ಜ್ಯೋತಿಷ್ಯ: ಮಕ್ಕಳೇಕೆ ತಂದೆ-ತಾಯಿಯ ಮಾತು ಕೇಳುವುದಿಲ್ಲ? ಇಲ್ಲಿದೆ ಉತ್ತರ
ಆ ಮಹಿಳೆಯ ಕಣ್ಣಲ್ಲಿ ನೀರು. ಇನ್ನೇನು ಜೋರಾಗಿ ಅತ್ತು ಬಿಡ್ತಾರೇನೋ ಅನ್ನಿಸುತ್ತಿತ್ತು. ಈ ದಿನ ಬೇಡ, ಮತ್ತೊಂದು ದಿನ ಮಗಳನ್ನೂ ಕರೆದುಕೊಂಡು ಬಂದು ಜಾತಕ ಕೇಳಿ ಎಂದು ಹೇಳಿಕಳುಹಿಸಬೇಕಾಯಿತು. ಐವತ್ತರ ಮೇಲೆ ವಯಸ್ಸಾಗಿದ್ದ ಆ ಮಹಿಳೆಗೆ ತಮ್ಮ ಮಗಳ ಮದುವೆಯ ಚಿಂತೆ. ಬಹಳ ಹೊತ್ತು ಫೋನ್ ನಲ್ಲಿ ಮಾತಾಡುತ್ತಾ ಇರುತ್ತಾಳೆ. ಒಬ್ಬ ಹುಡುಗನನ್ನು ಕರೆದುಕೊಂಡು ಬಂದು, ಮನೆಯಲ್ಲಿ ಪರಿಚಯ ಮಾಡಿಸಿದ್ದಾಳೆ.
ಎಲ್ಲಿ ಅದೇ ಹುಡುಗನನ್ನು ಮದುವೆ ಆಗುತ್ತಾಳೋ? ಈಚೆಗೆ ಓದಿನ ಕಡೆಗೂ ಗಮನ ಇಲ್ಲ. ಹೇಳಿದ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ಕೂಡ ಕೊಡುವುದಿಲ್ಲ. ಯಾವುದರ ಬಗ್ಗೆಯೂ ಗೌರವ ಇಲ್ಲ. ಸರಿ, ಆ ಹುಡುಗನನ್ನೇ ಮದುವೆ ಆಗುತ್ತಾಳೇನೋ ಅಂದರೆ ಆ ಬಗ್ಗೆಯೂ ಗಂಭೀರವಾಗಿ ಇದ್ದಂತೆ ಕಾಣುವುದಿಲ್ಲ. ಮನೆಯಲ್ಲಿ ಗಂಡನಿಗೆ ಸದಾ ಕೆಲಸದ ಒತ್ತಡ. ಮಗಳ ಕಡೆಗೆ ಗಮನ ನೀಡಲು ಆಗುತ್ತಿಲ್ಲ.
-ಹೀಗೆ ಮಗಳ ನಡವಳಿಕೆ ಬಗ್ಗೆ ತಮ್ಮ ಆತಂಕ ತೋಡಿಕೊಂಡರು.

ಈ ರೀತಿ ಆತಂಕ ಹೇಳಿಕೊಳ್ಳುವ ಪೋಷಕರು ಹೆಚ್ಚು. ಕೆಲವರಿಗೆ ಮಗಳ ಚಿಂತೆ. ಮತ್ತೆ ಕೆಲವರಿಗೆ ಮಗನ ಬಗ್ಗೆ ಆತಂಕ. ಏಕೆ ಹೀಗಾಗುತ್ತದೆ? ಮಕ್ಕಳ ನಡವಳಿಕೆ ಏಕೆ ಒರಟಾಗುತ್ತದೆ? ಪ್ರೇಮ ವಿವಾಹ ಯಾರಿಗೆ ಆಗುತ್ತದೆ? ಇತ್ಯಾದಿ ವಿಚಾರಕ್ಕೆ ಸಂಬಂಧಿಸಿದ ಕೆಲ ಮುಖ್ಯ ಸಂಗತಿಗಳನ್ನು ಜ್ಯೋತಿಷ್ಯ ರೀತಿಯಾಗಿ ತಿಳಿಸುವ ಲೇಖನ ಇದು.
* ಯಾವುದೇ ವ್ಯಕ್ತಿ ಜೀವನದಲ್ಲಿ ಜನ್ಮ ಜಾತಕ ಬಹಳ ಮುಖ್ಯ. ಜನನ ನಕ್ಷತ್ರ, ಲಗ್ನ ಹಾಗೂ ಲಗ್ನದಿಂದ ಎರಡು, ಐದು, ಏಳು ಮತ್ತು ಒಂಬತ್ತನೇ ಸ್ಥಾನಗಳು ಬಹಳ ಮುಖ್ಯವಾದದ್ದು.
* ಶುಕ್ರ ಗ್ರಹ ಎಲ್ಲಿ ಸ್ಥಿತವಾಗಿದೆ, ರಾಹು ಹಾಗೂ ಕೇತು ಗ್ರಹದ ಸ್ಥಿತಿ ಹೇಗಿದೆ ಎಂಬುದನ್ನು ಗಮನಿಸಬೇಕು. ಪ್ರೇಮ ವಿವಾಹ ಆಗುತ್ತದೋ ಇಲ್ಲವೋ ಎಂಬುದನ್ನು ಆ ಮೂಲಕ ತಿಳಿಯಬಹುದು.
* ಕೆಲವು ನಕ್ಷತ್ರಗಳ ಸ್ವಭಾವವೇ ಹಾಗಿರುತ್ತದೆ. ಆ ನಕ್ಷತ್ರದಲ್ಲಿ ಜನಿಸಿದವರು ಒರಟಾದ, ಮನಸಿಗೆ ನೋವಾಗುವಂಥ ಮಾತುಗಳನ್ನೇ ಹೆಚ್ಚಿಗೆ ಆಡುತ್ತಾರೆ. ಅದರಲ್ಲೂ ಕೃತ್ತಿಕಾ, ಆಶ್ಲೇಷಾ ನಕ್ಷತ್ರದ ಮಕ್ಕಳನ್ನು ಬಹಳ ಜೋಪಾನವಾಗಿ ಬೆಳೆಸಬೇಕು.
* ಇನ್ನು ಲಗ್ನದಿಂದ ಸ್ವಭಾವವನ್ನು ಹಾಗೂ ಎರಡನೇ ಮನೆ ವಾಕ್ ಸ್ಥಾನ ಆಗಿರುತ್ತದೆ. ಮಾತನ್ನು- ಹಣಕಾಸಿನ ಸ್ಥಿತಿಯನ್ನು ಕೂಡ ಇದರಿಂದ ತಿಳಿಯಬಹುದು. ಆದರೆ ಮಾತು ಯಾವ ರೀತಿ ಆಡುತ್ತಾರೆ ಎಂಬುದನ್ನು ಎರಡನೇ ಮನೆಯಿಂದ ಹಾಗೂ ಮಾನಸಿಕ ಸ್ಥಿತಿಯನ್ನು ಚಂದ್ರ ಇರುವ ಸ್ಥಾನದಿಂದ ತಿಳಿಯಬಹುದು.
* ಐದನೇ ಮನೆ ಪೂರ್ವ ಪುಣ್ಯ ಸ್ಥಾನ ಎನ್ನಲಾಗುತ್ತದೆ. ಹಿಂದಿನ ಜನ್ಮದಲ್ಲಿ ಮಾಡಿದ ಪಾಪ- ಪುಣ್ಯದ ಫಲಾಫಲವನ್ನು ಅಳೆದು, ಕೆಲವು ಮುಖ್ಯ ವಿಚಾರ ಗೊತ್ತಾಗುತ್ತದೆ.
* ಏಳನೇ ಸ್ಥಾನವು ಕಳತ್ರ ಸ್ಥಾನ. ಹೆಣ್ಣಾದರೆ ಎಂಥ ಗಂಡ ಹಾಗೂ ಗಂಡಾದರೆ ಎಂಥ ಹೆಂಡತಿ ಸಿಗಬಹುದು ಎಂದು ತಿಳಿಯುವ ಸ್ಥಾನ ಇದು.
* ಒಂಬತ್ತನೇ ಸ್ಥಾನವು ಅದೃಷ್ಟ ಹಾಗೂ ಪಿತೃ ಸ್ಥಾನ. ಯಾವುದೇ ಜಾತಕರ ಅದೃಷ್ಟ ಕೂಡ ಇಲ್ಲಿ ಮುಖ್ಯವಾಗುತ್ತದೆ.
* ಇಷ್ಟೆಲ್ಲ ಆದ ಮೇಲೆ ನವಾಂಶ ಕುಂಡಲಿಯನ್ನು ಸರಿಯಾಗಿ ಪರಿಶೀಲಿಸಬೇಕು. ಅಲ್ಲಿನ ಗ್ರಹ ಸ್ಥಿತಿಯ ಮೂಲಕ ಹಲವು ಸಂಗತಿ ಗೊತ್ತಾಗುತ್ತದೆ.
ಆಮೇಲೆ ತಂದೆ ತಾಯಿಯ ಜನ್ಮ ಜಾತಕದಲ್ಲಿ ಲಗ್ನದಿಂದ ಐದನೇ ಸ್ಥಾನ ಹೇಗಿದೆ ಎಂಬುದರ ಬಗ್ಗೆ ಅಧ್ಯಯನ ನಡೆಸಬೇಕು. ಏಕೆಂದರೆ, ಐದನೇ ಸ್ಥಾನ ಅಂದರೆ ಮಕ್ಕಳ ಬಗ್ಗೆ ತಿಳಿಸಿಕೊಡುವ ಸ್ಥಾನ. ಕೆಲವರಿಗೆ ಮಕ್ಕಳಿಂದ ದುಃಖ ಪಡುವ ಯೋಗ ಇರುತ್ತದೆ. ತಂದೆ- ತಾಯಿಯ ಜಾತಕದಲ್ಲಿ ದೋಷ ಇದ್ದರೂ ಅದರ ಫಲಿತವನ್ನು ಮಕ್ಕಳು ಅನುಭವಿಸುತ್ತಾರೆ.
ಆದ್ದರಿಂದ ಮಕ್ಕಳು ಹಾಗೂ ತಂದೆ- ತಾಯಿ ಜಾತಕಗಳನ್ನು ಸಹ ಪರೀಕ್ಷಿಸಿ, ಆ ನಂತರ ಅಗತ್ಯ ಇದ್ದಲ್ಲಿ ಪರಿಹಾರ ಮಾಡಿಸಿಕೊಳ್ಳಬೇಕು. ಕೆಲವು ಬಾರಿ ಗೋಚಾರ ಅಥವಾ ದಶಾ- ಭುಕ್ತಿಯ ಕಾರಣಕ್ಕೆ ಸಮಸ್ಯೆ ಉದ್ಭವಿಸಿ, ಆ ನಂತರ ಅದು ನಿವಾರಣೆ ಆಗುತ್ತದೆ. ಇಂಥದ್ದಕ್ಕೆ ಹೆಚ್ಚು ಯೋಚಿಸುವ ಅಗತ್ಯ ಇಲ್ಲ. ಆದರೆ ಜಾತಕ ಪರಿಶೀಲನೆ ಮಾಡದ ಹೊರತು ಏನನ್ನೂ ತೀರ್ಮಾನಿಸಲು ಆಗುವುದಿಲ್ಲ.
ಯಾವುದೇ ಮಾರ್ಗದರ್ಶನಕ್ಕೆ, ಸೂಕ್ತ ಜಾತಕ ವಿಶ್ಲೇಷಣೆಗೆ ವೈಯಕ್ತಿಕವಾಗಿ ಭೇಟಿಗೆ ಮೊಬೈಲ್ ಫೋನ್ ಸಂಖ್ಯೆ 9886665656- 9886155755 ಸಂಪರ್ಕಿಸಿ.












Click it and Unblock the Notifications