'ಅಶ್ವಿನಿ ನಕ್ಷತ್ರ'ದಲ್ಲಿ ಜನಿಸಿದ ಮೇಷ ರಾಶಿ ವಿಶೇಷತೆ
ಅಶ್ವಿನಿ ನಕ್ಷತ್ರದಲ್ಲಿ ಜನಿಸಿದವರದು ಮೇಷ ರಾಶಿ. ರಾಶಿಯ ಅಧಿಪತಿ ಅಂಗಾರಕ. ಈ ನಕ್ಷತ್ರದ ಚಿಹ್ನೆ ಕುದುರೆ ಮುಖವಾಗಿದೆ. ಹೀಗಾಗಿ ಇವರಲ್ಲಿ ಸಾಕಷ್ಟು ಪ್ರಾವೀಣ್ಯತೆ, ಶಕ್ತಿ, ಸಾಮರ್ಥ್ಯವಿರುತ್ತದೆ. ದಣಿವರಿಯದಂತೆ ಕೆಲಸ ಮಾಡುವುದು ಇವರಿಗೆ ತುಂಬಾ ಇಷ್ಟ. ಎಷ್ಟೇ ವಯಸ್ಸಾಗಲಿ ವಿಶಿಷ್ಟ ಶೈಲಿಯಲ್ಲಿ ಹೊಸ ವಿಚಾರಧಾರೆಗಳನ್ನು ಜೀವನದಲ್ಲಿ ಹೊಂದಿರುತ್ತಾರೆ. ವಿಜ್ಞಾನಿಗಳ ತರಹ ಇವರು ತಮಗೆ ಏನು ಬೇಕೋ ಅದನ್ನು ಸಾಧಿಸಲು ಹೊಸದಾಗಿ ಐಡಿಯಾ ಮಾಡುತ್ತಾರೆ! ಆ ಐಡಿಯಾ ಎಲ್ಲರಿಗೂ ಉಪಯೋಗವಾಗುತ್ತದೆ.
ಉದಾಹರಣೆಗೆ ತನ್ನ ಹೆಂಡತಿಗೆ ಅನುಕೂಲವಾಗಲಿ ಎಂದು ಎಟಿಎಂ ಕಂಡು ಹಿಡಿದಿರುವವನ ತರಹ, ಈ ನಕ್ಷತ್ರದಲ್ಲಿ ಜನಿಸಿದ ಹೆಚ್ಚಿನವರು ವೈದ್ಯಕೀಯಕ್ಕೆ ಸಂಬಂಧಪಟ್ಟ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಇವರು ಮತ್ತೊಬ್ಬರನ್ನು ಸಮಾಧಾನ ಪಡಿಸುವುದರಲ್ಲಿ ಸಿದ್ಧಹಸ್ತರು. ಇವರದೊಂದು ವಿಶೇಷವೆಂದರೆ, ತಾವೇನು ಮಾಡುತ್ತಾರೋ ಅದನ್ನು ಯಾರಿಗೂ ಹೇಳುವುದಿಲ್ಲ. ದೇವರಲ್ಲಿ ಗಣಪತಿಗೆ ಇವರು ಹೆಚ್ಚು ಒಲವು ಹೊಂದಿರುತ್ತಾರೆ. ಅಲ್ಲದೇ ಗಣಪತಿ ಇವರಿಗೆ ತುಂಬಾ ಅನುಕೂಲಕರ ಮಾಡಿಕೊಡುತ್ತಾನೆ.
ಈ ನಕ್ಷತ್ರದವರು ಎಲ್ಲರೊಂದಿಗೆ ತುಂಬಾ ಹಿತಕರ ಮಾತುಗಳನ್ನಾಡುತ್ತಾರೆ. ಯಾರಿಗಾದರು ಬೇಸರವಾಗಿದ್ದರೆ ಇವರ ಹತ್ತಿರ ಮಾತನಾಡಿ ನೋಡಿ, ಬೇಸರ ಕಳೆದು ಹುರುಪಿನಿಂದ ಜೀವನೋತ್ಸಾಹ ಚಿಮ್ಮುತ್ತದೆ. ಆ ರೀತಿ ಮಾತಿನಲ್ಲಿಯೇ ಮನಸ್ಸು ಹಗುರ ಮಾಡುವ ಸ್ವಭಾವ ಇವರದು. ಈ ನಕ್ಷತ್ರದಲ್ಲಿ ಜನಿಸಿದವರಿಗೆ ಜನ್ಮನಾಮವಾಗಿ ಚು, ಚೇ, ಚೊ, ಲಾ ಎಂದು ನಾಲ್ಕು ಚರಣಗಳಿಗೆ ತಕ್ಕಂತೆ ಹೆಸರಿಡಬೇಕು. ಇನ್ನೊಂದು ವಿಷಯ, ಇವರಲ್ಲಿರುವ ಲೋಭಿತನದಿಂದ ಆಸ್ತಿಗಾಗಿ ಯಾವುದಾದರೊಂದು ಚಿಂತೆಯಲ್ಲಿರುತ್ತಾರೆ. ಇವರಿಗೆ ಹಲವಾರು ವಿದ್ಯೆಗಳು ಕರಗತವಾಗಿ, ದೇವರ ಬಗ್ಗೆ ಅಪರಿಮಿತ ಭಕ್ತಿ ಹೊಂದಿರುತ್ತಾರೆ. [ಮೇಷ ರಾಶಿಯವರೆ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ]
ಕೆಲವೊಮ್ಮೆ ತಲೆಗೆ ಏಟಿನಿಂದ ನೋವು ಅನುಭವಿಸಬೇಕಾಗುತ್ತದೆ. ಆದರೆ, ಇವರಿಗೆ ಸಂಸಾರಾಸಕ್ತಿ ಸ್ವಲ್ಪ ಕಮ್ಮಿನೇ ಇರುತ್ತದೆ. ಈ ನಕ್ಷತ್ರದ ಪಾದಗಳ ಪ್ರಕಾರ 1ನೇ ಪಾದದಲ್ಲಿ ಜನಿಸಿದವರು ಪರಾಕ್ರಮಿ, ಮದವಂತ ಹಾಗೂ ಕುಟೀಲ ಬುದ್ಧಿಯವರಾದರೆ, 2ನೇ ಪಾದದವರು ಭಾರಿ ಹೆಸರು ಹೊಂದುವಂತಹ ಕಾರ್ಯ ಮಾಡುವವರು, ಕೊಡುಗೈ ದಾನಿ, ಹದವಾದ ಊಟ ಮಾಡುವ ಬಯಕೆ ಹೊಂದಿರುವವರಾಗಿರುತ್ತಾರೆ. ಇನ್ನು 3ನೇ ಪಾದದಲ್ಲಿ ಜನಿಸಿದವರು, ವಿದ್ಯೆಗಿಂತ ಬುದ್ಧಿ ಮೇಲೆ ಎಂಬಂತಿರುತ್ತಾರೆ. ಆರ್ಥಿಕ ಸಬಲತೆ ಇರದಿದ್ದರೂ ಸುಖ, ಸಂತೋಷಕ್ಕೆ ಕೊರತೆ ಇರಲ್ಲ. ಈ ನಕ್ಷತ್ರದ 4ನೇ ಪಾದದಲ್ಲಿ ಜನಿಸಿದವರು ಸಾಕಷ್ಟು ಶ್ರೀಮಂತಿಕೆ ಹೊಂದಿರುವ ಕುಟುಂಬದ ಹಿನ್ನೆಲೆ ಹೊಂದಿರುತ್ತಾರೆ. ಧರ್ಮನಿಷ್ಠತೆ ಇರುವುದರಿಂದ ಇವರ ಸಂಸಾರದಲ್ಲೆಲ್ಲರೂ ಸೌಖ್ಯವಾಗಿರುತ್ತಾರೆ.
ಇವೆಲ್ಲಾ ಹುಟ್ಟುಗುಣಗಳು. ಅಂದರೆ ನಕ್ಷತ್ರದ ಪ್ರಕಾರ ಬಂದ ಗುಣಗಳು. ಅದಕ್ಕೆಂದೇ "ಹುಟ್ಟು ಗುಣ ಸುಟ್ಟರೂ ಹೋಗಲ್ಲ" ಎನ್ನುವುದು. ಆದರೆ, ಕ್ರಮೇಣ ಮನೆಯಲ್ಲಿ, ಶಾಲೆಯಲ್ಲಿ, ಸ್ನೇಹಿತರಲ್ಲಿ, ಉದ್ಯೋಗದಲ್ಲಿ ಮುಂತಾದೆಡೆ ಕೆಲವೊಂದು ಗುಣಗಳನ್ನು ಹೊಸದಾಗಿ ಕಲಿತುಕೊಳ್ಳಬಹುದು. ಆದರೆ ದುಷ್ಟರೊಂದಿಗೆ ಸೇರಿಕೊಂಡು ಅವರ ಗುಣಗಳನ್ನು ಕಲಿಯಬಾರದು ಅಷ್ಟೇ. ಅದಕ್ಕೆ ಹೇಳುವುದು "ಗುಣ ನೋಡಿ ಹೆಣ್ಣು ಕೊಡು" ಎಂದು. [ಜನ್ಮನಕ್ಷತ್ರದಿಂದ ನಿಖರ ಭವಿಷ್ಯ]
ರಾಕ್ಷಸ ಗುಣ ಹೊಂದಿರುವ ಕೆಲ ಜನರು ಮೂಢನಂಬಿಕೆ ಕುರಿತು ಏನೇನೋ ಹೇಳುತ್ತಿದ್ದಾರೆ. ಹೀಗೆ ಹೇಳಿ ಮಂಗನಂತಾಗಿ ಎಲ್ಲರಿಂದ ಮಖಕ್ಕೆ ಉಗಿಸಿಕೊಂಡು "ಅಂದ ಅನಸಕೊಂಡ ಚೆಂದಗೇಡಿ" ಎನ್ನಿಸಿಕೊಂಡು ಬಾಲ ಮುದುರಿಕೊಂಡು ಪಲಾಯನ ಮಾಡಿದ್ದಾರೆ. "ನಿಂದಕರಿರಬೇಕು ಹಂದಿಯಂಗೆ" ಎಂಬ ಮಾತಿನಂತೆ ಎಲ್ಲ ಉತ್ತಮ ಕಾರ್ಯಗಳಲ್ಲಿ ದುಷ್ಟಬುದ್ಧಿಯವರು ಕಿತಾಪತಿ ಮಾಡುತ್ತಲೇ ಇರುತ್ತಾರೆ ಎನ್ನುವುದಕ್ಕೆ ಈ ಮಾತು ಸಾಕ್ಷಿ. ಹೀಗಾಗಿಯೇ ಹಿಂದೆ ನಮ್ಮ ಸಮಾಜದಲ್ಲಿ ಎರಡು ವರ್ಗದ ಜನರಿದ್ದಾರೆ ಎಂದು ಹೇಳಿದ್ದು. ಅವರೆಂದರೆ ಒಳ್ಳೆಯವರು, ಕೆಟ್ಟವರು. ಕೆಟ್ಟತನ ಸ್ವಲ್ಪನಾದ್ರೂ ಇದ್ದರೂ ಅವರು ಕೆಟ್ಟ ಹುಳುಗಳೇ. ಇಂಥ ಕೆಟ್ಟ ಹುಳುಗಳು ಒಳ್ಳೆಯವರನ್ನು ಕಚ್ಚಲು ಬಂದು ಚಚ್ಚಿಸಿಕೊಂಡು ನೆಲ ಕಚ್ಚುವುದು ಗ್ಯಾರಂಟಿ.
ಇನ್ನು ಈ ನಕ್ಷತ್ರದವರು ಮೇಷ ರಾಶಿಯವರಾಗುವುದರಿಂದ ಮೇಷ ರಾಶಿ ಗುಣ ಮತ್ತು ಈ ರಾಶಿಗೆ ಶನಿಪ್ರಭಾವ ಬಗ್ಗೆ ಓದಿಕೊಳ್ಳುವುದು ಉತ್ತಮ. ಯಾಕೆಂದರೆ ಜನ್ಮಜಾತಕ ಪರೀಕ್ಷಿಸದೇ ಕೆಲವೊಂದು ವಿಷಯಗಳನ್ನು ನೀವೇ ತಿಳಿದುಕೊಳ್ಳಬಹುದು. ಬೇಕಿದ್ದರೆ ತಿಳಿದುಕೊಳ್ಳಿ. ಇಲ್ಲವಾದರೆ ನಿಮ್ಮ ಜನ್ಮಜಾತಕದ ಮೂಲಕ ಸಂಪೂರ್ಣ ಮಾಹಿತಿ ತಿಳಿದುಕೊಂಡು ಸುಖಕರ ಜೀವನ ಸಾಗಿಸಿ.
"ಭರಣಿ ನಕ್ಷತ್ರ" ವಿಶೇಷ ಎಂಬುದು ಮುಂದಿನ ಲೇಖನದಲ್ಲಿ. (ಒನ್ಇಂಡಿಯಾ ಕನ್ನಡ)
ನಕ್ಷತ್ರ ಟಿಪ್ಸ್ : ಅಶ್ವಿನಿ ನಕ್ಷತ್ರದವರು ರವಿವಾರ ಮುಖ್ಯವಾದ ಕೆಲಸ ಮಾಡಬಾರದು.
ದೈವಕೃಪೆಗೆ : ಕುಕ್ಕರಗಾಲಿನಲ್ಲಿ ಕುಳಿತು ದೇವರಿಗೆ ದೀಪ ಹಚ್ಚಬಾರದು.
ಸಂಪಾದಕರ ಮಾತು : ಓದುಗರು, ಸಾಡೇಸಾತಿ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬಯಸಿದ್ದಲ್ಲಿ, ಯಾವುದೇ ತೊಂದರೆಗಳಿಗೆ ಪರಿಹಾರ ಕಂಡುಕೊಳ್ಳಬಯಸಿದ್ದಲ್ಲಿ ಲೇಖಕರಿಗೆ ನೇರವಾಗಿ ಪೋನಾಯಿಸಿ ತಿಳಿದುಕೊಳ್ಳಬಹುದು (ಲೇಖಕರ ಮೊಬೈಲ್ : 94815 22011)