ಸಂತಾನ- ಧನ ಪ್ರಾಪ್ತಿಗೆ ಅತ್ಯಂತ ವಿಶಿಷ್ಟವಾದ ಪಯೋವ್ರತ ಆಚರಣೆ, ನಿಯಮಗಳು
ಸಂತಾನ- ಸತ್ಸಂತಾನ ಅಪೇಕ್ಷಿತರಿಗಾಗಿ ಈ ದಿನ ವಿಶೇಷವಾದ ವ್ರತವೊಂದರ ಬಗ್ಗೆ ತಿಳಿಸಿಕೊಡಲಿದ್ದೇನೆ. ಇದರ ಜತೆಗೆ ಧನಪ್ರಾಪ್ತಿಗಾಗಿಯೂ ಈ ವ್ರತವನ್ನು ಮಾಡಲಾಗುತ್ತದೆ. ಫಲವನ್ನು ಅಪೇಕ್ಷಿಸಿಯೇ ಮಾಡುವ ವಿಶಿಷ್ಟವಾದ ಶ್ರೀಹರಿಯ ಆರಾಧನೆ ಇದು. ಈ ವ್ರತದ ಬಗ್ಗೆ ಪ್ರಶ್ನೋತ್ತರ ಮಾದರಿಯಲ್ಲಿ ಮಾಹಿತಿ ನೀಡುತ್ತಿದ್ದೇನೆ.
* ಈ ವ್ರತದ ಹೆಸರೇನು, ಯಾವಾಗ ಆಚರಿಸಬೇಕು?
ಇದರ ಹೆಸರು ಪಯೋವ್ರತ. ಫಾಲ್ಗುಣ ಮಾಸದ ಶುಕ್ಲ ಪಕ್ಷದ ಪಾಡ್ಯದಿಂದ ಫಾಲ್ಗುಣ ಮಾಸದ ಶುದ್ಧ ದ್ವಾದಶಿ ತನಕ ಹನ್ನೆರಡು ದಿನದ ತನಕ ಆಚರಿಸಬೇಕು.
* ಈ ಹಿಂದೆ ವ್ರತವನ್ನು ಯಾರ್ಯಾರು ಮಾಡಿದ್ದಾರೆ?
ವಾಮನನನ್ನು ಮಗನಾಗಿ ಪಡೆಯಲು ಅದಿತಿ ಹಾಗೂ ಸಾತ್ವಿಕ ಮಗನನ್ನು ಪಡೆಯುವ ಸಲುವಾಗಿ ಆಚಾರ್ಯ ಮಧ್ವರ ತಾಯಿ ಈ ವ್ರತವನ್ನು ಆಚರಿಸಿದ್ದಾರೆ.
* ಈ ಪಯೋವ್ರತದ ಬಗ್ಗೆ ಯಾರು- ಯಾರಿಗೆ ಉಪದೇಶ ನೀಡಿದರು?
ಚತುರ್ಮುಖ ಬ್ರಹ್ಮನು ಕಾಶ್ಯಪ ಋಷಿಗಳಿಗೆ, ಕಾಶ್ಯಪ ಋಷಿಗಳು ಅದಿತಿಗೆ.
* ಪಯೋವ್ರತದ ಆಚರಣೆ ಹೇಗೆ?
ಫಾಲ್ಗುಣ ಮಾಸದ ಶುಕ್ಲ ಪಕ್ಷದ ಪಾಡ್ಯದಿಂದ ಫಾಲ್ಗುಣ ಮಾಸದ ಶುದ್ಧ ದ್ವಾದಶಿ ತನಕ ಈ ಅವಧಿಯಲ್ಲಿ ವ್ರತನಿರತರು ಹಾಲನ್ನು ಮಾತ್ರ ಸೇವಿಸಬೇಕು. ಉಳಿದ ಯಾವ ಆಹಾರವನ್ನು ಸೇವಿಸಬಾರದು. ವಿಷ್ಣುವಿಗೆ ಆರಾಧನೆ ಮಾಡಿದ ಒಂದು ಲೋಟ ಹಾಲನ್ನು ಮಾತ್ರ ಸೇವಿಸಬೇಕು.
ಅದಕ್ಕೂ ಮುನ್ನ ಮಾಘ ಅಮಾವಾಸ್ಯೆಯಂದು ತುಳಸಿ ಮೃತ್ತಿಕೆ ಹಚ್ಚಿಕೊಂಡು, ನದಿ ಅಥವಾ ಬಾವಿಯಲ್ಲಿ ಸ್ನಾನ ಮಾಡಿ ಸಂಕಲ್ಪ ಮಾಡಬೇಕು. ಭಾಗವತ ಅಷ್ಟಮ ಸ್ಕಂದದ ಹದಿನೈದನೇ ಅಧ್ಯಾಯದ ಇಪ್ಪತ್ತೇಳನೇ ಶ್ಲೋಕ ಹೇಳಿಕೊಂಡು ಸಂಕಲ್ಪ ಮಾಡಬೇಕು.
ಕಪಿಲ, ಯಜ್ಞ, ವಾಸುದೇವ, ಶಿವಾಂತರ್ಯಾಮಿ ಸಂಕರ್ಷಣ, ದತ್ತ ಇವರೆಲ್ಲರ ಸ್ಮರಣೆ ಮಾಡಬೇಕು. ಜತೆಗೆ ಶ್ರೀಹರಿ- ಲಕ್ಷ್ಮೀದೇವಿಯ ಸ್ಮರಿಸಬೇಕು. ಕಲಶವನ್ನು ಇಟ್ಟು, ಆವಾಹನ ಕ್ರಮದಲ್ಲಿ ನಾರಾಯಣನನ್ನು ಆವಾಹನೆ ಮಾಡಬೇಕು. ಪಾಯಸದ ನೈವೇದ್ಯ ಮಾಡಬೇಕು. ಹನ್ನೆರಡು ದಿನಗಳ ಕಾಲವು ದ್ವಾದಶ ಅಷ್ಟಾಕ್ಷರ ಜಪ ಮಂತ್ರವನ್ನು ನೂರೆಂಟು ಬಾರಿ ಮಾಡಬೇಕು. ಆ ನಂತರ ಪ್ರದಕ್ಷಿಣೆ ನಮಸ್ಕಾರ ಹಾಗೂ ಹನ್ನೆರಡು ದಿನವೂ ಬ್ರಾಹ್ಮಣರಿಗೆ ಅನ್ನ ಸಂತರ್ಪಣೆ ಮಾಡಬೇಕು.

ಹನ್ನೆರಡು ದಿನಗಳ ಕಾಲ ಮಾಡಬೇಕಾದದ್ದು:
* ನೂರೆಂಟು ಬಾರಿ ದ್ವಾದಶ ಅಷ್ಟಾಕ್ಷರ ಮಂತ್ರ ಜಪ
* ಪ್ರದಕ್ಷಿಣೆ ನಮಸ್ಕಾರ
* ತ್ರಿಕಾಲ ಸ್ನಾನ (ಬೆಳಗ್ಗೆ, ಮಧ್ಯಾಹ್ನ ಮತ್ತು ಸಂಜೆ)
* ದಾನಗಳು
* ಭಗವದ್ ಧ್ಯಾನ
* ದಿನವೂ ಪಾಯಸ ನೈವೇದ್ಯ
* ದಿನವೂ ಶ್ರೀಹರಿಗೆ ಹಾಲಿನ ಅಭಿಷೇಕ
* ಇಂದ್ರಿಯ ನಿಗ್ರಹ ಮಾಡಬೇಕು
* ನಾರಾಯಣ ಅಷ್ಟಾಕ್ಷರ ಮಂತ್ರದೊಂದಿಗೆ ಪಾಯಸವನ್ನು ಅಗ್ನಿಗೆ ಹಾಕುತ್ತಾ ಹೋಮ ಮಾಡಬೇಕು
* ಜಿಂತತೆ ಪುಂಡರೀಕಾಕ್ಷ ಸ್ತೋತ್ರ ಪಠಿಸಬೇಕು
* ಬ್ರಾಹ್ಮಣರಿಗೆ ಅನ್ನ ಸಂತರ್ಪಣೆ ಮಾಡಬೇಕು
* ಬ್ರಹ್ಮಚರ್ಯ ಪಾಲನೆ ಮಾಡಬೇಕು
* ಬ್ರಾಹ್ಮಣ ಸಂತರ್ಪಣೆ ಆದ ಮೇಲೆ ಕುಟುಂಬದವರ ಜತೆಗೂಡಿ ಹೋಮ ಶೇಷದ ಪಾಯಸವನ್ನು ಸೇವಿಸಬೇಕು. ಈ ಅವಧಿಯಲ್ಲಿ ಹಾಸಿಗೆ ಅಥವಾ ಮಂಚದ ಮೇಲೆ ಮಲಗಬಾರದು.
ವ್ರತ ಸಂಪೂರ್ಣ ಆದ ಮೇಲೆ ತ್ರಯೋದಶಿಯಂದು ಬ್ರಾಹ್ಮಣ- ಸುವಾಸಿನಿಯರನ್ನು ಆಹ್ವಾನಿಸಿ, ಪೂಜೆ ಮಾಡಿದ ಮೇಲೆ, ಪಾಯಸ ನೈವೇದ್ಯ- ಹೋಮ ಮಾಡಬೇಕು. ವಸ್ತ್ರ- ಧನ ದಾನ, ಬ್ರಾಹ್ಮಣ ಭೋಜನ ವ್ಯವಸ್ಥೆ ಮಾಡಬೇಕು.
ಈ ಪಯೋವ್ರತವನ್ನು ಮಾಡುವ ಮುನ್ನ ಇಷ್ಟೆಲ್ಲ ನಿಯಮ ಪಾಲನೆ ಮಾಡಲು ಸಾಧ್ಯವಾ ಎಂಬುದನ್ನು ಚಿಂತಿಸಿ. ಯಾವುದೇ ವೈದ್ಯಕೀಯ ಸಮಸ್ಯೆ ಇಲ್ಲದೆಯೂ ಸಂತಾನ ವಿಳಂಬ ಆಗುತ್ತಿದ್ದಲ್ಲಿ ಅಥವಾ ಸತ್ಸಂತಾನ ಅಪೇಕ್ಷಿತರಾದಲ್ಲಿ ಇನ್ನೇನು ಮುಂಬರುವ ಫಾಲ್ಗುಣ ಮಾಸದಲ್ಲಿ ಈ ವ್ರತವನ್ನು ಮಾಡಬಹುದು. ಜತೆಗೆ ಧನಪ್ರಾಪ್ತಿಗಾಗಿಯೂ ಈ ವ್ರತ ಮಾಡಬಹುದು.
ಅದಕ್ಕೂ ಮುನ್ನ ನಿಮ್ಮ ದೈಹಿಕ ಆರೋಗ್ಯವು ಈ ವ್ರತಾಚರಣೆ ಪೂರಕವಾಗಿದೆಯೇ ಎಂಬುದನ್ನು ವೈದ್ಯರ ಬಳಿ ಖಚಿತಪಡಿಸಿಕೊಳ್ಳಿ. ಪಯೋ ವ್ರತ ಮಾಡಬಹುದು ಎಂದಾದಲ್ಲಿ ಸರಿಯಾದ ಗುರುಗಳ ಮಾರ್ಗದರ್ಶನ ಪಡೆದುಕೊಳ್ಳಿ. ಸರ್ವೇ ಜನಾಃ ಸುಖಿನೋ ಭವಂತು.
ವೈಯಕ್ತಿಕವಾಗಿ ಭೇಟಿ ಮಾಡಬೇಕಿದ್ದಲ್ಲಿ ವಿಳಾಸ ಮತ್ತು ಸಂಪರ್ಕ ಸಂಖ್ಯೆ:
ಶ್ರೀನಿವಾಸನ್
ಪ್ರಧಾನ ಜ್ಯೋತಿಷ್ಯರು
ಸದ್ಗುರು ಶ್ರೀ ಸಾಯಿ ಜ್ಯೋತಿಷ್ಯ ಪೀಠ
# 37, 27ನೇ ಕ್ರಾಸ್, 12ನೇ ಮುಖ್ಯರಸ್ತೆ
ವಾಸುದೇವ್ ಅಡಿಗಾಸ್ ಹೋಟೆಲ್ ಹತ್ತಿರ
ಜಯನಗರ 4ನೇ ಬ್ಲಾಕ್, opp ಸಿಂಡಿಕೇಟ್ ಬ್ಯಾಂಕ್
ಬೆಂಗಳೂರು 560011
ಸಂಪರ್ಕ ಸಂಖ್ಯೆ 9886665656- 9886155755












Click it and Unblock the Notifications