್ಣಾಯ ಅಭಿಪ್ರಾಯಪಟ್ಟಿದ್ದಾರೆ.

ಇದಕ್ಕೆ ಇತಿಹಾಸದ ಕಥೆಯನ್ನು ಉಲ್ಲೇಖ ಮಾಡಿಕೊಟ್ಟಿರುವ ಪ್ರಕಾಶ್ ಅಮ್ಮಣ್ಣಾಯ, ಈ ಹಿಂದೆ ಚಂಪಾ ಮಹಾರಾಜನ ಆಡಳಿತದಲ್ಲಿ ಆತನ ರಾಜ್ಯದ ಪ್ರಜೆಗಳಿಗೆ ಮಾರಕ ರೋಗ ಬಾಧಿಸಿತ್ತು. ರಾಜ್ಯದ ಶ್ರೇಷ್ಠಾತಿಶ್ರೇಷ್ಠ ಪಂಡಿತರು ಗಿಡಮೂಲಿಕೆಗಳಿಂದ ಪ್ರಯೋಗ ಮಾಡಿದರೂ ಜನರಿಗೆ ಅಂಟಿದ್ದ ಮಾರಕ ರೋಗಗಳು ವಾಸಿಯಾಗಲೇ ಇಲ್ಲ. ಕೊನೆಗೆ ರಾಜ ಋಷಿಗಳ ಇಚ್ಛೆಯಂತೆ ಚಂಪಾ ಮಹಾರಾಜ ಬಹಳ ನಿಷ್ಠೆಯಿಂದ,ವೃತಾಚರಣೆಗಳನ್ನು ಮಾಡಿ ಕುಕ್ಕೆ ಸುಬ್ರಹ್ಮಣ್ಯನ ಬಳಿ ಪ್ರಾರ್ಥನೆಗೆ ಸಂಕಲ್ಪ ಮಾಡಿದ.
ಕುಮಾರಾಧಾರಾ ನದಿಯಲ್ಲಿ ಪುಣ್ಯ ತೀರ್ಥ ಸ್ನಾನ ಮಾಡಿ, ಕುಮಾರಾಧಾರಾ ನದಿ ದಡದಿಂದ ದೇವಳದವರೆಗೆ ಉರುಳು ಸೇವೆ ಮಾಡಿ ಕುಕ್ಕೆ ಸುಬ್ರಹ್ಮಣ್ಯ ನ ದರ್ಶನ ಮಾಡಿ ಬಂದಿರುವ ಕಷ್ಟದಿಂದ ದೂರ ಮಾಡು ಸುಬ್ಬಪ್ಪ ಅಂತಾ ಮುಕ್ತ ಮನಸ್ಸಿನಿಂದ ಪ್ರಾರ್ಥನೆ ಮಾಡಿದ.
ದೈವ ಶಕ್ತಿಯಂತೆ ನಿಧಾಮವಾಗಿ ರಾಜ್ಯಕ್ಕೆ ಅಂಟಿದ್ದ ಮಾರಕ ರೋಗ ದೂರವಾಯಿತು. ಜನ ರೋಗಭೀತಿಯಿಂದ ದೂರವಾಗಿ ನೆಮ್ಮದಿಯ ಜೀವನ ನಡೆಸಿದರು ಅಂತ ಪ್ರಕಾಶ್ ಅಮ್ಮಣ್ಣಾಯ ಹೇಳಿದ್ದಾರೆ..
ಪ್ರಜಾಧಿಪತಿಯಾಗಿರುವ ನರೇಂದ್ರ ಮೋದಿಯವರ ಸುಬ್ರಹ್ಮಣ್ಯ ಭೇಟಿಯಿಂದ ಸಂಕಷ್ಟ ದೂರವಾಗುತ್ತದೆ. ಇದನ್ನು ಬಿಜೆಪಿ ನಾಯಕರ ಬಳಿ ಹಲವು ಬಾರಿ ಹೇಳಿದ್ದೇನೆ. ಆದರೆ ಅವರು ಸುಮ್ಮನಿದ್ದಾರೆ. ಉದ್ದುದ್ದ ನಾಮ ಹಾಕಿದವರು ಹೇಳಿದರೆ ಒಪ್ಪಬಹುದು ಅಂತಾ ಪ್ರಕಾಶ್ ಅಮ್ಮಣ್ಣಾಯ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.












Click it and Unblock the Notifications