ಜೆಡಿಎಸ್-ಕಾಂಗ್ರೆಸ್ ಮೈತ್ರಿ ಕೊನೆಗೊಳಿಸಲಿದೆಯೇ ಜುಲೈ ಚಂದ್ರ ಗ್ರಹಣ?
Recommended Video
ಈ ಲೇಖನದ ಗಾಂಭೀರ್ಯ ಅರ್ಥ ಮಾಡಿಸುವುದೇ ಮೊದಲ ಸವಾಲು ನನಗೆ. ಏಕೆಂದರೆ, ಜ್ಯೋತಿಷಿಯಾಗಿ - ಅಧ್ಯಯನಾಸಕ್ತನಾಗಿ ಒಳ್ಳೆಯ ವಿಚಾರಗಳನ್ನೇ ಹೇಳಿದರೆ, ಒಂದು ಪಕ್ಷ ಅಥವಾ ಒಬ್ಬ ವ್ಯಕ್ತಿಯ ಪರ ಎಂದು ಹಣೆಪಟ್ಟಿ ಅಂಟಿಸಿಕೊಳ್ಳಬೇಕಾಗುತ್ತದೆ. ಮುಂದೆ ಸಂಭವಿಸಬಹುದಾದ ಅಪಾಯದ ಬಗ್ಗೆ ಮುನ್ಸೂಚನೆ ನೀಡಿದರೆ, ಈತ ಒಳ್ಳೆಯದನ್ನೇ ನುಡಿಯಲ್ಲ ಎಂಬ ಬೈಗುಳ ಕೇಳಬೇಕಾಗುತ್ತದೆ.
ಆದರೆ, ಯಾವುದೇ ಗ್ರಹಗಳು ನಮ್ಮ ಮನೆಯ ಜೀತಕ್ಕೆ ಇರುವಂಥದ್ದಲ್ಲ. ಗ್ರಹ ಸ್ಥಿತಿ ಹೇಗಿದೆ ಎಂಬ ಆಧಾರದ ಮೇಲೆ ಭವಿಷ್ಯದ ಸಂಭವನೀಯತೆ ಹೇಳಬೇಕಾಗುತ್ತದೆ. ಈ ವರ್ಷದ ಜುಲೈ 27ನೇ ತಾರೀಕು ಚಂದ್ರಗ್ರಹಣ ಇದ್ದು, ಮಕರ ರಾಶಿಯಲ್ಲಿ ಸಂಭವಿಸುತ್ತಿದೆ. ಈ ಸಮಯದಲ್ಲಿ ಏನನ್ನು ನಿರೀಕ್ಷಿಸಬಹುದು ಎಂಬುದರ ಮುನ್ಸೂಚನೆಯೇ ಈ ಲೇಖನ.
ಕಬ್ಯಾಡಿ ಜಯರಾಮಾಚಾರ್ಯರಿಂದ ಸಂಪುಟ ವಿಸ್ತರಣೆ ಮುಹೂರ್ತ ವಿಶ್ಲೇಷಣೆ
ಇದು ಯಾಕೋ ಪೀಠಿಕೆ ವಿಪರೀತ ದೊಡ್ಡದಾಯಿತು ಎಂದು ನಿಮ್ಮ ಆಕ್ಷೇಪವಾದರೆ, ನನ್ನ ಕಡೆಯ ಮಾತನ್ನೂ ಒಮ್ಮೆ ಕೇಳಿಸಿಕೊಂಡು ಬಿಡಿ ಅಥವಾ ಓದಿಕೊಂಡು ಬಿಡಿ. ನಾನು ಭವಿಷ್ಯ ನುಡಿದಾಗ ನೂರಕ್ಕೆ ತೊಂಬತ್ತೊಂಬತ್ತರಷ್ಟು ನಿಜವಾಗಿದೆ. ಆದರೂ ಈತನ ಹೊಟ್ಟೆಪಾಡು ಅಂತೆಲ್ಲ ಬಾಯಿಗೆ ಸಿಕ್ಕಂತೆ ಕಾಮೆಂಟ್ ಮಾಡುತ್ತಾರೆ. ಭವಿಷ್ಯ ನಿಜವಾಗಿದ್ದರ ಬಗ್ಗೆ ತುಟಿ ಬಿಚ್ಚುವುದಿಲ್ಲ.
ಗಟ್ಟಿಯಿರುವುದು ಮತ್ತಷ್ಟು ಕಟ್ಟುಮಸ್ತು
ಈ ಸಲ ರಾಜಕೀಯ ಅಸ್ಥಿರತೆ ಹಾಗೂ ಗಟ್ಟಿತನದ ಬಗ್ಗೆ ತಿಳಿಸುತ್ತಿದ್ದೇನೆ. ಇದು ಎಲ್ಲೆಲ್ಲಿ ಚಂದ್ರಗ್ರಹಣದ ಪ್ರಭಾವ ಇರುತ್ತದೋ ಅಲ್ಲೆಲ್ಲ ಕಾಣಬಹುದು. ಉದಾಹರಣೆ ಹೇಳಿಬಿಡ್ತೀನಿ: ಎಲ್ಲೆಲ್ಲಿ ಸರಕಾರಗಳು ಅಥವಾ ರಾಜಕೀಯ ಸ್ಥಿತಿ ಗಟ್ಟಿ ಇರುತ್ತದೋ ಅಲ್ಲೆಲ್ಲ ಪರಿಸ್ಥಿತಿ ಇನ್ನಷ್ಟು ಗಟ್ಟಿ ಆಗುತ್ತದೆ. ಅದೇ ರೀತಿ ಎಲ್ಲೆಲ್ಲಿ ರಾಜಕೀಯ ಸ್ಥಿತಿ ಡೋಲಾಯಮಾನ ಅಥವಾ ಹಾಗೂ- ಹೀಗೂ ಬೀಳುವಂತೆ ತುಯ್ದಾಡುತ್ತಿರುತ್ತದೋ ಅಲ್ಲಿ ಸರಕಾರ ಬಿದ್ದು ಹೋಗುವ ಸಾಧ್ಯತೆ ಅಥವಾ ಅಪಾಯ ಎದುರಾಗುತ್ತದೆ.
ಗುರು ಪ್ರಭಾವ ಇದ್ದವರಿಗೆ ಒಳ್ಳೆ ಫಲ
ಮಕರ ರಾಶಿಯಲ್ಲಿ ಸಂಭವಿಸುವ ಚಂದ್ರ ಗ್ರಹಣವು ಒಟ್ಟಾರೆ ಚಂದ್ರ ಗ್ರಹಣವೇ ಮನಸಿನ ಮೇಲೆ ಪ್ರಭಾವ ಬೀರುವಂಥದ್ದು. ಯಾರು ತಮ್ಮ ವೃತ್ತಿಯಲ್ಲಿ ಹೆಚ್ಚು ತೊಡಗಿಕೊಂಡಿರುತ್ತಾರೋ ಅವರು ಇನ್ನಷ್ಟು- ಮತ್ತಷ್ಟು ಉದ್ವಿಗ್ನತೆಯಿಂದ ಅದರಲ್ಲಿ ಪಾಲ್ಗೊಳ್ಳುತ್ತಾರೆ. ಇನ್ನು ಯಾರಿಗೆ ಜನ್ಮ ಜಾತಕದಲ್ಲಿ ಗುರುವಿನ ದೃಷ್ಟಿಯೂ ಬಹಳ ಚೆನ್ನಾಗಿದೆಯೋ ಅಂಥವರು ಸಂಶೋಧನೆಯಂಥದ್ದರಲ್ಲಿ ಪಾಲ್ಗೊಂಡು ಅದ್ಭುತವಾದದ್ದನ್ನು ಸಾಧಿಸುತ್ತಾರೆ.
ಸುದೀರ್ಘ ಅವಧಿಯ ಚಂದ್ರ ಗ್ರಹಣ
ಈ ಸಲದ ಚಂದ್ರ ಗ್ರಹಣ 107 ನಿಮಿಷಗಳಷ್ಟು ಸುದೀರ್ಘ ಕಾಲದವರೆಗೆ ಸಂಭವಿಸುವಂಥದ್ದು ಎಂಬ ಬಗ್ಗೆ ಗಮನವಿರಲಿ. ಭಾರತದಲ್ಲಿ ಈ ಗ್ರಹಣದ ದರ್ಶನ ಆಗುತ್ತದೆ. ಇದು ಬೀರುವ ಪರಿಣಾಮದ ಬಗ್ಗೆ ಸ್ಪಷ್ಟತೆ ಇಟ್ಟುಕೊಳ್ಳುವುದು ಉತ್ತಮ. ಚಂದ್ರ ಅಂದರೆ ಮನಸ್ಸಿನ ಕಾರಕ. ಭಾವನೆಗಳಿಗೆ ಪೂರಕ. ಸಕಲ ಜೀವ ರಾಶಿಗಳ ಮೇಲೆ ಚಂದ್ರನ ಪ್ರಭಾವ ಇದೆ. ಸಮುದ್ರದ ಅಲೆಗಳ ಏರಿಳಿತ, ಪರಿಸರದ ಮೇಲಿನ ಪ್ರಭಾವ ಇವೆಲ್ಲವನ್ನೂ ನಿರೀಕ್ಷಿಸಬಹುದು.
ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರಕಾರಕ್ಕೆ ಅಪಾಯ
ಇನ್ನು ರಾಜ್ಯ ಸರಕಾರದ ಸದ್ಯದ ಸ್ಥಿತಿಯ ಬಗ್ಗೆ ಹೇಳಬೇಕು ಅಂದರೆ, ಚಂದ್ರ ಗ್ರಹಣವು ಅಪಾಯದ ಮುನ್ಸೂಚನೆಯಂತೆ ಕಾಣುತ್ತಿದೆ. ಭಿನ್ನಾಭಿಪ್ರಾಯ ದೊಡ್ಡ ಮಟ್ಟದಲ್ಲಿ ಭುಗಿಲೆದ್ದು, ಸರಕಾರದ ಮುಖ್ಯ ವ್ಯಕ್ತಿಯೊಬ್ಬರ ಆರೋಗ್ಯದ ಮೇಲೂ ದೊಡ್ಡ ಮಟ್ಟದ ಪರಿಣಾಮ ಬೀರುವ ಸಾಧ್ಯತೆ ಇದೆ. ಇನ್ನು ಸರಕಾರಕ್ಕೆ ಅಳಿವು- ಉಳಿವಿನ ಪ್ರಶ್ನೆ ಎದುರಾಗುತ್ತದೆ. ಮನಸ್ಸಿನ ಕಹಿ ನಿವಾರಿಸಿಕೊಳ್ಳಲಿಲ್ಲ ಅಂದರೆ ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರಕಾರಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ.